Monday, March 7, 2011


ನಗೆ ಅನಿಸುತ್ತೆ, ನಾವು ನೀವು ಎಲ್ಲೋ ಇರ್ತಿವಿ ಫೋನ್ ನಲ್ಲಿ ಮಾತಾಡ್ತೀವಿ ಅದು ಹೇಗೆ ಸಾದ್ಯ ???? ಯಾರೋ ಫೋನ್ ಅನ್ನೋದನ್ನ ಕಂಡು ಹಿಡಿದ್ರು ಇವತ್ತು ನಾವು ನಮ್ಮಿಂದ ಎಸ್ಟೋ ದೂರ ಇರೋರ್ ಜೊತೆ ಮಾತಡ್ತಿವಿ ಇದಕ್ಕೆಲ್ಲ ಕಾರಣ ಮನುಷ್ಯನ ಬುದ್ಧಿ ಶಕ್ತಿ, ಕಣ್ಣಿಗೆ ಕಾಣದ ತರಂಗಗಳು...!

ಹಾಗೆ "ಮನುಷ್ಯ ಅನ್ನೋ ಮನುಷ್ಯನಲ್ಲಿರುವ ಮನಸ್ಸುಗಳಿಗೂ ಮನಸ್ಸು ಅಂತ ಇರುತ್ತೆ ಆ ಮನಸುಗಳು ಸಹ ಮನಸ್ಸಲ್ಲಿ ಇರೋ ಮನಸ್ಸಿನೊಂದಿಗೆ ಮನಸ್ಸು ಕೊಟ್ಟು ಮನಸಾರೆ ಮನಸ್ಸು ಬಿಚ್ಚಿ ಮಾತಾಡುತ್ತವೆ" ಆ ಮನಸ್ಸುಗಳ ನಡುವೆ ನನಗೂ ನಿಮಗೂ ಗೊತ್ತಿಲ್ದೆ ಇರೋ ಯಾವ್ದೋ ಒಂದು ಅದ್ಬುತ ಶಕ್ತಿ ತರಂಗಗಳ ಮೂಲಕ ಮನಸುಗಳ ಮಿಲನಕ್ಕೆ ನಾಂದಿಯಾಗಿದೆ....!

ನೀವು ಗಮನಿಸಿರ್ತಿರ ಅವಳಿ ಜವಳಿ ಮಕ್ಕಳು ಇದ್ರೆ ಒಬ್ಬ ಮಗುಗೆ ಜ್ವರ ಬಂದ್ರೆ ಇನ್ನೊದು ಮಗು ಎಷ್ಟೇ ದೂರ ಇದ್ರೂ ಆ ಮಗುಗು ಜ್ವರ ಬಂದಿರುತ್ತೆ ಈ ಥರ ಉದಾಹರಣೆಗಳು ಸಿನಿಮಾಗಳಲ್ಲಿ ತುಂಬಾ ಇವೆ ಅದು ನಮಗೂ ಗೊತ್ತು ಆದರೆ ಅದಕ್ಕೆ ತಜ್ಞರು ಅವರದೇ ಆದ ರೀತಿನಲ್ಲಿ ವಿವರಣೆ ನಿಡ್ತಾರೆ ಅದಕ್ಕೆ ನಾವು ವಿಜ್ಞಾನ ಅಂತಿವಿ ಅದೇ ಒಬ್ಬ ಹಳ್ಳಿಯವ ಅದರ ಬಗ್ಗೆ ತನ್ನ ಮಾತಿನಲ್ಲಿ ಸರಳವಾಗಿ ವಿವರಣೆ ಕೊಟ್ರೆ ಅದೇ ನಾವೇ ಅಜ್ಞಾನ, ಮೋಡ ನಂಬಿಕೆ ಅಂತೆಲ್ಲ ಕರಿತಿವಿ ಅಲ್ವ ..!

ಈಗ್ಲೂ ಕಾಲ ಮಿಂಚಿಲ್ಲ ನಿಮಗೂ ಬಿಕ್ಕಳಿಕೆ ಬರುತ್ತೆ ಬಂದಾಗ ಒಂದು ಸಾರಿ ನಿಮ್ಮನ್ನ ಇಷ್ಟ ಪಡೋ ಇಲ್ಲಾ ನಿಮ್ಮ ಮನಸ್ಸಲ್ಲಿರೋ ಹೆಸರನ್ನ ನೆನೆಸಿಕೊಂಡು ನೋಡಿ ಮನಸ್ಸುಗಳ ತರಂಗದ ಅರಿವು ನಿಮಗೂ ಆಗುತ್ತೆ..!

ಮನಸ್ಸಲ್ಲಿ ಇರೋರು ಅಂದ್ರೆ ಲವರ್ ಅಂತ ಎಷ್ಟೋ ಜನ ತಪ್ಪು ಕಲ್ಪನೆಯಲ್ಲಿ ಮುಳುಗಿದರೆ, ನಿಮ್ಮನ್ನ ನೆನಪು ಮಾಡಿಕೊಳ್ಳೋಕೆ ನಿಮ್ನ ಪ್ರೀತಿ ಮಾಡ್ತಾ ಇರೋರೆ ಆಗಬೇಕು ಅಂತ ಇಲ್ಲಾ ತಾಯಿ, ತಂದೆ, ಅಕ್ಕ ತಮ್ಮ ಇಲ್ಲಾ ಎಂದೋ ಬಸ್ ಸ್ಟಾಪ್ ನಲ್ಲಿ ಸಿಕ್ಕು ಪರಿಚಯ ಆಗಿ ಇವತ್ತು ನಿಮ್ ಜೊತೆ ಸಂಪರ್ಕದಲ್ಲಿ ಇಲ್ದೇ ಇರೋರು ಆಗಿರಬಹುದು, ಇಲ್ಲಾ ನಿಮ್ಮ ಕಲ್ಪನೆಯಲ್ಲಿ ಹುಟ್ಟಿಕೊಂಡ ನಿಮ್ಮ ಬಾಳ ಸಂಗಾತಿಯಾಗಿರಬಹುದು ಅಂತಹ ಪಾತ್ರಗಳಿಗೆ ನಾನು ಮರೀಚಿಕೆ..♥...♥...♥ ಅಂತ ಕರೆಯೋಕೆ ಇಷ್ಟ ಪಡ್ತೀನಿ.
ಬಿಡಿ ನನ್ನ ಕಾಲೇಜ್ ಲೈಫ್ ಬಗ್ಗೆ ಹೇಳ್ತಾ ಹೋದ್ರೆ ಕೊನೇನೆ ಇರೋಲ್ಲ ಈಗ ಸೀದ ವಿಷಯಕ್ಕೆ ಬರೋಣ.

ಹೌದು ಬಿಕ್ಕಳಿಕೆ ಅನ್ನೋದೇ ಹೀಗೆ, ನಿಮ್ಮ ನಮ್ಮ ಮನೇಲಿ ಯಾರಾದ್ರೂ ಹಿರಿಯ ವಯಸ್ಸಿನೋರು ಇದ್ರೆ ಬಿಕ್ಕಳಿಕೆ ಬಂದ ತಕ್ಷಣ ಹೇಳೋ ಮಾತು ಯಾರೋ ನಿನ್ನ ನೆನಪು ಮಾಡಿಕೊಳ್ತಾ ಇದಾರೆ ಅಂತ, ಕೆಲವು ಕಡೆ ಯಾರೋ ಬೈತಾ ಇದಾರೆ ಅಂತನು ಹೇಳ್ತಾರೆ.

ಇದನ್ನ ನೀವು ಮೋಡ ನಂಬಿಕೆ ಅಂತಿರ ? ಇಲ್ಲಾ ಇದು ನಿಜ ಅಂತಿರ ?

ನೀವು ಏನ್ ಅನ್ನಿ ನಾನು ಮಾತ್ರ ಇದು ಸತ್ಯ ಅಂತಾನೆ ಹೇಳೋದು ಏಕಂದ್ರೆ ನನಗೆ ತುಂಬಾನೇ ಅನುಭವವಾಗಿದೆ ಇದರಲ್ಲಿ ಒಂದು ಸಲ ಹೀಗೆ ನಮ್ಮ ಕಾಲೇಜ್ ನಲ್ಲಿ ಬಿಕ್ಕಳಿಕೆ ಶುರುವಾಯ್ತು ಹತ್ರ ನೀರು ಇರ್ಲಿಲ್ಲ ಹೊರಗಡೆ ಹೋಗಿ ನೀರು ಕುಡಿಯೋಣ ಅಂದ್ರೆ ಲೆಕ್ಚರ್ ಕ್ಲಾಸ್ ತಗೊಂಡಿದ್ರು ಕೇಳೋಕೆ ಮನಸ್ಸು ಬರ್ಲಿಲ್ಲ ಆಗಲೇ ಸ್ವಲ್ಪ ತಲೆ ಓಡಿಸಿದೆ ನನಗೆ ಇಷ್ಟವಾದವರನೆಲ್ಲ ನೆನಪು ಮಾಡಿಕೊಳ್ತಾ ಬಂದೆ ಹ್ಮಂ ಹ್ಮಂ ನಿಲ್ಲಲಿಲ್ಲ ಆಗಲೇ ಬಿಕ್ಕಳಿಕೆ ಸೌಂಡ್ ಜಾಸ್ತಿ ಆಗಿ ಕ್ಲಾಸ್ ಗೆಲ್ಲ ಕೇಳ್ತಾ ಇತ್ತು ಅಷ್ಟರಲ್ಲಿ ಒಂದು ಹೆಸರು ನನಪಿಗೆ ಬಂತು ನೋಡಿ ನೆನಸ್ಕೊಂಡು ಬಿಟ್ಟೆ ತಕ್ಷಣ ನಿಲ್ಲೋದಾ ನನ್ನ ಪುಣ್ಯಕ್ಕೆ ಆ ಹೆಸರು ಬೇಗನೆ ನೆನಪಾಯ್ತು ಇಲ್ಲಾ ಅಂದಿದ್ರೆ ಆ ಲೆಕ್ಚರ್ ಕೈಯಲ್ಲಿ ಸಿಕ್ಕಪಟ್ಟೆ ಬೈಸ್ಕೋ ಬೇಕಿತ್ತು.

ಅವತ್ತಿಂದ ಇವತ್ತಿನ ವರೆಗೂ ನನ್ನ ಬಿಕ್ಕಳಿಕೆ ತಡೆಯೋಕೆ ಆ ಹೆಸರು ಸಾಕು ಈಗ್ಲೂ ಕೆಲವೊಮ್ಮೆ ಅಮ್ಮ ನ ಜೊತೆ ಫೋನ್ ನಲ್ಲಿ ಮಾತಾಡುವಾಗ ಬಿಕ್ಕಳಿಕೆ ಬರುತ್ತೆ ಅಮ್ಮ ಹೇಳ್ತಾ ಇರ್ತಾರೆ ನೀರು ಕುಡಿಯೋ ಅಂತ ನಾನು ಆಗ ಆ ಹೆಸರು ನೆನಸಿಕೊಳ್ತಿನಿ ಬಿಕ್ಕಳಿಕೆ ನಿಲ್ಲುತ್ತೆ ಮತ್ತೆ ಅಮ್ಮ ಕೇಳ್ತಾರೆ ನೀರು ಕುಡುದ್ಯಾ ಅಂತ ಆಗ ಹೇಳ್ತೀನಿ ಇಲ್ಲಾ ಅಮ್ಮ ಯಾರನ್ನೋ ನೆನಪು ಮಾಡಿಕೊಂಡೆ ನಿಲ್ತು ಅಂತ ನಮ್ಮ ಆಮನಿಗೆ ಅಷ್ಟು ಸಾಕು ಸ್ಟಾರ್ಟ್ ಮಾಡಿಕೊಳ್ತಾರೆ "ಯಾರನ್ನ ನೆನಸ್ಕೊಂಡೆ ? " "ಎಲ್ಲಿದಾರೆ ? " "ಹುಡುಗನ ಹುಡುಗಿನ ?" ಅಂತ ಅವಕೆಲ್ಲ ಉತ್ತರ ಕೊಟ್ರೆ ಉಳಿಗಾಲ ಇಲ್ಲಾ ಅಂತ ನನಗೆ ಗೊತ್ತು ಅದಕ್ಕೆ ಬೇರೆ ಏನೇನೊ ಮಾತಾಡಿ ಟಾಪಿಕ್ ಚೇಂಜ್ ಮಾಡ್ತೀನಿ ಯಾಕೆ ಬೇಕು ಅಲ್ವ ಆ ಮರೀಚಿಕೆ..♥...♥...♥ಹೆಸರು ಹೇಳೋದು

Thursday, December 23, 2010

ಹೊಸ ವರುಷದ ಜೋಳಿಗೆಯಲ್ಲಿ...


ಹೊಸ ವರುಷದ ಜೋಳಿಗೆಯಲ್ಲಿ...

ಪ್ರತಿಯೊಬ್ಬರ ಕೈಗೂ ಒಂದೊಂದು ಬಿಳೀ ಖಾಲಿ ಹಾಳೆ ಕೊಟ್ಟು ಹೋಗಿಬಿಟ್ಟಿದ್ದಾರೆ ಯಾರೋ ಮೇಷ್ಟ್ರು..

ಅವರು ಕೊಟ್ಟಾಗ ಅದ್ಯಾಕೆ ಕೊಟ್ಟರು ಅಂತಲೇ ಗೊತ್ತಿರಲಿಲ್ಲ ನನಗೆ.. ಅಕ್ಕ ಪಕ್ಕ ನೋಡಿದೆ: ಎಲ್ಲರೂ ಮಗ್ನರಾಗಿ ತಲೆ ತಗ್ಗಿಸಿ ಚಿತ್ರ ಬಿಡಿಸುತ್ತಿದ್ದರು, ಕೆಲವರು ಮೇಲೆ ನೋಡುತ್ತಾ ಯೋಚಿಸುತ್ತಿದ್ದರು, ಕೆಲವರು ಪಕ್ಕದವರದನ್ನು ಕಾಪಿ ಹೊಡೆಯುತ್ತಿದ್ದರು, ಕೆಲವರು ಯಾರದೋ ಚಿತ್ರಕ್ಕೆ ಬಣ್ಣ ತುಂಬುತ್ತಿದ್ದರು, ಕೆಲವರು ಆಗಲೇ ಬಿಡಿಸಿ ಮುಗಿಸಿ, ಹಾಳೆಯನ್ನು ಟೇಬಲ್ಲಿನ ಮೇಲಿಟ್ಟು ಎದ್ದು ಹೋಗುತ್ತಿದ್ದರು.

ನಾನೂ ನನ್ನ ಹಾಳೆಯನ್ನು ಎದುರಿಗೆ ಹರವಿಕೊಂಡು ಬಿಡಿಸಲು ತೊಡಗಿದೆ. ಒಂದಷ್ಟು ದಿನ, ಅಪ್ಪ, ಅಮ್ಮ, ಮತ್ತೂ ಇನ್ನೇನೋ ಅವರ ಹೆಸರುಗಳು- ಅವರೆಲ್ಲ ಇದ್ದರು.. ಮೊದಮೊದಲು ಕೈ ಹಿಡಿದು ತಿದ್ದಿಸಿದರು, ನಂತರ ಪಕ್ಕದಲ್ಲಿ ನಿಂತು ಹುರಿದುಂಬಿಸುತ್ತಿದ್ದರು: 'ಹೂಂ, ಬರಿ ಬರಿ.. ಚನಾಗ್ ಬಿಡಿಸ್ತೀಯ.. ಬಿಡಿಸು..' ಆಮೇಲೆ ನನ್ನ ಪಾಡಿಗೆ ನನ್ನನ್ನು ಬಿಟ್ಟು ಅವರೆಲ್ಲ ಸುಮ್ಮನಾಗಿಬಿಟ್ಟರು.

ಮಂಕಾಗಿ ಕೂತಿದ್ದ ನನ್ನ ಬಳಿ ಯಾರೋ ಪುಣ್ಯಾತ್ಮರು ಬಂದು ಹಾಳೆಯ ಮೇಲೆ ಒಂದಷ್ಟು ಚುಕ್ಕಿಗಳನ್ನಿಟ್ಟು ಸ್ಕೆಚ್ ಹಾಕಿಕೊಟ್ಟರು. 'ಹೀಗೇ ಬಿಡಿಸಿದರೆ ಅದ್ಭುತ ಚಿತ್ರವಾಗೊತ್ತೆ' -ಎಂದರು. ನಾನು ಹೌದೆಂದುಕೊಂಡು ಬಿಡಿಸತೊಡಗಿದೆ. ಬಿಡಿಸಿದ ಚಿತ್ರ, ಸ್ವಲ್ಪ ಹೊತ್ತಿಗೆ ನನಗೇ ಇಷ್ಟವಾಗದೆ ಎಲ್ಲಾ ಅಳಿಸಿಹಾಕಿದೆ.

ಮತ್ತೆ ಬಿಳೀ ಖಾಲಿ ಹಾಳೆ..

ಯಾರೋ ಹೇಳಿದಂತೆ ನಾನ್ಯಾಕೆ ಬಿಡಿಸಬೇಕು? ನಾನೇ ಸ್ವಂತ ಸ್ವತಂತ್ರ ಚಿತ್ರ ಬಿಡಿಸಬೇಕೆಂಬ ಹಂಬಲು ಮೂಡಿತು. ಕುಂಚವನ್ನು ಕೈಗೆತ್ತಿಕೊಂದು ಬಿಡಿಸತೊಡಗಿದೆ... ಏನೋ ಕಲ್ಪನೆ.. ಏನೋ ಕನಸು.. ಹೌದು, ಎಷ್ಟು ಚಂದ ಮೂಡಿಬರುತ್ತಿದೆ ಚಿತ್ರ..! ಎಲ್ಲಾ ಸರಿಯಿದೆ, ಹುಬ್ಬಿಗೆ ಸ್ವಲ್ಪ ಕಪ್ಪು ತೀಡಿದರೆ ಮುಗಿಯಿತು ಎನಿಸುವಷ್ಟರಲ್ಲಿ ಯಾರೋ ಬಂದು ಇಡೀ ಚಿತ್ರದ ಮೇಲೆ ಒಂದು ಅಡ್ಡಗೆರೆ ಎಳೆದು ಹೋಗಿಬಿಡುತ್ತಾರೆ.. ನನ್ನ ಚಿತ್ರ ಹಾಳಾಗಿಬಿಡುತ್ತದೆ. ನಾನೀಗ ಅದನ್ನು ಪೂರ್ತಿ ಅಳಿಸಿ ಮತ್ತೆ ಹೊಸದಾಗಿ ಬಿಡಿಸಬೇಕು.

ಅದೇ ಚಿತ್ರವನ್ನು ಮತ್ತೆ ಬಿಡಿಸಲಾಗದು. ಬಿಡಿಸಿದರೂ ಅದೂ ಒಪ್ಪವಾಗಲಾರದು. ಆಗ ಉಷಃಕಾಲವಿತ್ತು; ಆ ರಾಗಕ್ಕದು ಒಗ್ಗುತ್ತಿತ್ತು. ಈಗ ಮಧ್ಯಾಹ್ನ; ಬೇರೆಯದೇ ರಾಗ; ಹೊಸದೇ ಚಿತ್ರ ಬೇಕು.

ಯಾರೋ ಹೇಳುತ್ತಾರೆ: 'ಪಕ್ಕದವನನ್ನು ನೋಡಿಕೊಂಡು ಬಿಡಿಸು. ಚಿತ್ರ ಯಾರದಾದರೇನು? ಚಿತ್ರಕ್ಕೆ ಜೀವ ಬರಲು ಬೇಕು ಹಚ್ಚುವವನದೇ ಭಾವ, ರಾಗ, ಬಣ್ಣ.' ಇರಬಹುದೇನೋ ಅಂದುಕೊಂಡು ನಾನು ಅವರಿವರ ಹಾಳೆ ನೋಡಿದೆ. ಕೆಲವು ಈಗ ತಾನೇ ಬಿಡಿಸಲು ಶುರುವಾದ ಚಿತ್ರಗಳು. ಇನ್ನು ಕೆಲವು ಅರ್ಧ ಬಿಡಿಸಿದ ಚಿತ್ರಗಳು. ಮತ್ತೆ ಕೆಲವಕ್ಕೆ ಢಾಳ ಬಣ್ಣಗಳು. ಕೆಲವು ಚಿತ್ರಗಳು ಇಷ್ಟವಾಗಲಿಲ್ಲ. ಕೆಲವು ಅತ್ಯಾಕರ್ಷಕವಾಗಿದ್ದವು. ನಾನೂ ಹಾಗೇ ಬಿಡಿಸಬೇಕು ಎಂದು ನನ್ನ ಒಂದು ಮನಸು ಹೇಳಿದರೆ, ಮತ್ತೊಂದು ಮನಸು ಒಪ್ಪಲಿಲ್ಲ. ನನ್ನ ಚಿತ್ರ ಯಾರದನ್ನೂ ಹೋಲಬಾರದು. ನನ್ನ ಚಿತ್ರ, ಅದಕ್ಕೆ ನನ್ನದೇ ಬಣ್ಣ -ಆಗಲೇ ಚಂದ ಎನ್ನಿಸಿತು.

ನಾನು ಮತ್ತೆ ಬಿಡಿಸಲು ತೊಡಗುತ್ತೇನೆ; ಏನು ಬಿಡಿಸಬೇಕೆಂದೇ ಗೊತ್ತಾಗದೆ ಹೆಣಗಾಡುತ್ತೇನೆ.

ಹಾಗೆ ನಮ್ಮನ್ನೆಲ್ಲ ಬರೆಯಲು ಹಚ್ಚಿ ಹಾಳೆ ಹಂಚಿಹೋದ ಮೇಷ್ಟ್ರು ಮಾತ್ರ ಇನ್ನೂ ಸಿಕ್ಕಿಲ್ಲ. ಅವಾಗಿವಾಗ ಬಂದು ನೋಡಿಕೊಂಡು ಹೋಗುತ್ತಿರುತ್ತಾರೆ, ಒಳ್ಳೆಯ ಚಿತ್ರ ಬಿಡಿಸಿದರೆ ಪ್ರಶಸ್ತಿ ಕೊಡುತ್ತಾರೆ, ಕೆಟ್ಟ ಚಿತ್ರಕ್ಕೆ ಶಾಪ ಎಂದೆಲ್ಲ ಗುಸುಗುಸು ನಮ್ಮಲ್ಲಿ... ನನಗಂತೂ ಅವರನ್ನು ನೋಡಿದ ನೆನಪೂ ಇಲ್ಲ. ಅವರು ಯಾವಾಗ ಬರುತ್ತಾರೋ, ಏನೋ, ಕಾದೂ ಕಾದೂ ಬೇಸತ್ತು ನಾನಂತೂ ಇತ್ತೀಚೆಗೆ ಅವರ ಬಗ್ಗೆ ಧೇನಿಸುವುದನ್ನೂ ಬಿಟ್ಟಿದ್ದೇನೆ.

ಯಾರೋ ಬಂದು ಪಕ್ಕದಲ್ಲಿ ಕೂರುತ್ತಾರೆ. 'ನಿನ್ನ ಹಾಳೆಯಲ್ಲಿ ನಾನೂ ಬಿಡಿಸಲಾ?' ಎನ್ನುತ್ತಾರೆ. 'ಇಬ್ಬರೂ ಸೇರಿ ಬಿಡಿಸಿದರೆ ಚಿತ್ರಕ್ಕೆ ಹೆಚ್ಚು ಸೊಗಸು ಬರುತ್ತದೆ' ಎನ್ನುತ್ತಾರೆ. ನನಗೂ ಅದು ಹಿತವೆನಿಸುತ್ತದೆ. ನಾನವರ ಮುಖ ನೋಡುತ್ತೇನೆ. ಮುಗುಳ್ನಗುತ್ತೇನೆ. ಅದನ್ನವರು ಸಮ್ಮತಿಯೆಂದು ಭಾವಿಸಿ ನನ್ನ ಜೊತೆ ಕೈಜೋಡಿಸುತ್ತಾರೆ. ಹೊಸ ಕನಸಿನ ಹೊಸ ಚಿತ್ರ ಶುರುವಾಗುತ್ತದೆ... ಆದರೆ ನನ್ನ ಅವರ ಭಾವಕ್ಕೆ ಹೊಂದಾಣಿಕೆಯಾಗದೆ, ಚಿತ್ರ ಚಿತ್ರಾನ್ನವಾಗಿ, ಅವರು ಬೇಸರಗೊಂಡು ಎಲ್ಲಾ ಅಳಿಸಿ, ಎದ್ದು ನಡೆಯುತ್ತಾರೆ.

ಮತ್ತದೇ ಬಿಳೀ ಹಾಳೆ... ಅಲ್ಲಲ್ಲಿ ಹಳೆಯ, ಅಳಿಸಿದರೂ ಪೂರ್ತಿ ಮರೆಯಾಗದ ಚಿತ್ರದ ಕುರುಹುಗಳು.. ಆ ಮತ್ತೊಬ್ಬರೊಂದಿಗೆ ಬೆಸೆದುಕೊಂಡು ಬಿಡಿಸಿ ಅಭ್ಯಾಸವಾಗಿದ್ದ ಕೈಗೆ ಸ್ವಲ್ಪ ದಿನ ಕಷ್ಟವಾಗುತ್ತದೆ; ಆಮೇಲೆ ಒಗ್ಗಿಹೋಗುತ್ತದೆ.

ಎಷ್ಟೋ ಚಿತ್ರಗಳನ್ನು ಬಿಡಿಸುತ್ತೇನೆ ನಾನು. ಬಿಡಿಸಿದ ಯಾವ ಚಿತ್ರವೂ ನನಗೆ ಪರಿಪೂರ್ಣ ಎನಿಸುವುದಿಲ್ಲ. ಒಮ್ಮೊಮ್ಮೆ ಯೋಚಿಸಿದಾಗ ದಿಗಿಲಾಗುತ್ತದೆ: ನಾನು ಚಿತ್ರ ಬಿಡಿಸಲು ತೊಡಗಿ ಎಷ್ಟೋ ವರ್ಷಗಳಾಗಿಬಿಟ್ಟಿವೆ. ಇನ್ನೂ ಈ ಚಿತ್ರ ಪೂರ್ತಿಯಾಗಿಲ್ಲ.. ಯಾವತ್ತಿಗಿದು ಮುಗಿಯುವುದು? ಎಂದಿದಕ್ಕೆ ಮುಕ್ತಿ? ಪಕ್ಕದಲ್ಲಿ ಹಣೆಗೆ ವಿಭೂತಿ ಹಚ್ಚಿ ಕೂತವನೊಬ್ಬ ಹೇಳುತ್ತಾನೆ: 'ಹಾಗೆಲ್ಲ ಚಿಂತಿಸುತ್ತಾ ಕೂರಬಾರದು. ಈ ಚಿತ್ರ ಮುಗಿಯುವುದೇ ಇಲ್ಲ. ಈಗಾಗಲೇ ಎದ್ದು ಹೋದವರೆಲ್ಲ ಮುಗಿಸಿಯೇ ಕೊಟ್ಟು ಹೋದವರೇನಲ್ಲ. ಅರ್ಧಕ್ಕೇ ಬೇಸತ್ತು ಎದ್ದು ಹೋದವರಿದ್ದಾರೆ. ಸುಸ್ತಾಗಿ ಎದ್ದು ಹೋದವರಿದ್ದಾರೆ. ಮೇಷ್ಟ್ರು ಕರೆದಂತಾಯ್ತು ಎಂದುಕೊಂಡು ಎದ್ದು ಹೋದವರಿದ್ದಾರೆ. ಚಿತ್ರ ಬಿಡಿಸೀ ಅಳಿಸಿ - ಬಿಡಿಸೀ ಅಳಿಸಿ ಹಾಳೆಯೆಲ್ಲ ಹರಿದುಹೋಗಿ ಎದ್ದು ಹೋದವರಿದ್ದಾರೆ. ನೀನ್ಯಾಕೆ ಹೀಗೆ ಚಿಂತಿಸುತ್ತ ಕುಳಿತಿದ್ದೀಯಾ? ನಿನಗೆ ತೋಚಿದಂತೆ ಬಿಡಿಸು. ಬಿಡಿಸುವಾಗ ಸಿಗುವ ಆನಂದವನ್ನು ಅನುಭವಿಸು.'

ಅವರು ಹೇಳಿದ್ದು ನನಗೆ ಸರಿಯೆನಿಸುತ್ತದೆ. ಹೊಸ ಉತ್ಸಾಹದೊಂದಿಗೆ ಬಿಡಿಸತೊಡಗುತ್ತೇನೆ...

* * *

ಬರುವ ಹೊಸ ವರ್ಷದ ಜೋಳಿಗೆಯಲ್ಲಿ ಚಿತ್ರ ಬಿಡಿಸುತ್ತಿರುವ ನಿಮಗೆ ಹೊಸ ಕಲ್ಪನೆಗಳನ್ನೂ, ವಿನ್ಯಾಸಗಳನ್ನೂ, ಪರಿಪೂರ್ಣತೆಯೆಡೆಗಿನ ತಿರುವುಗಳನ್ನೂ ಒದಗಿಸಬಲ್ಲ ಪೆನ್ಸಿಲ್ಲು - ಬಣ್ಣಗಳಿರಲಿ. ಬಿಡಿಸುವ ಮನಸಿನಲ್ಲಿ ಉಲ್ಲಾಸ ತುಂಬಿರಲಿ.

ಶುಭಾಶಯಗಳು.

ಚಳಿಯಲ್ಲೊಂದು ಬೆಚ್ಚಗಿನ ನೆನಪು

ಚಳಿಯಲ್ಲೊಂದು ಬೆಚ್ಚಗಿನ ನೆನಪು


ಪ್ರತಿಯೊದು ಕಾಲಕ್ಕೂ ಅದರದೇ ಆದ ಸೌಂದರ್ಯವಿದೆ. ಕಾಲ ಬದಲಾಗುತ್ತಿಲ್ಲದಿದ್ದರೆ ಬದುಕು ನಿಂತ ನೀರಾಗುತ್ತಿತ್ತು. ಪ್ರಕೄತಿಯ ಮನೋಹರ ರೂಪಗಳನ್ನು ಅನುಭವಿಸಲು ಬಹಳ ಸುಂದರ. ಪ್ರತಿ ವರುಷವೂ ಹರುಷ. ಪ್ರಕೄತಿ ಒಂದು ಅದ್ಭುತ. ನಾನು ಸ್ವಭಾವತಃ ಪ್ರಕೄತಿ ಪ್ರಿಯಳು. ಅವಳ ಪ್ರತಿಯೊಂದು ಭಾವನೆಗಳು ಉಲ್ಲಾಸ ತರುತ್ತದೆ, ಹೊಸ ಸ್ಪೂರ್ತಿಯನ್ನು ನೀಡುತ್ತದೆ.

ಈ ಚಳಿಗಾಲದ ರಮ್ಯತೆಯನ್ನು ನಾನು ಇದೀಗ ೮-೯ ವರ್ಷಗಳಿಂದ ಅನುಭವಿಸುತ್ತಿರುವೆ.ನನ್ನೂರಲ್ಲಿ ಇದ್ದಿದ್ದು ಕೇವಲ ೨ ಕಾಲಗಳು. ಚಳಿಗಾಲವನ್ನು ಯಾವತ್ತೂ ಅನುಭವಿಸಿರಲಿಲ್ಲ. ೨ ನೇ ತರಗತಿಯಲ್ಲಿದ್ದಾಗ ಕಲಿತಿದ್ದ ವರ್ಷಕ್ಕೆ ೩ ಕಾಲಗಳಲ್ಲಿ ಮಾತ್ರ ಚಳಿ ಜೀವಂತವಾಗಿರುತ್ತಿತ್ತು. ಹಾಂ.... ಮತ್ತೆ ಇನ್ನೊಂದು ಹಾಡಿತ್ತು..
ಚಳಿರಪ್ಪೊ ಚಳಿರೊ...
ಚಳಿರಮ್ಮ ಚಳಿರೊ....
ಅಮ್ಮನ ಸೀರೆ ಹೊದ್ಕೊಂಡೆ ಚಳಿ ಹೋಗ್ಲೇ ಇಲ್ಲ..
ಅಪ್ಪನ ಕೋಟು ಹಾಕ್ಕೊಂಡೆ ಚಳಿ ಹೋಗ್ಲೇ ಇಲ್ಲ..
ಅಕ್ಕನ ಶಾಲು ಹೊದ್ಕೊಂಡೆ ಚಳಿ ಹೋಗ್ಲೇ ಇಲ್ಲ..

ಇದು ಚಳಿಯ ಕಲ್ಪನೆಯನ್ನು ಕಟ್ಟಿ ಕೊಟ್ಟಿತ್ತು.
ನನ್ನ ಕಕ್ಕಿಯರ ಮನೆ ಚಳಿಯ ನಾಡಲ್ಲಿ ಇದ್ದುದ್ದರಿಂದ, ಚಳಿಗಾಲದಲ್ಲಿ ಅಲ್ಲೊಮ್ಮೆ ಹೋಗಿದ್ದಾಗ ಅನುಭವಿಸಿದ್ದೆ.

ಚಳಿ ಎಂದಾಕ್ಷಣ ನನಗೆ ನೆನಪಾಗುವುದು ನನ್ನ ಓದಿನ ದಿನಗಳು. ಚಳಿಯ ಊರಿಗೆ ಹೋಗಿ ಸಿಕ್ಕಿಬಿದ್ದಿದ್ದೆ. ದುರಾದೄಷ್ಟಕ್ಕೆ ನನ್ನ ಪರೀಕ್ಷಾ ಕಾಲವೂ ಡಿಸೆಂಬರ್ ತಿಂಗಳುಗಳೇ ಆಗಿತ್ತು.ಬೆಚ್ಚಗೆ ಹೊದ್ದು ಮಲಗೋಣವೆಂದರೆ ಪುಸ್ತಕಗಳ ಕಾಟ. ಓದೋಣವೆಂದರೆ ಚಳಿರಾಯ ಮಲಗಲು ಒತ್ತಾಯಿಸುತ್ತಿದ್ದ.ಅಂತೂ ಪರೀಕ್ಷೆ ಮುಗಿಸಿದಾಗ ಗೆದ್ದ ಭಾವನೆ.ನನ್ನ ’ರೂಮಿ’ ಚಳಿಯ ನಾಡಿನಿಂದಲೇ ಬಂದವಳಾಗಿದ್ದಳು. ಆದ್ದರಿಂದ ಅವಳ ಓದಿಗೆ ಭಂಗ ತರುವವರಾರೂ ಇರುತ್ತಿರಲಿಲ್ಲ.ನನಗೋ ಅವಳ ಓದು ಕಂಡರೆ ಹೊಟ್ಟೆ ಉರಿಯುತ್ತಿತ್ತು. ನಾನೋ ಓದುವೆನೆಂದು ಪುಸ್ತಕ ಹಿಡಿದು ಕುರ್ಚಿಯಲ್ಲಿ ಕೂರುತ್ತಿದ್ದೆ. ನಂತರ ನೆಲಕ್ಕೆ ಸವಾರಿ ಹೋಗುತ್ತಿತ್ತು, ಅನಂತರದಲ್ಲಿ ಪುಸ್ತಕದ ಮೇಲೆಯೇ ನಿದ್ದೆ ಹೋಗುತ್ತಿದ್ದೆ... ಹಾ.. ಹಾ... ಹಾ...
ಬೆಳಗ್ಗೆ ನನ್ನ ’ರೂಮಿ’ ಎದ್ದು ’coffee’ ಮಾಡಿ ಕೊಡುತ್ತಿದ್ದಳು. ವಾಹ್...ನಿಜಕ್ಕೂ ನಾನು ಅದೄಷ್ಟ ಮಾಡಿದ್ದೆ.

ಬೆಂಗಳೂರಿನಲ್ಲಿ ಚಳಿಯ ಸರಿಯಾದ ಅನುಭವ ಪಡೆಯುತ್ತಿದ್ದೇನೆ. ಚಳಿಗಾಲ ಬಂದಾಕ್ಷಣ ಬೆಚ್ಚಗಿನ ಬಟ್ಟೆಗಳು, ಕ್ರೀಮುಗಳು ಎಲ್ಲಾ ಹೊರಬರುತ್ತದೆ. ಕತ್ತಲೂ ಬೇಗ ಹಾಗೆಯೇ ಬೆಳಗೂ ನಿಧಾನ. ಏನೇ ಆದರೂ ಚಳಿಗಾಲದ ಈ ಸೋಮಾರಿತನ ಬಲು ಪ್ರಿಯವಾದುದು.
ನಿಮ್ಮಲ್ಲೂ ಚಳಿಗಾಲದ ಬೆಚ್ಚಗಿನ ನೆನಪುಗಳಿರಬಹುದು. ನನ್ನೊಡನೆ ಹಂಚಿಕೊಳ್ಳುವಿರಾ.........

ಹೊಸ

"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ..."
"ಎಲ್ಲೇ?"
"ಅದೇ.... ಅಲ್ಲಿ....!"
"ಓಹ್... ಹೊರಟೇಬಿಡ್ತಾ? ನಿನ್ನೆ ಮೊನ್ನೆ ಬಂದಂಗಿತ್ತಲ್ಲೇ.."
"ಬಂದಿದ್ದೂ ಆಯ್ತು ಹೊರಟಿದ್ದೂ ಆಯ್ತು; ಬೇಗಬೇಗ ಟಾಟಾ ಮಾಡೇ..."

* * *

ಧಾನ್ಯ ದಾಸ್ತಾನಿನ ಗೋಡೌನಿನಲ್ಲಿ ಬಂದಿಯಾಗಿದ್ದ ಹೆಗ್ಗಣವೊಂದು ಗೋಡೆಯಲ್ಲಿ ದೊಡ್ಡದೊಂದು ಕನ್ನ ಕೊರೆಯುತ್ತಿದೆ.. ಬೇಗ ಬೇಗ ಕೊರೆ ದೊಡ್ಡಿಲಿಯೇ: ಹೊಸ ವರ್ಷ ಬರುತ್ತಿದೆ...

ಎರಡು ಬಾರಿ ಕೆಮ್ಮಿ, ಗಂಟಲನ್ನು ಶ್ರುತಿಗೊಳಿಸಿ, ಹಾಡಲು ಕುಳಿತಿದ್ದಾನೆ ಗಾಯಕ.. ಪಲ್ಲವಿ ಮುಗಿದು, ಅನುಪಲ್ಲವಿ ಮುಗಿದು, ಇದು ಎಷ್ಟನೇ ಚರಣ..? ಬೇಗ ಬೇಗ ಹಾಡು ಗೆಳೆಯಾ: ಹೊಸ ವರ್ಷ ಬರುತ್ತಿದೆ...


ಮಗುವನ್ನು ಕಾಲ ಮೇಲೆ ಹಾಕಿಕೊಂಡು, 'ಉಶ್‍ಶ್‍ಶ್‍ಶ್ಶ್...' ಎನ್ನುತ್ತಾ ಕುಳಿತಿದ್ದಾಳೆ ತಾಯಿ; ಉಚ್ಚೆಯನ್ನೇ ಮಾಡುತ್ತಿಲ್ಲ ಪಾಪು! ಬೇಗ ಬೇಗ ಉಚ್ಚೆ ಮಾಡು ಮಗೂ: ಹೊಸ ವರ್ಷ ಬರುತ್ತಿದೆ...

ದನದ ಕೆಚ್ಚಲಿಗೆ ನೀರು ಸೋಕಿ, ಮೊಲೆಗಳನ್ನು ತೊಳೆದು, ದೊಡ್ಡ ಕೌಳಿಗೆಯನ್ನಿಟ್ಟುಕೊಂಡು ಕುಳಿತಿದ್ದಾನೆ ಅಪ್ಪ.. ಸೊರೆಯುತ್ತಲೇ ಇಲ್ಲ ದನ! ಬೇಗ ಬೇಗ ಹಾಲು ಕೊಡು ದನವೇ: ಹೊಸ ವರ್ಷ ಬರುತ್ತಿದೆ...


ನ್ಯಾಲೆಯ ಮೇಲೆ ಬಟ್ಟೆಗಳನ್ನು ನೇತುಹಾಕಿ, ಒಣಗುವುದನ್ನೇ ಕಾಯುತ್ತಾ ಕುಳಿತಿದ್ದಾನೆ ರೂಂಮೇಟ್.. ಅಂಡರ್ ವೇರ್ ಒಣಗುವುದಂತೂ ಯಾವಾಗಲೂ ಲೇಟ್! ಬೇಗ ಒಣಗು ಚಡ್ಡಿಯೇ: ಹೊಸ ವರ್ಷ ಬರುತ್ತಿದೆ...


ಶಾಪಿಂಗಿಗೆ ಹೋದ ಗೆಳೆಯ ಸ್ವೀಟು, ಕೇಕು, ಪಟಾಕಿ.. ಎಲ್ಲಾ ತಂದಿದ್ದಾನೆ. ಆದರೆ ಹೊಸ ಕ್ಯಾಲೆಂಡರು ತರುವುದನ್ನೇ ಮರೆತುಬಿಟ್ಟಿದ್ದಾನೆ! ಮತ್ತೆ ಓಡಿಸಿಯಾಗಿದೆ ಪೇಟೆಯೆಡೆಗೆ. ಬೇಗ ಬಾ ಗೆಳೆಯಾ: ಹೊಸ ವರ್ಷ ಬರುತ್ತಿದೆ...


ಭಟ್ಟರು ಗಂಧ ತೇಯ್ದು, ದೇವರನ್ನು ತೊಳೆದು, ಹೂವೇರಿಸಿ, ಕುಂಕುಮ-ಅರಿಶಿನ ಹಚ್ಚಿ, ಊದುಬತ್ತಿ ಬೆಳಗಿ, ಕಾಯಿ ಓಡೆದು, ನೈವೇದ್ಯ ಮಾಡಿ.... ಅಯ್ಯೋ, ಅವೆಲ್ಲಾ ಇರಲಿ ಭಟ್ರೇ, ಬೇಗ ಮಂಗಳಾರತಿ ಮಾಡಿ: ಹೊಸ ವರ್ಷ ಬರುತ್ತಿದೆ...

*
* *

ಅಗೋ.... ಹೊಸ ವರ್ಷ ಬಂದೇಬಿಟ್ಟಿತು..! ಕೊರೆದೂ ಕೊರೆದು ಕೊನೆಗೂ ಗೋಡೆಯಲ್ಲೊಂದು ಸಣ್ಣ ಕಿಂಡಿಯನ್ನು ಮಾಡಿಯೇಬಿಟ್ಟಿದೆ ಹೆಗ್ಗಣ. ಆ ಸಣ್ಣ ಕಿಂಡಿಯಿಂದಲೇ ತೂರಿ ಬರುತ್ತಿದೆ ಹೊಸ ವರ್ಷದ ಆಶಾಕಿರಣ; ಹೊಸ ಬೆಳಕು. ಮಗು ಹಾರಿಸಿದ ಉಚ್ಚೆ ಇಡೀ ಭುವಿಯನ್ನೇ ಒದ್ದೆ ಮಾಡಿದೆ. ಕೌಳಿಗೆ ತುಂಬಿದರೂ ಮುಗಿದಿಲ್ಲ ದನದ ಕೆಚ್ಚಲಿನ ಹಾಲು. ಅಪ್ಪ ಕೂಗುತ್ತಿದ್ದಾನೆ: 'ಏಯ್, ಇನ್ನೊಂದು ಗಿಂಡಿ ತಗಂಬಾರೇ..' ಅಮ್ಮ ಅಡುಗೆ ಮನೆಯಿಂದಲೇ ಉತ್ತರಿಸುತ್ತಿದ್ದಾಳೆ: 'ಸಾಕು ನಮಗೆ; ಉಳಿದಿದ್ದನ್ನು ಕರುವಿಗೆ ಬಿಡಿ.' ಒಣಗಿದ ಚಡ್ಡಿಯ ಮೇಲೆ ಹೊಸ ಪ್ಯಾಂಟೇರಿಸುತ್ತಿದ್ದಾನೆ ರೂಂಮೇಟ್. ಗೆಳೆಯನಂತೂ ಓಡೋಡಿ ಬರುತ್ತಿದ್ದಾನೆ. ಅವನ ಕೈಯಲ್ಲಿ ಪೂರ್ತಿ ಮುನ್ನೂರಾ ಅರವತ್ತೈದು ದಿನಗಳುಳ್ಳ ಕ್ಯಾಲೆಂಡರಿದೆ. ದೇವರಿಗೇ ಆಶ್ಚರ್ಯವಾಗುವಷ್ಟು ದಕ್ಷಿಣೆ ಬಿದ್ದಿದೆ ಭಟ್ಟರ ಮಂಗಳಾರತಿ ಹರಿವಾಣದಲ್ಲಿ.

ಎಲ್ಲರಿಗೂ ಖುಷಿ; ಎಲ್ಲರಿಗೂ ಸಂಭ್ರಮ; ಎಲ್ಲರಿಗೂ ಸಡಗರ.. ಏಕೆಂದರೆ, ಹೊಸ ವರ್ಷ ಬಂದಿದೆ! ಈ ಮಧ್ಯೆ, ಹಾಡುತ್ತಿರುವವನನ್ನು ಎಲ್ಲರೂ ಮರೆತೇ ಬಿಟ್ಟಿದ್ದಾರೆ. ಆತ ಹಾಡುವುದನ್ನು ಒಂದು ಕ್ಷಣ ನಿಲ್ಲಿಸಿಬಿಟ್ಟಿದ್ದಾನೆ. ತಕ್ಷಣ ಎಲ್ಲರಿಗೂ ಅರಿವಾಗಿದೆ. ಎಲ್ಲಾ ಅವನ ಬಳಿ ಹೋಗಿ ಹೇಳುತ್ತಿದ್ದಾರೆ:


"ಹಾಡು ಗೆಳೆಯಾ, ಮುಂದುವರೆಸು. ಹಾಡು ಹಳೆಯದಾದರೇನು, ಭಾವ ಹೊಸತಿದ್ದರೆ ಸಾಕು.."

ಹೊಸ ವರ್ಷದ ಹೊಸ ಕ್ಯಾಲೆಂಡರು ನಿಮ್ಮ ಬದುಕಿನ ಹಾಡಿಗೆ - ಹಾದಿಗೆ ಹೊಸ ಭಾವ ಬೆರೆಸಲಿ ಎಂದು ಹಾರೈಸುತ್ತೇನೆ.

ನೂತನ ವರ್ಷದ ಶುಭಾಶಯಗಳು.

Tuesday, April 13, 2010

MISSING U.....


ಜೊತೆಯಾಗಿ ನಡೆದು ತಿಳಿಯದಂತೆ ನೀ ನಡೆದೇ ಮುಂದೆ...
ಹಿಂಬಾಲಿಸೋಣವೆಂದು ಹಿಂದೆ ಬಂದೆ ಬೇಡವೆಂದು ನೀ ದೂರವಾದೆ...
ನಿನ್ನ ದಾರಿ ಅರಿಯದೆ ನಾನು ಹಿಂತಿರುಗಿ ಹೋಗುವ ಮನಸ್ಸು ಮಾಡಿದೆ..
ಹೆಜ್ಜೆ ಮಾಸುವ ಮೊದಲೊಮ್ಮೆ ಹೇಳ ಬಯಸುತ್ತೇನೆ..
STILL AM MISSING U.....

ಉಳಿದು ಹೋದ ಮಾತುಗಳು ......


Deaರ ರವಿಕುಮಾರ್.....
ಮಾಮರವೆಲ್ಲೋ ಕೊಗಿಲೆಯಲ್ಲೋ ಎನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ
ಎಂದು ಪ್ರಖ್ಯಾತ ಕವಿಯೊಬ್ಬರು ಬರೆದಿರುವ ಹಾಡು ರೇಡಿಯೋ ದಲ್ಲಿ ಮೂಡಿ ಬರುತ್ತಿರಲು ಅಲ್ಲೇ ಕುಳಿತು ಓದುತ್ತಿದ್ದ ನನ್ನ ಮನವು ಹಿಂದಿನದನ್ನು ಮೆಲುಕು ಹಾಕತೊಡಗಿತು.. ಬದುಕು ಸುಂದರ ಅನಿಸುವಾಗ ಸಾಕೋ ಸಾಕು ಎನ್ನುವಂತೆ,
ಇನ್ನೇನು ಏನೂ ಇಲ್ಲ ಎನುವಾಗ ಬೇಕಿತ್ತು ಅನ್ನುವಂತೆ ಜೀವನದಲ್ಲಿ ಕೆಲವೊಂದು ದಿನಗಳು ಹಾಗೆ ಇದ್ದು ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು
ಅಲ್ಲವೇ…..ನೀನು ನಾನು ಜೊತೆಯಾಗಿ ಕಳೆದ ಎಷ್ಟೊಂದು ದಿನಗಳ ಸಾವಿರಾರು ಕ್ಷಣಗಳ ನೆನಪು ಮೂಡಿದಾಗ ನನಗೆ ನಾನೇ
ಅಂದುಕೊಂಡಿದ್ದಿದೆ.. ಜಗತ್ತು ಬದಲಾಗ ಬಾರದಿತ್ತು...!!! ಕೆಲವೊಮ್ಮೆ ಅಂದುಕೊಳ್ಳುತ್ತೇನೆ ನಿನಗೆ ನನ್ನ ನೆನಪೇ
ಬರುವುದಿಲ್ಲವೇನೋ?? ಹಾಗೆಂದುಕೊಂಡಾಗ ನನಗೆ ನನ್ನ ಮೇಲೆ ಬೇಸರವಾಗಿದ್ದಿದೆ…ಮತ್ತೊಮ್ಮೆ ಅಂದುಕೊಳ್ಳುತ್ತೇನೆ ,
ಈ ಹಾಳಾದ ನೆನಪು ನನ್ನಬದಲಾದರೂ ಬಿಡುತ್ತಿಲ್ಲವಲ್ಲ…ಮರೆಯಬೇಕೆಂದು ಅಂದು ಕೊಂಡಂತೆ ಮತ್ತೆ ಮತ್ತೆ ಮರುಕಳಿಸುವ ಸುಂದರ ನೆನಪುಗಳು.. ಒಮ್ಮೆಲೇ ಮನದಲ್ಲಿ ಕಾಮನಬಿಲ್ಲು,ಮತ್ತೆ ಚಿಂತನ ಮಂಥನ ನನ್ನಲ್ಲೇ.…!!!

"ಇಗೇಕೆ ಆ ನೆನಪು ಬಂದೆನ್ನ ಕಾಡಿದೆ
ಎದೆಯ ಆಳದಲ್ಲಿ ವಿಷಾದ ಮೂಡಿದೆ "
ಏನೋ ಸೆಳೆತ ಇದೆ ಕಣೆ ಗೆಳಯ ನಿನ್ನ ಸ್ನೇಹದಲ್ಲಿ...ನಿನ್ನನೆನಪುಗಳೆಲ್ಲ ಆಯಸ್ಕಾಂತದಂತೆ ನನ್ನ ಸೆಳೆಯುತ್ತವೆ..ಕೇವಲ ನಗುವಿನಲ್ಲಿ ಪರಿಚಯವಾದ ನಾನು ನೀನು ಎಷ್ಟೊಂದು ಆತ್ಮೀಯರಾಗುತ್ತೆವೆಂದು ಬಹುಷ: ನಾವಿಬ್ಬರೂ ಅಂದುಕೊಂಡಿರಲಿಲ್ಲ…
ಆದರೂ ಮರೆಯಲಾಗದ ಒಂದು ಬಂಧ ನಮ್ಮನ್ನು ಬಂದಿಸಿ ಬಿಟ್ಟಿದ್ದು ವಿಪರ್ಯಾಸವೇ.….??ನಿನಗೂ ಹಾಗೆ ಅನಿಸಿದ್ದರೆ ನೀನುನನ್ನಿಂದ ಮಾನಸಿಕವಾಗಿ ಬಹುದೂರ ನಡೆದು ಬಿಡುತ್ತಿರಲಿಲ್ಲ ಅಲ್ಲವೇ.…
"ಬಣ್ಣ ಬಣ್ಣದ ಚಿತ್ರ ಬರೆದು
ಹೋದಳೆನ್ನ ತೊರೆದು
ಚಿತ್ರಕ್ಕೆ ಮಸಿ ಬಳಿದು "

ನಿನಗೆ ನೆನಪಿದೆಯೇ...ಎಷ್ಟೊಂದು ಕ್ಷಣಗಳು ನಾವಿಬ್ಬರೂ ಜೊತೆಯಾಗಿ ನಡೆದಿಲ್ಲ.…ಸುಂದರ ಇರುಳಿನಲ್ಲಿಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿಲ್ಲ...ಎಷ್ಟೊಂದು ವಿಷಯ ಚರ್ಚಿಸಿಲ್ಲ.ನಾನು ಪಟಪಟನೆ ಮಾತನಾಡುತ್ತಿದ್ದರೆ ಸುಮ್ಮನೆ ಹಸನ್ಮುಖಿಯಾಗಿ ಆಲಿಸುತ್ತಿದ್ದ ನಿನ್ನ ಮುಖ, ನಿನ್ನ ಕಣ್ಣುಗಳು ಈಗಲೂ ನೆನಪಿದೆ... ಇವತ್ತಿಗೂ ನಾನೂ ಮಾತನಾಡುತ್ತೇನೆ... ಆದರೆ ಆಲಿಸಲು ನೀನಿಲ್ಲ ಪಕ್ಕದಲ್ಲಿ ಇಷ್ಟೇ ಬದಲಾಗಿದೆ ಜೀವನ..

ನಾನು ಇದ್ದಲ್ಲಿ ನೀನು ನೀನು ಇದ್ದಲ್ಲಿ ನಾನೂ ಎಲ್ಲವೂ ಜೊತೆಯಾಗಿ ಮಾಡುತ್ತಿದ್ದ ನಾವು ಇಂದು ನನಗೆ ನೀನು ನಿನಗೆ ನಾನು..ನೆನಪಾದರೆ ನಿನಗೆ ನಾನು ಸಿಗಲೇ ಬಾರದಿತ್ತು ಇಂದು ಕೂಡ ಅನಿಸಿದ್ದಿದ್ದೆ ನನಗೆ.…ಎಷ್ಟೊಂದು ಕಾಡಿಸಿದ್ದಿದೆ ನಾನು ನಿನಗೆ.…ನೆನೆದಂತೆ ಮನದಲ್ಲಿ ಅರಿವಿಲ್ಲದಂತೆ ಒಂದೊಂದೇ ಪುಟಗಳು ತೆರೆಯುತ್ತ ಹೋಗುತ್ತವೆ.…ನಿನ್ನ ಮಾತು ಮೀರಿದರೆ ನೀನು ಗದರಿಸುತ್ತಿದ್ದ ರೀತಿ “ಅಬ್ಬಾರೆ !!!!”ಎಂದು ಕಣ್ಣು ಬಿಡುತ್ತಿದ್ದ ಮುಖ ಇಂದಿಗೂ ಕೂಡ ನನ್ನ ಮನದಲ್ಲಿ ಅಚ್ಚಾಗಿ ಉಳಿದುಬಿಟ್ಟಿದೆ.…ಯಾರ ಕಣ್ಣುಬಿತ್ತೋ ಏನೋ ಇಂದು ಎಲ್ಲಾ ಸುಳ್ಳೇನು ಅನಿಸುವಷ್ಟರ ಮಟ್ಟಿಗೆ ಬದಲಾಗಿದೆ.…
ಒಂದು ದಿನ ನೋಡದಿದ್ದರೂ ಏನೋ ಕಳೆದು ಕೊಂಡಂತೆ ಭಾಸವಾಗುತ್ತಿದ್ದ ನಮಗೆ ಇಂದು ಫಾರ್ಮಾಲಿಟಿಯ ಮಾತಷ್ಟೇ ಉಳಿದಿದ್ದರೆ
ಜಗತ್ತು ಜೀವನ ಎಂತಹವೈಪರೀತ್ಯಗಳನ್ನು ಸ್ರಷ್ಟಿಸುತ್ತೆ ಅನಿಸುತ್ತದೆ ಅಲ್ಲ..!!ಆದರೂ ಯಾಕೋ ಕನೋ ನಿನ್ನ
ತುಂಬಾ ಜ್ಞಾಪಿಸಿಕೊಳ್ಳುತ್ತಿನಿ ..ಮರೆತರೂ ನೆನಪಿಸಿಕೊಳ್ಳಲು ಇಷ್ಟಪಡುತ್ತಿನಿ …
““ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು ನಾವು ನಮ್ಮ ಅಂತರಾಳವ”

ಎಷ್ಟು ಕಾಲ ಒಟ್ಟಿಗಿದ್ದ ನಮಗೆ ಇನ್ನಷ್ಟು ಸಮಯ ಒಟ್ಟಿಗೆ ಇರಬಹುದಿತ್ತು..ಇರುತ್ತೆನೆಂದು ನೀನು ನನ್ನ ನಂಬಿಸಿಬಿಟ್ಟಿದ್ದೆ. .. ಆದರೆ ಕ್ರಮೇಣ ನೀನು ಮರೆತೂ ಬಿಟ್ಟೆ...ಅವಕಾಶವಿದ್ದರೂ ಬೇಡವೆಂದು ದೂರ ಸರಿಯುತ್ತಲೇಬಂದೆ...ಎಷ್ಟು ಹತ್ತಿರ ಬಂದರೂ ಬೇಡವೆಂದು ದೂರವಾಗುತ್ತಲೇ ಹೋದೆ..ಇದೆಲ್ಲ ಅರಿವಾದಾಗ ನಾನು ಕಂಪಿಸಿಬಿಟ್ಟಿದ್ದೆ..ಈಗ ಅನಿಸುತ್ತದೆ ನಮ್ಮಲ್ಲಿದ್ದಿದು ಸ್ನೇಹಾನ ಅಥವಾ ಅದೇನೋ NEEDಅನ್ನುತ್ತಾರಲ್ಲ ಅದಾ...???!!!ಇನ್ನು ಉತ್ತರ ಮಾತ್ರ ಸಿಕ್ಕಿಲ್ಲ..!!! ಕೇಳಿದರೆ ನಿನ್ನಿಂದ ಅದೇ ಮೌನ.…ಅದಕ್ಕೆ ನಾನೇ ಉತ್ತರ ಕಂಡು ಕೊಂಡಿದ್ದೇನೆ...ನಾನೆ ಹಿಂತಿರುಗಿ ಹೋಗುವ ಮನಸ್ಸು ಮಾಡಿದ್ದೇನೆ... ನೀನಿಲ್ಲದ ಬದುಕುಅಭ್ಯಾಸವಾಗಿಬಿಟ್ಟಿದೆ.ನಾನಿಲ್ಲದ ಬದುಕೇ ನಿನಗೆ ಸುಂದರವಾಗಿದ್ದರೆ ಅದು ಇನ್ನಷ್ಟು ಸುಂದರವಾಗಿರಲೆಂದು ನಾನು ಬಯಸುತ್ತೇನೆ…ಆ ದೇವರ ಹಾರೈಕೆ ಸದಾ ನಿನ್ನೊಂದಿಗಿರಲಿ.….ಅರಿವಿಲ್ಲದಂತೆ ಕಣ್ಣುಗಳಿಂದ ಹೊಂಗಿಲು ಉದುರಲು… ಅಷ್ಟರಲ್ಲಿ ಅಮ್ಮ ಕರೆದಂತಾಗಿ ನೆನಪಿನಿಂದ ಹೊರ ಬಂದಿದ್ದೆ … ಸಮಯಕ್ಕೆ ಸರಿಯಾಗಿ ನನಗಿಷ್ಟವಾದ
"ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಕೂಡಿ ಬರದಿರು ಮತ್ತೆ ಹಳೆಯ ನೆನಪೇ “
ಎಂಬ ಹಾಡನ್ನು ರೇಡಿಯೋದ ಜೊತೆಗೆ ನಾನು ಗುನುಗುನುಗುತ್ತಿದ್ದಂತೆ ನಗುವೊಂದು ನನ್ನಲ್ಲಿ ಮೂಡಿತ್ತು… ನಾನು ಅಮ್ಮನ ಕರೆಗೆ ಓಗೊಟ್ಟು ನನ್ನ ಕೆಲಸದ ಕಡೆಗೆ ಮುಖ ಮಾಡಿದೆ …….