Thursday, February 25, 2010

ಪ್ರೇಮ ಪತ್ರ ಗಳು ತಂದ ಅವಾಂತರ


ನಮ್ಮ ಆಫೀಸಿನಲ್ಲಿ ಹೊಸ team leader ಬಂದಿದ್ದಾರೆ. ಅವರು ಸಕತ್ ತಮಾಷೆ ಮಾಡುತ್ತಿರುತ್ತಾರೆ.ಅವರಿಗೆ lovers ಅಂದರೆ ಏನೋ ವಿಶೇಷ ಆಸಕ್ತಿ ತೋರಿಸುತ್ತಾರೆ .ಅದು ಯಾಕೆ ಅಂತ ನನಗೆ ಇನ್ನೂ ಕಂಡು ಹಿಡಿಯೋಕೆ ಆಗಲೇ ಇಲ್ಲ ...:( ನಮ್ಮ teamನಲ್ಲಿ ಯಾರಿಗಾದರು boyfriend / girlfriend ಇದ್ದರೆ ಅವರ ಹೆಸರನ್ನು team ಗೆ ಹೇಳಬೇಕು. ಹಾಗೇ ಹೇಳಿದಮೇಲೆ ನಾವು ಅವರ ಹೆಸರನ್ನು ಕರೆಯೋ ಹಾಗಿಲ್ಲ. ಬದಲಿಗೆ ಅವರ boyfriend/ girlfriend ಹೆಸರಿನಿಂದ ಅವರನ್ನು ಕರೀಬೇಕು. ನಮ್ಮ teamನಲ್ಲಿ ಸುಮಾರು ಜನರ ಹೆಸರೇ ಮರೆತು ಹೋಗಿದೆ ನನಗೆ ಏಕೆಂದರೆ ಅವರನ್ನು ಬೇರೆ ಹೆಸರಿನಿಂದ ಕರೆಯಲಾಗುತ್ತಿದೆ .ಉದಾ : ನಮ್ಮ teamನಲ್ಲಿ ಒಬ್ಬ ನೀಲಂ ಅಂತ ಇದಾನೆ . ಅವನ ಹುಡುಗಿಯ ಹೆಸರು ಲೀಲಾ. ಅದಕ್ಕೆ ನಾವೆಲ್ಲಾ ಅವನನ್ನು 'ಲೀಲಾ' ಎಂದೇ ಕರೆಯುತ್ತೇವೆ.ಹೀಗಿದ್ದಾಗ ಮೊನ್ನೆ ನನ್ನ ಮೇಲೆ ಅವರ ವಕ್ರ(!) ದೃಷ್ಟಿ ಸಂತೋಷ್ ಗೆ ಮಾತ್ರ ಇನ್ನೂ ಸಂತೋಷ್ ಅಂತಾನೆ ಕರಿತಾ ಇದೀವಿ. ಅವನ girlfriend ಹೆಸರನ್ನು ಕೇಳಬೇಕು ಎಂದು ಹಿಂದೆ ಬಿದ್ದು ಬಿಟ್ಟರು. ಇದ್ಯಾವುದರ ನಿರೀಕ್ಷೆ ಇಲ್ಲದ ನನಗೆ ಒನ್ ತರಹ shock ಆಗೋಯ್ತು . ಇದೇನಪ್ಪ? ನಾನು ನನ್ನ ಪಾಡಿಗೆ ಆರಾಮಾಗಿ ಆಫೀಸಿನಲ್ಲಿ ಕಾಫಿ, ಟೀ, ಕುಡ್ಕೊಂಡು... ಜೊತೆಗೆ ಕೆಲಸದ ಮಧ್ಯೆ ಆಗೀಗ ಚಾಟಿಂಗ್, ಬ್ಲಾಗಿಂಗ್ ಮಾಡ್ತಿರಬೇಕಾದ್ರೆ ಇದೆಲ್ಲಿಂದ ಬಂತಪ್ಪ ತಲೆನೋವು ಅಂತ ಮನಸಲ್ಲೇ ಎಲ್ಲರನ್ನು ಬೈದು ಕೊಳ್ಳುತ್ತಿದ್ದೆ . ನನಗೆ ಯಾರೂ girlfriend ಇಲ್ಲ. ತುಂಬಾ ನಂಬಿಕಸ್ತ , ಒಳ್ಳೇ ಫ್ರೆಂಡ್ಸ್ ಇದಾರೆ ಅಂದರೆ ನಂಬಲು ತಯಾರೇ ಇಲ್ಲ ಆಸಾಮಿಗಳು. ನಾನು ಯಾರ ಹೆಸರು ಹೇಳುವುದಪ್ಪ, ಅಯ್ಯೋ ಅಂತ ಕೂತ್ಕೊಂಡಾಗ, ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಹಾಗೆ - " ಅಯ್ಯ ಸಂತೋಷ ಗೆ girlfriend ಇಲ್ಲ ಅಂದ್ರೆ ನಂಬೋಕೆ ಆಗೋಲ್ಲ. ಅನ್ನೋದೇ...:-( ನಾನು ಹೇಳಿಬಿಟ್ಟೆ ನೀವು ಆ ತರಹ assume ಮಾಡಿಕೊಂಡರೆ ನಾನೇನು ಮಾಡೋಕಾಗಲ್ಲ ಎಂದೆ . ನನ್ನ ಪರಿಸ್ಥಿತಿ ಯಾರಿಗೂ ಬೇಡ. ಇದೊಳ್ಳೆ ಗೋಳಾಯ್ತಲ್ಲ ..... ...ನನಗೆ ಯಾರೂ girlfriend ಇಲ್ಲಾಆಆಆಆ.... plz ನನ್ನ ಬಿಟ್ಟು ಬಿಡಿ. girlfriend ಸಿಕ್ಕಿದ ಕೂಡಲೇ ನಿಮಗೆ ತಿಳಿಸುತ್ತೀನಿ . ಆಗ ಅವನ ಹೆಸರಿನಿಂದ ಕರೀರಿ "ಅಂದೆ.....ನೀನೂ ಈಗ ಹೇಳದೆ ಇದ್ರೆ ನಮಗೆ ಟ್ರೀಟ್ ಕೊಡಿಸಬೇಕು ಅಂದ್ರು... ಅಬ್ಬ!!! ಇವತ್ತು ಬೆಳಗ್ಗೆ ಬೆಳಗ್ಗೆ ಯಾರ್ ಮುಖ ನೋಡಿದ್ನಪ್ಪ ??? ಅಯ್ಯೋ ನನ್ನ ಪರ್ಸ್ಗೆ ಕತ್ತರಿ ಬೀಳುತ್ತಲ್ಲಪ್ಪ ಅನ್ಕೊತಾ ಇದ್ದೆ...ಇದ್ದರೆ ಹೇಳಬಹುದು...ಇಲ್ದೆ ಇದ್ರೆ ಹೇಗೆ ಹೇಳಲಿ? ನಾನು ಸುಮ್ನೆ ಕೂತಿದ್ದೆ. ಆಮೇಲೆ ಅವರಿಗೆ ನನ್ನ ನೋಡಿ 'ಪಾಪ' ಅನಿಸ್ತು ಅನ್ಸುತ್ತೆ. ಸರಿ ನಿನ್ನ ಹುಡುಗಿ ಹೇಗಿರಬೇಕು ಅನ್ನೋದಾದರೂ ಹೇಳು ಅಂದ್ರು. ಒಂದಷ್ಟು ಅದು - ಇದು ಹೇಳಿ ಬದುಕಿದೆಯಾ ಬಡಜೀವವೇ ಎಂದು ಹೇಳಿ ಸಮಾಧಾನದ ನಿಟ್ಟುಸಿರು ಬಿಟ್ಟೆ!!! ಆ ಹುಡುಗಿ ಯಾವಾಗ ಸಿಗುತ್ತಾಳೋ ... ನನಗೆ ಯಾವಾಗ ಅವರು ಆ ಹೆಸರಿನಿಂದ ಕರೆಯುತ್ತಾರೋ ???....ಎಂದು ಇಲ್ಲಿವರೆಗೂ ಇರದ ವಿಚಾರ ಮಾತ್ರ ಯಾಕೋ ಮನಸ್ಸಿನಲ್ಲಿ ಹಾದು ಹೋಯ್ತು...

Wednesday, February 24, 2010

ಕುಂತರು ನಿಂತರು ನಿನ್ನದೇ ಧ್ಯಾನ್ ........

ಗೆಳೆಯಾ,
ರವಿ
ಹೇಗೆ ಇದ್ದೀಯ ನಾನು ಇದನ್ನು ಕೇಳುವ ಅರ್ಹತೆಯನ್ನು ಕಳೆದು ಕೊಡಿದ್ದೇನೆ ಅನ್ನುತ್ತಿಯ. ಮನಸ್ಸಿನಲ್ಲಿ ನನ್ನ ಬೈಯುತ್ತ ಇರುತ್ತಿಯ ಅಂತ ನಂಗೆ ಗೊತ್ತು .
ಕುಂತರೂ ನಿಂತರೂ ನಂಗೆ ಯಾಕೆ ನಿನ್ನದೇ ಯೋಚನೆ ಬರುತ್ತಿದೆ? ಬೇಡ ಬೇಡ ಎಂದರೂ , ಮನಸ್ಸಿಗೆ ಬುದ್ದಿ ಹೇಳಿದರು ಅದು ಯಾಕೆ ನನ್ನ ಮಾತುಗಳನ್ನೇ ಕೇಳುತ್ತಿಲ್ಲ? ನಾನು ಯಾಕೆ ನಿನ್ನನ್ನ ಇಷ್ಟೊಂದು miss ಮಾಡಿಕೊಳ್ಳಬೇಕು ಎಂದೂ ನನ್ನಷ್ಟಕ್ಕೆ ನಾನು ಒಬ್ಬಳೇ ಕುಳಿತು ಯೋಚಿಸುತ್ತಿರುವಾಗಲೇ ,ತಕ್ಷಣ mobile ಗೆ ಒಂದು ಸಂದೇಶ .... one msg received.ಖುಷಿ ಇಂದ ನಿನ್ನ್ನದೆ msg ಎಂದೂ ನೋಡುತ್ತೇನೆ!! ಯಾವುದೋ BSNL ನವರದ್ದು. ಮತ್ತೆ ಮನಸ್ಸು ಮೊದಲಿದ್ದ ಸ್ಥಿತಿಗೆ ಹೋಗುತ್ತದೆ. ಅವನು msg ಮಾಡಲ್ಲ ಕಣೋ ಅವನಿಗೆ ನಿನ್ನ ಬಗ್ಗೆ ಆಸಕ್ತಿ ಇಲ್ಲ ಅಂತ ಹೇಳುತ್ತದೆ . ಹೃದಯ ಕೇಳಲ್ಲ!! ಅವನು ಮಾಡದಿದ್ದರೆ ಏನು ನೀನು ಮಾಡುತ್ತಲಿರು ಅನ್ನುತ್ತದೆ . ಮತ್ತೆ ಮನಸ್ಸು ಹೇಳುತ್ತದೆ - ಬೇಡ ಅವನ ದೃಷ್ಟಿಯಲ್ಲಿ ನೀನು cheap ಆಗುತ್ತಿಯ , ಬಿಟ್ಟು ಬಿಡು.
ಹಾಗೇ TV ಯಲ್ಲಿ ಬರುತ್ತಿರುವ ಹಾಡಿನ ಒಂದು ಸಾಲು ಕೇಳಿಸುತ್ತದೆ...

" ರಪ್ತ ರಪ್ತ ,ಹೊಲೆ ಹೊಲೆ ದಿಲ್ಕೋ ಚುರಾಯ ತೂನೆ ,
ದಿಲ್ಕೋ ಥೋ ಪತಾ ಭಿ ನಾ ಚಲಾ"

ಹಾಗೇ ಮತ್ತೆ ಮನಸ್ಸು ತಡೆಯದೇ ನಿನಗೆ ಕರೆ ಮಾಡುತ್ತೇನೆ. 25 ಸಾರಿ ಕರೆ ಮಾಡಿದರೂ ನೀನು ಎತ್ತುವುದಿಲ್ಲ. ಕಡೆ ಪಕ್ಷ ನೀನು ಬ್ಯುಸಿ ಇದ್ದ ಕಾಲದಲ್ಲಿ, 25 missed ಕಾಲ್ ಯಾಕಿರಬಹುದು ಅಂತ ವಿಚಾರಿಸೋ courtesy ನು ತೋರಲ್ಲ. ಗೆಳೆಯ ನಿನಗೊಂದು ಹೇಳುತ್ತೇನೆ, ನಿನ್ನ ಚುಚ್ಚು ಮಾತುಗಳನ್ನು ಒಂದು ಹಂತದವರೆಗೆ ತಡೆದುಕೊಳ್ಳಬಲ್ಲೆ . ನೀನು ಏನು ಹೇಳಿದರೂ ಬೇಸರಿಸಿಕೊಳ್ಳಬಾರದು ಅಂತ ನಿರ್ಧಾರನೂ ಮಾಡಿದ್ದೇನೆ. ಆದರೆ ನಾನು ಮನುಷ್ಯ ತಾನೇ? ನನಗೂ hurt ಆಗುತ್ತೆ ಅಲ್ಲವ? ಬೇರೆಯವರಿಗೆಲ್ಲ ನೀನು ಪ್ರೋತ್ಸಾಹ , ಗೆಳೆತನ ಕೊಡುವವನು ನನಗ್ಯಾಕೆ ಈ ತರಹದ ಒಂದು negligence ತೋರುತ್ತಿದಿಯ?

ನನಗೆ ನಿನ್ನ sympathy ಬೇಡ ಗೆಳೆಯ. ನೀನು ಏನು ಮಾಡಿದರೂ ಅದನ್ನ ಕಾಟಾಚಾರಕ್ಕೆ ಮಾಡುವುದು ಬೇಡ. ಮನಸ್ಸಿನಿಂದ ಮಾಡು.ನಿನಗೆ ಈ ಕಾಲ್ , msg ಗಳು ಎಲ್ಲ time pass. ಆದರೆ ನನಗೆ ಮುಂದಿನ ಕ್ಷಣಗಳಿಗೆ ಆ ನಿನ್ನ ಎರಡು ಅಕ್ಷರಗಳೇ ಸ್ಫೂರ್ತಿ. ಇದನೆಲ್ಲ ನಿನಗೆ ನಾನು ಹೇಗೆ ತಿಳಿ ಹೇಳಲಿ? ನಿನಗ್ಯಾಕೆ ಏನು ಅರ್ಥವೇ ಆಗುವುದಿಲ್ಲ? ಬಹುಷಃ ನನಗೆ ನಿನ್ನ ಮೇಲಿರುವಷ್ಟು ಆಸಕ್ತಿ , ಕಾಳಜಿ , ಇದ್ಯಾವುದು ನಿನಗೆ ನನ್ನ ಮೇಲಿರಲಿಕ್ಕಿಲ್ಲ ಅಂತ ನಾನು assume ಮಾಡಿಕೊಳ್ಳಲ ? ನೀನೇನು ಹೇಳಲ್ಲ. ಅದೂ ನಂಗೊತ್ತು.

ಆದರೂ ಡಿ.ವಿ.ಜಿ ಯವರ ಮಾತಿನಂತೆ,

"ಇಂದಲ್ಲ ನಾಳೆ ಹೊಸ ಭಾನು ತೆರೆದೀತು...
ಕರಗೀತು ಮುಗಿಲಾ ಬಳಗಾ..
ತುಂಬೀತು ಸೊಗೆಯ ಮಳೆ
ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗಾ..!!"

.......ಎಲ್ಲೋ ಒಂದು ಕಡೆ ಬದುಕಿನ ಬಗ್ಗೆ ಭರವಸೆ ಇದ್ದೇ ಇದೆ. ನನಗೂ ಗೊತ್ತು ಗೆಳೆಯ . ಜೀವನದಲ್ಲಿ ಯಾರಿಗೂ ಯಾರೂ ಇಲ್ಲ. ನಮಗೆ ನಾವೇ ಅಂತ . ಆದರೆ ಎಲ್ಲೋ ಒಂದು ಕಡೆ ನನಗೆ ನಿನ್ನ ಬಗ್ಗೆ ಒಂದು ರೀತಿ ಆಸಕ್ತಿ, ಪ್ರೀತಿ ಹುಟ್ಟಿದರೆ ನನ್ನ ತಪ್ಪೇನಿದೆ ಅಂತ ಅರ್ಥವಾಗುತ್ತಿಲ್ಲ. ಅದಕ್ಕೆ ಗೆಳೆಯ ನಾನು ನಿರ್ಧರಿಸಿದ್ದೇನೆ. Ball is in your court. ನೀನೇ ನಿರ್ಧರಿಸು.

ಇಂತಿ,
ಸಂತೋಷ್

Friday, February 19, 2010

ರೈತರಿಗಿನ್ನೂ ದೇವರೇ ಗತಿ ........


ಬಳ್ಳಾರಿಯ ವಿವಾದಿತ, ಉದ್ದೇಶಿತ ವಿಮಾನ ನಿಲ್ದಾಣದ ಸರ್ವೆ ಕಾರ್ಯಕ್ಕೆ ಬಂದಿದ್ದ ಸಿಬ್ಬಂದಿಯಲ್ಲಿ ಒಬ್ಬನನ್ನು ರೈತರು ತಮ್ಮ ವಶಕ್ಕೆ ತೆಗೆದುಕೊಂಡು ಒತ್ತೆಯಾಳಾಗಿ ಇಟ್ಟುಕೊಂಡಾಗ, ಕೊನೆಗೂ ರೈತರ ತಾಳ್ಮೆಯ ಕಟ್ಟೆಯೊಡೆಯಿತು; ಅವರ ಹೋರಾಟಕ್ಕೆ ಸೈದ್ಧಾಂತಿಕ ತಳಹದಿಯೊಂದು ಒದಗಿಬಿಟ್ಟಿತು, ಇನ್ನು ಪ್ರತಿಭಟನೆ ತೀವ್ರಗೊಳ್ಳುತ್ತದೆಯೆಂದು ಅಂದುಕೊಳ್ಳುತ್ತಿರುವಾಗಲೇ ಎಲ್ಲವೂ ಠುಸ್ಸಾಯಿತು.ರೈತರು ಆತನನ್ನು ಮುಕ್ತಗೊಳಿಸಿದರು.’ನಾನು ದಾರಿ ತಪ್ಪಿದ್ದೆ. ರೈತರು ನನಗೆ ದಾರಿ ತೋರಿಸಿದರು.ಅವರೇನು ತನ್ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿಲ್ಲ’ ಎಂದು ರೈತರೊಡನಿದ್ದಾಗ ಮಾಧ್ಯಮಕ್ಕೆ ಹೇಳಿದ್ದ ಆತ ತಿರುಗಿಬಿದ್ದು ಪೋಲಿಸ್ ಸ್ಟೇಷನ್ ನಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ರೆಡ್ಡಿ ವಿರುದ್ಧವೇ ಅಪಹರಣದ ಕೇಸು ದಾಖಲಿಸಿದ. ಪೋಲಿಸರು ೫೦ ಮಂದಿಯನ್ನು ಬಂದಿಸಿದರು.ಬಳ್ಳಾರಿಯಲ್ಲಿ ಏನು ಬೇಕಾದರೂ ಆಗಬಹುದು!ತುಂಗಭದ್ರೆಯ ನೀರುಂಡು ಹಸಿರಿನಿಂದ ಕಂಗೊಳಿಸುತ್ತಿರುವ ಚಾಗನೂರು,ಸಿರಿವಾರ ಗ್ರಾಮಗಳು ಸರಕಾರಿ ಕಡತಗಳಲ್ಲಿ ಖುಷ್ಕಿ ಜಮೀನಾಗಿ ಪರಿವರ್ತನೆಗೊಳ್ಳಬಹುದು. ಸ್ಥಳೀಯ ಜನಪ್ರತಿನಿಧಿಗಳನ್ನು ಸಾರಾಸಗಟಾಗಿ ಖರೀದಿ ಮಾಡಿ ’ರೆಸಾರ್ಟ್ ಅರೆಸ್ಟ್’ ಮಾಡಿ ಇಡಬಹುದು.’ನಮ್ಮದು ಖುಷ್ಕಿ ಜಮೀನಲ್ಲ; ಅದು ನೀರಾವರಿ ಜಮೀನು; ಫಲವತ್ತಾದ ಕಪ್ಪು ಮಣ್ಣು; ಇಲ್ಲಿ ನಾವು ಹತ್ತಿ. ತೊಗರಿ, ಜೋಳ, ಮೆಕ್ಕೆಜೋಳ, ಮೆಣಸಿನಕಾಯಿ, ಕಡಲೆ,ತರಕಾರಿಗಳನ್ನು ಬೆಳೆದು ಸ್ವಾವಲಂಬಿಯಾಗಿ ಬದುಕುತ್ತಿದ್ದೇವೆ. ನಮ್ಮ ಅನ್ನವನ್ನು ಕಿತ್ತುಕೊಳ್ಳಬೇಡಿ. ನಮ್ಮ ಪ್ರಾಣ ಹೋದರೂ ಜಮೀನು ಬಿಟ್ಟುಕೊಡುವುದಿಲ್ಲ’ ಎಂದು ರೈತರು ಒಂದು ವರ್ಷದಿಂದ ಪ್ರತಿಭಟಿಸುತ್ತಿದ್ದಾರೆ.ಬಳ್ಳಾರಿಜಿಲ್ಲೆಯ ಉಸ್ತುವಾರಿ ಸಚಿವರೂ, ಗಣಿದೊರೆಗಳೂ ಆದ ಜನಾರ್ಧನ ರೆಡ್ಡಿ ಮತ್ತವರ ಬಳಗ ಇದನ್ನೊಂದು ಪ್ರತಿಷ್ಟೆಯ ವಿಷಯವಾಗಿ ಪರಿಗಣಿಸಿದ್ದಾರೆ. ಅವರ ದಾಕ್ಷಿಣ್ಯದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ’ ಬಳ್ಳಾರಿ ವಿಮಾನ ನಿಲ್ದಾಣ ಮಾಡಿಯೇ ಸಿದ್ದ’ ಎನ್ನುತ್ತಿದ್ದಾರೆ.ದೀನ-ದಲಿತರು, ನೊಂದವರು, ಅಸಹಾಯಕರೆಡೆಗೆ ಪ್ರಭುತ್ವವೇ ನಡೆದು ಬರಬೇಕು. ಆದರೆ ಆಡಳಿತ ಪಕ್ಷ ಯಾವುದು? ವಿರೋಧಪಕ್ಷ ಯಾವುದು? ಎಂಬ ಗೊಂದಲದಲ್ಲಿ ನಾವಿದ್ದೇವೆ. ನಮ್ಮ ಅನುಕಂಪ ಈಗ ಅವರಿಗೇ ಬೇಕಾಗಿದೆ!ಇನ್ನು ಸದಾ ವಿರೋಧ ಪಕ್ಷದಂತೆ ಕೆಲಸ ಮಾಡಬೇಕಾದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗ ರಾಜಕಾರಣಿಗಳ, ಉದ್ದಿಮೆದಾರರ ಕೃಪಾಕಟಾಕ್ಷದಲ್ಲಿ ಸಮೃದ್ಧವಾಗಿ ಬೆಳೆಯುತ್ತಲಿದೆ! ರಾಜಧಾನಿಯನ್ನು ಬಿಟ್ಟರೆ ಬೇರೆಡೆ ಅವರ ಅರಿವು ವಿಸ್ತರಿಸುವುದಿಲ್ಲ. ಪತ್ರಕರ್ತರ ಆದ್ಯತೆಗಳೇ ಈಗ ಬೇರೆ. ಸಮಾಜದ ಧ್ವನಿಯಾಗಬೇಕಾಗಿದ್ದ ಸಾಹಿತಿ-ಕಲಾವಿದರು ಸ್ವಕೇಂದ್ರಿತ ಗುಂಪುಗಳನ್ನು ಕಟ್ಟಿಕೊಂಡು ಪರಸ್ಪರ ಹೊಗಳಿಕೊಳ್ಳುತ್ತಾ ಭ್ರಮಾಲೋಕದಲ್ಲಿ ಮುಳುಗಿದ್ದಾರೆ.ಮಂಗಳವಾರ ಸಿರಿವಾರ, ಚಾಮಲಾಪುರಗಳಲ್ಲಿ ರೈತರ ಪ್ರತಿಭಟನೆ ಮುಂದುವರಿಯಿತು. ಬುಧವಾರ ಹಾಸನ, ಚಾಮರಾಜನಗರದಲ್ಲಿ ಭೂಸ್ವಾದೀನ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು. ಗುರುವಾರ ದಾವಣಗೆರೆ, ಚಾಮರಾಜ ನಗರಗಳಲ್ಲಿ ಪೋಲಿಸರು ಲಾಠಿ ಬೀಸಿದರು. ಅಕ್ಷರಶಃ ಅಟ್ಟಾಡಿಸಿಕೊಂಡು ರಕ್ತ ಬರುವಂತೆ ಹೊಡೆದರು. ಮಹಿಳೆಯರನ್ನೂ ಬಿಡಲಿಲ್ಲ. ಜಿಲ್ಲಾ ದಂಡಾಧಿಕಾರಿಯೆಂದು ಕರೆಯಲಾಗುವ ಜಿಲ್ಲಾಧಿಕಾರಿಯವರೇ ಸ್ವತಃ ಕೈಯಲ್ಲಿ ಲಾಠಿ ಹಿಡಿದು ರೈತರನ್ನು ನಿಯಂತ್ರಿಸುತ್ತಿದ್ದರು. ಪುಣ್ಯಕ್ಕೆ ’ಚಡ್ಡಿ’ ಹಾಕಿರಲಿಲ್ಲ ಅಷ್ಟೇ!. ಇವರು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಡಿ.ಪವಾರ್ ಸೇರಿ ೪೦ ಮಂದಿ ರೈತರನ್ನು ನ್ಯಾಯಾಂಗ ಬಂದನಕ್ಕೆ ತಳ್ಳಿದರು.ಪೋಲಿಸರು ಲಾಠಿ ಚಾರ್ಜ್ ಮಾಡಿದ್ದನ್ನು ಶನಿವಾರ ದಾವಣಗೆರೆಯಲ್ಲಿ ಕೃಷಿ ಸಚಿವ ರವೀಂದ್ರನಾಥ್ ಸಮರ್ಥಿಸಿಕೊಂಡರು. ರೈತರು ಸಂಯಮದಿಂದ ವರ್ತಿಸಬೇಕೆತ್ತಿಂದು ಹೇಳಿದರು. ಕಳೆದ ವರ್ಷ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು.ಅದಾದ ಒಂದು ವಾರಕ್ಕೆ ಇದೇ ಸಚಿವರ ಪಕ್ಕದ ಕ್ಶೇತ್ರದ ಇಬ್ಬರು ಸಚಿವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಇದೇ ಕೃಷಿ ಸಚಿವರು ಹೇಳಿದ್ದೇನು ಗೊತ್ತೇ? ನಿನ್ನೆ ಸತ್ತವ ರೈತನಲ್ಲ. ಇವತ್ತು ರೈತ ಸತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ’. ಇವರು ನಮ್ಮ ಕೃಷಿ ಸಚಿವರು!ನಾಡಿಗೇ ಅನ್ನ ನೀಡುವ ರೈತ ಅಷ್ಟು ನಿಕೃಷ್ಟನೇ? ಅವರೇನು ಸಮಾಜಘಾತುಕ ಶಕ್ತಿಗಳೇ? ಪೋಲಿಸರ ದೃಷ್ಟಿಯಲ್ಲಿ ಕ್ರಿಮಿನಲ್ಸ್ ಗೂ ರೈತರಿಗೂ ವ್ಯತ್ಯಾಸವೇ ಇಲ್ಲವೇ? ಗೃಹಮಂತ್ರಿಗಳೇ ಉತ್ತರಿಸಬೇಕು. ”ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಔದಾರ್ಯವಾಗಿ ಮಾತನಾಡಿ ಬೀದಿಯಲ್ಲಿ ಹೊಡೆಸ್ತಾರೆ”ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳುತ್ತಾರೆ.ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮ ಅಧಿಕಾರದ ಹೊಸ್ತಿಲಲ್ಲಿರುವಾಗಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರು ನಡೆಸಿದರು. ಆ ಪರಿಸ್ಥಿತಿ ಇಂದಿಗೂ ಮುಂದುವರಿಯುತ್ತಲಿದೆ.ರೈತರು ತಮಗಾಗುತ್ತಿರುವ ಅನ್ಯಾಯ, ದಬ್ಬಾಳಿಕೆ, ಶೋಷಣೆ, ಮಾರುಕಟ್ಟೆ ತಾರತಮ್ಯ...ಇತ್ಯಾದಿಗಳ ಬಗ್ಗೆ ಆಳುವವರ ಮುಂದೆ, ಆಧಿಕಾರಿಗಳ ಮುಂದೆ ಹೇಳಿಕೊಳ್ಳಲು ಕಾತರಿಸುತ್ತಿದ್ದಾರೆ. ಆದರೆ ಅವರಿಗೆ ಪುರುಸೊತ್ತಿಲ್ಲ. ಯಾರನ್ನಾದರೂ ಮಾತುಕತೆಗೆ ಕಳುಹಿಸುವ ವ್ಯವಧಾನವಿಲ್ಲ. ರೈತರ ಮೊರೆ ಅರಣ್ಯ ರೋಧನವಾಗುತ್ತಿದೆ.ಉಳ್ಳವರಿಗೆ ತಮ್ಮ ಅತ್ಯುನ್ನತಿಗಾಗಿ ರೈತರ ಫಲವತ್ತಾದ ಭೂಮಿಯೇ ಬೇಕಾಗಿದೆ. ವಿಶೇಷ ಅರ್ಥಿಕ ವಲಯವನ್ನೇ ತೆಗೆದುಕೊಳ್ಳಿ; ಅಲ್ಲೆಲ್ಲಾ ವಶಪಡಿಸಿಕೊಂಡ, ವಶಪಡಿಸಿಕೊಳ್ಳುತ್ತಿರುವ ಭೂಮಿಯೆಲ್ಲವೂ ಫಲವತ್ತಾದ ಭೂಮಿಯೇ. ಯಾಕೆ ಇವರಿಗೆ ಒಣಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಆಗುವುದಿಲ್ಲವೇ? ಹೀಗೆ ಕೃಷಿ ಭೂಮಿಯೆಲ್ಲಾ ಕೈಗಾರಿಕ ವಲಯಗಳಾಗಿ, ವಸತಿನಿಲಯಗಳಾಗಿ ಬದಲಾದರೆ ಭವಿಷ್ಯದಲ್ಲಿ ಆಹಾರ ಭದ್ರತೆಯೆಂಬುದು ಬಹುದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಇದರ ಜೊತೆಗೆ ಮೂಡುವ ಬಹು ಮುಖ್ಯ ಪ್ರಶ್ನೆ ಎಂದರೆ ನಮಗೆ ಯಾವ ರೀತಿಯ ಅಬಿವೃದ್ಧಿ ಬೇಕು? ಅಬಿವೃದ್ಧಿ ತಂದಿತ್ತ ಸಮಸ್ಯೆಗಳು ಈಗ ಕೊಪೆನ್ ಹೆಗನ್ ನಲ್ಲಿ ನಡೆಯುತ್ತಿರುವ ’ಹವಾಮಾನ ವೈಪರಿತ್ಯ ಶ್ರ‍ಂಗ ಸಭೆ’ಯಲ್ಲಿ ಚರ್ಚಿತವಾಗುತ್ತಲಿದೆ.ಬಳ್ಳಾರಿಗೆ ಬನ್ನಿ; ಇಲ್ಲಿ ಈಗಾಗಲೇ ಎರಡು ವಿಮಾನ ನಿಲ್ದಾಣಗಳಿವೆ. ನಗರದ ಕಂಟೋನ್ಮೆಂಟ್ ಬಳಿ ಇರುವ ಐತಿಹಾಸಿಕ ವಿಮಾನ ನಿಲ್ದಾಣ. ಇದು ಎರಡನೇ ಮಹಾಯುದ್ದ ಕಾಲದಲ್ಲಿ ವಾಯುನೆಲೆಯಾಗಿ ಬಳಕೆಯಾಗಿದ್ದ ವಿಮಾನ ನಿಲ್ದಾಣ. ಇನ್ನೊಂದು ನಗರದಿಂದ ೪೦ ಕಿ.ಮೀ ದೂರದಲ್ಲಿರುವ ತೋರಣಗಲ್ಲಿರುವ ಜಿಂದಾಲ್ ಏರ್ ಪೋರ್ಟ್. ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪೆ ಹಾಗು ಬೆಳೆಯುತ್ತಿರುವ ಕೈಗಾರಿಕೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮೂರನೆಯ ವಿಮಾನ ನಿಲ್ದಾಣಕ್ಕಾಗಿ ಸರ್ವೆ ಕಾರ್ಯ ನಡೆಸಿ ನಗರದಿಂದ ೧೨ ಕಿ.ಮೀ ದೂರದಲ್ಲಿರುವ ಪಾಪಿನಾಯಕನಹಳ್ಳಿಯನ್ನು ಸೂಕ್ತ ಪ್ರದೇಶವೆಂದು ೧೯೯೬ರಲ್ಲಿ ಎಂ.ಪಿ.ಪ್ರಕಾಶ್ ಅಧಿಕಾರವಧಿಯಲ್ಲಿ ಗುರುತಿಸಲಾಗಿತ್ತು. ಆದರೆ ಅದಕ್ಕೆ ಚಾಲನೆ ದೊರೆತಿರಲಿಲ್ಲ.ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವೆಂದು ಗುರುತಿಸಲ್ಪಟ್ಟ ಪಾಪಿನಾಯಕಹಳ್ಳಿಯ ಒಣಭೂಮಿಯನ್ನು ಬಿಟ್ಟು ಚಾಗನೂರು, ಸಿರಿವಾರದ ನೀರಾವರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಜನಾರ್ಧನ ರೆಡ್ಡಿ ಆದೇಶ ನೀಡಿದರು. ’ವಿಜಯನಗರ ಅರ್ಬನ್ ಡೆವಲಪ್ ಮೆಂಟ್ ಏರಿಯಾ’ ದೊಳಗೆ ಈ ಜಮೀನು ಬರುತ್ತದೆಯೆಂಬುದು ರೆಡ್ಡಿಗಳ ವಾದ. ಇದನ್ನು ವಿರೋಧಿಸಿ ರೈತರು ಕಳೆದ ಪೆ.೨೪ರಂದು ಶಾಂತಿಯುತ ಬೃಹತ್ ಮೆರವಣಿಗೆ ನಡೆಸಿದರು. ಆಗ ಪೋಲಿಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸುವ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿತು. ಅದರೂ ರೈತರು ಧೃತಿಗೆಡದೆ ಪ್ರಭುತ್ವದ ವಿರುದ್ಧ ಹೊರಾಡುತ್ತಲೇ ಬರುತ್ತಿದ್ದಾರೆ. ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲು ’ನರ್ಮದಾ ಬಚಾವೋ’ ಆಂದೋಲನದ ರೂವಾರಿ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ನ.೧೦ರಂದು ಚಾಗನೂರು, ಸಿರಿವಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ರೈತರೊಡನೆ ಆಪ್ತ ಚರ್ಚೆ ನಡೆಸಿದ್ದರು.ಈಗ ಮತ್ತೆ ರೈತರ ವಿರೋಧದ ನಡುವೆ, ಅವರನ್ನೆಲ್ಲಾ ಊರ ಹೊರಗಿಟ್ಟು, ಪೋಲಿಸ್ ಸರ್ಪಗಾವಲಿನಲ್ಲಿ ಸರಕಾರ ಸರ್ವೆ ಕಾರ್ಯ ಮುಗಿಸಿದೆ. ಚಾಮರಾಜನಗರದಲ್ಲಿ ಸ್ವತಃ ಜಿಲ್ಲಾಧಿಕಾರಿಯವರೇ ಲಾಠಿ ಹಿಡಿದು ಹಸಿರು ಶಾಲು ಹಾಕಿದ ರೈತರನ್ನು ಬೆದರಿಸುತ್ತಿದ್ದಾರೆ. ಅಧಿಕಾರ ವರ್ಗ ಎಂದೂ ರೈತ ಪರವಾಗಿರಲು ಸಾಧ್ಯವಿಲ್ಲ. ಆದರೆ ಜನಪ್ರತಿನಿಧಿಗಳು ಓಟು ಹಾಕಿದವರ ಋಣದಲ್ಲಿರಬೇಕಲ್ಲವೇ? ಪಾಪ ಅವರಿಗೆ ಮರೆವಿನ ರೋಗ!ಮುಂದೇನು? ಈಗ ಅವರ ಬೆಂಬಲಕ್ಕೆ ಜನಪರ ಸಂಘಟನೆಗಳು ಮುಂದಾಗಬೇಕು. ನಾಡು-ನುಡಿ, ನೆಲ-ಜಲ ಸಂರಕ್ಷಣೆಗಾಗಿ ಪಣತೊಟ್ಟಿರುವ ಹಲವು ಸಂಘಟನೆಗಳು ನಮ್ಮಲ್ಲಿವೆ.ಅವು ರೈತರ ಬೆಂಬಲಕ್ಕೆ ನಿಲ್ಲಬೇಕು. ಆದರೆ ಅವೆಲ್ಲಾ ರಾಜಕೀಯ ಹಿತಾಸಕ್ತಿಗಳನ್ನು ಬಿಟ್ಟು ಬರಲು ಸಾಧ್ಯವೇ?. ’ರೈತ ಸಂಘ’ ಮತ್ತೆ ಮೈಕೊಡವಿ ನಿಲ್ಲಬೇಕು. ಒಟ್ಟಾಗಬೇಕು.ಅಷ್ಟಕ್ಕೂ ರೆಡ್ಡಿಗಳಿಗೆ ಈ ಭೂಮಿಯೇ ಯಾಕೆ ಬೇಕು? ಸ್ಥಳಿಯರು ಹೇಳುವ ಪ್ರಕಾರ ಚಾಗುವಾರ ಮತ್ತುಸಿರಿವಾರದ ಸುತ್ತಮುತ್ತಲಿನ ಸುಮಾರು ೨೮೦ ಎಕ್ರೆ ಜಮೀನನ್ನು ರೆಡ್ಡಿಗಳು ಬೇನಾಮಿ ಹೆಸರಿನಲ್ಲಿ ಖರೀದಿ ಮಾಡಿದ್ದಾರಂತೆ. ಇಲ್ಲಿ ವಿಮಾನ ನಿಲ್ದಾಣ ಬಂದರೆ ಈ ಜಮೀನಿಗೆ ಚಿನ್ನದ ಬೆಲೆ ಬಂದು ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಬಹುದೆಂಬುದು ಅವರ ದೂರಾಲೋಚನೆ. ಅವರ ದೂರಾಲೋಚನೆ ರೈತರ ಪಾಲಿಗೆ ದುರಾಲೋಚನೆಯಾಗಿದೆ.ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಎಕ್ರೆಗೆ ೧೨ ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ ಎಂಬುದು ಸರಕಾರದ ಸಮರ್ಥನೆ. ಆದರೆ ದುಡ್ಡುತಗೊಂಡು ರೈತರೇನು ಮಾಡಬಲ್ಲರು? ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರೆಲ್ಲಾ ಎಕ್ರೆಗೆ ಕನಿಷ್ಟ ೫೦ ಲಕ್ಷದಿಂದ ಎರಡು ಕೋಟಿ ತನಕ ಪಡೆದುಕೊಂಡಿದ್ದರು. ಅದರಲ್ಲಿ ಬಹಳಷ್ಟು ಮಂದಿ ದುಂದುವೆಚ್ಚ ಮಾಡಿ ಇರುವ ದುಡ್ಡನ್ನೆಲ್ಲಾ ಕಳೆದುಕೊಂಡು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿದ್ದಾರೆ.ದುಡ್ಡು ಕರಗುತ್ತದೆ. ಅದರೆ ಭೂಮಿ ಹಾಗಲ್ಲ; ಅದು ಮೂಲಧನ. ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗೊಳ್ಳುತ್ತಲೇ ಹೋಗುತ್ತದೆ. ಅದರ ಬಡ್ಡಿಯಿಂದಲೇ ರೈತ ಜೀವನ ನಿರ್ವಹಣೆ ಮಾಡುತ್ತಾನೆ. ತನಗೆ ಅನ್ನ ನೀಡುವ ಭೂಮಾತೆಯನ್ನು ಆತ ದೇವರೆಂದು ಪೂಜಿಸುತ್ತಾನೆ; ಅದರೊಡನೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾನೆ. ಮಣ್ಣು ಮಾರಿ ದುಡ್ಡು ಬಾಚಿಕೊಳ್ಳುವವರಿಗಿದು ಅರ್ಥವಾಗದ ವಿಚಾರ.

Monday, February 15, 2010

ಚಿಂತಿ ಯಾಕ............?


ನೀವು ಕೆಲವರನ್ನು ಗಮನಿಸಿದ್ದೀರಾ? ಅವರನ್ನು ನೋಡಿದರೆ ಯಾವಾಗಲು ಏನೋ ಯೋಚಿಸುತ್ತಿರುವಂತೆ ಕಾಣುತ್ತದೆ. ಮುಖ ನೋಡಿ ನಕ್ಕರೂ ತಿರುಗಿ ನಗುವಷ್ಟು ಸಮಾಧಾನ ಇರುವುದಿಲ್ಲ...ಜಗತ್ತಿನ ಎಲ್ಲಾ ಸಮಸ್ಯೆಯು ತಮಗೇ ಬಂದಿರುವ ಹಾಗೇ ಆಡುತ್ತಿರುತ್ತಾರೆ...ಎಲ್ಲರ ಮೇಲೆ ಸಿಡುಕುವುದು, ತಾವೇ ಬೇಸರಿಸಿಕೊಳ್ಳುವುದು,ಅವರಿಗೆ ಅವರ ಮೇಲೆ ಕೋಪವಾ? ಬೇಸರವ?ಗೊತ್ತಿಲ್ಲ...ಜೀವನದಲ್ಲಿ ಚಿಂತೆ ಎಂಬುದು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಚಿಂತೆ ಇದ್ದೇ ಇರುತ್ತದೆ. ಒಬ್ಬರಿಗೆ ಒಂದೊಂದು ಚಿಂತೆ. ಅವರವರಿಗೆ ಇರುವ ತೊಂದರೆಯ ಬಗ್ಗೆ, ಅನಾನುಕೂಲಗಳ ಬಗ್ಗೆ ಪ್ರತಿಯೊಬ್ಬನಿಗೂ ಚಿಂತೆ ಇರುತ್ತದೆ.ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ .....ಅವರ ಮದುವೆ ಮಾಡಬೇಕು ಎನ್ನುವುದು ಪಾಲಕರ ಚಿಂತೆಯಾದರೆ, ಮಕ್ಕಳಿಗೆ ತಮ್ಮ ಮದುವೆಯಾಗೋ ಹುಡುಗ\ಹುಡುಗಿ ಹೇಗಿರಬಹುದು ಎನ್ನುವ ಚಿಂತೆ...ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗೆ ಮುಂದಿನ ಫೀಸ್ ಹೇಗೆ ಕೊಡುವುದು ಎನ್ನುವ ಚಿಂತೆ...ಮನೆ ಬಿಟ್ಟು ಹೋದ ಗಂಡ ಇನ್ನೂ ಹಿಂದಿರುಗಲಿಲ್ಲ ಎನ್ನುವುದು ಅವನಿಗಾಗಿ ಕಾದು ಕುಳಿತ ಹೆಂಡತಿಯ ಚಿಂತೆ....ಹೀಗೆ ಒಂದಿಲ್ಲೊಂದು ಚಿಂತೆಯಲ್ಲಿಯೇ ನಮ್ಮ ಜೀವನವನ್ನು ಕಳೆದುಬಿಡುತ್ತೆವಲ್ಲವೇ?ಎಷ್ಟೋ ಇಷ್ಟ ಪಟ್ಟು ಪ್ರೀತಿಸಿದ ವ್ಯಕ್ತಿ ಒಂದು ದಿನ ಬಿಟ್ಟು ಹೋಗಿರುತ್ತಾರೆ....ತುಂಬಾ ನಂಬಿಕೆ ಇತ್ತ ಗೆಳತಿ ಮೋಸ ಮಾಡಿರುತ್ತಾಳೆ...ಸಾಲ ಮಾಡಿ ಶುರು ಮಾಡಿದ ಕಸುಬು ಕೈಗೆ ಹತ್ತಿರುವುದಿಲ್ಲ ........ಎಷ್ಟೇ ಕೆಲಸ ಮಾಡಿದರೂ ಬಡ್ತಿ ಸಿಕ್ಕಿರುವುದಿಲ್ಲ.....ಒಂದೇ ,ಎರಡೇ ಚಿಂತೆ ಮಾಡುತ್ತೀನಿ ಎಂದರೆ ಸಿಗುತ್ತದೆ ಸಾವಿರಾರು ವಿಷಯಗಳು.." ಹೊಟ್ಟೆ ತುಂಬಿದವನಿಗೆ ಹೊಟ್ಟೆ ಹೊರುವ ಚಿಂತೆ,ಹೊಟ್ಟೆ ಹಸಿದವನಿಗೆ ಹೊಟ್ಟೆ ಹೊರೆವ ಚಿಂತೆ"ಆದರೆ ಒಂದಂತೂ ನಿಜ ಹೀಗೆ ಯೋಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ....ನಮ್ಮನ್ನು ನಾವು ಇನ್ನಷ್ಟು ಶಿಕ್ಷಿಸಿಕೊಳ್ಳುತ್ತೇವೆ ...ಒಂದು ಗಾದೆ ಮಾತಿದೆಯಲ್ಲ "ಚಿತೆ ಹೆಣವನ್ನು ಸುಟ್ಟರೆ, ಚಿಂತೆ ಬದುಕಿರುವವನನ್ನು ಸುಡುತ್ತದೆ " ಎಂದು. ಅದಕ್ಕೆ ನಾನು ಹೇಳುವುದೆಂದರೆ , ಚಿಂತೆ ಮಾಡಿ ಯಾವುದೇ ಉಪಯೋಗವಿಲ್ಲ. ಅದರ ಬದಲು ಬಂದಿರುವ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲೇ ಇರುವುದು ಜಾಣತನ..ಜೀವನದಲ್ಲಿ ಎಷ್ಟೋ ಸಿಹಿ-ಕಹಿ ಘಟನೆಗಳಾಗಿರುತ್ತವೆ. ಕಹಿ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಚಿಂತೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ....ಏನು ನಡಿಬೇಕೋ ಅದು ಆಗೇ ಆಗುತ್ತದೆ. ನಾವು ಚಿಂತೆ ಮಾಡಿದರೂ ಅಷ್ಟೇ ಬಿಟ್ಟರು..ಇರುವಷ್ಟು ದಿನ ನಗುನಗುತ ಜೀವನ ಸಾಗಿಸುವುದನ್ನು ಕಲಿಯೋಣ..ನನ್ನ ಕೆಲವು ಸ್ನೇಹಿತರಿಗೆ ಹೇಳಿದ್ದೀನಿ ಯೋಚನೆ ಮಾಡಬೇಡಿ ಎಲ್ಲಾ ಸರಿ ಹೋಗುತ್ತದೆ ಎಂದು..ಒಂದು ವೇಳೆ ಹಾಗಾದರೆ??ಹೀಗಾದರೆ?... ಎಂದು ಅನಾವಶ್ಯಕವಾಗಿ ಯೋಚಿಸುತ್ತಾರೆ. ಕೊನೆಗೆ ನೋಡಿದರೆ ಎಲ್ಲವು ಒಳ್ಳೇದೆ ಆಗಿರುತ್ತದೆ. ಯೋಚಿಸಿ ಮನಸು ಹಾಳುಮಾಡಿಕೊಂಡಿದ್ದೆ ಬಂತು !!!!....."ಬಂದದ್ದು ಬರಲಿ, ಗೋವಿಂದನ ದಯೆ ಇರಲಿ" ಎಂಬ ಮಾತಿನಂತೆ ಬದುಕಿನಲ್ಲಿ ಮುಂದೆ ಸಾಗೋಣ. ಅನಾವಶ್ಯಕವಾಗಿ ಯೋಚಿಸಿ ಮನಸ್ಸನ್ನು ಹಾಳುಮಾಡಿ ಕೊಳ್ಳುವುದು ಬೇಡ.ಜೀವನವನ್ನು ಸಂತೋಷದಿಂದ ಸಾಗಿಸೋಣ."Hope for the best, prepare for the worst".ಮನುಷ್ಯನ ಇಂಥ ಚಿಂತೆ ಮಾಡುವಂಥ ಬುದ್ದಿಯನ್ನು ಕಂಡೇ ಹಿರಿಯರು ಬಹುಷಃ ಹಾಡಿದ್ದೇನೋ..."ಚಿಂತ್ಯಾಕೆ ಮಾಡತಿದ್ದಿ ಚಿನ್ಮಯನಿದ್ದಾನೆ "ಎಂದು....

Sunday, February 14, 2010

ಮಾನವೀಯತೆ ಎಲ್ಲಿದೆ .........?


ಕಳೆದವಾರ office ಗೆ ರಜೆ ಇದ್ದ ದಿನ .ಯಾಕೋ ನನಗೆ ನನ್ನ (ರಶ್ಮಿ) ಗೆಳತಿಗೆ ,ಮನೆ ಯಲ್ಲೇ ಕುಳಿತು ತುಂಬಾ ಬೋರ್ ಹೊಡೆಯುತಿತ್ತು .ಸರಿ ಇಬ್ಬರು ಸೇರಿ ಎಲ್ಲಾದರೂ ತಿರುಗಲು ಹೋಗೋಣ ಎಂದು ನಿರ್ಧರಿಸಿದೆವು.ಬೇಗ ರೆಡಿ ಆಗಿ shopping ಮಾಡೋಣ ಎಂದುಕೊಂಡು ಹೊರಟೆವು .ನಾವಿಬ್ಬರೂ full shopping ಮಾಡಿದೆವು. ಎಲ್ಲ mall ಗಳಿಗೆ ತಿರುಗಿದೆವು .ಅವಳೇ ಜಾಸ್ತಿ shopping ಮಾಡಿದ್ದು. ನಾನು ಅಷ್ಟೇನೂ ವಿಶೇಷವಾಗಿ ಕರಿದಿಸಿರಲಿಲ್ಲ .ಅವಳಿಗೂ ಸ್ವಲ್ಪ brand ಹುಚ್ಚು. ಒಂದೊಂದು t-shirt ಗಳಿಗೆ ಅವಳು ಸಾವಿರಗಟ್ಟಲೆ ಕೊಡುತ್ತಿದ್ದುದ್ದನ್ನು ನೋಡಿ ನನಗೇನೋ ಒಂತರಹ ಕಸಿವಿಸಿ ಆಗುತ್ತಿತ್ತು ಯಾಕೋ ಗೊತ್ತಿಲ್ಲ .ಜನ ಹೇಗೆ ಈ ಹುಚ್ಚು ಗೀಳುಗಳಿಗೆ ಅಂಟಿಕೊಂಡು ಬಿಡುತ್ತಾರೆ ಅನಿಸಿಬಿಟ್ಟಿತು.ಸರಿ ಅವಳ shopping ಆಯಿತು ನಾವು ಹೊರಗೆ ನಡೆದೆವು.ಸ್ವಲ್ಪ ದೂರ ಹೋಗುತ್ತಿದ್ದಂತೆ ರಸ್ತೆಯಲ್ಲಿ ಒಂದು ಚಿಕ್ಕ ಹುಡುಗ ನಮ್ಮೆದುರಿಗೆ ಬಂದ.ಸುಮಾರು 5-6 ವರ್ಷದವ ಇರಬಹುದು ಅವನು ಅಷ್ಟೆ .ಅವ ಭಿಕ್ಷೆ ಬೇಡುತ್ತಿದ್ದ . ಮೈಮೇಲೆ ಒಂದು ಹಳೇ ಚಡ್ಡಿ ಬಿಟ್ಟರೆ ಬೇರೇನೂ ಇರಲಿಲ್ಲ. ಅವನ ಎದೆ ಮೂಳೆಗಳು ಕಾಣುತ್ತಿದ್ದವು .ನಮ್ಮ ನೋಡುತ್ತಿದ್ದಂತೆ ಆ ಮಗು ನಮ್ಮ ಹತ್ತಿರ ಬಂದಿತು ."ಅಕ್ಕ ಹೊಟ್ಟೆ ಹಸಿವು .3 ದಿನದಿಂದ ಹೊಟ್ಟೆಗೆ ತಿಂದಿಲ್ಲ .ದಯವಿಟ್ಟು 2 ರೂ ಕೊಡಿ "-ಅಂತ ಗೋಗರೆಯುತ್ತಿದ್ದ . ಸಾಲದಕ್ಕೆ ನನ್ನ ಕಾಲಿಗೂ ಬೀಳತೊಡಗಿದ . ನನಗೋ ಅಯ್ಯೋ ಅನ್ನಿಸಿಬಿಟ್ಟಿತು . ತೊಗೊಳಪ್ಪ 10 ರೂ. ಕಾಲಿಗೆಲ್ಲಾ ಬೀಳಬೇಡ ಎಂದೆ. ಆ ಘಳಿಗೆ ಅವನ ಮುಖದಲ್ಲಿ ಒಂದು ನಗೆ ಬಂತಲ್ಲ ಎಷ್ಟು ಸಂತಸವಾಯಿತು ನನಗೆ. ಬಹುಷಃ ನನ್ನ ಸ್ಥಾನದಲ್ಲಿ ಯಾರಿದ್ದರು ಅವರಿಗೂ ಹೀಗೆ ಸಂತಸವಾಗುತಿತ್ತೇನೋ??ಹಾಗೆ ಕೊಟ್ಟು ನಾವು ಬರುತ್ತಿದ್ದಾಗ ನನ್ನ ಗೆಳತಿ "ಸಂತೋಷ ಅವರಿಗೆಲ್ಲ ಯಾಕೆ ಕೊಡುತ್ತೀಯ ? ನಿನಗೆ ಬುದ್ದಿ ಇಲ್ವಾ? ದುಡ್ಕೊಂಡು ತಿನ್ನಕಾಗಲ್ಲ.waste fellows . ಓದಿ ಉದ್ದಾರ ಅಗಕೆ ಆಗಲ್ಲ ಇವ್ರಿಗೆ "-ಅಂತೆಲ್ಲ ಬೈಯುತ್ತಿದ್ದಳು.ನನಗೆ ಅವಳ ಮಾತು ತುಂಬಾ ಬೇಸರ ಮಾಡಿತು .ಅಲ್ಲ ಅವ ಇನ್ನು 5 ವರ್ಷದ ಮಗು .ಅವ ಎಲ್ಲಿ ದುಡಿಯಲು ಹೋಗಬೇಕು?ಅವನಿಗೆ ಒಂದು 10 ರೂ ಕೊಟ್ಟರೆ ನಮ್ಮದೇನು ಹೋಗುತ್ತದೆ? ಅವ ಓದುತ್ತೀನಿ ಅಂದರೂ ಅವನನ್ನು ಶಾಲೆಗೆ ಸೇರಿಸುವರು ಯಾರು? ಅದೆಲ್ಲ ಕಡೆಗಿನ ಮಾತು. ಹೊಟ್ಟೆ ತುಂಬಿದರೆ ತಾನೆ ಓದುವ ಮಾತು.mall ಗೆ ಹೋಗಿ 150 ರೂ t-shirt ಗೆ 1500 ರೂ ಕೊಟ್ಟು ಕೊಂಡುಕೊಳ್ಳುವ ಜನ ,ಆ ಬಡ ಹುಡುಗನಿಗೆ 10 ರೂ ಕೊಟ್ಟರೆ ಯಾಕೆ ಹೀಗಾಡಬೇಕು?ಮಾನವೀಯತೆ ಎಲ್ಲಿದೆ ?ಎಷ್ಟೋ ಜನ ಇದ್ದಾರೆ ನನ್ನ ಗೆಳತಿಯ ಹಾಗೆ ಯೋಚಿಸುವರು .ಕುಡಿಯುವುದು ,ಸೇದುವುದು,ಇದ್ಯಾವುದಕ್ಕೂ ಖರ್ಚು ಮಾಡಿದ ದುಡ್ಡು ಅವರಿಗೇನು ಅನ್ನಿಸುವುದಿಲ್ಲ .ಆದರೆ ಯಾರೋ ಬಡವರಿಗೆ ಕೊಡಬೇಕು ಅಂದಾಗ ಅವರ" ಲೆಕ್ಕಾಚಾರದ ಬುದ್ದಿ "ಎಚ್ಚೆತ್ತು ಕೊಂಡು ಬಿಡುತ್ತದೆ .ಹೇಗೆದೆ ಅಲ್ಲವ?ನಮಗೋಸ್ಕರ ಸಾವಿರಾರು ರೂಪಾಯಿ ಖರ್ಚು ಮಾಡುವ ನಾವು ,ತೀರ ಹಸಿವು ಎಂದವರಿಗೆ ನಮಗೆ ಕೈಯಲ್ಲಾದ ಸಹಾಯ ಮಾಡಿದರೆ ತಪ್ಪೇನು ಇಲ್ಲ ಅಂದುಕೊಳ್ಳುತ್ತೇನೆ.ನೀವೇನು ಹೇಳುತ್ತೀರಿ?

ಮುದ್ದು ಗೆಳೆಯನಿಗಾಗಿ ಮುದ್ದು ಪತ್ರ ........

ನನ್ನ ಮುದ್ದು ರವಿ ....
,ನಾನು ನಿನಗೆ ಧನ್ಯವಾದ ಹೇಳಬೇಕಿತ್ತು . ನಿನಗೆ ಗೊತ್ತಿಲ್ಲ ಕಣೋ ನೀನು ನನಗೆ ಅದೆಷ್ಟು ಸ್ಫೂರ್ತಿ ತುಂಬುತ್ತೀಯ ಎಂದು...ನನಗೆ ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತಿದೆ . ನನಗೆ ಗೊತ್ತು ನೀನೂ ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೀಯ ಎಂದು ..ಆದರೂ ನನಗಾಗಿ ನಗುತ್ತಾ ನೀನು ಮಾಡುತ್ತಿರುವ ಕೆಲಸ ತುಂಬ ಖುಷಿ ಕೊಡುವಂತದ್ದು ..ನಿಜ ಹೇಳಬೇಕೆಂದರೆ ನಿನ್ನ ಮೀಟ್ ಮಾಡಿದ ಮೊದಲ ದಿನವೇ ನನಗೆ ತಿಳಿದಿತ್ತು "that you are a different person" ಅಂತ .ಅದೆಷ್ಟು ಪ್ರೌಡಿಮೆ ಇದೆ ನಿನ್ನ ಮಾತುಗಳಲ್ಲಿ , ನನ್ನ childish nature ನ ತಿಳಿದುಕೊಂಡು ಸಣ್ಣ ಮಗುವನ್ನು treat ಮಾಡಿದ ಹಾಗೆ ಮಾಡುತ್ತೀಯ .....ನಿನ್ನ ಹತ್ತಿರ ಸದಾ ಕಾಲ ಮಾತಾಡುತ್ತಿರುವ ಎಂದು ಅನಿಸುತ್ತದೆ ಗೆಳೆಯ …ಏಕೆಂದರೆ ನಿನ್ನ ಹತ್ತಿರ ಮಾತಾಡುವುದೇ ಒಂದು ಹಿತ ನನಗೆ …ನೀನು ನನ್ನ ಬಾಳ ಬೆಳಕಾಗಿದ್ದಿಯ ಗೆಳೆಯ .."U have helped me to see things in a better and brighter way"…ಏಕೆಂದರೆ ಒಂದು ಕಾಲದಲ್ಲಿ ನಾನು ನನ್ನ ಹಲವಾರು ಭಯಗಳಿಂದ ಮುಳುಗಿ ಹೋಗಿದ್ದೆ .."Completely insecured about love and hope". ನನಗನ್ನಿಸುತಿತ್ತು ಯಾರೂ ನನ್ನ ಅರ್ಥ ಮಾಡಿಕೊಳ್ಳುವುದಿಲ್ಲ ….ಅದು ಯಾರಿಗೂ ಬೇಡ ಕೂಡ ಎಂದುಆಗ ಬಂದಿದ್ದು ನೀನು …ಅದೇನೋ ನಿನ್ನ meet ಮಾಡುವ ಮೊದಲೇ ನನ್ನ ಮನದಲ್ಲಿ ಒಂದು ಚಿತ್ರ , ಕಲ್ಪನೆ ಮೂಡಿತ್ತು …ನನ್ನ ಹುಡುಗ ಹೀಗೇ ಇರಬೇಕೆಂದು ..ಅದೆಲ್ಲ ಸಾಧ್ಯವಿಲ್ಲ ಎಂದೂ ತಿಳಿದಿತ್ತು ಆದರೆ ನಿನ್ನ ನೋಡಿದಾಗ ಸಾಧ್ಯವಿದೆ ಎಂಬ ನಂಬಿಕೆ ಮೂಡಿದ್ದು …ಅದೇ ಕ್ಷಣ ನನಗೆ ತಿಳಿಯದಂತೆ ನಾನು ನಿನ್ನ ಪ್ರೀತಿಸತೊಡಗಿದ್ದೆ …ಅದು ನನಗಷ್ಟೇ ತಿಳಿದಿತ್ತು …ನನ್ನಷ್ಟಕ್ಕೇ ಸಂತಸ ಪಟ್ಟೆ …ಏನೋ secured feeling ಇತ್ತು ಆಗ …ನಿನ್ನ ಕಂಡ ಕ್ಷಣದಿಂದ ನಾನೇನೋ ಒಂಟಿಯಲ್ಲ ಎಂಬ ಭಾವನೆ ನನಗೆ ಬಂದಿದೆ .ಒಂದು ಕ್ಷಣ ಜೀವನದಲ್ಲಿ " I felt so unloved and alone" don’t know why..ಸಂತೋಷವನ್ನು ಹುಡುಕುವ ಅವಿರತ ಪ್ರಯತ್ನ ಮಾಡುತ್ತಿದ್ದೆ ..ನೋವನ್ನು ಹಂಚಿಕೊಳ್ಳುವಂಥ ನಂಬಿಕಸ್ತ ಗೆಳೆಯರೂ ಇರಲಿಲ್ಲ ..ಜೀವನ ಶೂನ್ಯ ಎನಿಸಿಬಿಟ್ಟಿತ್ತು …You made me laugh..ನನ್ನ ದುಃಖಕ್ಕೆ ಪಲಾಯನವಾದವನ್ನು ಕಲಿಸಿದ್ದೆ ನೀನು …ನೀನಿಲ್ಲದಿದ್ದರೆ ಅದು ಸಾದ್ಯವೇ ಇರಲಿಲ್ಲ ಎಂದು ನಿನಗೂ ತಿಳಿದಿದೆ ಅಲ್ಲವ ಗೆಳೆಯ ?...ನಾನು ನಿನಗೆ ನನ್ನ ಜೊತೆ ಕಳೆದ ಸುಮಧುರ ಕ್ಷಣಗಳಿಗಾಗಿ ಧನ್ಯವಾದ ಹೇಳುತ್ತೇನೆ …ನನ್ನ ಮಾತನ್ನು ಆಲಿಸಿದಕ್ಕೆ , ನನ್ನ problems ಗೆ (if not solution) suggestion ಕೊಟ್ಟಿದ್ದಕ್ಕೆ …ನನಗೀಗ ಅನಿಸುತ್ತಿದೆ ದೇವರು ನನಗಾಗಿ ಕಳಿಸಿಕೊಟ್ಟ ದೇವತೆ ಏನೋ ನೀನು ಎಂದು ಏಕೆಂದರೆ ನನ್ನ ಮನಸಿನಲ್ಲಿರುವುದನ್ನು ಹೇಳದೆಯೇ ತಿಳಿದುಕೊಳ್ಳುತ್ತಿದ್ದೆ ನೀನು ….ಬರೀ ಬೇಸರ ತುಂಬಿಕೊಂಡಿದ್ದ ನನ್ನ ಜೀವನದಲ್ಲಿ ನೀನು ಬಂದು ನನ್ನ ಮುಖದಲ್ಲಿ ಒಂದು ನಗುವನ್ನು ಬರಿಸಿದ್ದಿಯ …ಬರೀ ನಿನ್ನ ಇರುವಿಕೆ ಇಂದಲೇ ನನಗೆ ಸಂತಸವಾಗುತಿತ್ತು …ನೀನೇನೂ ಹೇಳಬೇಡ ಗೆಳೆಯ ..ಬರೀ ನನ್ನ ಜೊತೆಯಲ್ಲಿ ಇರು ನೀನು ನನಗಷ್ಟೇ ಸಾಕು …ದಿನಾ ನಾನು ದೇವರಿಗೆ thanks ಹೇಳುತ್ತೇನೆ …ಒಳ್ಳೆ ಜನರನ್ನು ನನ್ನ ಜೀವನದಲ್ಲಿ ಕಳಿಸಿ ಕೊಟ್ಟಿದ್ದಕ್ಕೆ …ಎಲ್ಲರೂ ನನಗೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವ ಬೀರಿದ್ದಾರೆ …ನನಗೆ ಗೊತ್ತು ಎಲ್ಲರೂ ಜೀವನದಲ್ಲಿ ಒಂದಿಲ್ಲೊಂದು ಕಾರಣಗಳಿಗೆ ಬರುತ್ತಾರೆ …..ಕೆಲವರು ಕೊನೆಯವರೆಗೂ ಜೊತೆಯಲ್ಲಿದ್ದರೆ ಇನ್ನು ಕೆಲವರು ಮಧ್ಯದಲ್ಲೇ ಬಿಟ್ಟು ಹೋಗುತ್ತಾರೆ ..ಅಂಥ ಒಳ್ಳೆಯವರನ್ನು ನಾನು ದೇವತೆಗಳೆಂದು ಕರೆಯಲಿಚ್ಚಿಸುತ್ತೇನೆ ......ಅದರಲ್ಲಿ ನೀನೂ ಒಬ್ಬ ಗೆಳೆಯ …..ನಿನಗೂ ನನ್ನ thanks..ನೀನೂ ಯಾವಾಗಲು ನನ್ನ ಮನಸ್ಸಿನಲ್ಲಿ ಇರುತ್ತೀಯ ಗೆಳೆಯ ..

Saturday, February 13, 2010

ಮೀಸೆ ತೆಗೆದಾಗ ......

ನನ್ನ ಮಹತ್ವದ ಯೋಜನೆಗಳಲ್ಲಿ ಇಂಥವು ಬಹಳ: ಹೇಗಾದರೂ ಮಾಡಿ, ಇನ್ನು ಯಾರೂ ‘ಕಡ್ಡಿ ಫೈಲ್ವಾನ್’ ಅಂತ ಕರೆಯದ ಹಾಗೆ ದಪ್‍ಪ್‍ಪ್ಪ ಆಗಬೇಕು (ಚಿಕನ್ ತಿನ್ನು, ಪ್ರತಿದಿನ ಒಂದೇ ಒಂದು ಪಿಂಟ್ ಬಿಯರ್ ಕುಡಿ -ಗೆಳೆಯರ ಸಲಹೆಗಳು). ಈ ತಿಂಗಳ ಒಂದನೇ ತಾರೀಖಿನಿಂದ ಜಿಮ್ಮಿಗೆ ಸೇರಿಕೊಂಡು ಬಿಡಬೇಕು (ಸುಮಾರು ಒಂದನೇ ತಾರೀಖುಗಳು ಕಳೆದುಹೋಗಿವೆ). ಇಷ್ಟರೊಳಗೆ ಯಾರಿಂದಲೂ ಕಂಡುಹಿಡಿಯಲಾಗದ ವಸ್ತುವೊಂದನ್ನು ಕಂಡುಹಿಡಿಯಬೇಕು (ಬಚಾವ್, ನಾನು ವಿಜ್ಞಾನಿಯಲ್ಲ). ಒಂದು ದಿನ, ಯಾರೆಂದರೆ ಯಾರಿಗೂ ಹೇಳದೇ, ಸಿಕ್ಕಿದ ಟ್ರೈನ್ ಹತ್ತಿ, ಗೊತ್ತೇ ಇಲ್ಲದ ಊರಿಗೆ ಹೋಗಿಬಿಡಬೇಕು. ಒಂದು ತಿಂಗಳು ಅಲ್ಲಿ ಭೂಗತನಾಗಿದ್ದು ವಾಪಸು ಬರಬೇಕು (ಇದನ್ನು ಮಾತ್ರ ಮಾಡಿಯೇ ತೀರುವವನಿದ್ದೇನೆ!).ಇವುಗಳ ಸಾಲಿಗೇ ಸೇರುವ ನನ್ನ ಮತ್ತೊಂದು ಯೋಜನೆ ಎಂದರೆ, ‘ಒಮ್ಮೆ ಮೀಸೆ ಬೋಳಿಸಿ ನೋಡಬೇಕು’ ಎಂಬುದು! ನೀವು ಕೇಳಬಹುದು, ‘ಮೀಸೆ ತೆಗೆಯುವುದು ಅಂತಹ ಮಹತ್ವದ ಯೋಜನೆ ಹೇಗೆ? ಅದೇನು ಹಿಮಾಲಯ ಹತ್ತಿಳಿಯೋ ಹಾಗಾ?’ ಎಂದು. ನನ್ನ ಪ್ರಕಾರ ಅದು ಮಹತ್ವದ ಯೋಜನೆಯೇ. ಏಕೆಂದರೆ, ನನಗೆ ಬೋಳಿಸಬೇಕೆಂದಿರುವುದು ನನ್ನದೇ ಮೀಸೆ! (೧) ನೀವು ಯಾವಾಗಲೂ ಮೀಸೆ ತೆಗೆದಿರುವವರೇ ಆಗಿದ್ದರೆ ಅಥವಾ (೨) ನೀವು ಪದೇ ಪದೇ ಮೀಸೆ ತೆಗೆದು-ಮತ್ತೆ ಬಿಟ್ಟು-ಮತ್ತೆ ತೆಗೆದು -ನಿಮ್ಮ ಮುಖವನ್ನು ಫ್ರೆಂಚು, ಗಡ್ಡ, ಲಾಕು ಅಂತೆಲ್ಲ ಪ್ರಯೋಗಗಳಿಗೆ ಒಳಪಡಿಸುವ ಗುಂಪಿಗೆ ಸೇರಿದವರಾದರೆ ಅಥವಾ (೩) ನೀವು ಇನ್ನೂ ಮೀಸೆಯೇ ಬಂದಿಲ್ಲದ ಎಳೆಯ ಹುಡುಗನಾಗಿದ್ದರೆ ಅಥವಾ (೪) ನೀವು ಹೆಂಗಸಾಗಿದ್ದರೆ -ನಾನೀಗ ಹೇಳುತ್ತಿರುವುದು ಸರಿಯಾಗಿ ಅರ್ಥವಾಗದೇ ಹೋಗಬಹುದು. ಅಥವಾ ತಮಾಷೆ ಅನ್ನಿಸಬಹುದು. ಆದರೆ ನೀವು ‘ಮೀಸೆ ತೆಗೆದರೆ ನಾನು ಹೇಗೆ ಕಾಣುತ್ತೇನೋ’ ಎಂಬ ಭಯ ಇರುವ ನನ್ನಂಥವರ ಗುಂಪಿಗೆ ಸೇರಿದವರಾದರೆ ನನ್ನ ಕಷ್ಟ ನಿಮಗೆ ಅರ್ಥವಾಗುತ್ತದೆ.ನನಗೆ ನನ್ನ ಮೂಗಿನ ಕೆಳಗೆ ಯಾವಾಗ ಈ ಕಪ್ಪು ಕೂದಲುಗಳು ಮೂಡಿದವೆಂಬ ದಿನಾಂಕ ನೆನಪಿಲ್ಲ. ನಮ್ಮ ಎಸ್ಸೆಸ್ಸೆಲ್ಸಿ ಬ್ಯಾಚಿನ ಗ್ರೂಪ್ ಫೋಟೋದಲ್ಲಿ ಹೌದೋ ಇಲ್ಲವೋ ಎಂಬಂತೆ ಕಾಣುವ ಇದು, ಕಾಲೇಜ್ ಗ್ರೂಪ್ ಫೋಟೋದಲ್ಲಿ ಸ್ವಲ್ಪ ಢಾಳಾಗೇ ಕಾಣುತ್ತೆ. ಬಹುಶಃ ನಾನು ಹೈಸ್ಕೂಲಿನ ಡೆಸ್ಕಿನ ಮೇಲೆ ಕೈವಾರದಿಂದ ಚಿತ್ರ ಕೊರೆಯುತ್ತಿದ್ದಾಗಲೇ ನನ್ನ ಮೇಲ್ದುಟಿಗಳ ಮೇಲೆ ಶುರುವಾದ ಈ ಶ್ಮಶ್ರುಬೆಳೆ, ಹಾಗೇ ಅವ್ಯಾಹತವಾಗಿ ಮುಂದುವರೆದು ಕಾಲೇಜಿನ ರಿಸಲ್ಟ್ ನೋಡಲು ಹೋಗುವ ವೇಳೆಗೆ ಕಟಾವಿಗೆ ಬಂದಿರಬೇಕು. ಅದಕ್ಕೇ ಮತ್ತೆ, ರಿಸಲ್ಟ್ ನೋಡಿ ವಾಪಸ್ ಬರುತ್ತಿದ್ದಾಗ ಸಿಕ್ಕ ಸದಾಶಿವನೆಂಬ ಹೈಸ್ಕೂಲು ಗೆಳೆಯ ನನ್ನನ್ನು ನಿಲ್ಲಿಸಿ ‘ಓಹ್, ಸುಶ್ರುತ ಅಲ್ಲೇ ನೀನು? ಗುರ್ತೇ ಸಿಕ್ಕದಿಲ್ಲಲಾ ಮಾರಾಯಾ! ಆವಾಗ ಸಣ್ಣಕ್ ಇದ್ದೆ; ಈಗ ಮೀಸೆ-ಗೀಸೆ ಬಂದು ಒಳ್ಳೇ ದೊಡ್ ಗಂಡ್ಸಿನ್ ಹಂಗೆ ಕಾಣ್ತಿದೀಯಾ’ ಅಂದದ್ದು!ಮತ್ತು ಅವತ್ತೇ ನಾನು ಯಾರಿಗೂ ಕಾಣದಂತೆ ಅಪ್ಪನ ರೇಸರ್ ಸೆಟ್ಟಿನ ಜೊತೆಗಿದ್ದ ಪುಟ್ಟ ಕತ್ತರಿಯಿಂದ ಹಾಗೆ ಉದ್ದುದ್ದ ಬೆಳೆದಿದ್ದ ಮೀಸೆಯ ಕೂದಲುಗಳನ್ನು ಕತ್ತರಿಸಿ ‘ಟ್ರಿಮ್’ ಮಾಡಿಕೊಂಡದ್ದು! ಅಪ್ಪನಿಗೆ ಗೊತ್ತಾದರೂ ಸುಮ್ಮನಿದ್ದದ್ದು!ಅದೆಲ್ಲಾ ಇರಲಿ, ಒಂದಂತೂ ಸತ್ಯ: ನನಗೆ ಬರಬೇಕಿದ್ದ ಕಾಲಕ್ಕೆ ಮೀಸೆ ಬಂದಿತ್ತು. ಕನ್ನಡಿ ನೋಡಿಕೊಂಡಾಗಲೆಲ್ಲ ‘ನೀನು ಗಂಡಸು ಕಣೋ’ ಅಂತ ಹೇಳುತ್ತಿತ್ತು. ಮತ್ತೆ, ಆವಾಗ ‘ಹವ್ಯಕ ಬ್ರಾಹ್ಮಣರಲ್ಲಿ ವಧುಗಳ ಕೊರತೆ’ ಇನ್ನೂ ಶುರುವಾಗಿರದಿದ್ದರಿಂದಲೋ ಏನೋ, ‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು’ ಎಂಬ ಕಾಶಿನಾಥನ ಚಿತ್ರಗೀತೆ ನನ್ನ ಗುನುಗುಗಳಲ್ಲೊಂದಾಗಿತ್ತು.ನಾನು ನೀವಿದ್ದಕ್ಕೇ ಖುಶಿಯಾಯ್ತೋ ಎಂಬಂತೆ ಮೀಸೆ ಬೆಳೆಯುತ್ತಾ ಹೋಯ್ತು. ಬೆಂಗಳೂರಿನಲ್ಲಿ ವಿವಿಧ ರೀತಿಯ ಮೀಸೆ ಬಿಟ್ಟವರೆಲ್ಲ ಕಾಣುತ್ತಿದ್ದರು. ರಾಜ್‌ಕುಮಾರ್ ಥರ ಸಣ್ಣಮೀಸೆ, ವೀರಪ್ಪನ್ ಥರ ಹುರಿಮೀಸೆ, ಚಾಪ್ಲಿನ್ ಥರ ಪುಟ್ಟ ಮೀಸೆ (ಪ್ಲೀಸ್, ಉದಾಹರಣೆಗಾಗಿ ಹೇಳಿದ್ದು ಅಷ್ಟೇ), ಹಾಗೇ ಚೂಪುಮೀಸೆ, ಚುಪುರುಮೀಸೆ, ಬಿಲ್ಲಿನಂತಹ ಮೀಸೆ, ಇನ್ನೂ ಏನೇನೋ. ಆದರೆ ಇವರೆಲ್ಲರಿಗಿಂತ ನನಗೆ ಈ ಮೀಸೆ ತೆಗೆದವರೇ ಗ್ರೇಟ್ ಗಂಡಸರಂತೆ ಕಾಣುತ್ತಿದ್ದರು. ಅವರಂತೆ ನಾನೂ ಒಮ್ಮೆ ಮೀಸೆಯನ್ನು ಪೂರ್ತಿಯಾಗಿ ತೆಗೆದು ನೋಡಬೇಕು ಅಂತ ಅನ್ನಿಸುತ್ತಿತ್ತು. ಆದರೆ ಧೈರ್ಯ ಸಾಲುತ್ತಿರಲಿಲ್ಲ.ನನ್ನ ಹಳೆಯ ಆಫೀಸಿನ ಕಲೀಗು ವಿಕ್ರಮ್, ನಾನು ಜಾಬ್ ಇಂಟರ್ವ್ಯೂಗಳಲ್ಲಿ ಆಯ್ಕೆಯಾಗದೇ ಇರುತ್ತಿದ್ದುದಕ್ಕೆ ಕಾರಣ ನನ್ನ ಮೀಸೆಯೇ ಅಂತ ವಾದಿಸುತ್ತಿದ್ದ. ಅವನ ಪ್ರಕಾರ ಮೀಸೆಯಿದ್ದವರು ಇನ್ನೂ ‘ಪ್ರೌಢತ್ವ ಪ್ರಾಪ್ತವಾಗದವರು’. ಮೀಸೆ ತೆಗೆದರೂ ಗಂಡಸಿನ ಹಾಗೆ ಕಾಣಿಸುವವನೇ ನಿಜವಾದ ಗಂಡಸು ಎಂಬುದವನ ತರ್ಕವಾಗಿತ್ತು. "ನೀವು ಒಮ್ಮೆ ಮೀಸೆ ತೆಗ್ದು ನೋಡಿ ಸುಶ್ರುತ್.. ಆಗ ಮುಖದಲ್ಲಿ ಸೀರಿಯಸ್‌ನೆಸ್ ಬರುತ್ತೆ. ಹ್ಯಾಗೆ ಪಟ್ಟಂತ ಸೆಲೆಕ್ಟ್ ಆಗ್ತೀರೋ ನೋಡಿ ಜಾಬ್‌ಗೆ!" ಅಂದಿದ್ದ ವಿಕ್ರಮ್.ಆದರೆ ಮೀಸೆ ತೆಗೆದುಬಿಟ್ಟರೆ ನಾನೆಲ್ಲಿ ಹುಡುಗಿ ಥರ ಕಾಣ್ತೀನೋ ಎಂಬುದು ನನ್ನ ಭಯ. ಕನ್ನಡಿ ಮುಂದೆ ನಿಂತಾಗ ನನ್ನ ತೋರುಬೆರಳುಗಳಿಂದ ಮೀಸೆ ಮುಚ್ಚಿಕೊಂಡು ನಾನು ಮೀಸೆ ತೆಗೆದಾಗ ಹೇಗೆ ಕಾಣಬಹುದು ಅಂತ ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ ಕಲ್ಪನೆಯೇ ಸರಿಯಾಗಿ ಆಗುತ್ತಿರಲಿಲ್ಲ. ಕೊನೆಗೆ ಫೋಟೋಶಾಪಿನಲ್ಲಿ ನನ್ನ ಫೋಟೋದ ಮೀಸೆ ಅಳಿಸಿ ನೋಡಿದೆ. ಆಗ ಅದೊಂಥರಾ ಪ್ರೇತದ ಹಾಗೆ ಕಂಡಿತು. ನೋಡಿದ ನನ್ನ ಕಲೀಗುಗಳು ನಗಾಡಿಬಿಟ್ಟರು. ಇದರ ಸಹವಾಸವೇ ಬೇಡ ಅಂತ ಸುಮ್ಮನಾಗಿಬಿಟ್ಟೆ.ಮೊನ್ನೆ ನನ್ನ ರೂಮ್‌ಮೇಟು ಊರಿಗೆ ಹೋಗಿದ್ದ ಭಾನುವಾರ ನಾನೊಬ್ಬನೇ ಮನೆಯಲ್ಲಿದ್ದೆ. ಮಾಡಲಿಕ್ಕೇನೂ ಕೆಲಸವಿರಲಿಲ್ಲ, ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಸ್ನಾನಕ್ಕೆ ಹೊರಟವನಿಗೆ ಕನ್ನಡಿ ಕಂಡಿದ್ದೇ ಅಪಶಕುನವಾಗಿಹೋಯಿತು. ಈ ಕನ್ನಡಿ ದಾಡಿ ಮಾಡದ ನನ್ನ ಮುಖವನ್ನು ಪ್ರಾಮಾಣಿಕವಾಗಿ ಹಾಗೇ ತೊರಿಸಿಬಿಟ್ಟಿತು. ತಕ್ಷಣ ‘ಓಹ್, ಶೇವಿಂಗ್ ಮಾಡ್ಕೋಬೇಕು’ ಎಂಬುದು ಹೊಳೆದುಬಿಟ್ಟಿತು. ಸರಿ, ಮುಖದ ತುಂಬ ಕ್ರೀಮ್ ಹಚ್ಚಿಕೊಂಡು, ‘ಜಿಲೆಟ್ಟಿ ಸಖತ್ತಾಗಿ ಬರುತ್ತೆ’ ಅಂದಿದ್ದ ಗೆಳೆಯನ ಮಾತು ಕೇಳಿ ತಂದುಕೊಂಡಿದ್ದ ರೇಸರಿನಿಂದ ಶೇವ್ ಮಾಡಿಕೊಳ್ಳತೊಡಗಿದೆ. ಈ ಏರ್?ಟೆಲ್ ಕಂಪನಿಯವರಿಗೆ ಭಾನುವಾರವೂ ರಜೆ ಇಲ್ಲವೋ ಅಥವಾ ಉಪೇಂದ್ರ ಮಾತಾಡಿದ ಕಾಲರ್‌ಟ್ಯೂನನ್ನು ನಾನು ಡೌನ್‌ಲೋಡ್ ಮಾಡಿಕೊಳ್ಳುವವರೆಗೆ ನಿದ್ದೆ ಮಾಡುವುದಿಲ್ಲ ಅಂತ ಹರಕೆ ಹೊತ್ತುಕೊಂಡಿದ್ದಾರೋ ಏನೋ, ಸರಿಯಾಗಿ ನನ್ನ ರೇಸರ್ ಕಪಾಳದಿಂದ ಕೆಳಕ್ಕಿಳಿಯುತ್ತಿದ್ದಾಗ ರಿಂಗ್ ಮಾಡಿದರು. ಅದ್ಯಾವಾಗ ಆ ಪರಿ ಹೈ ವಾಲ್ಯೂಮಿನಲ್ಲಿಟ್ಟುಕೊಂಡಿದ್ದೆನೋ ಏನೋ, ಒಳ್ಳೇ ಅಕ್ಕಚ್ಚಿಗೆ ಕೊಡದ ಜರ್ಸಿ ದನದ ಥರ ಕೂಗಿಕೊಂಡಿತು ನನ್ನ ಮೊಬೈಲು. ಬೆಚ್ಚಿಬಿದ್ದವನಂತೆ ತಿರುಗಿ ನೋಡಿದೆ, ಓಡಿ ಹೋಗಿ ಟೀಪಾಯಿಯ ಮೇಲಿದ್ದ ಮೊಬೈಲನ್ನು ಕ್ರೀಮ್ ಹತ್ತದಂತೆ ಹುಷಾರಾಗಿ ಕಿವಿಗಿಟ್ಟುಕೊಂಡೆ, ಉಪ್ಪಿ ಶುರುಮಾಡುತ್ತಿದ್ದಂತೆಯೇ ‘ಥೂ, ಈ ಏರ್‌ಟೆಲ್ ಮನೆ ಹಾಳಾಗ!’ ಅಂತ ಬೈದುಕೊಂಡು ಕಟ್ ಮಾಡಿದೆ, ತಿರುಗಿ ಬಂದು ಕನ್ನಡಿಯೆದುರು ನಿಂತೆ. ಜಿಲೆಟ್ಟಿ ಒಂದು ಮಹತ್ಕಾರ್ಯ ಮಾಡಿತ್ತು.ನನಗೆ ಅದುವರೆಗೆ ಕಲ್ಪನೆಯೇ ಇರಲಿಲ್ಲ: ಈ ಜಿಲೆಟ್ಟಿ, ಮೊಬೈಲು, ಉಪೇಂದ್ರ, ಏರ್‌ಟೆಲ್ಲು, ಕನ್ನಡಿ ಎಲ್ಲರಿಗೂ ನನ್ನ ಮೀಸೆಯ ಮೇಲೆ ಅದೆಂತಹ ಹೊಟ್ಟೆಕಿಚ್ಚಿತ್ತು ಅಂತ. ಅಷ್ಟು ವರ್ಷಗಳಿಂದ ಒಬ್ಬ ಮುತ್ತೈದೆ ಹಣೆಯ ಕುಂಕುಮವನ್ನು ಜೋಪಾನವಾಗಿ ಕಾಯ್ದುಕೊಂಡು ಬರುವಂತೆ ನಿಗಾ ವಹಿಸಿಕೊಂಡು ಬಂದಿದ್ದ ನನ್ನ ಮೀಸೆಯ ಬಲಭಾಗವನ್ನು ಜಿಲೆಟ್ಟಿ ಕ್ಷಣದಲ್ಲಿ ಸವರಿಹಾಕಿತ್ತು! ಕರೆಂಟ್ ಹೊಡೆದವನಂತೆ ಬಾಯಿ ಕಳೆದು, ಕಣ್ಣು ಮಿಟುಕಿಸಿ ದೊಡ್ಡದಾಗಿ ಮಾಡಿ ನೋಡಿಕೊಂಡೆ. ನನ್ನ ಪ್ರತಿಬಿಂಬವೂ ಬಾಯಿ ಕಳೆದು, ಕಣ್ಣು ಮಿಟುಕಿಸಿ ದೊಡ್ಡದಾಗಿ ಮಾಡಿತೇ ಹೊರತು ಮೀಸೆಯ ಸವರಿದ ಜಾಗದಲ್ಲಿ ಏನೂ ಬದಲಾವಣೆ ಆಗಲಿಲ್ಲ. ನನಗೆ ಸಿ‌ಇಟಿ ಫೇಲಾದಷ್ಟು ಬೇಸರವಾಗಿ ಕುಸಿದು ಕುಳಿತೆ.ಸಿನಿಮಾಗಳಲ್ಲಿ ಇಂತಹ ಪ್ರಕರಣ ನಡೆದದ್ದು ನೋಡಿ ಗೊತ್ತಿತ್ತೇ ಹೊರತು ನನಗೆ ಇಷ್ಟು ಹತ್ತಿರದಲ್ಲಿ ದುರ್ಘಟನೆಯೊಂದು ಸಂಭವಿಸಿದಾಗ ಏನು ಮಾಡಬೇಕೆಂದೂ ಗೊತ್ತಿರಲಿಲ್ಲ. ಮೀಸೆಯೆಂದರೆ ಮುಖದ ಮೇಲಿನ ಕಪ್ಪು ಕಾಮನಬಿಲ್ಲಿನಂತೆ. ಅದಿದ್ದರೇನೇ ಗಂಡಸಿನ ಮುಖಕ್ಕೊಂದು ಲಕ್ಷಣ. ಅದೇ ಇಲ್ಲದಿದ್ದರೆ?ಪಾರ್ಶ್ವವಾಯು ಹೊಡೆದವನಂತೆ ಕೂತಿದ್ದ ನನ್ನನ್ನು ಕರೆದೊಯ್ಯಲು ಯಾವ ಆಂಬುಲೆನ್ಸೂ ಬರುವ ಲಕ್ಷಣ ಕಾಣಲಿಲ್ಲ. ಒಂದೆರಡು ಹನಿ ಕಣ್ಣೀರಾದರೂ ಉದುರಿಸೋಣವೆಂದುಕೊಂಡವನು ಸೀನ್ ಸ್ವಲ್ಪ ಜಾಸ್ತಿ ಆಗುತ್ತೇನೋ ಅನ್ನಿಸಿ ಸುಮ್ಮನಾದೆ. ಅರ್ಧ ಭಾಗ ಮಾತ್ರ ಉಳಿದಿದ್ದ ನನ್ನ ಮೀಸೆಯನ್ನು ಮತ್ತೊಮ್ಮೆ ಕಣ್ತುಂಬ ನೋಡಿಕೊಂಡೆ. ಜಿಲೆಟ್ಟಿಗೆ ಬಲಿಯ ಜೀವ ಪೂರ್ತಿ ತೆಗೆದುಕೊಳ್ಳುವಂತೆ ಸೂಚಿಸಿದೆ.ಸ್ನಾನ ಮಾಡಿ ಹೊರಬರುವಾಗ ‘ಸಧ್ಯ, ಇವತ್ತು ರೂಮ್‌ಮೇಟ್ ಮನೇಲಿಲ್ಲ’ ಅಂತ ನಿಟ್ಟುಸಿರು ಬಿಟ್ಟೆ. ಒಬ್ಬನೇ ಇದ್ದಾಗ ಅವಮಾನವಾಗುವುದಕ್ಕೂ ನಾಲ್ಕು ಜನರ ಎದುರಿಗೇ ಆಗುವುದಕ್ಕೂ ವ್ಯತ್ಯಾಸವಿರುತ್ತದೆ. ಅವನಿದ್ದಿದ್ದರೆ ನನ್ನ ಶೇವಿಂಗ್ ಕಾರ್ಯ ಮುಗಿಯುತ್ತಿದ್ದಂತೆಯೇ ಉಗಿಯುತ್ತಿದ್ದ. ಈಗಾದರೆ ಹಾಗಲ್ಲ; ನಾನು ಮನುಷ್ಯಲೋಕವನ್ನು ಎದುರಿಸಲು ಮಾನಸಿಕವಾಗಿ ಸನ್ನದ್ಧನಾಗಲಿಕ್ಕೆ ಸಮಯವಿದೆ. ಹಾಗಂದುಕೊಂಡು, ಬಟ್ಟೆ ಧರಿಸಿ ಕನ್ನಡಿ ಮುಂದೆ ನಿಂತೆ. ಜಗತ್ತಿನ ಪೆಕರರ ಸಂಘದ ಅಧ್ಯಕ್ಷನೇ ನಾನಿರಬೇಕು ಅನ್ನಿಸಿತು. ಸಾವರಿಸಿಕೊಂಡೆ. ಸಮಾಧಾನ ಮಾಡಿಕೊಂಡೆ. ಒಂದಲ್ಲಾ ಒಂದು ದಿನ ಮೀಸೆ ತೆಗೆದು ನೋಡಬೇಕು ಅಂದುಕೊಂಡಿದ್ದ ನನ್ನ ಯೋಜನೆಯಂತೂ ಈಡೇರಿದೆ, ಇನ್ನು ಯಾರು ಏನೇ ಅಂದರೂ ಶಾಂತಚಿತ್ತದಿಂದ ಸ್ವೀಕರಿಸಬೇಕು ಅಂತ ತೀರ್ಮಾನಿಸಿದೆ. ನನಗೆ ನಾನೇ ‘ಬಾಲಿವುಡ್ ಹೀರೋ ಹಾಗೆ ಕಾಣ್ತಿದೀಯಾ ಬಿಡು’ ಅಂತ ಬೆನ್ತಟ್ಟಿಕೊಂಡೆ.ದಿನವೂ ಹೋಗುವ ಹೋಟೆಲ್ಲಿಗೆ ಹೋಗಲು ಭಯವಾಗಿ ಹೊಸ ಹೋಟೆಲ್ಲಿಗೆ ಹೋದೆ. ಆದರೂ ಕ್ಯಾಶಿಯರ್ರಿನಿಂದ ಹಿಡಿದು ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಅನ್ನಿಸಿತು. ಆವತ್ತು ಯಾವ ಗೆಳೆಯರನ್ನೂ ಕಾಣಲು ಹೋಗಲಿಲ್ಲ. ಮರುದಿನ ಆಫೀಸಿಗೆ ಹಿಂಜರಿಯುತ್ತಲೇ ಹೋದೆ. ಕಲೀಗುಗಳ ಹೋ ನಗು. "ಗರ್ಲ್ ಫ್ರೆಂಡ್ ಚುಚ್ಚುತ್ತೆ ಅಂದ್ಲೇನ್ರೀ?"ಯಿಂದ "ಯಕ್ಷಗಾನದಲ್ಲಿ ಸ್ತ್ರೀಪಾತ್ರ ಮಾಡೋಕೆ ಹೋಗಿದ್ಯಾ?" ತನಕ ಪ್ರತಿಕ್ರಿಯೆಗಳು, ಹೀಯಾಳಿಕೆಗಳು, ಕಾಲೆಳೆಯುವಿಕೆಗಳು. ಅಷ್ಟು ದಿನ ಒಂದೂ ಮಾತಾಡದ ಕಲೀಗೊಬ್ಬಳು "ಐ ಲೈಕ್ ಗಯ್ಸ್ ವಿಥ್ ಮಸ್ಟಾಕ್" ಎಂದುಬಿಟ್ಟಳು. ಆದರೂ ‘ನೆನಪಿಗಿರಲಿ’ ಅಂತ ಒಂದೆರಡು ಫೋಟೋ ನಾನೇ ತೆಗೆದುಕೊಂಡೆ. ಧೈರ್ಯ ಮಾಡಿ ಆರ್ಕುಟ್ಟಿಗೂ ಹಾಕಿದೆ. ಕೆಲವರು ‘ಹಾರಿಬಲ್’ ಅಂದರು, ಕೆಲವರು ‘ಮದುವೆ ಯಾವಾಗ?’ ಕೇಳಿದರು, ಇನ್ನು ಕೆಲವರು ‘ಕೆಟ್ಟದಾಗಿ ಕಾಣ್ತೀಯ. ತಕ್ಷಣ ಛೇಂಜ್ ಮಾಡ್ದಿದ್ರೆ ಒದೆ ತಿಂತೀಯ’ ಅಂತ ಬೆದರಿಕೆ ಹಾಕಿದರು. ರೂಮ್‌ಮೇಟು ತಾನಿಲ್ಲದಾಗ ಇಂತಹ ಅಚಾತುರ್ಯವೊಂದು ಘಟಿಸಿದುದಕ್ಕಾಗಿ ವಿಷಾದ ವ್ಯಕ್ತಪಡಿಸಿದ. ಮೊನ್ನೆ ಮೇಫ್ಲವರಿಗೆ ಹೋಗಿದ್ದಾಗ ಮೋಹನ್ ಸರ್ ಕೈಕುಲುಕಿ ‘ಬೇಗ ಮೀಸೆ ಬರ್ಲಿ’ ಅಂತ ಹಾರೈಸಿಬಿಟ್ಟರು!ಕಳೆದುಕೊಂಡಾಗಲೇ ಇದ್ದುದರ ನಿಜವಾದ ಬೆಲೆ ಗೊತ್ತಾಗೋದು ಅಂತಾರೆ.. ನನ್ನ ಮೀಸೆ, ಅದು ಇಲ್ಲವಾದಮೇಲೆ ಅದಕ್ಕೆ ಭಾರೀ ಡಿಮಾಂಡ್ ಶುರುವಾಗಿದೆ. ಆದಷ್ಟೂ ಬೇಗ ಬೆಳೆಯಲಪ್ಪಾ ಅಂತ ನಂಬದ ದೇವರಲ್ಲೆಲ್ಲಾ ಪ್ರಾರ್ಥಿಸುತ್ತಿದ್ದೇನೆ. ಮೊರೆ ಕೇಳಿದೆಯಿರಬೇಕು, ಈಗ ಈ ಮಾನಿಟರ್ ಆಫ್ ಮಾಡಿದರೆ ಕಾಣುವ ನನ್ನ ಬಿಳೀ ಮೋರೆಯ ಅಸ್ಪಷ್ಟ ಪ್ರತಿಬಿಂಬದಲ್ಲಿ, ಸಣ್ಣ ಸಣ್ಣ ಕಪ್ಪುಚುಕ್ಕಿಗಳು ಒತ್ತೊತ್ತಾಗಿ ಮೂಡಿರುವುದು ಗೋಚರಿಸುತ್ತಿದೆ. ರಾತ್ರಿಯ ಆಕಾಶವನ್ನು ‘ಇನ್ವರ್ಟ್ ಕಲರ್ಸ್’ ಮಾಡಿದ ಹಾಗೆ.

ಮಗುವಿನ ನಗು ...


ನಿನ್ನೆ ಕಳೆದ ತಿಂಗಳು ಸಂಜೆ ಹೀಗೇ.ರಜಾದಿನವಾದ್ದರಿಂದ ರೂಮಿನಲ್ಲೇ ಇದ್ದೆ. ಕವಿತೆಯೊಂದು ಕೈಕೊಟ್ಟು ಕೂತಿತ್ತು. ಮೊದಲೆರಡು ಸಾಲುಗಳನ್ನೇನೋ ಸರಾಗವಾಗಿ ಬರೆದಿಟ್ಟಿದ್ದೆ. ಆದರೆ ಮುಂದಿನ ಸಾಲುಗಳು ಮಾತ್ರ ಅದೇನೇ ಕಸರತ್ತು ಮಾಡಿದರೂ ಮೂಡಿಬರದೇ ನನ್ನನ್ನು ಚಡಪಡಿಸುವಂತೆ ಮಾಡಿದ್ದವು. ಏನು ಬರೆಯಬೇಕೂಂತ ಗೊತ್ತು; ಆದರೆ ಅವು ಶಬ್ದಗಳಾಗಿ ಪಡಿಮೂಡುತ್ತಿರಲಿಲ್ಲ. ವಿಪರೀತ ಟೆನ್ಶನ್ನಿಗೆ ಒಳಗಾಗಿ, ತಲೆಬಿಸಿಯಾಗಿ, ರೂಮಿನಿಂದ ಹೊರಬಂದೆ.ಟೆರೇಸು ಆಕಾಶಕ್ಕೆ ಮುಖ ಮಾಡಿ ನಕ್ಷತ್ರಗಳಿಗಾಗಿ ಕಾಯುತ್ತಿದ್ದಂತಿತ್ತು. ಸುಮ್ಮನೇ ಅದರ ಮೇಲೆ ಓಡಾಡಿದೆ. ನನ್ನ ಟೆನ್ಶನ್ನನ್ನು ಕಡಿಮೆ ಮಾಡುವಲ್ಲಿ ಆ ಟೆರೇಸಾಗಲೀ, ಆಗಸದ ಕೆಂಬಣ್ಣವಾಗಲೀ, ಆಗ ತಾನೇ ಹೊತ್ತಿಕೊಳ್ಳುತ್ತಿದ್ದ ಬೆಂಗಳೂರಿನ ಬೀದಿದೀಪಗಳಾಗಲೀ, ಪಕ್ಕದ ದೇವಸ್ಥಾನದ ಗಂಟೆಯ ನಿನಾದವಾಗಲೀ ಸಫಲವಾಗುವಂತೆ ಕಾಣಲಿಲ್ಲ. ಅಷ್ಟರಲ್ಲಿ ಪಕ್ಕದ ಮನೆಯ ಸ್ಟೇರ್‌ಕೇಸಿನಲ್ಲಿ ಬೀದಿನಾಯಿಯೊಂದು ಹತ್ತಿ ಬರುತ್ತಿರುವುದು ಕಾಣಿಸಿತು. ದುಡುದುಡನೆ ಹತ್ತುತ್ತಾ ಟೆರೇಸಿಗೆ ಬಂತು ನಾಯಿ. ನನಗೇಕೋ ಆ ನಾಯಿಯೂ ಟೆನ್ಶನ್ನಿನ್ನಲ್ಲಿರುವಂತೆ ಕಂಡಿತು. ಕೇಳಿದೆ ಅದರ ಬಳಿ: "ಏನಯ್ಯಾ, ಟೆನ್ಶನ್ನಿನಲ್ಲಿದ್ದಂಗಿದೆ?" ಅಂತ. ಅದಕ್ಕೆ ನಾಯಿ, "ಹೂಂ ಕಣಣ್ಣ, ದೊಡ್ಡ ತಲೆಬಿಸಿ ಆಗ್‍ಹೋಗಿದೆ. ಅದೆಲ್ಲೋ ವಿಜಯನಗರದಲ್ಲಿ ನಮ್ಮ ಕುಲಬಾಂಧವರು ಯಾವನೋ ಒಬ್ಬ ಮನುಷ್ಯನಿಗೆ ಕಚ್ಚಿ ಅವನು ಸತ್ತೇ ಹೋದನಂತಲ್ಲಾ? ಅವತ್ತಿಂದ ಈ ಮನುಷ್ಯರೆಲ್ಲರೂ ನಮ್ಮ ಮೇಲೆ ಕೆಂಡ ಕಾರಲಿಕ್ಕೆ ಶುರು ಮಾಡಿದಾರೆ. ಕಾರ್ಪೋರೇಶನ್ನಿನವರು ನಮ್ಮನ್ನೆಲ್ಲಾ ಕಿಡ್ನಾಪ್ ಮಾಡಲಿಕ್ಕೆ ಪ್ಲಾನ್ ಮಾಡಿದಾರಂತೆ. ಲಾರಿಯಲ್ಲಿ ಹೇರ್ಕೊಂಡು ಹೋಗ್ತಾರಂತೆ. ನಂಗಂತೂ ಅದೇ ಟೆನ್ಶನ್ನು. ಯಾವ ಲಾರಿ ಕಂಡರೂ ಯಮರಾಯನ ಮುಖದರ್ಶನ ಮಾಡಿದಂಗೆ ಆಗೊತ್ತೆ. ಈಗ್ಲೂ ಹಾಗೇ: ಯಾವುದೋ ಲಾರಿ ದೂರದಲ್ಲಿ ಬರ್ತಿರೋದು ಕಾಣಿಸ್ತು; ತಕ್ಷಣ ಓಡಿ ಟೆರೇಸಿಗೆ ಬಂದ್ಬಿಟ್ಟೆ!" ಅಂತು. ಮನುಷ್ಯನಿಗಷ್ಟೇ ಅಲ್ಲ, ನಾಯಿಗಳಿಗೂ ಇರೊತ್ತೆ ಟೆನ್ಷನ್ನು ಅನ್ನುವ ಹೊಸ ಜ್ಞಾನೋದಯದೊಂದಿಗೆ ನಗುತ್ತಾ ರೂಮಿನೊಳಬಂದೆ.ಮತ್ತೆ ಬರೆಯಲು ಕುಳಿತೆ. ಆದರೆ ಅಕ್ಷರಗಳೇಕೋ ನನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದವು ಅನ್ನಿಸೊತ್ತೆ. ಏನಂದರೂ ಕವಿತೆ ಮುಂದುವರಿಯುವ ಲಕ್ಷಣ ಕಾಣಲಿಲ್ಲ. ಮತ್ತೇನು ಮಾಡುವುದು ಎಂದು ಯೋಚಿಸಿದೆ. ನನ್ನ ನೆಂಟರೊಬ್ಬರ ಮನೆಗೆ ಹೋಗದೇ ಬಹಳ ದಿನಗಳಾದವು ಎಂದು ನೆನಪಾಯಿತು. ಅವರಿಗೆ ಒಂದು ಗಂಡು ಮಗು ಹುಟ್ಟಿದ್ದ ಸುದ್ದಿ ನನಗೆ ತಿಳಿದಿದ್ದುದೇ ಆಗಿತ್ತು. ಫೋನ್ ಮಾಡಿ ವಿಶ್ ಮಾಡಿದ್ದೆ. ಪಾಪುವನ್ನು ನೋಡಲು ಬರುವುದಾಗಿ ಹೇಳಿದ್ದೆನಾದರೂ, ಹಾಗೆ ಹೇಳಿ ಈಗ ಆರು ತಿಂಗಳಿಗೆ ಬಂದಿದ್ದರೂ ಇನ್ನೂ ನನಗೆ ಹೋಗಲಿಕ್ಕೆ ಆಗಿರಲಿಲ್ಲ. ಮೊದಲು ನನಗೆ ರಜೆ ಇದ್ದಾಗ ನನ್ನ ಆತ್ಮೀಯ ಸ್ನೇಹಿತ ರವಿ ಮನೆಗೆ ಹೋಗುತ್ತಾ ಇದ್ದೆ .ಆದರೆ ಈಗ ಅವನ ಹತ್ತಿರ ಹೋಗುವದನ್ನು ನಿಲ್ಲಿಸಿದ್ದೇನೆ .ರವಿಗೆ ಮಕ್ಕಳು ಅಂದ್ರೆ ಪಂಚ ಪ್ರಾಣ ಅವನು ಮಕ್ಕಳಿಗಾಗಿ ತಂದ ಚಾಕೊಲೇಟ ನಾನೆ ತಿಂದು ಹಾಕುತ್ತ ಇದ್ದೆ .ನಾವಿಬ್ಬರು ಈಗ ದೂರ ಆಗಿದ್ದೇವೆ ಆದರು ಅವನನ್ನು ನೆನಸದೆ ದಿನಗಳಿಲ್ಲ ......ಪ್ರಿನ್ಸ್ ಮತ್ತು ರಶ್ಮಿ ಮಂಗಳೂರ್ ಗೆ ಹೋಗಿರುವದರಿಂದ ನಾನು ಬೆಂಗಳೂರ್ ನಲ್ಲಿ ನಾನು ಒಬ್ಬನೇ ವಾಸ ಮಾಡುತ್ತ ಇದ್ದೇನೆ .ಬಿಡಿ ಆ ವಿಚಾರ .....ಹೀಗೆ ಸಡನ್ನಾಗಿ ನಮ್ಮ ಸಂಭಂದಿಕರ್ ನೆನಪಾದ್ದರಿಂದ, ಬೇರೆ ಏನೂ ಕೆಲಸವೂ ಇಲ್ಲದ್ದರಿಂದ, ಅಲ್ಲಿಗೇ ಹೋಗೋಣವೆಂದು ತೀರ್ಮಾನಿಸಿದೆ. ಫೋನಾಯಿಸಿ ವಿಚಾರಿಸಿದಾಗ ಅವರು ಮನೆಯಲ್ಲೇ ಇರುವುದು ತಿಳಿಯಿತು. ರಾತ್ರಿ ಊಟಕ್ಕೆ ಬರುತ್ತಿರುವುದಾಗಿ ತಿಳಿಸಿದೆ.ಪ್ಯಾಂಟೇರಿಸಿ, ಕೆಳಗಿಳಿದು ಬಂದು, ನೆಂಟರ ಮನೆ ಕಡೆ ಹೋಗುವ ಬಸ್ಸು ಹತ್ತಿದೆ. ಬಸ್ಸಿನಲ್ಲಿ ಹಿಂದಿನ, ಗಂಡಸರ ಸೀಟುಗಳ್ಯಾವೂ ಖಾಲಿಯಿರಲಿಲ್ಲ. ಮುಂದಿನ, ಹೆಂಗಸರ ಸೀಟುಗಳಲ್ಲಿ ಒಂದೆರಡು ಸೀಟುಗಳು ಖಾಲಿಯಿದ್ದವು. ಸರಿ, ಮುಂದೆ ಯಾರಾದರೂ ಹೆಂಗಸರು ಹತ್ತಿದರೆ ಬಿಟ್ಟುಕೊಟ್ಟರಾಯಿತು ಅಂದುಕೊಂಡು ಅವುಗಳಲ್ಲೇ ಒಂದರಲ್ಲಿ ಆಸೀನನಾದೆ. ಕೂತದ್ದೇ ತಪ್ಪಾಗಿಹೋಯಿತು: ಮತ್ತೆ ಟೆನ್ಶನ್ ಶುರುವಾಯಿತು! ಸ್ಟಾಪ್ ಬಂದಾಗಲೆಲ್ಲಾ ಯಾರಾದರೂ ಹೆಂಗಸರು ಹತ್ತಿಬಿಡುತ್ತಾರೇನೋ, ಸೀಟ್ ಬಿಟ್ಟುಕೊಡಬೇಕಾಗುತ್ತದೇನೋ ಎಂದು ಚಡಪಡಿಸತೊಡಗಿದೆ. ಪ್ರತಿ ಸ್ಟಾಪಿನಲ್ಲಿ ಬಸ್ಸು ನಿಂತಾಗಲೂ ನಾನು ಕೂತಲ್ಲೇ ಬಗ್ಗಿ, ತಲೆ ಎತ್ತಿ, ಮಿಸುಕಾಡಿ, ಬಾಗಿಲ ಕಡೆ ನೋಡುವುದಾಯಿತು. ಸಾಯಲಿ, ಈ ಟೆನ್ಶನ್ನೇ ಬೇಡ, ಶಿಸ್ತಾಗಿ ಎದ್ದುನಿಂತುಬಿಡೋಣ ಅನ್ನಿಸಿತಾದರೂ ಹಿಂದಿನ ಸೀಟಿನವರು ಏನೆಂದುಕೊಂಡಾರೆಂದು ಭಾವಿಸಿ ಮತ್ತೆ ಸೀಟಿಗೊರಗಿದೆ. ಅಂತೂ ಮುಂದಿನ ಸ್ಟಾಪಿನಲ್ಲಿ ಐದಾರು ಮಹಿಳೆಯರು ಬಸ್ಸು ಹತ್ತಿ ನನ್ನ ಸೀಟಿಗೆ ಸಂಚಕಾರ ತಂದರು. ಅವರಿಗೆ ಸೀಟು ಬಿಟ್ಟುಕೊಟ್ಟು ನಾನು ಟೆನ್ಶನ್ನಿನಿಂದ ಅಷ್ಟರ ಮಟ್ಟಿಗೆ ಹೊರಬಂದೆನಾದರೂ, ಸೀಟು ಬಿಟ್ಟುಕೊಡುವಾಗ ಮಾತ್ರ ಒಬ್ಬ ರಾಜಕಾರಣಿಗೆ ಎಷ್ಟು ಬೇಸರ, ಅಪಮಾನಗಳು ಆಗಬಹುದೋ ಅವೆಲ್ಲವನ್ನೂ ನಾನು ಅನುಭವಿಸಿದ್ದೆ. ನಾನು ಎದ್ದು ನಿಂತು ಅವರಿಗೆ ಸೀಟು ಬಿಟ್ಟುಕೊಟ್ಟದ್ದೇ ನನ್ನ ಹಿಂದಿನ ಸೀಟಿನವರ ಮುಖಗಳನ್ನು ನೋಡದಾದೆ. ಅವರೆಲ್ಲಾ ನನ್ನನ್ನು ಅಪಹಾಸ್ಯದ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ನನಗೆ ಭಾಸವಾಗಲಾರಂಭಿಸಿತು.ನೆಂಟರ ಮನೆಯ ಬೆಲ್ಲು ಒತ್ತಿ ಹೊರಗೆ ಕಾಯತೊಡಗಿದೆ. ಒಂದು ನಿಮಿಷವಾದರೂ ಬಾಗಿಲು ತೆರೆಯದಿದ್ದುದರಿಂದ ಮತ್ತೆ ಟೆನ್ಶನ್ ಶುರುವಾಯಿತು. ಮತ್ತೆರಡು ಬಾರಿ ಬೆಲ್ ಒತ್ತಿದೆ. ಸುಮಾರು ಎರಡು ನಿಮಿಷಗಳ ಬಳಿಕ ಅತ್ತಿಗೆ ಬಂದು ಬಾಗಿಲು ತೆರೆದಳು. "ಓ, ಬಾ, ಸಾರಿ, ಪಾಪೂನ ಮಲಗಿಸ್ತಾ ಇದ್ದೆ, ಅದ್ಕೇ ಲೇಟಾಯ್ತು ಡೋರ್ ಓಪನ್ ಮಾಡ್ಲಿಕ್ಕೆ. ಒಳಗೆ ಬಾ. ಎಷ್ಟು ದಿವಸ ಆಯ್ತೋ ಮಹಾನುಭಾವ ಈ ಕಡೆ ಬರದೇ...?" ಎನ್ನುತ್ತಾ ಅತ್ತಿಗೆ ನನ್ನನ್ನು ಆದರದಿಂದ ಸ್ವಾಗತಿಸಿದಳು. ಸೀದಾ ಕಿಚನ್ನಿಗೆ ಕರೆದೊಯ್ದಳು. ಅತ್ಮೀಯವಾಗಿ ಮಾತನಾಡುತ್ತಾ ಕಾಫಿ ಮಾಡಿಕೊಟ್ಟಳು. ಅಷ್ಟರಲ್ಲಿ ಜಗದೀಶಣ್ಣ ಕೂಡ ಬಂದ. ಅವನೊಂದಿಗೆ ಹಾಲ್‍ಗೆ ಬಂದು ಮಾತನಾಡುತ್ತಾ ಕುಳಿತೆವು. ಆಫೀಸು, ವರ್ಕ್‍ಲೋಡು, ಸ್ಯಾಲರಿ, ಟ್ರಾಫಿಕ್ಕು, ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿದ್ದು, 'ಒಂದು ಗಾಡಿ ತಗೊಳ್ಳೋ ಮರಾಯಾ', ಇಂಡಿಯಾ-ಸೌತ್ ಆಫ್ರಿಕಾ ಮ್ಯಾಚು... ಹೀಗೆ ಅವ್ಯಾಹತವಾಗಿ ಮಾತಾಡಿದೆವು. ಅತ್ತಿಗೆ ಅಡುಗೆಯಲ್ಲಿ ತೊಡಗಿದ್ದಕ್ಕೆ ಸಾಕ್ಷಿಯಾಗಿ ಕಿಚನ್ನಿನಿಂದ ಮಿಕ್ಸಿ, ತುರಿಮಣೆ, ಸೌಟುಗಳ ಸದ್ದು ಕೇಳಿಬರುತ್ತಿತ್ತು. ವಗ್ಗರಣೆಯ ಶಬ್ದದೊಂದಿಗೇ ಪರಿಮಳವೂ ತೇಲಿಬಂತು.ಅಷ್ಟೊತ್ತಿಗೆ ಮಲಗಿದ್ದ ಪಾಪುವಿಗೆ ಎಚ್ಚರವಾಗಿ ಕೋಣೆಯಿಂದ ಅಳು ಕೇಳಿಬಂತು. ಅತ್ತಿಗೆ 'ಹೂಂ ಬಂದೇ...' ಎನ್ನುತ್ತಾ ಕೋಣೆಗೆ ಹೋಗಿ ಮಗುವನ್ನು ಎತ್ತಿಕೊಂಡು ಬಂದಳು. ತಾಯಿಯ ತೋಳಿನಲ್ಲಿ ಕುಳಿತು ಮಿಕಮಿಕನೆ ನಮ್ಮನ್ನೇ ನೋಡುತ್ತಿದ್ದ ಮಗು ಮೊಲದ ಮರಿಯಂತೆ ಕಂಡಿತು. 'ಇಲ್ನೋಡು... ಇದು ಯಾರು ಗೊತ್ತಾ? ಮಾಮ.. ಮಾಮ ಇದು. ಹೋಗ್ತೀಯಾ ಮಾಮನ ಹತ್ರ?' ಅನ್ನುತ್ತಾ ಅತ್ತಿಗೆ ಪಾಪುವನ್ನು ನನ್ನ ಕೈಗೆ ವರ್ಗಾಯಿಸಿದಳು. ಆದರೆ ನನ್ನ ಕೈಗೆ ಬಂದದ್ದೇ ಪಾಪು ಅಳಲಿಕ್ಕೆ ಶುರುಮಾಡಿತು. 'ಏ.. ಸುಮ್ನಿರೂ... ಆ.. ವೂ..' ಎಂದು ಇತ್ಯಾದಿ ಏನೇನೋ ಬಡಬಡಿಸಿ ಮಗುವನ್ನು ಸುಮ್ಮನಿರಿಸಲು ನೋಡಿದೆನಾದರೂ ಅದು ಅಳುವನ್ನು ನಿಲ್ಲಿಸಲಿಲ್ಲ. ಒಂದು ಮುತ್ತು ಕೊಟ್ಟರೆ ಸಾಕು ಹಟ ನಿಲ್ಲಿಸುವ ನನ್ನ ಹುಡುಗಿ ಈ ಮಗುವಿಗಿಂತ ಸಾವಿರ ಪಾಲು ಬೆಟರು ಅನ್ನಿಸಿ ಮಗುವನ್ನು ಜಗದೀಶಣ್ಣನಿಗೆ ಒಪ್ಪಿಸಿದೆ. ಅವನು ನೆಲಕ್ಕೆ ಕುಳಿತುಕೊಂಡು, ಮಗವನ್ನು ತೊಡೆಯಮೇಲೆ ಕೂರಿಸಿಕೊಂಡು, 'ಆನೆ ಬಂತೊಂದಾನೆ' ಮಾಡತೊಡಗಿದ.ಆನೆ ಬಂತೊಂದಾನೆಯಾವೂರಾನೆ?ಸಿದ್ದಾಪುರದಾನೆಇಲ್ಲಿಗ್ಯಾಕ್ ಬಂತು?ಹಾದಿ ತಪ್ಪಿ ಬಂತುಬೀದಿ ತಪ್ಪಿ ಬಂತುನಮ್ಮನೆ ಪಾಪಚ್ಚಿ ನೋಡಕ್ ಬಂತು..!ಅಳು ನಿಲ್ಲಿಸಿ ಮಗು ಗಿಟಗಿಟನೆ ನಗಲಿಕ್ಕೆ ಶುರುಮಾಡಿತು. ಬೊಚ್ಚುಬಾಯಿ ಬಿಟ್ಟುಕೊಂಡು ನಿಷ್ಕಳಂಕವಾಗಿ ನಗುತ್ತಿದ್ದ ಈ ಮಗುವಿನ ಚೆಲುವಿಗೆ ನಾನು ಮಾರುಹೋದೆ. ಆ ನಗೆಯ ಶಬ್ದದ ಅಲೆಯಲ್ಲಿ ತೇಲಿಹೋದೆ.ನಾನೂ ಜಗದೀಶಣ್ಣನ ಪಕ್ಕ ಹೋಗಿ ಕುಳಿತುಕೊಂಡೆ. ಪಕ್ಕದಲ್ಲೇ ಮಗುವನ್ನು ಆಡಿಸಲಿಕ್ಕೆಂದು ತಂದಿದ್ದ ಗಿಲಗಿಚ್ಚಿಯೊಂದಿತ್ತು. ಅದನ್ನು ಗಿಲಗಿಲನೆ ಅಲುಗಾಡಿಸುತ್ತಾ ನಾನು ಮಗುವಿನ ಸ್ನೇಹ ಸಂಪಾದಿಸಲು ನೋಡಿದೆ. ಸ್ವಲ್ಪ ಹೊತ್ತಿನ ನಂತರ ಮಗು ನನಗೆ ಹೊಂದಿಕೊಂಡಿತು. ಅದರ ಮುದ್ದು ಗಲ್ಲವನ್ನು ಚಿವುಟಿದೆ. 'ಛೀ ಕಳ್ಳ!' ಎಂದೆ. ಮಗು ಮತ್ತೆ ಗಿಟಗಿಟನೆ ನಕ್ಕಿತು.ಯೋಚಿಸುತ್ತಿದ್ದೆ ನಾನು: ಯಾಕೆ ಹೀಗೆ ನಗುತ್ತದೆ ಮಗು? ನಾವು 'ಆನೆ ಬಂತೊಂದಾನೆ' ಮಾಡುವ ಮೊದಲು ಮಗುವಿಗೇನು ಆನೆಯನ್ನು ತೋರಿಸಿರುವುದಿಲ್ಲ. 'ಛೀ ಕಳ್ಳ' ಎನ್ನುವಾಗ ಕಳ್ಳ ಎಂದರೆ ಯಾರು ಎಂಬುದೇ ಗೊತ್ತಿರುವುದಿಲ್ಲ ಮಗುವಿಗೆ. ಆದರೂ ನಗುತ್ತದೆ. ಯಾಕೆ?ಮಗುವಿನ ಕೈಗೆ ಗಿಲಗಿಚ್ಚಿಯನ್ನು ಕೊಟ್ಟು ಕೇಳಿದೆ ನಾನು: "ನಾವು 'ಆನೆ ಬಂತೊಂದಾನೆ' ಎನ್ನುತ್ತಾ ಬಾಗಿದರೆ-ತೂಗಿದರೆ, ಅಥವಾ 'ಛೀ ಕಳ್ಳ!' ಎಂದು ಗೋಣು ಕೊಡವಿದರೆ ನಿನಗೆ ಏನು ಕಾಣಿಸುತ್ತದೆ ಮಗುವೇ? ಅದರಲ್ಲಿ ಅಷ್ಟೆಲ್ಲಾ ನಗುವಂತದ್ದು ಏನಿದೆ? ನಾವೆಲ್ಲಾ ಚಿತ್ರಗಳೇ ನಿನ್ನ ಪಾಲಿಗೆ?"ಕೈಯಲ್ಲಿ ಹಿಡಿದಿದ್ದ ಗಿಲಗಿಚ್ಚಿಯಿಂದ ಕಿಂಕಿಣಿ ನಾದ ಹೊಮ್ಮಿಸುತ್ತಾ ಹೇಳಿತು ಮಗು, "ಎಲ್ಲದಕ್ಕೂ ಕಾರಣ ಕೇಳಬೇಡವೋ ದಡ್ಡ ಮಾಮ! ಕಾರಣಗಳನ್ನೆಲ್ಲಾ ನೀನಿಟ್ಟುಕೋ. ಬೇಕಾದರೆ ಮತ್ತಷ್ಟು ಟೆನ್ಶನ್ ಮಾಡಿಕೋ. ಆನೆ ಎಂದರೆ ಏನು ಅಂತ ನನಗೆ ಬೇಕಿಲ್ಲ. ಆನೆ ಹೇಗಿರುತ್ತದೋ ನನಗೆ ಗೊತ್ತಿಲ್ಲ. ಆದರೂ ನಗಲಿಕ್ಕೇನು! ಕಳ್ಳ ಎಂದರೆ ಯಾರಾದರೂ ಆಗಿರಲಿ. ಅವನು ಬೇಕಾದರೆ ನಿನ್ನ ನಗೆಯನ್ನು ಕೊಳ್ಳೆ ಹೊಡೆದವನೇ ಆಗಿರಲಿ. ಆದರೆ ಆತ ನನ್ನ ನಗೆಯನ್ನು ಕಸಿಯಲಾರ. ನಾನು ಸುಮ್ಮನೇ ನಗುತ್ತೇನೆ! ನಿನಗೆ ಹೀಗೆ ನಗಲಿಕ್ಕಾಗುತ್ತದಾ? 'ಆನೆ ಬಂತೊಂದಾನೆ' ಮಾಡಿದರೂ ನೀನು ನಗುವಂತಿಲ್ಲ; 'ಛೀ ಕಳ್ಳ' ಎಂದರೂ ನಗುವಂತಿಲ್ಲ. ಆನೆ ಬಂದರೂ ಕಳ್ಳ ಬಂದರೂ ಹೆದರಿಕೊಂಡು ಓಡಿಹೋಗುತ್ತೀ ನೀನು! ದಿನವಿಡೀ 'ಟೆನ್ಶನ್ ಟೆನ್ಶನ್' ಎನ್ನುತ್ತಾ ಓಡಾಡುವ ನೀನು ನಗುವಿಗೂ ಕಾರಣ ಕೇಳುತ್ತೀಯ, ಅಳುವಿಗೂ ಕಾರಣ ಕೇಳುತ್ತೀಯ, ಪ್ರೀತಿಗೂ ಕಾರಣ ಕೇಳುತ್ತೀಯ... ಏಯ್ ಸುಮ್ನಿರೋ ದಡ್ಡ ಮಾಮ!" ಅಷ್ಟಂದು ಮತ್ತೆ ನಗಲಾರಂಭಿಸಿತು. ನಾನು ತಿರುಗಿ ಮಾತಾಡಲು ಏನೂ ತೋಚದೇ ಸುಮ್ಮನೆ ಮಗುವಿನ ಮುಖವನ್ನೇ ನೋಡುತ್ತಿದ್ದೆ.ಅತ್ತಿಗೆ ಊಟಕ್ಕೆ ಕರೆಯುವವರೆಗೂ ನಾನು ಮಗುವನ್ನು ಆಡಿಸುತ್ತಲೇ ಇದ್ದೆ. ಊಹೂಂ, ಹಾಗನ್ನುವುದಕ್ಕಿಂತ 'ನಾನೇ ಮಗುವಾಗಿದ್ದೆ ಮಗುವಿನ ಜೊತೆ' ಎಂದರೆ ಹೆಚ್ಚು ಸರಿಯಾಗುತ್ತದೆ. ಒಳ್ಳೆಯದೊಂದು ಊಟ ಮಾಡಿ, ಸಾದಾ ಕವಳ ಹಾಕಿ ನಾನು ನೆಂಟರ ಮನೆಯಿಂದ ಹೊರಟೆ. ಅಷ್ಟೊತ್ತಿಗಾಗಲೇ ಮಗು ತೊಟ್ಟಿಲಿನ ಮೆತ್ತೆಯಲ್ಲಿ ಬೆಚ್ಚಗೆ ನಿದ್ದೆ ಹೋಗಿತ್ತು.ರೂಮಿಗೆ ಮರಳುವ ಹಾದಿಯಲ್ಲಿ ಹೊಸದೇ ಆದ ಉಲ್ಲಾಸವೊಂದು ನನ್ನಲ್ಲಿ ತುಂಬಿಕೊಂಡಿರುವ ಭಾವವನ್ನು ಅನುಭವಿಸಿದೆ. ಅರ್ಧ ಬರೆದಿಟ್ಟು ಬಂದಿದ್ದ ಕವಿತೆಯ ಮುಂದಿನ ಸಾಲುಗಳು ಅದಾಗಲೇ ಕಣ್ಣ ಮುಂದೆ ನಿಲ್ಲತೊಡಗಿದ್ದವು. ಆ ಸಾಲುಗಳ ಹಿಂದೆ ಅದೇ ಮಗುವಿನ ಬೊಚ್ಚು ಬಾಯಿಯ ನಗುವಿನ ಚಿತ್ರ ಅಚ್ಚೊತ್ತಿತ್ತು.

ಪ್ರೇಮ ಪತ್ರ ........


ಬೊಗಸೆ ಕಣ್ಗಳ ಹುಡುಗೀ,ನಿನಗೆ ಸಾವಿರ ಸಿಹಿಮುತ್ತುಗಳು.ಇಲ್ಲೊಂದು ಸುಂದರ ಸಂಜೆ. ಇವತ್ತು ಥೈಲ್ಯಾಂಡ್ ಗೆ ಬಂದ್. ಬೆಳಗ್ಗೆಯಿಂದ ಮುಚ್ಚಿದ್ದ ಅಂಗಡಿಗಳು ಇದೀಗ ತಾನೆ ಕಣ್ಣು ಬಿಡುತ್ತಿವೆ.. ಹೋಟೆಲುಗಳ ಸ್ಟೋವ್ ಹೊತ್ತಿಕೊಳ್ಳುತ್ತಿವೆ.. ಸಿಗ್ನಲ್ ದೀಪಗಳು ತಮ್ಮ ಬಣ್ಣಗಳನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿವೆ.. ಯೋಚಿಸುತ್ತಿದ್ದೆ ನಾನು: ಹೀಗೆ ನಾನು ನಿನ್ನನ್ನು ನೆನಪಿಸಿಕೊಳ್ಳುವ ಪ್ರಸಂಗ ಬರದೇ ಎಷ್ಟು ದಿನಗಳಾದವು..? ಯಾಕೆಂದರೆ ನಾನು ನಿನ್ನನ್ನು ಮರೆತಿದ್ದೇ ಇಲ್ಲ! ನನ್ನ ಹೃದಯದ ಬೀದಿಗಳಲ್ಲಿ ನಿನ್ನ ಸವಿನೆನಪುಗಳ ಅಂಗಡಿಗಳು ಯಾವಾಗ ಮುಚ್ಚಿದ್ದವು ಹೇಳು? ನೀನು ಹಚ್ಚಿಟ್ಟು ಹೋದ ಪ್ರೀತಿಯ ಹಣತೆ ಎಂದು ಆರಿತ್ತು ಹೇಳು? ಆದರೂ ನಿನಗೆ ಹುಸಿಕೋಪ. ಪತ್ರ ಬರೆಯದೇ ಎಷ್ಟು ದಿನಗಳಾದವು ಎಂದಾ? ಹೌದು ಕಣೆ, ಟೈಮೇ ಸಿಗಲಿಲ್ಲ. ನಿನ್ನ ಬಳಿ ಹೇಳಿಕೊಳ್ಳಲು ಸಾಕಷ್ಟು ವಿಷಯಗಳಿವೆ ಎಂಬುದಂತೂ ನಿಜ.ಕಳೆದ ತಿಂಗಳು ಭಾನುವಾರ ಒಂದು ಟೂರ್ ಹೋಗಿದ್ದೆ. 'ಹವ್ಯಕ-ಸಾಗರ' ಮತ್ತು 'ಆರ್ಕುಟ್-ಹವ್ಯಕ' ಬಳಗಗಳು ಸಂಯೋಜಿಸಿದ್ದ ಪ್ರವಾಸ. ಬಲಮುರಿ ಜಲಪಾತ ಮತ್ತು ರಂಗನತಿಟ್ಟು ಪಕ್ಷಿಧಾಮಗಳಿಗೆ ಹೋಗಿದ್ದೆವು. ಪೂರ್ತಿ ನೂರಾ ಮೂವತ್ತು ಜನ! ಮೂರು ಬಸ್‍ಗಳಲ್ಲಿ ಹೋಗಿದ್ದು. ಸುಮಾರು ಮೂವತ್ತು ಹುಡುಗಿಯರೂ ಬಂದಿದ್ದರು. (ಅವರ ಬಗ್ಗೆ ಬರೆಯುವುದಿಲ್ಲ ನಾನು; ಯಾಕೆಂದರೆ ನೀನು ಕೋಪಿಸಿಕೊಳ್ಳುತ್ತೀ!) ಪ್ರವಾಸ ತುಂಬಾ ಚೆನ್ನಾಗಿತ್ತು. ಬಸ್ಸಿನಲ್ಲಿ ವಿಪರೀತ ಗಲಾಟೆಯಿತ್ತು. ಹಾಡುಗಳು, ಅಂತ್ಯಾಕ್ಷರಿ, ಯಾವ್ಯಾವುದೋ ಆಟಗಳು... ಓಹ್! ಫುಲ್ ಮಸ್ತ್! ಬಲಮುರಿಯಲ್ಲಿ ಬೀಳುತ್ತಿದ್ದ ನೀರಿನಲ್ಲಿ ನಿನ್ನದೇ ಲಹರಿಯಿತ್ತು.ಜುಳುಜುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ:ನಿನ್ನದೇ ತಕತೈ ಕಂಡಿತು.. ತಕದಿಮಿ ಹೆಚ್ಚಿತು..

ಬಹಳ ಹೊತ್ತು ನೀರಿನಲ್ಲಿ ಆಟವಾಡಿ ನಾವು ರಂಗನತಿಟ್ಟಿಗೆ ಬಂದೆವು. ಅದೆಷ್ಟೊಂದು ಬಿಳಿ ಬಿಳಿ ಹಕ್ಕಿಗಳು ಅಲ್ಲಿ... ಹತ್ತು-ಹನ್ನೆರಡು ಜನ ಒಂದು ದೋಣಿಯಲ್ಲಿ ಕುಳಿತು ಕೊಳದಲ್ಲಿ ತೇಲುತ್ತಾ ಪಕ್ಷಿಗಳನ್ನು ನೋಡುವುದು. ಎಲ್ಲೆಲ್ಲಿಂದಲೋ ಬಂದ ಹಕ್ಕಿಗಳು. ದೋಣಿಯವ ಹೇಳುತ್ತಿದ್ದ: "ಇವು ಸ್ನಿಕ್ಕರ್ ಅಂತ. ಗ್ರೀಸ್ ದೇಶದಿಂದ ಬಂದವು.." "ಇವು ಫೆದರ್‌ಸ್ಟೋನ್ ಅಂತ, ಮಲೇಷಿಯಾದಿಂದ ಬರ್ತಾವೆ.." ಯಾವುದೋ ದೇಶದಿಂದ ಇಲ್ಲಿಗೆ ಬಂದು, ಮರದ ಎಲೆಗಳ ಮರೆಯಲ್ಲಿ ಗೂಡು ಕಟ್ಟಿಕೊಂಡು, ಮೊಟ್ಟೆ ಇಟ್ಟು ಮರಿ ಮಾಡಿ, ಮರಿಹಕ್ಕಿಯ ರೆಕ್ಕೆ ಬಲಿಯುತ್ತಿದ್ದಂತೆಯೇ ಮತ್ತೆ ಹಾರಿಹೋಗುತ್ತವಂತೆ. ಹಕ್ಕಿಗಳನ್ನು ನೋಡುತ್ತಾ ಅಲೆಗಳ ಮೇಲೆ ತೇಲುತ್ತಾ ನಾನು ಮೈಮರೆತಿದ್ದೆ. ಯಾವುದೋ ಹಕ್ಕಿ ಮರಿಗೆ ಗುಟುಕು ನೀಡುತ್ತಿತ್ತು.. ಮತ್ಯಾವುದೋ ಹಕ್ಕಿ ತನ್ನ ಸಂಗಾತಿಗೆ ಗುಟ್ಟು ಹೇಳುತ್ತಿತ್ತು..ದೂರ ನಾಡಿನ ಹಕ್ಕಿಹಾರಿ ಬಾ ಗೂಡಿಗೆ..ಗೂಡು ತೂಗ್ಯಾವ ಗಾಳೀಗೆ..ಸುವ್ವಿ ಸುವ್ವಾಲೆ ಸುವ್ವಿ..ಪಯಣದುದ್ದಕ್ಕೂ ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ.ಮೊನ್ನೆ ಶುಕ್ರವಾರ ಏರ್‌ಶೋ ನೋಡಲಿಕ್ಕೆ ಹೋಗಿದ್ದೆ: ಆಫೀಸಿಗೆ ರಜೆ ಹಾಕಿ. ಇವೂ ಹಕ್ಕಿಗಳು. ಲೋಹದ ಹಕ್ಕಿಗಳು. ಮೊಟ್ಟೆ ಇಡದ ಹಕ್ಕಿಗಳು. ಇವೂ ಆಗಸದಲ್ಲಿ ತನ್ಮಯತೆಯಿಂದ ಹಾರಾಡುತ್ತವೆ. ಪಲ್ಟಿ ಹೊಡೆಯುತ್ತವೆ. ನಿಂತಂತೆ ತೇಲುತ್ತವೆ. ರೆಕ್ಕೆ ಅಗಲಿಸುತ್ತವೆ... ಯಾವ್ಯಾವುದೋ ದೇಶಗಳಿಂದ ಬಂದ ವಿಮಾನಗಳು, ಜೆಟ್‍ಗಳು ನಡೆಸಿದ ತರಹೇವಾರಿ ಕಸರತ್ತು ನೋಡುವಂತಿತ್ತು. ಜೆಟ್‍ಗಳ ಆರ್ಭಟವೇ ಒಂದು ತೂಕವಾದರೆ ನಮ್ಮ ಭಾರತದ 'ಸೂರ್ಯಕಿರಣ್' ಹೆಸರಿನ ಮಿನಿ ವಿಮಾನಗಳದ್ದೇ ಒಂದು ತೂಕ. ಪುಟ್ಟ ಪುಟ್ಟ ಒಂಭತ್ತು ವಿಮಾನಗಳು ಆಗಸದಲ್ಲಿ ಅದೇನೇನು ಆಟವಾಡಿದೆವು ಅನ್ನುತ್ತೀ..? ಆಗಸದಲ್ಲಿ ತ್ರಿವರ್ಣಗಳ ಓಕುಳಿ ನಿರ್ಮಿಸಿ ಅವು ಗಿಟ್ಟಿಸಿದ ಸಿಳ್ಳೆ-ಚಪ್ಪಾಳೆಗಳು ಅದೆಷ್ಟೋ? ಚುಕ್ಕಿಗಳೇ ಇಲ್ಲದೆ ಅವು ಎಳೆದ ರಂಗೋಲಿಗಳೆಷ್ಟೋ? ಕೊನೆಗೊಮ್ಮೆ, ಅವುಗಳಲ್ಲೇ ಎರಡು ವಿಮಾನಗಳು ವಿರುದ್ಧ ದಿಕ್ಕಿನಿಂದ ಹಾರಿಬಂದು ಒಂದು ದೊಡ್ಡ ಹಾರ್ಟು ಸೃಷ್ಟಿಸಿದವು. ಮತ್ತೊಂದು ವಿಮಾನ ಬಂದು ಒಂದು ಬಾಣವನ್ನೂ ಸೇರಿಸಿತು ಆ ಹೃದಯಕ್ಕೆ... ಜನರಿಂದ ವಿಮಾನದ ಸಪ್ಪಳವನ್ನೂ ಮೀರಿಸುವಂತಹ ಕರತಾಡನ. ನೀನು ಇರಬೇಕಿತ್ತು ಅನ್ನಿಸಿತು. ಆದರೆ ಆ ಬಿಸಿಲಿಗೆ ನಿನ್ನ ಮುಖ ಬಾಡಿಹೋಗುತ್ತಿತ್ತು; ಬಾರದಿದ್ದುದೇ ಒಳ್ಳೆಯದಾಯಿತು ಅನ್ನಿಸಿತು ಕೊನೆಗೆ.ನಿನ್ನೆ ರಾತ್ರಿಯಿಡೀ ಕುಳಿತು ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ 'ಆವರಣ' ಓದಿ ಮುಗಿಸಿದೆ. ಅದ್ಭುತ ಕಾದಂಬರಿ ಕಣೇ. ಕತೆ ಹೇಳಿ ನಿಂಗೆ ಬೇಜಾರ ಮಾಡೊಲ್ಲ; ನೀನೇ ಕೊಂಡು ಓದು. ಮೊದಲ ಮುದ್ರಣದ ಪ್ರತಿಗಳು ಎರಡೇ ದಿವಸಗಳಲ್ಲಿ ಖಾಲಿಯಾಗಿ ಈಗ ರಿಪ್ರಿಂಟ್ ಆಗಿ ಬಂದಿದೆ ಮತ್ತೆ. ಬೇಗ ಹೋಗಿ ಒಂದು ಕಾಪಿ ಎತ್ತಿಕೊಂಡು ಬಂದುಬಿಡು. ಓದಿಯಾದಮೇಲೆ ಹೇಳು: ಕುಳಿತು ಚರ್ಚಿಸೋಣ.ಸರಿ, ಮತ್ತೇನು ವಿಶೇಷ? 'ಏನೇನೋ ಕತೆ ಹೇಳುತ್ತಾ ಮುಖ್ಯ ವಿಷಯವನ್ನೇ ಮರೆಸುತ್ತಿದ್ದೀಯಾ' ಅನ್ನುತ್ತೀಯಾ? ಗೊತ್ತು, ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ಎಲ್ಲಿ ಎಂಬುದು ನಿನ್ನನ್ನು ಆಗಿನಿಂದಲೂ ಕಾಡುತ್ತಿರುವ ಪ್ರಶ್ನೆ. ಏನು ಕೊಡಲಿ ನಲ್ಲೆ ನಿನಗೆ...?ನನ್ನದೆಲ್ಲವನೂ ನಿನಗೆ ಕೊಟ್ಟಿರುವಾಗ ಉಳಿದಿರುವುದೇನು?ನಾನೇ ನಿನ್ನವನಾಗಿರುವಾಗ ಬೇಕಿನ್ನೇನು?ನೀನೇನು ಕೊಡುತ್ತೀ ನಂಗೆ? ಹೇ ಕಳ್ಳೀ, ನಾಚುತ್ತೀ ಏಕೆ? ಸಪ್ರೈಸಾ? ಇರಲಿ ಇರಲಿ... ರಾಗಿಗುಡ್ಡದ ಮಧ್ಯದಲ್ಲಿರುವ ಗುಲ್‍ಮೊಹರ್ ಮರ ನಮಗಾಗಿಯೇ ನೆರಳು ಹಾಯಿಸುತ್ತಾ ಕಾಯುತ್ತಿದೆಯಂತೆ. ಮಲ್ಲೇಶ್ವರಂ ಎಯ್ತ್ ಕ್ರಾಸಿನಲ್ಲಿ ಹೂಮಾರುವ ಮಹಿಳೆಯ ಬುಟ್ಟಿಯಲ್ಲಿ ನಿನಗೆಂದೇ ಅರಳಿರುವ ಕೆಂಪು ಗುಲಾಬಿ ಇದೆಯಂತೆ. ಗ್ಯಾಸ್‍ಲೈಟಿನ ಬೆಳಕಿನಲ್ಲಿ ಕಾಯುತ್ತಿರುತ್ತಾನಂತೆ ಪಾನಿಪುರಿ ಮಾಡಿಕೊಡಲು ಅಂಗಡಿಯವ... ಸಿಗುತ್ತೀ ತಾನೇ?

ಹ್ಯಾಪಿ ವ್ಯಾಲೆಂಟೈನ್ಸ್ ಡೇ...!

ಸಂತೋಷ್ .

Friday, February 12, 2010

ಕ್ರೇಜಿ ಕುಟುಂಭ ........


"ಕ್ರೇಜಿ ಕುಟುಂಬ" ಇದನ್ನು ಹೇಗೆ ಆ ಸೆನ್ಸಾರ್ ಮಂಡಳಿಯು ಮೆಚ್ಚಿಕೊಂಡಿತೋ... ಆ ದೇವ್ರೇ ಬಲ್ಲ! ಉತ್ತರ ಕರ್ನಾಟಕದ ಜನರನ್ನು ಹಿಗ್ಗಾಮುಗ್ಗಾ ನಿಂದನೆ ಮಾಡುವ ರೀತಿಯಲ್ಲಿ ಮಾಡಿರುವ ಈ ಸಿನಿಮಾವನ್ನು ಮೆಚ್ಚಿಕೊಂಡ ಸೆನ್ಸಾರ್ ಮಂಡಳಿಯಲ್ಲಿ ಯಾರೂ ಉತ್ತರ ಕರ್ನಾಟಕದವರು ಇಲ್ಲವೆಂದು ಖಂಡಿತ ಅನಿಸುತ್ತದೆ. ಖಂಡಿತವಾಗಿಯೂ ಉತ್ತರ ಕರ್ನಾಟಕದ ಜನರು ಈ ಸಿನಿಮಾವನ್ನು ಭಹಿಷ್ಕರಿಸಲೇಬೇಕು. ಉತ್ತರ ಕರ್ನಾಟಕದ ಸಭ್ಯ ಜನರನ್ನು ಮಹಾ ಕುಡುಕರು...ಇನ್ನೂ ಹೀಗೆ ಅನೇಕ ರೀತಿಯಲ್ಲಿ ಅವಹೇಳನ ಮಾಡಿರುವ ಸಿನಿಮಾ ಜನರಲ್ಲಿ ಉತ್ತರ ಕರ್ನಾಟಕದವರ ಬಗ್ಗೆ ಇರುವ ಕೀಳು ಭಾವನೆ ಏನೆನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನನಗೆ ಅಚ್ಚರಿಯಾಗಿದ್ದು ಹಿರಿಯ ನಟರಾದ ಸನ್ಮಾನ್ಯ ಶ್ರೀ ಅನಂತನಾಗ್ ಅವರು ಕೂಡ ಇಂಥದೊಂದು ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದು. ಅದೂ ಉತ್ತರ ಕರ್ನಾಟಕದ ಜನರನ್ನು ಹೀನಾಯವಾಗಿ ತೋರಿಸುವಂಥ ಪಾತ್ರವನ್ನು ಒಪ್ಪಿಕೊಂಡಿದ್ದು ಅಚ್ಚರಿ. ಉತ್ತರ ಕರ್ನಾಟಕದ ಜನರ ಸಹೃದಯತೆ ಹಾಗೂ ವಿನಯತೆಯನ್ನು ಕಣ್ಣಾರೆ ಕಂಡ ಅನಂತನಾಗ್ ಅವರು ಈ ರೀತಿಯಲ್ಲಿ ಉತ್ತರ ಕರ್ನಾಟಕದ ಜನರನ್ನು ಬಿಂಬಿಸುವ ಪಾತ್ರದಿಂದ ಆ ಭಾಗದ ಜನರ ಮನ ನೋಯಿಸಿದ್ದಾರೆ.ಸಿನಿಮಾ ನೋಡಿ ಹೊರಬಂದ ತಕ್ಷಣ ಅನಿಸುವುದು ಒಂದೇ "ಉತ್ತರ ಕರ್ನಾಟಕದ ಜನರು ಈ ಮಟ್ಟಿಗೆ ಜೋಕರುಗಳಾ?" ಎಂದು. ಬಿ.ರಾಮಮೂರ್ತಿ ಅವರು ನಿಜವಾದ ಉತ್ತರ ಕರ್ನಾಟಕವನ್ನು ನೋಡಿಯೇ ಇಲ್ಲ ಹಾಗೂ ಅಲ್ಲಿನ ಜನರ ಗುಣವನ್ನು ಅರಿತೇ ಇಲ್ಲ. ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಇಲ್ಲಿ ವ್ಯಂಗ್ಯ ಮಾಡಿದ್ದು ಖಂಡಿತವಾಗಿಯೂ ಮನ ನೋಯುವಂತೆ ಮಾಡುತ್ತದೆ. "ಯು" ಸರ್ಟಿಫಿಕೇಟ್ ನೀಡುವ ಮೂಲಕ ಕುಟುಂಬದ ಎಲ್ಲರೂ ಕುಳಿತು ನೋಡುವಂಥ ಸಿನಿಮಾ ಎಂದು ಬೆನ್ನು ತಟ್ಟಿದ್ದರೂ ಸೆನ್ಸಾರ್ ಮಂಡಳಿಯು ಈ ಚಿತ್ರದಿಂದ ಉತ್ತರ ಕರ್ನಾಟಕದ ಜನರ ಮನಸ್ಸಿಗೆ ಎಷ್ಟೊಂದು ನೋವಾಗುತ್ತದೆ ಎನ್ನುವುದನ್ನು ಒಮ್ಮೆಯಾದರೂ ಯೋಚಿಸಬೇಕಿತ್ತು. ಪ್ರತಿಯೊಂದು ಡೈಲಾಗಿನಲ್ಲಿ, ದೃಶ್ಯದಲ್ಲಿ ಹಾಗೂ ಪಾತ್ರದಲ್ಲಿ ಉತ್ತರ ಕರ್ನಾಟಕವನ್ನು "ಜೋಕರುಗಳ ನಾಡು" ಎಂದು ತೋರಿಸಲಾಗಿದೆ. ಇದು ಆ ಭಾಗದ ಜನರ ಮನಸ್ಸಿಗೆ ದೊಡ್ಡ ಹಿಂಸೆ ಮಾಡುವಂಥ "ಮಾನಸಿಕ ಹಿಂಸೆ" ಮಾಡುವ ಚಿತ್ರವಾಗಿದೆ.ಇಂಥದೊಂದು ಚಿತ್ರವನ್ನು ಉತ್ತರ ಕರ್ನಾಟಕದ ಜನರು ನೋಡಿ ನಕ್ಕು ಬಂದರೆ ಅದು ತಮಗೆ ತಾವು ಮಾಡಿಕೊಂಡ "ಆತ್ಮವಂಚನೆ", "ವಿಶ್ವಾಸ ದ್ರೋಹ", "ತಮ್ಮ ಮುಖಕ್ಕೆ ತಾವೇ ಮಸಿ ಬಳಿದುಕೊಂಡ ಕೃತ್ಯ" ಎಂದು ನಾನು ಖಂಡಿತವಾಗಿಯೂ ಹೇಳುತ್ತೇನೆ. ನಾನು ನೋಡಿದೆ; ನಾನೂ ಉತ್ತರ ಕರ್ನಾಟಕದವನು, ಆದ್ದರಿಂದ ನನಗಂತೂ ಈ ಚಿತ್ರವನ್ನು ನೋಡಿದ ನಂತರ ಬಹಳಷ್ಟು ಬೇಸರವಾಗಿದೆ. ಯಾವೊಂದು ದೃಶ್ಯಕ್ಕಾಗಿ ನನಗೆ ನಗು ಬರಲಿಲ್ಲ. ಸಿನಿಮಾ ನೋಡಿದ ನಂತರ ನನಗೆ ಅನಿಸಿದ್ದು ಒಂದೇ; ಈ ಸೆನ್ಸಾರ್ ಮಂಡಳಿಯವರು ಎಲ್ಲಿದ್ದಾರೆ; ಅವರನ್ನಾ....! ಎಂದು ಮಾತ್ರ. ನನಗೆ ಉತ್ತರ ಕರ್ನಾಟಕದ ಬೈಗುಳಗಳು ಚೆನ್ನಾಗಿ ಬರುತ್ತವೆ ಆದ್ದರಿಂದ ಅವುಗಳನ್ನು ಬಳಸಬಹುದು; ಆದರೆ ನಾವು ಉತ್ತರ ಕರ್ನಾಟಕದ ಜನರು ಬೈಗುಳ ಬಳಸುವುದು ಕೂಡ ತೀರ ಆತ್ಮೀಯತೆಯಿಂದ; ಆದ್ದರಿಂದ ಹಾಗೆ ಮಾಡಲು ಕೂಡ ಮನಸ್ಸು ಆಗುತ್ತಿಲ್ಲ!

ಬೇಕಾಗಿದ್ದಾರೆ ..............

[ಮುಂಬೈ ಮೇಲೆ ಪಾಕಿಸ್ತಾನೀ ಬೆಂಬಲಿತ ಉಗ್ರಗಾಮಿಗಳಿಂದ ದಾಳಿ ನಡೆದು ಒಂದು ವರ್ಷವಾದರೂ, ಪಾಕಿಸ್ತಾನವು ಪರಿಣಾಮಕಾರಿಯಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಆ ರೀತಿ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ಸರಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಬೊಗಳೂರಿನಲ್ಲಿ ಕಾಣಿಸಿಕೊಂಡ ಜಾಹೀರಾತಿದು]
ಮುಂಬೈ ಮೇಲೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ದಾಳಿ ನಡೆಸಿದವರು ಮತ್ತು ಅವರ ಅಪ್ಪ ಅಮ್ಮ ಎಲ್ಲರೂ ಪಾಕಿಸ್ತಾನದಲ್ಲಿದ್ದಾರೆ ಎಂಬುದು ಜಗತ್ತಿಗೇ ತಿಳಿದರೂ, ಪಾಕಿಸ್ತಾನವು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡಿಸುವ ವ್ಯಕ್ತಿಗಳು ಬೇಕಾರಾಗಿದ್ದಾರೆ.ಪಾಕಿಸ್ತಾನವು ಪ್ರತಿ ಬಾರಿಯೂ ಸಾಕ್ಷ್ಯಾಧಾರ ಕೊಡಿ, ಸಾಕ್ಷ್ಯಾಧಾರ ಕೊಡಿ ಅಂತ ಕೇಳುತ್ತಿರುವಾಗ, ಕೊಡ್ತೀವಿ ಕೊಡ್ತೀವಿ ಅನ್ನುತ್ತಲೇ ರಾಶಿ ರಾಶಿ ಕಾಗದ ಪತ್ರಗಳನ್ನು ಟ್ರಕ್‌ಗಳಲ್ಲಿ ಪಾಕಿಸ್ತಾನಕ್ಕೆ ರವಾನಿಸುವ ಸರಕಾರವನ್ನು ನಿಭಾಯಿಸುವವರು ಬೇಕಾರಾಗಿದ್ದಾರೆ.ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಉಗ್ರಗಾಮಿ ದಾಳಿಯನ್ನು ಇನ್ನಾದರೂ ಸಮರ್ಥವಾಗಿ ಎದುರಿಸುವಲ್ಲಿ ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಆಧುನೀಕರಣಗೊಳಿಸಲು ಸಮಯವಿಲ್ಲದಿರುವುದರಿಂದ, ಇನ್ನಾದರೂ ಪೊಲೀಸರಿಗೆ ಬಲ ತುಂಬುವವರು ಬೇಕಾರಾಗಿದ್ದಾರೆ.ಪಾಕಿಸ್ತಾನದೊಂದಿಗೆ ಶಾಂತಿ ಶಾಂತಿಯೇ ಮುಖ್ಯವಾಗಿರುವವರು ಮತ್ತು ಯಾವುದೇ ಕಾರಣಕ್ಕೂ ಪಾಕಿಸ್ತಾನವು ನೊಂದುಕೊಳ್ಳಬಾರದು. ಯಾಕೆಂದರೆ, ಅವರಲ್ಲಿಯೂ ಉಗ್ರಗಾಮಿಗಳ ದಾಳಿ ನಡೆಯುತ್ತಿದೆಯಲ್ಲ ಎಂಬ ಮನೋಭಾವವಿರುವವರು ದೇಶವಾಳಲು ಬೇಕಾರಾಗಿದ್ದಾರೆ.ಪಾಕಿಸ್ತಾನವನ್ನು ನಡುಗಿಸುವ, ಉಗ್ರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ವ ರೀತಿಯಲ್ಲಿಯೂ ಒತ್ತಡ ಹೇರುವ ಅವಕಾಶಗಳನ್ನೆಲ್ಲಾ ಕೈಚೆಲ್ಲಿ, ಶಾಂತಿ ಮಂತ್ರ ಪಠಿಸುತ್ತಲೇ ಇರುವವರು ಬೇಕಾಗಿದ್ದಾರೆ.ಅತ್ತ ಕಡೆಯಿಂದ ಚೀನಾ ಪಾಕಿಸ್ತಾನಕ್ಕೆ ಸಕಲ ರೀತಿಯಲ್ಲಿಯೂ ನೆರವು ನೀಡುತ್ತಾ, ಅರುಣಾಚಲ ಪ್ರದೇಶ ನನ್ನದು ಎಂದು ಹೇಳಿಕೊಳ್ಳುತ್ತಲೇ ಇದೆ. ಇನ್ನೊಂದೆಡೆಯಿಂದ, ಪಾಕಿಸ್ತಾನಕ್ಕೆ ಉಗ್ರರ ವಿರುದ್ಧ ಹೋರಾಡಲೆಂದು ಕೋಟಿ ಕೋಟಿ ನೆರವು ನೀಡುತ್ತಲೇ, ಭಾರತ ನನ್ನ ಪರಮಾಪ್ತ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿರುವ ಚೀನಾ, ಇವುಗಳೊಂದಿಗೆ ಮೈತ್ರಿಯನ್ನು ಗಾಢವಾಗಿ ಬೆಸೆಯುವವರು ಬೇಕಾರಾಗಿದ್ದಾರೆ.ದೇಶದಲ್ಲಿ ಪ್ರಜೆಗಳು ಬೆಲೆ ಏರಿಕೆಯಿಂದ ಕಂಗಾಲಾಗಿ, ಪ್ರವಾಹ, ಅತಿವೃಷ್ಟಿ-ಪ್ರವಾಹ, ಅನಾವೃಷ್ಟಿಯಿಂದ ತತ್ತರಿಸುತ್ತಿದ್ದರೂ, ನಮಗೆ ಬೇರೆ ದೇಶಗಳೊಂದಿಗಿನ ಸಂಬಂಧವೇ ಮುಖ್ಯ, ಅದಕ್ಕಿಂತಲೂ ಅಣು ಒಪ್ಪಂದ ಮುಖ್ಯ ಎನ್ನುತ್ತಾ, ದೇಶದ ಜನತೆಯ ಕಣ್ಣೀರೊರೆಸಬೇಕಾದವರು ಬೇಕಾರಾಗಿದ್ದಾರೆ.ಭವಿಷ್ಯದಲ್ಲಿ ನಡೆಯುವ ಉಗ್ರರ ನೂರಾರು ದಾಳಿ ಪ್ರಕರಣಗಳಿಗೆ ಈಗಲೇ ವಿಷಾದಿಸ್ತೀವಿ ಮತ್ತು ಮುಂದೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ತೀವಿ ಅಂತ ಭರವಸೆಯನ್ನು ಈಗಲೇ ಕೊಡುವ ದೇಶವಾಳುವ ನಾಯಕರೂ ಬೇಕಾರಾಗಿದ್ದಾರೆ.ಮುಖ್ಯ ಅರ್ಹತೆ: ಉಗ್ರಗಾಮಿಗಳೇನಾದರೂ ಇನ್ನು ಮುಂದೆ ಭಾರತದ ಮೇಲೆ ದಾಳಿ ಮಾಡಿದರೆ ಅವರಿಗೆಲ್ಲಾ ಬಾಳಾ ಠಾಕ್ರೆ ಮತ್ತು ಶಿವಸೇನೆಯ ವಿರುದ್ಧ ಏನಾದರೂ ಒದರುವಂತೆ ಉಪಾಯ ಮಾಡಿ ಮನವೊಲಿಸುವುದು. ಇದರಿಂದ ಶಿವಸೈನಿಕರೇ ಈ ಉಗ್ರರನ್ನು ಚೆನ್ನಾಗಿ ಚಚ್ಚಿ ಚಚ್ಚಿ ಮುಗಿಸಿಬಿಡಬಹುದು. ಇಲ್ಲವಾದರೆ, ಹಿಂದಿ, ಇಂಗ್ಲಿಷಿನಲ್ಲಿ ಪ್ರಮಾಣವಚನ ಸ್ವೀಕರಿಸುವಂತೆ/ಶಪಥ ಮಾಡುವಂತೆ/ಪಣ ತೊಡುವಂತೆ/ ಭಾಷೆ ಕೊಡುವಂತೆ ಉಗ್ರರನ್ನು ಪ್ರೇರೇಪಿಸುವುದು. ಆಗ ಶಿವಸೇನೆ ಮತ್ತು ಮಹಾರಾಷ್ಟ್ರ ನವ ನಿರ್ನಾಮ ಸೇನೆಗಳು ನಾ ಮುಂದು ತಾ ಮುಂದು ಅಂತ ಚಚ್ಚಲು ಹೊರಡುತ್ತವೆ. ಇಂತ ಚಾಕಚಕ್ಯತೆ ಉಳ್ಳವರು ಕೂಡ ಬೇಕಾರಾಗಿದ್ದಾರೆ.(ಸೂಚನೆ: ನಾವು ಸರಿಯಾಗಿಯೇ ಬರೆದಿದ್ದರೂ ಬೇಕಾಗಿದ್ದಾರೆ ಮಧ್ಯೆ ಒಂದು ರಾ ಹೆಚ್ಚು ಸೇರಿಕೊಂಡಿದ್ದು ಹೇಗೆಂಬುದು ನಮಗೇ ಗೊತ್ತಿಲ್ಲ. ಈ ಬಗ್ಗೆ ತನಿಖೆಗೆ ಆಯೋಗವೊಂದನ್ನು ರಚಿಸಲಾಗಿದ್ದು, ಅದಕ್ಕೆ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಈ ಆಯೋಗವು ಸುಮಾರು ೧೭ ವರ್ಷಗಳ ಬಳಿಕ ಎಲ್ಲರಿಗೂ ಗೊತ್ತಿರುವ ವರದಿಯನ್ನು ಸಲ್ಲಿಸಲಿದೆ.)

ಆಂಟಿ ಮಾಸ್ಕಿಟೋ ಸಾಫ್ಟ್ವೇರ್ ...........

(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)ಬೊಗಳೂರು, ಫೆ.13- ಪೆಪ್ಸಿ ಬಾಟಲಿಯಿಂದ ಸ್ಟ್ರಾ ಇಟ್ಟು ಕೋಲಾ ಹೀರುವಂತೆ ಮಾನವನ ರಕ್ತವನ್ನು ಹೀರುವ, ಕಿವಿ ತಮಟೆ ಒಡೆಯುವಂತೆ ಗುಂಯ್‌ಗುಡುವ ರಕ್ತ-ಪಿಪಾಸು ಸೊಳ್ಳೆಗಳಿಗೆ ಮುಕ್ತಿ ಕಾಣಿಸಲು ಹೊಸ ಸಾಫ್ಟ್ ವೇರ್ ಸಿದ್ಧವಾಗಿದೆ ಎಂಬ ಹಳೆ ವರದಿ ಪ್ರಕಟವಾಗಿರುವಂತೆಯೇ ಎಲ್ಲರ ಕಿವಿಗಳೂ ಒಮ್ಮೆಗೆ ನೆಟ್ಟಗಾಗಿವೆ.Aunty ಸೊಳ್ಳೆಯಿಂದ ಕಚ್ಚಿಸಿಕೊಂಡು ತಡೆಯಲಾರದೆ ಈ Anti ಸೊಳ್ಳೆ ತಂತ್ರಜ್ಞಾನ ಕಂಡುಹುಡುಕಿದ ವಿಜ್ಞಾನಿಯ (ದೈಹಿಕ ಮತ್ತು ಮಾನಸಿಕ) ಸ್ಥಿತಿ ನೆನಪಿಸಿಕೊಂಡು ಗೊಳ್ಳನೆ ನಕ್ಕ ಅಸತ್ಯಾನ್ವೇಷಿ, ಈ ಬಗ್ಗೆ ತನಿಖೆ ನಡೆಸಿದಾಗ ಹೊಸ ಅಂಶವೊಂದು ಬಯಲಾಗಿದೆ.ವಾಸ್ತವವಾಗಿ ವಿಜ್ಞಾನಿ ಇದನ್ನು ಕಂಡುಹುಡುಕಿದ್ದು ಸೊಳ್ಳೆಗಳಿಗಾಗಿ ಅಲ್ಲವಂತೆ. "Every new product comes out by an accident" ಎಂಬಂತೆ, ಸೊಳ್ಳೆಗಳಿಗೆ ಈ ಸಾಫ್ಟ್ ವೇರ್ ಮಾರಕವಾದದ್ದು ಕೂಡ ಒಂದು ಆಕ್ಸಿಡೆಂಟ್.ಈ ಸುರಸುಂದರಾಂಗ ವಿಜ್ಞಾನಿಗೆ ಸುಂದರಿಯರ ವಿಪರೀತ ಕಾಟ. ಒಂಚೂರು ವಿಶ್ರಾಂತಿ ತೆಗೆದುಕೊಳ್ಳೋಣವೆಂದರೆ ಬಿಡಲೊಲ್ಲರು. ಅವರನ್ನು ದೂರ ಮಾಡುವುದು ಹೇಗೆ ಎಂಬ ಸಂಶೋಧನೆಯಲ್ಲಿದ್ದಾಗ ಹೆಣ್ಣು ಸೊಳ್ಳೆಗಳಿಗಷ್ಟೇ ಮಾರಕವಾಗಿರುವ ಈ ಸಾಫ್ಟ್ ವೇರ್ ಉತ್ಪತ್ತಿಯಾಗಿದೆ. ಮೊಬೈಲ್‌ ಫೋನ್‌ಗೂ ಇದು ಲಭ್ಯವೆಂಬುದು ಇತ್ತೀಚಿನ ಸುದ್ದಿ.ಮಾನವನ ರಕ್ತ ಹೀರುವ ಹೆಣ್ಣು ಸೊಳ್ಳೆಗಳು ಈ ಸಾಫ್ಟ್ ವೇರ್ ಹೊರಡಿಸುವ ಶಬ್ದ ಬಂದತ್ತ ಧಾವಿಸುತ್ತವೆ. ಅದು ಕಂಪ್ಯೂಟರ್‌ನಿಂದ ಬರುವುದರಿಂದ ಅಲ್ಲಿ ಬ್ರೌಸ್ ಮಾಡುತ್ತಾ ಬೊಗಳೆ-ರಗಳೆ ಓದತೊಡಗುತ್ತವೆ. ಅಲ್ಲಿಗೆ ಬೇರೆಯವರ ರಕ್ತ ಹೀರುವ ಮನುಷ್ಯ ಪ್ರಾಣಿಗೆ ಸುಖ ನಿದ್ದೆ.ಈ ಕುರಿತ ಹೆಚ್ಚಿನ ಮಾಹಿತಿ ನಿಮಗೆ ಇಲ್ಲಿ ಸಿಗಲಾರದು.ಈ ಸಾಫ್ಟ್ ವೇರ್ ಇಲ್ಲಿ ಡೌನ್ ಲೋಡ್ ಮಾಡಬೇಕಿದ್ದರೆ ಬೊಗಳೆ-ರಗಳೆ ಓದುಗರಿಗೆ ಸಂಪೂರ್ಣ ಉಚಿತ. (ಶರತ್ತುಗಳು ಅನ್ವಯ. ಬೇಕಿದ್ದರೆ ನೀವು ಸೇವಾ ತೆರಿಗೆ, ಹ್ಯಾಂಡ್ಲಿಂಗ್ ಚಾರ್ಜ್, ಸಾಗಾಟ ವೆಚ್ಚ, ಕೂಲಿ ವೆಚ್ಚ, ತಯಾರಿಕಾ ವೆಚ್ಚ, ಊಟದ ಖರ್ಚು, ಮಾಹಿತಿ ಶುಲ್ಕ... ಇನ್ನೂ ಇತ್ಯಾದಿ ಏನೇನೋ ಶುಲ್ಕಗಳನ್ನೆಲ್ಲಾ ಸೇರಿಸಿ ಬೊಗಳೆ-ರಗಳೆ ಬ್ಯುರೋದ ಅಸತ್ಯಾನ್ವೇಷಿಗೆ ಕಳುಹಿಸಬಹುದು.
[ಒಂದಾನೊಂದು ಕಾಲದ ಬೊಗಳೆ ರಗಳೆಯ ವರದಿ]

Thursday, February 11, 2010

ನೆನಪ್ಪುಗಳ ನಂಟು ........

ಬಾಳಿನಲ್ಲಿ ಎಷ್ಟೋ ಬಗೆಯ ಸಂಬಂಧಗಳು ಹೀಗೇ ಬಂದು ಕೂಡುತ್ತವೆ, ಇನ್ನು ಕೆಲವು ತನ್ನಂತಾನಾಗಿಯೇ ಕಳಚಿ ಕೊಳ್ಳುತ್ತವೆ.ಕೆಲವು ಸಂಬಂಧಗಳು ಬೇಡವೆನ್ನಿಸಿದರೂ ಬಿಡಿಸಲಾಗದ ಗಂಟಾಗಿ ಉಳಿದು ಕೊಳ್ಳುತ್ತವೆ! ಪ್ರೀತಿಯ ನಂಟು ಇರದ ಸಂಬಂಧಕೆ ಅರ್ಥವಿದೆಯೇ? ಅಂಥವುಗಳ ಆಯುಷ್ಯವೂ ಬಲು ಕಡಿಮೆ. ಸಂಬಂಧವೆಂದರೆ ಒಡಹುಟ್ಟಿದವರೇ ಆಗಬೇಕಿಲ್ಲ. ಯಾರೋ ದಾರಿ ಮೇಲಿನ ಅಪರಿಚಿತ ಒಡನಾಡಿ, ಒಲವಿನ ಗೆಳೆಯರಾಗಬಹುದು.ಸಂಬಂಧಗಳಿಗೆ ಹೆಸರಿರುವುದಿಲ್ಲ. ಹೆಸರಿಟ್ಟ ಸಂಬಂಧಗಳು ಅರ್ಥ ಕಳೆದು ಕೊಂಡರೆ ಅವಕ್ಕೆ ಯಾವ ಬೆಲೆಯೂ ಇಲ್ಲ. ಆದರೆ ಕೊಂಡಿ ಕಳಚಿ ಹೋದರೂ ಸಾವಿರ ನೆನಪುಗಳು ಕೆಲವೊಮ್ಮೆ ಮನದಲ್ಲಿ ಮುಜುಗರ ತೋರದೆಯೇ ಉಳಿದು ಬಿಡುತ್ತವೆ. ಸಿಹಿ ಒಂದೇ ಇರಲಿ ಒಡನೆ ಅಂಟಿಕೊಂಡಿರುವ ಕಹಿ ಬೇಡವೇ ಬೇಡ ಎನ್ನಲು ಸಾಧ್ಯವೇ? ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅಂತ ಆಗಾಗ ಕಣ್ಮುಂದೆ ಬಂದು ಅಣಕಿಸುತ್ತವೆ ಈ ನೆನಪುಗಳು. ಕಾಡುವ ಈ ನೆನಪುಗಳಿಗೆ ಅದೆಷ್ಟು ಸಲ ಚಂದಾ ಬಾಕಿ ನೀಡಲು ಸಾಧ್ಯ?

Wednesday, February 10, 2010

ಸ್ನೇಹ ......


ಯಾರಿಗೆ ಏನ ಹೇಳಲಿ ! ಹೊಸತನವ ಬಯಸುತಿರುವೆ !ಏನ ಹೇಳಿಕೊಳ್ಳಲಿ ! ಭಾವನೆಗಳು ನಿನ್ನ ಸ್ನೇಹವ ಬಯಸುತಿರುವೆ !ಹೊಸ ರೀತಿಯಲಿ ಹೊಸ ಕನಸನು ಮನ ಕಂಡಿದೆನಿರ್ಮಲ ಸ್ನೇಹಕಾಗಿ ಅದು ಕಾತರಿಸುತಿದೆ !ಗೊತ್ತು ನನಗೆ ದುನಿಯಾ ಹೇಗಿದೆಯೆಂದು !ವಂಚನೆಯಿಲ್ಲದೆ ಯಾವುದೂ ದೊರಕುವುದಿಲ್ಲ ಇಂದು !ಸ್ನೇಹದ ಹೆಸರಿನಲಿ ಪ್ರೀತಿಯನು ಹುಡುಕುವವರು !ಅರಿಯುವುದಿಲ್ಲ ! ಬುದ್ದಿಗೇಡಿಗಳು ! ಸ್ನೇಹದ ಅರ್ಥವ ಕೆಡಿಸುವವರು !ಅರಿವಿದೆ ಗೆಳೆತನವೆಂದರೆ ಏನೆಂದು !ಯೋಚಿಸುವುದಿಲ್ಲವೇಕೆ ಉಳಿಸಿಕೊಳ್ಳಲು ! ಆತುರಪಡುವಿರೆಕೆ ತಿಳಿದು ಪ್ರೀತಿಯೆಂದು !ಅರಿಯಬೇಕಿದೆ ಗೆಳೆಯರೇ ಸ್ನೇಹವೆಂದರೆ ಒಂದು ಸುಂದರ ಬಂಧನವೆಂದುಅರಿತುಕೊಂಡರೆ ! ಪ್ರೀತಿಯು ಇಲ್ಲ ಅದರ ಮುಂದೆ ! ಮತ್ತೆಂದೂ !ಸ್ನೇಹದ ಕಡಲಿನಲಿ ದೋಣಿಯ ಹುಟ್ಟು ಹಾಕುತ ಸಾಗುತಿರುವ ನಾವಿಕನು ನಾನು !ಆ ಸ್ನೇಹದ ಪಯಣದಲಿ ಜೊತೆಯಾಗಿ ಬರುವಿರೇನು !ಮರೆತು ಕೂಡ ಹೇಳಬೇಡಿ ಸ್ನೇಹವೆಂದರೆ ಪ್ರೇಮವೆಂದು !ಅರಿತುಕೊಳ್ಳಿ ಸ್ನೇಹಕೂ ಪ್ರೇಮಕೂ ಬೇರೆ ಬೇರೆ ಅರ್ಥವಿದೆಯೆಂದು !ಇಲ್ಲದ ಆಸೆಯಲಿ ! ಸ್ನೇಹದ ಕೋಟೆಯಲಿ ಬಿರುಕನು ತರಬೇಡಿ !ನಿರ್ಮಲ ಸ್ನೇಹದಲಿ ಪ್ರೀತಿಯನು ತಂದು ಅದರ ಅರ್ಥ ಕೆಡಿಸಬೇಡಿ !ಯಾರೋ ಏನೋ ಮಾಡಿದರೂ ಅವ್ರ ಬಾಳು ಅವ್ರ ಹಣೆಯ ಪಾಡು !ನಮಗಿಲ್ಲಿ ಬೇಕಿದೆ ! ಸುಂದರ ಸ್ನೇಹದ ಜೇನು ಗೂಡು !ಒಲವು ಇಲ್ಲಿ ಸ್ನೇಹವಾಗಿರಲಿ ! ಬದುಕಿನಲಿ ಪ್ರೀತಿ ತುಂಬಿರಲಿ !ಇಲ್ಲಿ ಸ್ನೇಹದ ಸಿಂಚನವಿರಲಿ !
ಮನದ ಮನೆಗೆ ಬಂದ ಗೆಳತಿಮನದೊಳಗೆ ಅಳಿಸಲಾಗದ ಗುರುತು ನೀ ಬಿಟ್ಟು ಹೋದದ್ಯಾಕೆ ಆ ರೀತಿಅರಿವಿತ್ತೆ ಇರಲಿಲ್ಲವೇ ನಿನಗೆ ನನ್ನ ನಿರ್ಮಲ ಪ್ರೀತಿದಿನ ನಿತ್ಯ ನಿನ್ನ ನೆನಪಿನಲೆ ಜೀವನ ಸಾಗಿಸುತಿರುವೆ ಓ ಗೆಳತಿ !ಅಂದುಕೊಂಡಿದ್ದೆ ಇಬ್ಬರೂ ಸೇರಿ ಸಾಗುವ ಜೊತೆಯಲಿ ದೂರ ದೂರನೀನಾಗಿ ಹೋದೆ ನನಗೆ ಅಮಾವಾಸ್ಯೆಯ ಚಂದಿರಗ್ರಹಣ ಕಳೆಯುತದೆ ಎಂದು ಕಾದಿರುವೆ ನಾನು ಕಟ್ಟಿ ಮನದೊಳಗೆ ಮಂದಿರಹೇಳಿ ಬಿಡೇ ಗೆಳತಿ ಬಂದೆ ಬರುತಾವ ಕಾಲ ! ನಮಗಾಗಿ ಮತ್ತೆ ಬರುತಾನ ಚಂದಿರ?ನಿನ್ನೊಳಗೆ ನಾನಿದ್ದೆ , ನನ್ನೊಳಗೆ ನಿನ್ನ ನೆನಪನೆ ತುಂಬಿ ಕೊಂಡಿದ್ದೆಎಲ್ಲ ಗೊತ್ತಿದ್ದೂ ನೀನೇಕೆ ಗೆಳತಿ ಗೊತ್ತಿಲದ ಹಾಗೆ ಇದ್ದು ಬಿಟ್ಟಿದ್ದೆನಿಜ ಹೇಳೇ ಗೆಳತಿ ನಿನಗೆ ನನ್ನ ಮೇಲೆ ನಂಬಿಕೆ ಇತ್ತೇ ಇರಲಿಲ್ಲವೇ ?ಅರಿಯದ ನನ್ನ ಒಡಲಲಿ ನಿನ್ನ ನೆನಪಿನಲ್ಲಿ ಬರಿಯ ನೋವೆ !ಚಿಂತೆಯಿಲ್ಲ ಗೆಳತಿ ಆದದೆಲ್ಲ ಒಳಿತೆ ಆಯಿತೆಂದು ನಲಿಯುವೆನಿನ್ನ ನೆನಪುಗಳ ಜೊತೆಯಲಿ ಜೀವನ ಕಳೆಯುವೆಆದರೂ ಒಮ್ಮೊಮ್ಮೆ ಸದ್ದಿಲ್ಲದ ಹಾಗೆ ಬಂದು ನನ್ನ ನೆನಪು ಕೆದಕುವುದು ನಿನಗೆ ತರವೇ ?

.....ಸಂತೋಷ್ ಪಾಂಡು ಗದಕರ್ .......

ಆ ದಿನಗಳು ....

ಆ ದಿನಗಳು"
ನೆನಪಿದೆಯೇ ಆ ದಿನಗಳು??ನೆನಪಿದೆಯೇ ಆ ಕ್ಷಣಗಳು??ನಕ್ಕ ನಗು, ಆಡಿದ ಮಾತು,ಮಾಡಿದ ಜಗಳ, ಹೊರಹೊಕ್ಕ ಕಂಬನಿ,ಪ್ರೀತಿಯ ಕಲ್ಪನೆ, ಪರೀಕ್ಷೆಯ ಯಾತನೆ.
ನೆನೆದಿದ್ದೆವು ಇವೆಲ್ಲವೂ ಎಂತಹ ಕಹಿ ಗುಳಿಗೆಗಲೆಂದು,ಮರೆತು ಹೋಗಿದ್ದೆವು ಇವೆ ನಮ್ಮ ಸಂತೋಷದ ಮಳಿಗೆಗಳೆಂದು, ಕಾದಿದ್ದೆವು ಎಂದು ಇದಕೆಲ್ಲ ಪೂರ್ನವಿರಾಮವೆಂದು!ಅದೇ ಸವಿನೆನಪಾಗಿ ಉಳಿದು ಹೋಗಿದೆ ನಮ್ಮೆಲ್ಲರ ಮನದಾಳದಲ್ಲಿಂದು.
ತರುತಲಿದೆ ಮೊಗದ ಮೇಲಿಂದು ಆನಂದದ ಸಿಂಚನ,ಸದಾ ಉಳಿಯಲಿ ಮನದಲಿ ಈ ಅಧ್ಬುತ ರೋಮಾಂಚನ,ಕಣ್ಣಲ್ಲಿ ತುಂಬಿ ತುಳುಕಾಡುತ್ತಿದೆ ಕಾತುರ,ಮತ್ತೆ "ಆ ದಿನಗಳ" ಬಳಿ ಹೋಗುವ ಆತುರ.
ಸ್ನೇಹಿತರೊಡನೆಯ ಬಂಧನ,ಕೈ ಹಾಕಿದ ಕೆಲಸದಲ್ಲೆಲ್ಲ ಸಿಕ್ಕ ಸ್ಪಂದನ,ಮರುಕಳಿಸಲಿ ಜೀವನದ ಪಯಣದಲ್ಲಿನ್ನೊಮ್ಮೆ,ಇದ್ದು ಹೋಗದಿರಲಿ ಮತ್ತೊಮ್ಮೆ.
ಮರೆಯಾಗಲಿ ಈಗಿರುವ ಕಹಿ ನೆನಪುಗಳು.ಚಿರಕಾಲ ನಮ್ಮಲುಳಿಯಲಿ......ಆ ಸವಿನೆನಪುಗಳು!!!!
ಇಂದಿಗೂ, ಎಂದಿಗೂ, ಎಂದೆಂದಿಗೂ.....
------ಸಂತೋಷ್ ಗದಕರ್ ........

Friday, February 5, 2010

ಪಾನಿ ಪೂರಿ ...

ಒಂದು ವಾರದ ಹಿಂದೆ ಸ್ನೇಹಿತರೊಬ್ಬರ ಮನೆಯಲ್ಲಿ ಪಾನೀಪೂರಿ ಮಾಡಿ ಕೊಟ್ಟಿದ್ದರು, ಅವರು ತಟ್ಟೆಯಲ್ಲಿ ತಂದು ಸುತ್ತಲೂ ಸಣ್ಣ ಸಣ್ಣ ಪೂರಿಗಳನ್ನು ಇಟ್ಟು ಮಧ್ಯೆ ಪೂರಿ ಒಳಗೆ ತುಂಬೋದಕ್ಕೆ ಈರುಳ್ಳಿ-ಕೊತ್ತುಂಬರಿ ಸೊಪ್ಪು ಸಣ್ಣಗೆ ಕತ್ತರಿಸಿ ಇಟ್ಟು, ಪಕ್ಕದಲ್ಲಿ ಮ್ಯಾಷ್ಡ್ ಅಲೂಗಡ್ಡೆಯ ಜೊತೆಗೆ ಒಂದು ಸೂಪ್ ಬೌಲ್‌ನಲ್ಲಿ ಪಾನೀ ಅನ್ನೂ ಇಟ್ಟಿದ್ದರು. ಅವರು ಪಾನೀಪೂರಿ ತಯಾರಿಸಿದ್ದಕ್ಕಿಂತಲೂ ಅವರ ಪ್ರೆಸೆಂಟೇಷನ್ ಬಹಳ ಇಷ್ಟವಾಯ್ತು. ಒಂದೊಂದೇ ಪೂರಿ ಹೊಟ್ಟೆ ಒಳಗೆ ಹೋಗುತ್ತಿದ್ದ ಹಾಗೆ ನಾಲಗೆಗೆ ತಡೆ ಅನ್ನುವುದೇ ಇಲ್ಲವಾಗಿ ಹತ್ತರ ಮೇಲೆ ತಿಂದರೂ ಇನ್ನೂ ಬೇಕು ಅನ್ನುವಂತಾಗಿತ್ತು, ಅಷ್ಟು ರುಚಿಯಾಗಿತ್ತು! ಎಷ್ಟೇ ರುಚಿಯಾಗಿದ್ದರೂ, ನಾವು ಚಮಚೆಯಿಂದ ಪಾನಿಯನ್ನು ಪೂರಿಯೊಳಗೆ ತುಂಬಿಕೊಳ್ಳುತ್ತಿದ್ದೆವಾದ್ದರಿಂದ ಭಾರತದಲ್ಲಿ ರಸ್ತೆ ಬದಿಯಲ್ಲಿ ಪಾನೀಪೂರಿಯನ್ನು ತಿಂದಷ್ಟು ರುಚಿಯಂತೂ ಇರಲಿಲ್ಲ, ಏಕೆಂದರೆ ಅಲ್ಲಿ ಪಾನೀ ಇಟ್ಟ ಕೊಳಗದೊಳಗೆ ಆತ ಕೈ ಮುಳುಗಿಸಿ ಪೂರಿಯ ತುಂಬ ಪಾನಿಯನ್ನು ಹಾಕಿಕೊಟ್ಟಾಗಲೇ ಅದರ ರುಚಿ, ಹಿಂದೆ
ಬನಿಯನ್ ಚಹಾದ ಮಹಿಮೆಯನ್ನು
ಓದಿದವರಿಗೆ ಆಹಾರ ಪದಾರ್ಥಗಳ ರುಚಿಯ ಬಗ್ಗೆ ಮತ್ತೆ ಹೇಳುವುದೇನಿದೆ?

ಆದರೆ ಈ ದಿನ ಪಾನೀಪೂರಿಯನ್ನು ವಿಶೇಷವಾಗಿ ನೆನೆಸಿಕೊಳ್ಳಬೇಕಾಗಿ ಬಂತು ಏಕೆಂದರೆ ಅಂದು ಸ್ನೇಹಿತರ ಮನೆಯಲ್ಲಿ ಸ್ಪೂರ್ತಿ ಸಿಕ್ಕು ನಾನೂ ಮನೆಯಲ್ಲಿ ಮಾಡೋಣವೆಂದು ಪಾನೀಪೂರಿ ಪ್ರಾಜೆಕ್ಟನ್ನು ಕೈ ಹಚ್ಚಿಕೊಂಡರೆ ಗಣಪತಿ ಹಬ್ಬದ ಪ್ರಯುಕ್ತವೇನೋ ಎನ್ನುವಂತೆ ಬರೀ ವಿಘ್ನಗಳೇ ಎದುರಾಗುತ್ತಿದ್ದವು. ಅಡುಗೆಮನೆಗೆ ಬೇಕಾದಷ್ಟು ಸಾರಿ ಹೋಗಿ ಗೊತ್ತು ಆದರೆ ಯಾವ ಯಾವ ಸಾಮಾನು ಎಲ್ಲೆಲ್ಲಿದೆ ಎಂದು ಗೊತ್ತಿರಬೇಕಲ್ಲ? ಉಪ್ಪು ಸಿಕ್ಕರೆ ಸಕ್ಕರೆ ಸಿಗದು, ಸಕ್ಕರೆ ಸಿಕ್ಕರೆ ಮತ್ತಿನ್ನೇನೋ ಸಿಗದು. ಹೀಗಿದ್ದಾಗ್ಯೂ ನಾನೂ ಒಂದು ಪಾನೀಪೂರಿಯನ್ನು ಸೆಟ್ ಅನ್ನು ತಯಾರಿಸಿ ಅದರಲ್ಲಿ ಬೇಕು ಬೇಕಾದ ಅನ್ನುವುದಕ್ಕಿಂತಲೂ ಕೈಗೆ ಸಿಕ್ಕವುಗಳನ್ನು ನೀಟಾಗಿ ಜೋಡಿಸತೊಡಗಿದೆ. ಮೊದಲೇ ಅಂಗಡಿಯಿಂದ ತಂದ ಪೂರಿ - ಗೋದಿ ಹಿಟ್ಟನ್ನು ಗೋಲಿಯಾಕಾರದಲ್ಲಿ ಕಲೆಸಿ ಲಟ್ಟಣಿಗೆಯಲ್ಲಿ ನಾದು ಎಣ್ಣೆಯಲ್ಲಿ ಹುರಿಯುವಷ್ಟು ವ್ಯವಧಾನ ಈ ಪ್ರಪಂಚದಲ್ಲಿ ಯಾರಿಗಿದೆ ಹೇಳಿ - ಮೇಲೆ ಒತ್ತಿದರೆ ಕೆಳಗೂ ಬಿರುಕುಬಿಡುತ್ತಿತ್ತು. ಹಾಗೂ ಹೀಗೂ ಮಾಡಿ ಒಂದು ಹತ್ತು ಪೂರಿಯನ್ನು ತಯಾರು ಮಾಡಿ ಅದರ ಜೊತೆಯಲ್ಲಿ ಬಿಸಿ ಚಹಾವನ್ನು ಮಾಡಿಟ್ಟುಕೊಂಡು ಚುಮು ಚುಮು ಛಳಿ ಇದ್ದರೂ ಹೊರಗಡೆ ಕುಳಿತು ಸಂಜೆಯ ಹೊತ್ತಿಗೆ ಮನೆಯ ಸುತ್ತಲು ಚಿರ್ಪ್ ಚಿರ್ಪ್ ಎನ್ನುವ ಮಿಡತೆಗಳ ಸದ್ದಿನೊಂದಿಗೆ ಆಸ್ವಾದಿಸುವುದಿದೆ ನೋಡಿ, ಅದರ ಮುಂದೆ ಯಾವ ಸ್ವರ್ಗಸುಖವೂ ಇಲ್ಲ ಬಿಡಿ.

ನಾನು ಅಡುಗೆ ಮಾಡೋದೇ ಕಡಿಮೆ - ಥ್ಯಾಂಕ್ ಗುಡ್‌ನೆಸ್, ಈ ದೇಶದಲ್ಲಿ ಬ್ರೆಡ್ಡೂ-ಬನ್ನಿಗೇನೂ ಕಡಿಮೆ ಇಲ್ಲ - ಎರಡು ಘಂಟೆ ವ್ಯಯಿಸಿ ಒಂದು ಬಿಸಿಬೇಳೆ ಬಾತ್ ಮಾಡಿ ತಿಂದು ಅದರ ಪಾತ್ರೆಗಳನ್ನು ತೊಳೆದು ಒಪ್ಪ ಮಾಡುವುದಕ್ಕೆ ಇನ್ನೊಂದು ಘಂಟೆಯನ್ನು ವ್ಯಯಿಸುವುದು ನನ್ನ ಜಾಯಮಾನದಲ್ಲೇನೂ ಬರೆದ ಹಾಗಿಲ್ಲ. ತಿನ್ನುವುದಕ್ಕಾಗಿ ಬದುಕಬಾರದು, ಬದುಕುವುದಕ್ಕಾಗಿ ತಿನ್ನಬೇಕು - ಎನ್ನುವ ವೇದಾಂತವನ್ನು ಬಹಳ ವರ್ಷಗಳ ಹಿಂದೆಯೇ ಅನುಸರಿಸಿ ಅದೇ ರೀತಿ ಇವತ್ತಿಗೂ ಚಾಚೂ ತಪ್ಪದೇ ನಡೆದುಕೊಂಡು ಬಂದಿದ್ದಾಗಿದೆ. ನಾಲಗೆ ರುಚಿ ಆದೇಶಿಸೋ ಹೊರವಲಯದ ತಿನ್ನುವಿಕೆಯಲ್ಲಿ ಏನು ಸುಖ ಇದೇ ಹೇಳೀ, ಅದು ಕ್ಷಣಿಕವಾದದ್ದು, ಅದರ ಬದಲಿಗೆ ಏನೋ ಒಂದು ಪುಸ್ತಕವನ್ನು ಓದಿದರೆ ಬರೆದರೆ ಅದು ಯಾವತ್ತಿಗೂ ಇರುವಂತದ್ದು. ಅಂತಹದ್ದರಲ್ಲಿ ದಿನದ ಕಾಲು ಭಾಗವನ್ನು ತಿನ್ನುವುದಕ್ಕಾಗಿ ಬಳಸುವ ಯಾರನ್ನಾದರೂ ನೋಡಿ ಮರುಕಪಡದೇ ಇನ್ನೇನನ್ನು ಮಾಡಬೇಕೋ? ಆದರೆ, ತಿನ್ನುವವರಲ್ಲಿ ಎಲ್ಲರೂ ಒಂದೇ ರೀತಿ ಎಂದು ಹೇಳಲಾಗದು. ಕೆಲವರು ಕಂಬಳಿಹುಳುವಿನ ಥರ ಯಾವಾಗಲೂ ಕುರುಕಲುಗಳನ್ನು ಮೇಯುತ್ತಲೇ ಇದ್ದರೆ ಇನ್ನು ಕೆಲವರು ನಿಯಮಿತವಾಗಿ ಹೊತ್ತುಹೊತ್ತಿಗೆ ಊಟ-ತಿಂಡಿ ಮಾಡಿಕೊಂಡಿರುವವರು. ಆದರೆ ನಮ್ಮ ಗುಂಪಿಗೆ ಸೇರುವವರೇ ಬಹಳ ಮಂದಿ, ದಿನಕ್ಕೆ ಇಂತಿಷ್ಟೇ ಹೊತ್ತಿಗೆ ಇಂಥದ್ದನ್ನೇ ತಿನ್ನಬೇಕು ಎಂದು ಅಶ್ವಮೇಧಯಾಗ ಮಾಡುವವರನ್ನು ಬದುಕಲೇ ಅಯೋಗ್ಯರು, ತಿನ್ನಲು ಮಾತ್ರ ಯೋಗ್ಯರು ಎಂದು ಹಣೆಪಟ್ಟಿಕೊಡದೇ ಮತ್ತಿನೇನು ಮಾಡಬೇಕು.

ತಿನ್ನೋದರ ಬಗ್ಗೆಯೇ? ನನಗೂ ಗೊತ್ತು...ದಾವಣಗೆರೆ ಮಸಾಲೆ ಮಂಡಕ್ಕಿಯಿಂದ ಹಿಡಿದು, ಧಾರವಾಡಾ ಪೇಡಾದವರೆಗೆ, ಮೈಸೂರಿನ ಮಸಾಲೆ ದೋಸೆಯಿಂದ ಹಿಡಿದು, ಮದ್ದೂರುವಡೆ ವರೆಗೆ, ಯಾವುದೋ ಒಂದು ಸೀಜನ್ ನಲ್ಲಿ ಸಿಗೋ ಆನೆಬಂಡಾದಿಂದ ಹಿಡಿದು, ನೇರಳೇಹಣ್ಣಿನಿಂದ ಹಿಡಿದು, ಥರಾವರಿ ಪಲ್ಯ-ಪದಾರ್ಥಗಳಿಗೆ ಬರೋ ಕಳಲೆಯವರೆಗೆ. ಒಂದೆಲಗದ ಸೊಪ್ಪಿನಿಂದ ಹಿಡಿದು ಹರಿವೇ ಸೊಪ್ಪಿನವರೆಗೆ, ಅಪರೂಪಕ್ಕೆ ಮಾಡೋ ನುಗ್ಗೇ ಸೊಪ್ಪಿನಿಂದ ಹಿಡಿದು ಬಸಳೇ ಸೊಪ್ಪಿನವರೆಗೆ... ಇವೆಲ್ಲವನ್ನು ನೆನೆನೆನೆಸಿಕೊಂಡೇ ಬಾಯಲ್ಲಿ ಹಲವರಿಗೆ ನೀರು ಊರಿರಬಹುದು. ಆದರೆ, ಇದರ ಹಿಂದಿನ ಮರ್ಮ ಕೆಲವರಿಗೆ ಮಾತ್ರ ಗೊತ್ತು. ಅಮೇರಿಕದ ಉದ್ದಗಲಕ್ಕೂ ಭಾರತೀಯ ಮೂಲದ ಅಂಗಡಿಗಳೇನೂ ಇಲ್ಲ, ಹತ್ತಿಪ್ಪತ್ತು ವರ್ಷಗಳ ಹಿಂದೆ ಒಂದು ಪೌಂಡು ತೊಗರಿಬೇಳೆಯನ್ನು ಪೋಸ್ಟ್‌ನಲ್ಲಿ ಎಷ್ಟೋ ಜನ ತರಿಸಿಕೊಂಡು ಹೋಳಿಗೆ ಮಾಡಿಕೊಂಡು ತಿಂದಿದ್ದಿರಬಹುದು, ಇತ್ತೀಚೆಗೆ ಇಂತಹ ಅಂಗಡಿಗಳು ಹೆಚ್ಚಾಗಿರಬಹುದು, ಆದರೆ ನಮಗೆ ಬೇಕಾದ ಪದಾರ್ಥ, ತರಕಾರಿ ಮುಂತಾದವುಗಳು ಯಾವಾಗಲೂ ಸಿಗುತ್ತವೆ ಎಂದು ಗ್ಯಾರಂಟಿ ಕೊಡಲಿಕ್ಕೆ ಬಾರದು. ಹಲ್ಲಿದ್ದಾಗ ಕಡೆಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ ಎನ್ನುವುದನ್ನು ನಮ್ಮಂತಹವರನ್ನು ನೋಡೇ ಹೇಳಿರಬಹುದು. ಅಂದರೆ ನನ್ನ ಆಹಾರ ಪದಾರ್ಥಗಳ ವೈರಾಗ್ಯದ ಹಿಂದೆ ಅಭಾವ ಕಾರಣ, ನನ್ನ ಹಾಗೇ ಬೇಕಾದಷ್ಟು ಮಂದಿ ಇದ್ದಾರೆ ಎನ್ನೋದೂ ನನಗೆ ಗೊತ್ತು.

ಹಾಗಿಲ್ಲವೆಂದಾಗಿದ್ದರೆ, ನಮ್ಮೂರುಗಳಲ್ಲಿ ಗಣಪತಿ ಹಬ್ಬಕ್ಕೆಂದು ಎಲ್ಲರೂ ಬಿಸಿಬಿಸಿ ಹೋಳಿಗೆಯನ್ನು ತುಪ್ಪ ಹಾಲು ಹಾಕಿಕೊಂಡು ಸವಿಯುತ್ತಿದ್ದರೆ ಇಲ್ಲಿ ನಾವು ಹಗಲೂ-ರಾತ್ರಿ ಕೆಲಸವನ್ನು ಮಾಡಿಕೊಳ್ಳುವ ಪ್ರಮೇಯವೇಕೆ ಬರುತ್ತಿತ್ತು. ನಮ್ಮ ಭಾರತೀಯ ಹಬ್ಬಗಳಿಗೆ ರಜೆ ತೆಗೆದುಕೊಳ್ಳಬೇಕೆಂದರೂ ಎಷ್ಟೋ ಜನರಿಗೆ ಹಾಗೆ ಆಗದು. ಅನಿವಾಸಿಗಳ ಹಬ್ಬಗಳೆಲ್ಲ ವೀಕ್‌ಎಂಡಿನಲ್ಲೇ ಬರೋದು ಎಂದು ತಮಾಷೆ ಮಾಡುತ್ತಿರುವವರಿಗೂ ಅಣಕಿಸುವಂತೆ ಗಣೇಶನ ಹಬ್ಬ ಶನಿವಾರಕ್ಕೆ ಬಂದರೂ ಎಮರ್ಜನ್ಸಿ ಕೆಲಸದ ಮೇಲೆ ದುಡಿಯಬೇಕಾಗಿ ಬಂದವರಿಗೆ ಹಬ್ಬಗಳೆಲ್ಲ ಸೆಕೆಂಡರಿಯಾಗಿ ಕಾಣಿಸದೇ ಇನ್ನೇನಾದೀತು? ಹಬ್ಬಗಳನ್ನು ಆದರಿಸಿ, ಆಚರಿಸುವುದಕ್ಕೆ ಹಲವು ರೂಪಗಳು - ಹೊಸಬಟ್ಟೆ ಧರಿಸುವುದಾಗಲೀ, ಸುಗ್ಗಿ ಸಮೃದ್ಧಿಯ ಸೂಚಕವಾಗಿಯಾಗಲೀ, ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಆಸ್ವಾದಿಸುವುದಾಗಲೀ, ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ಆಚರಿಸುವುದಾಗಲೀ, ಕುಲದೇವರ ಆರಾಧನೆಯಾಗಲೀ ಎಲ್ಲವೂ ಮುಖ್ಯವಾದ ಕಾರಣಗಳೇ. ಸಮಾಜದ ಹಲವು ಧ್ಯೋತಕಗಳಲ್ಲೊಂದಾಗಿ ಬರುವ ಹಬ್ಬಗಳನ್ನು ಸ್ಕಿಪ್ ಮಾಡಿಕೊಂಡು ಹೋಗುವ ನಾವೆಲ್ಲರೂ ಇವತ್ತಲ್ಲ ನಾಳೆ ಒಂದಲ್ಲ ಒಂದು ಬೆಲೆಯನ್ನು ತೆತ್ತಲೇ ಬೇಕಾಗುತ್ತದೆ. ಮಕ್ಕಳು-ಮರಿ ಇದ್ದವರಿಗೆ ಹಬ್ಬಗಳು ತಮ್ಮ ತಮ್ಮ ಸಂಸ್ಕೃತಿ-ಪರಂಪರೆಯನ್ನು ಒಂದು ತಲೆಯಿಂದ ಮತ್ತೊಂದು ತಲೆಗೆ ರವಾನಿಸುವ ಕೊಂಡಿಯಾಗಿರುವಾಗ ಪ್ರತಿಯೊಂದು ಹಬ್ಬವೂ, ಅದರ ವೈಶಿಷ್ಠ್ಯವೂ ಬಹಳ ಮುಖ್ಯ.

ತಿಂಡಿ-ಹಬ್ಬಗಳನ್ನು ನೆನೆಸಿಕೊಳ್ಳುತ್ತಿರುವಾಗ ಒಂದು ರೂಪಕ ನೆನಪಿಗೆ ಬಂತು. ಮಗು ಚಿಕ್ಕದಿರುವಾಗ ತಾಯಿ ಎಷ್ಟೋ ಕಷ್ಟ ಪಟ್ಟು, ಏನೇನೆಲ್ಲ ತೋರಿಸಿ, ಎಷ್ಟೇ ರಂಪ ಮಾಡಿಯಾದರೂ ಬಲವಂತವಾಗಿ ಮಗುವಿಗೆ ತಿನ್ನಿಸುತ್ತಾಳೆ. ಮುಂದೆ ಮಗು ಬೆಳೆದು ಶಾಲೆಗೆ ಹೋಗುವ ಹೊತ್ತಿಗೆ ಒಂದು ಹೋಳಿಗೆ ಹಾಕಿದಲ್ಲಿ ಎರಡು ಬೇಕು ಎಂದು ಹಠ ಹಿಡಿದರೆ ಅದಕ್ಕೆ ಬೇಕಾದಷ್ಟು ಕೊಡುವಲ್ಲಿ ತಾಯಿ ಹುಸಿ ಮುನಿಸು ತೋರಿಸುತ್ತಾಳೆ, ಅಥವಾ ಮಾಡಿದ್ದೆಲ್ಲವನ್ನೂ ನೀನೇ ತಿಂದರೆ ಮನೆಯಲ್ಲಿ ಇತರರಿಗೆ ಸಾಲದು ಎನ್ನುವ ಭಯವನ್ನು ಹುಟ್ಟಿಸುತ್ತಾಳೆ. ಮಗು ಮುಂದೆ ಬೆಳೆದು ಪ್ರಬುದ್ಧತೆಯ ಹಂತಕ್ಕೆ ಬಂದಾಗ ಮತ್ತೆ ಎಲ್ಲರೂ ಒತ್ತಾಯ ಮಾಡಿ ತಿನ್ನಿಸತೊಡಗುತ್ತಾರೆ. ಇನ್ನು ಹಾಗೇ ವಯಸ್ಸಾಗುತ್ತಾ ವಯಸ್ಸಾಗುತ್ತಾ ಏನೇನೋ ಖಾಯಿಲೆಗಳು ಬರಬಹುದು ಎನ್ನುವ ಭಯದಲ್ಲಿ ನಾಲಿಗೆಯ ರುಚಿಗೆ ಮತ್ತೆ ಕಡಿವಾಣ ಬೀಳತೊಡಗುತ್ತದೆ. ಕೊನೆಗೆ ರುಚಿಯೂ-ಚಪಲವೂ ಕಡಿಮೆಯಾಗಿ ಒಂದು ದಿನ ಈ ಲೋಕವನ್ನೇ ಖಾಲಿ ಮಾಡಬೇಕಾಗಿ ಬರುತ್ತದೆ.

ಹೀಗೆ ಪಾನೀಪೂರಿ ಮಹಿಮೆ ಎಲ್ಲಿಯವರೆಗೆ ಬಂತು ನೋಡಿ, ತಿಂದಿದ್ದೂ ಅಲ್ಲದೇ, ಮಾಡಿ ನೋಡಿದ್ದೂ ಅಲ್ಲದೆ, ಅದರ ಬಗ್ಗೆ ಬರೆದು ಓದುವುದಕ್ಕೆ ಸಮಯ ಸಿಕ್ಕಿತಲ್ಲಾ ಅಷ್ಟೇ ಸಾಕು, ಏನಂತೀರಾ?

ತುಂಬಿದವೂ ತುಳುಕುವದಕ್ಕೆ ಸದ್ಯವೇ ...?

ಕಳೆದ ವಾರ ಆಫೀಸಿನಲ್ಲಿ ನೀರಿನ ಬಾಟಲಿಯೊಂದಿಗೆ ಆಡುತ್ತಿದ್ದಾಗ ಒಂದು ಹೊಸ ಅನುಭವವಾಯಿತು. ಅದೊಂದು ಸಾಮಾನ್ಯವಾದ ೫೦೦ ಮಿಲೀ ನೀರಿರೋ ಪ್ಲಾಸ್ಟಿಕ್ ಬಾಟಲ್, ಎಲ್ಲರೂ ನೀರು ಕುಡಿಯೋ ಹಾಗೆ ನಾನೂ ನೀರು ಕುಡಿಯುತ್ತೇನಾದ್ದರಿಂದ ಅದರಲ್ಲೇನೂ ವಿಶೇಷವಿಲ್ಲ! ಅರ್ಧ ನೀರು ಕುಡಿದ ಬಾಟಲಿ ಮುಚ್ಚುಳ ಹಾಕಿ ಬದಿಗೆ ಇಡುವಾಗ ಕಂಪ್ಯೂಟರ್ ಕೀ ಬೋರ್ಡ್ ಪಕ್ಕ ನನಗೆ ಅಡ್ಡವಾಗಿ (horizontal) ಬಿದ್ದಿತು, ಅದನ್ನು ಅಲ್ಲಿಂದಲೇ ಕೇರಮ್ ಬೋರ್ಡ್ ಸ್ಟ್ರೈಕರ್‌ಗೆ ಹೊಡೆದ ಹಾಗೆ ಅದರ ಸ್ಥಳಕ್ಕೆ ಹೋಗುವಂತೆ ಅದರ ಬುಡಕ್ಕೆ ಬೆರಳಿನಿಂದ ಹಗುರವಾಗಿ ತಳ್ಳಿದೆ. ಏನಾಶ್ಚರ್ಯ, ನಾನು ಒಮ್ಮೆ ತಳ್ಳಿದರೆ ಅದು ಎರಡು ಬಾರಿ ಮುಂದೆ ಹೋಯಿತು! ಹೀಗೆ ಮತ್ತೆ ಮತ್ತೆ ಮಾಡಿದಾಗಲೂ ನಾನು ಒಮ್ಮೆ ತಳ್ಳಿದ್ದಕ್ಕೆ ಅದು ಒಂದು ರೀತಿಯ ಜರ್ಕೀ ಮೋಷನ್‌ನಲ್ಲಿ ಒಟ್ಟು ದೂರವನ್ನು ಎರಡು ಸಮನಾದ ಇಂಟರ್‌ವಲ್‌ನಲ್ಲಿ ಕ್ರಮಿಸತೊಡಗಿತು.

ಇದೇ ಪ್ರಯೋಗವನ್ನು ನಾನು ಖಾಲೀ ಹಾಗೂ ತುಂಬಿದ ನೀರಿನ ಬಾಟಲಿಗಳೊಂದಿಗೆ ಮಾಡಿದಾಗ ಅವು ಕೇವಲ ಒಂದೇ ಬಾರಿ ಮುಂದೆ ಹೋಗುತ್ತಿದ್ದವು. ಖಾಲಿ ಇದ್ದ ಬಾಟಲಿ ಸ್ವಲ್ಪ ಹೆಚ್ಚು ದೂರ ಹೋಗುವಂತೆ ಕಂಡುಬಂದರೂ, ದೂರದಲ್ಲಿ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಅದೇ ತುಂಬಿದ ಬಾಟಲಿ ತನ್ನ ಭಾರಕ್ಕೆ ಹೆಚ್ಚು ದೂರ ಹೋಗಲಿಲ್ಲ, ಅದನ್ನು ಸ್ಥಳಾಂತರ ಮಾಡುವುದಕ್ಕೆ ಹೆಚ್ಚು ಶಕ್ತಿಯ ಅವಶ್ಯಕತೆ ಸಹಜವಾಗಿ ಇತ್ತು.

ಈ ಅರ್ಧ ತುಂಬಿದ ಬಾಟಲಿಯ ಕಥೆ ಬೇರೆ - ನಾನು ಒಮ್ಮೆ ಕೊಟ್ಟ ಜರ್ಕಿಗೆ ಅದು ಎಷ್ಟು ದೂರವನ್ನು ಕ್ರಮಿಸುತ್ತಿತ್ತೋ, ಅಷ್ಟೇ ದೂರವನ್ನು ಅದರ ಒಳಗಿರುವ ನೀರು ಕೊಟ್ಟ ಜರ್ಕಿಗೆ ಕ್ರಮಿಸುತ್ತಿತ್ತು. ಆ ಬಾಟಲಿಯಲ್ಲಿ ದೆವ್ವವೇನೂ ಇರಲಿಲ್ಲ! ನಾನು ಪ್ರತೀಸಾರಿ ಪುಶ್ ಕೊಟ್ಟಾಗಲೂ ಅದು ಎರಡು ರೀತಿಯಲ್ಲಿ ಕೆಲಸ ಮಾಡುತ್ತಿತ್ತು, ಒಂದು ಇಡಿಯ ಬಾಟಲಿಯನ್ನು ಸ್ಥಳಾಂತರ ಮಾಡುವುದು, ಮತ್ತೊಂದು ಅದರೊಳಗಿನ ಅರ್ಧ ತುಂಬಿದ ನೀರನ್ನು ಸ್ವತಂತ್ರವಾಗಿ ಸ್ಥಳಾಂತರ ಮಾಡುವುದು. ಹೀಗೆ ಸ್ವತಂತ್ರವಾಗಿ ಸ್ಥಳಾಂತರಗೊಂಡ ನೀರಿನ 'ಅಲೆ'ಯ ಹೊಡೆತ ಬಾಟಲಿಯ ಎರಡನೇ ಚಲನೆಗೆ ಕಾರಣವಾಗಿತ್ತು.

ಅಂದರೆ, ಬಾಟಲಿಯ ನೀರಿನ ಚಲನಶಕ್ತಿ (kinetic energy) ಹೊರಗಿನಿಂದ ನೋಡಿದಾಗ ಅಥವಾ ಒಟ್ಟಿನಲ್ಲಿ ಬಾಟಲಿಯ ಪ್ರಚನ್ನ ಶಕ್ತಿಯಾಗಿ (potential energy) ಕಂಡು ಬಂದಿದ್ದೂ ಅಲ್ಲದೇ ಒಂದು ಸಣ್ಣ ಪುಶ್ (ಅವಕಾಶ) ಅನ್ನು ಬಳಸಿಕೊಂಡು ಅದು ಅದೇ ನೇರದಲ್ಲಿ ದುಪ್ಪಟ್ಟು ಮುಂದೆ ಹೋಗಿದ್ದನ್ನು ನೋಡಿ 'ಎಲೇ, ಅವಕಾಶವಾದಿ ಅರ್ಧ ತುಂಬಿದ ಬಾಟಲಿಯೇ!' ಎಂದು ನಾನು ಮೂಗಿನ ಮೇಲೆ ಬೆರಳಿಡುವಂತಾಯಿತು. ಖಾಲಿ ಬಾಟಲಿಗಳು ಹಾಗೂ ತುಂಬಿದ ಬಾಟಲಿಗಳ ಸ್ಥಿತಿ ನೋಡಿ ಸ್ವಲ್ಪ ತಕ್ಕಮಟ್ಟಿಗೆ ಬೇಸರವೂ ಆಯಿತು.

***

ಬಾಟಲಿಗಳಾಗಲೀ, ಕೊಡಗಳಾಗಲೀ 'ತುಂಬೋ'ದಕ್ಕೆ ಬಹಳ ಸಮಯಬೇಕು, ಒಮ್ಮೆ ತುಂಬಿದ ಮೇಲೆ ಅವುಗಳು ಒಂದು ರೀತಿ ದೊಡ್ಡ ಸಂಶೋಧನೆ ಮಾಡಿದವರ ಹಾಗೆ - ಕಡಿಮೆ ವಿಷಯಗಳ ಬಗ್ಗೆ ಹೆಚ್ಚು ಗೊತ್ತು, ಹೆಚ್ಚಿನ ವಿಷಯಗಳ ಬಗ್ಗೆ ಕಡಿಮೆ ಗೊತ್ತು ಅನ್ನೋ ಹಾಗೆ. ಅದೇ ಅರ್ಧ ತುಂಬಿದ ಕೊಡಗಳ ಕಥೆಯೇ ಬೇರೆ, ಅವುಗಳು ಯಾವಾಗಲೂ ಗೊಣಗುತ್ತಲೇ ಇರುತ್ತವೆ, ತಮ್ಮ ಅವಕಾಶ (space) ಕೇವಲ ಅರ್ಧವಷ್ಟೇ ತುಂಬಿರೋದರಿಂದ ಎಷ್ಟು ಹೊತ್ತಿಗೂ ಏನನ್ನು ಬೇಕಾದರೆ ಅದನ್ನು 'ತುಂಬಿ'ಕೊಳ್ಳುವುದಕ್ಕೂ ಸೈ ಎನ್ನುವ ಮನೋಭಾವನೆಯನ್ನು ಪ್ರದರ್ಶಿಸಿ ಒಂದು ರೀತಿ ಕೆಟ್ಟ ನಗುವನ್ನು ತುಟಿಗಳ ಮೇಲೆ ಲೇಪಿಸಿಕೊಂಡಿರುತ್ತವೆ. ಒಮ್ಮೊಮ್ಮೆ ನಮ್ಮೂರಿನ ಅವಕಾಶವಾದೀ ಪುಡಾರಿಗಳಂತೆ ಅವು ಕಂಡು ಬಂದರೂ, ಅವುಗಳ ಅರ್ಧ ತುಂಬಿದ ಸ್ಥಿತಿಯ ಮಟ್ಟಿಗೆ ನನಗೆ ಕನಿಕರವಿದೆ. ಅವುಗಳ ಕಂಠ ಪಟ್ಟಿಯ ಮೇಲೆ ಇನ್ನರ್ಧವನ್ನು ಏಕೆ, ಯಾವುದರಿಂದ ತುಂಬಿಕೊಳ್ಳಲಾಗಲಿಲ್ಲ ಎನ್ನುವ ಸದಾ ತೆರೆದ ಸವಾಲಿದೆ. ತುಂಬಿದ ಕೊಡವನ್ನು ಬಳಸಿದಾಗ ಖಾಲಿ ಆಗಿ ಅರ್ಧವಾಗಿ ಕಂಡು ಬಂದ ಕೊಡಗಳಿಗಿಂತಲೂ ತಮ್ಮ ಜಾಯಮಾನದಲ್ಲಿ ಅರ್ಧಕ್ಕಿಂತಲೂ ಹೆಚ್ಚು ತುಂಬದ ಕೊಡಗಳ ಮೇಲೆಯೇ ನನಗೆ ಮಮಕಾರ ಹೆಚ್ಚು. ನೀವು ಮಾನಕ ವಿಚಲನೆ (standard deviation) ಯನ್ನು ಲೆಕ್ಕ ಹಾಕಿ ನೋಡಿದರೆ ಅರ್ಧ ತುಂಬಿದವುಗಳೇ ಹೆಚ್ಚು ಇದ್ದಂತೆ ಕಾಣಿಸುತ್ತವೆ. ಹೀಗೆ ಅರ್ಧ ತುಂಬಿಕೊಂಡ, ಅರ್ಧವಾದ, ಎಂದೂ ತುಂಬದ ಕೊಡ ಬಾಟಲಿ ಇತ್ಯಾದಿ container ಗಳ ಸ್ಥಿತಿಗತಿಯ ಬಗ್ಗೆ ನನಗೆ ಸ್ವಲ್ಪ ಹೆಚ್ಚು ಕನಿಕರ ಕೂಡಾ.

***

ಹೀಗೆ ಅರ್ಧ ತುಂಬಿದ ಬಾಟಲಿಯ ಪ್ರಯೋಗದ ಮಾತು ಎಲ್ಲೆಲ್ಲಿಗೋ ಹೋಯಿತು - ಈ ಪ್ರಯೋಗದ ನಿಷ್ಪತ್ತಿ (inference) ಏನೂ ಅಂದರೆ ಅರ್ಧ ತುಂಬಿದ ಬಾಟಲಿಗಳು ಒಂದು ರೀತಿ 'ಸು ಅಂದ್ರೆ ಸುಕ್ಕಿನುಂಡೆ...' ಅನ್ನೋ ಜಾಯಮಾನದವು, ಒಂದು ಸಾರಿ ಹೇಳಿದ ಮಾತನ್ನು ಚಾಚೂ ತಪ್ಪದೇ ಪಾಲಿಸುವಂತಹವು, ಸ್ವಲ್ಪ ಪುಶ್ ಕೊಟ್ಟಿದ್ದನ್ನು ಮನನ ಮಾಡಿಕೊಂಡು ತಮ್ಮ ಶಕ್ತ್ಯಾನುಸಾರ ಕಷ್ಟ ಪಡುವಂತಹವು. ನನಗೆ ತೂಕವಾಗಿದ್ದುಕೊಂಡು ಚಲನೆಗೆ, ಬದಲಾವಣೆಗೆ ಆಷ್ಟೊಂದು ಮನಸ್ಸು ಮಾಡದ ತುಂಬಿದವುಗಳಿಗಿಂತ, ಬದಲಾವಣೆಗೆ ತಮ್ಮನ್ನು ಯಾವಾಗಲೂ ತೆರೆದಿಟ್ಟುಕೊಂಡ ಅರ್ಧ ತುಂಬಿದವುಗಳು ಹಾಗೂ ಅವುಗಳ ಒಡನಾಟ ಹೆಚ್ಚು ಇಷ್ಟವಾಯಿತು ಎಂದು ಹೇಳುವುದಕ್ಕೆ ಹೀಗೆ ಬರೆಯಬೇಕಾಯಿತು!

ಅರ್ಧ ತುಂಬಿದವುಗಳಲ್ಲದೇ, ತುಂಬಿದವುಗಳು ತುಳುಕೋದಕ್ಕೆ ಸಾಧ್ಯವೇ?

ನಮ್ಮ ಹಾಡು ನಮ್ಮದು

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ ಪರಿಪಾಲಿಸೈ!


ಐವತ್ತು ವರ್ಷಗಳ ನಂತರವೂ 'ಸ್ವಾಮಿದೇವನೆ ಲೋಕಪಾಲನೇ ತೇ ನಮೋಸ್ತು ನಮೋಸ್ತುತೇ...' ಎನ್ನುವ ಈ ಹಾಡಿನ ಮೇಲಿನ ವಾಕ್ಯಗಳು ತಮ್ಮ ಸತ್ವವನ್ನೇನೂ ಕಳೆದುಕೊಂಡಂತೆನಿಸಿವುದಿಲ್ಲ. ಹುಯಿಲುಗೋಳರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು...' ಎಂಬುದು ಇಂದಿಗೂ ಪ್ರಚಲಿತದಲ್ಲಿರುವ ಮತ್ತೊಂದು ಗೀತೆಯೇ. ಹೀಗೆ ಎರಡು ಹಾಡುಗಳ ಮೇಲೆ ನಮ್ಮ ಪರಂಪರೆಯನ್ನು ಅಳೆದು ತೀರ್ಮಾನ ಮಾಡಲಾಗುವುದೇ ಎಂದು ಯಾರು ಬೇಕಾದರೂ ಹುಬ್ಬೇರಿಸಬಹುದು. ಆದರೆ ನನಗಂತೂ ನಾಡಿನ ಐಕ್ಯತೆಯಲ್ಲಿ ದಿನೇದಿನೇ ವಿಶ್ವಾಸ ಕಡಿಮೆಯಾಗುತ್ತಿದೆಯೇ ವಿನಾ ಹೆಚ್ಚೇನೂ ಆಗುತ್ತಿಲ್ಲ.

ನಾವು ಈ ಹಿಂದಿನ ದಶಕಗಳನ್ನು ಒಂದು ಅರ್ಧ ಶತಮಾನವನ್ನು ಕಳೆದು ಬಂದಿದ್ದನ್ನು ಹಿಂತಿರುಗಿ ನೋಡಲೇ ಬೇಕು, ಅದರಿಂದ ಕಲಿಯುವುದಂತೂ ಬೇಕಾದಷ್ಟಿದೆ. ಅರ್ಧ ಶತಮಾನದ ಬಳಿಕವೂ 'ಕನ್ನಡವನ್ನು ಉಳಿಸಿ...' ಎಂದು ರಿಕ್ಷಾ, ಬಸ್ಸುಗಳ ಹಿಂದೆ ಬರೆಸಿಕೊಂಡು ಓಡಾಡುವ ಸ್ಥಿತಿಯಿಂದೆಂದೂ ಹೊರಬಂದಂತೆ ನಾವು ಕಾಣುವುದೇ ಇಲ್ಲ. ಒಂದು ಕಡೆ ಕಾಸರಗೋಡಿನಂತಹ ಪ್ರಾಂತ್ಯವನ್ನು ಕನ್ನಡನಾಡಿನ ಭಾಗವನ್ನಾಗಿ ಮಾಡಿ ಎಂಬ ಕೂಗು ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಕಳೆದುಕೊಂಡಂತೆ ಬೆಳಗಾವಿ ಮತ್ತಿತರ ಗಡಿಪ್ರದೇಶಗಳು ಎಂದಿಗಿಂತ ಹೆಚ್ಚಿನ ಪ್ರಾಂತೀಯ ಅಸ್ಥಿರತೆಯಿಂದ ಒದ್ದಾಡುತ್ತಿವೆ, ನವೆಂಬರ್ ಒಂದರ ಏಕೀಕರಣ ದಿನವನ್ನು ಎಷ್ಟೋ ಕಡೆಗೆ ಕರಾಳದಿನವನ್ನಾಗಿ ಆಚರಿಸಲಾಗುತ್ತಿದೆ, ಕನ್ನಡತನವೆನ್ನುವುದು ಪ್ರಶ್ನಾರ್ಥಕವಾಗಿ ಹೋಗಿದೆ.

ಶಾಲೆಗಳಲ್ಲಿ ಕನ್ನಡವನ್ನು (ಮಾಧ್ಯಮವಾಗಿ)ಕಲಿಸಬೇಕೆ ಬಿಡಬೇಕೆ, ಇಂಗ್ಲೀಷ್ ಅನ್ನು ಯಾವ ವರ್ಷದಿಂದ ಭಾಷೆ ಹಾಗೂ ಮಾಧ್ಯಮವಾಗಿ ಆರಂಭಿಸಬೇಕು ಎನ್ನುವುದಕ್ಕೆ ನಾವಿನ್ನೂ ಉತ್ತರವನ್ನು ಕಂಡುಕೊಂಡಂತಿಲ್ಲ. ಒಂದು ಕಡೆ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಶಹರಗಳು ಬೆಳವಣಿಗೆಗೆ ತಮ್ಮನ್ನು ತಾವು ತೆರೆದುಕೊಂಡಿದ್ದರೆ ಎಷ್ಟೋ ಹಳ್ಳಿಗಳಲ್ಲಿ ಸಾಕಷ್ಟು ಮೂಲಭೂತ ಅನುಕೂಲಗಳಿಲ್ಲದೇ ಇನ್ನೂ ಮುಖ್ಯವಾಹಿನಿಯಿಂದ ದೂರವೇ ಉಳಿದಿವೆ. ಕರ್ನಾಟಕದಲ್ಲೇ ಉತ್ತರ ಹಾಗೂ ದಕ್ಷಿಣದ ಜಿಲ್ಲೆಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸವಿರುವುದು ಬಲ್ಲವರ ಚಿಂತೆಗೆ ಮತ್ತೊಂದು ಕಾರಣ - ಹೀಗೆ ದೊಡ್ಡದಾಗುತ್ತಿರುವ ಕಂದಕ, ಅದರಲ್ಲೂ ಕರ್ನಾಟಕವೆಂದರೆ ಬೆಂಗಳೂರು ಎನ್ನುವ ಮನೋಭಾವನೆ ಹಲವಾರು ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ನಿರ್ಮಿಸಿದೆ.

ರಾಜಕೀಯವಾಗಿಯೂ ಸಾಕಷ್ಟು ಸ್ಥಿರತೆಯನ್ನೇನೂ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಕಂಡಂತಿಲ್ಲ. ಭಿನ್ನ-ಭಿನ್ನ ಆಡಳಿತಗಳು, ಪಕ್ಷಗಳು-ನಾಯಕರ ಧೋರಣೆ, ಮುಂದಾಲೋಚನೆ ಹಾಗೂ ಪ್ರಗತಿಯ ದೃಷ್ಟಿಯಿಂದ ರಾಜ್ಯದ ಹಿತದೃಷ್ಟಿಯಿಂದ ಏನೇನು ಕಾರ್ಯಗಳು ಆಗಬೇಕಿತ್ತೋ ಅವುಗಳೆಲ್ಲವೂ ಅಸ್ಥಿರ ಆಡಳಿತ ವ್ಯವಸ್ಥೆಯಿಂದ ಸೊರಗಿವೆ. ಆಡಳಿತದಲ್ಲಿ ಹುಟ್ಟುವ ಅಸ್ಥಿರತೆ ರಾಜ್ಯದ ನಾಯಕರುಗಳಿಗೆ ತಮ್ಮ ಪಕ್ಷದ ಶಾರ್ಟ್ ಟರ್ಮ್ ಹಿತವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿ ಕಂಡುಬರುತ್ತದೆಯೇ ವಿನಾ ದೆಹಲಿಯಲ್ಲಿ ಧ್ವನಿಯನ್ನು ಏರಿಸಿ ಮಾತನಾಡಿ ಕರ್ನಾಟಕದ ಒಳಿತನ್ನು ಸಾಧಿಸಿಕೊಳ್ಳುವುದಾಗಲೀ, ದೂರದೃಷ್ಟಿಯಿಂದ ಯೋಚಿಸಿ ಉತ್ತಮ ಯೋಜನೆಗಳನ್ನು ಸಿದ್ಧಪಡಿಸುವುದಾಗಲೀ ದೂರವೇ ಉಳಿಯುತ್ತದೆ.

ನಮ್ಮ ಹಾಡು ನಮ್ಮದು, ಆ ಹಾಡು ಐಕ್ಯಗಾನವಾಗಲಿ, ಆದರೆ ಕನ್ನಡವನ್ನು ಉಳಿಸಿಕೊಂಡು ಹೋಗುವುದೇ ನಮ್ಮ ಮುಖ್ಯ ಸಮಸ್ಯೆಯಾಗದಿರಲಿ. ಮುಂಬರುವ ದಿನಗಳಲ್ಲಿ ಈಗಾಗಲೇ ಬೇಕಾದಷ್ಟನ್ನು ತೆರೆದುಕೊಂಡಿರುವ ಕನ್ನಡಿಗರ ಔದಾರ್ಯವನ್ನು ಕೆಣಕುವ ಮತ್ಯಾವ ಘಟನೆಗಳೂ ಘಟಿಸದಿರಲಿ. ಹಳೆಯದನ್ನು ಐತಿಹಾಸಿಕವಾಗಿ ನೋಡಿ ಮುಂದುವರಿದು, ನಾವು ಎಡವಿದಲ್ಲೆಲ್ಲ ಪಾಠವನ್ನು ಕಲಿತು ಪ್ರಗತಿಯ ಕಡೆಗೆ ಸಾಗುವ ಕೆಚ್ಚೆದೆ ನಮಗೆ ಬರಲಿ. ದೇಶದಲ್ಲಿ ಕರ್ನಾಟಕ ಮತ್ತೆ ಮೊದಲಿನದಾಗಲಿ. ಕನ್ನಡ ನಮ್ಮ ಶಕ್ತಿಯಾಗಲಿ.

***

ಆಲಸ್ಯವೂ ಅಮೃತವೂ ..

ನನ್ ಕೇಳಿದ್ರೆ ಈ ಆಲಸ್ಯಾನೇ ಇರಲೀ ಅಂತೀನಿ, ಅಮೃತ ಯಾರಿಗೆ ಬೇಕಾಗಿದೆ ಸ್ವಾಮೀ? ಅದನ್ನ ಕುಡಿದು ಅಜರಾಮರರಾಗಿ ಆಮೇಲೆ ಮಾಡೋದೇನಿದೆ? Good people go to heaven ಅನ್ನೋದು ನಿಮಗೆಲ್ಲಾ ಗೊತ್ತಿರೋದೇ, bad people go everywhere! ಅಂತ ಮೊನ್ನೆ ಯಾರೋ ಸೇರಿಸಿ ಹೇಳ್ತಾ ಇದ್ದದ್ದನ್ನ ನೋಡಿ, ನಾನು ಎಷ್ಟು ಸೋಂಬೇರಿ ಅಂದ್ರೆ ನನ್ನಂತಹವರೂ ಎಲ್ಲೂ ಹೋಗೋದಿಲ್ಲ ಎಂದು ಸ್ಟೇಟ್‌ಮೆಂಟ್ ಕೊಡೋ ಮಟ್ಟಿಗೆ ಬಂದುಬಿಟ್ಟಿದ್ದೇನೆ ನೋಡಿ - ಜೊತೆಯಲ್ಲಿ ಇದನ್ನ ಬರೀತಾ ಬರೀತಾನೇ ಒಂದಿಷ್ಟು ಆಕಳಿಕೆಗಳು ಬೇರೆ ಕೇಡಿಗೆ - ಸುತ್ತಲಿನಲ್ಲಿರೋ ಗಾಳಿಯನ್ನ ಮೂಗಿನಲ್ಲಿ ಉಸಿರಾಡಿ ಬಿಡೋದಕ್ಕೂ ಸೋಂಬೇರಿತನವಾದ್ದರಿಂದಲೇ ಆಗಾಗ್ಗೆ ಬಾಯಿತೆರೆದು ದೊಡ್ಡದಾಗಿ ಒಂದೇ ಏಟಿಗೆ ಎಲ್ಲಾ ಗಾಳಿಯನ್ನೂ ಕುಡಿದು ಬಿಡೋದು - ಮತ್ತೆ ಸಾಯೋತನಕ ಉಸಿರಾಡ್ತಾನೇ ಇರು ಎಂದ್ರೆ ಯಾರಿಗೆ ತಾನೇ ಬೇಸರವಾಗೋಲ್ಲ?

'ನಿಮ್ಮಲ್ಲಿ ಯಾರು ಯಾರು ಸೋಂಬೇರಿಗಳು?' ಅಂತ ಪ್ರಶ್ನೆ ಕೇಳಿದ್ರೆ ನನಗ್ಗೊತ್ತು ನೀವೆಲ್ಲಾ ಕೈ ಎತ್ತ್‌ತೀರಾ ಅಂತ, ನಾನು ಹಾಗೆ ಕೈ ಎತ್ತಿ ತೋರಿಸಿಕೊಳ್ಳಲೂ ಆಗದಿರುವ ಮೈಗಳ್ಳ, ನನ್ನಂತಹವನನ್ನು ನೀವೇ ಬಂದು ಪತ್ತೆ ಹಚ್ಚಿ ಬಿರುದು-ಬಾವುಲಿ ಕೊಟ್ರೇ ತಗೊಂಡ್ರೆ ತಗೊಂಡ್ರೆ, ಬಿಟ್ರೆ ಬಿಟ್ಟೆ. ಈ ಆಲಸ್ಯಕ್ಕೆ ಒಂದು ಅಧಿದೇವರನ್ನ ಕಂಡ್ ಹಿಡಿದ್ರೆ ಅಂತ ಎಷ್ಟೋ ಸಾರಿ ಯೋಚ್ಸಿ ಹಾಗೆ ಮಾಡೋರ್ ಯಾರು ಅಂತ ಅಲ್ಲಿಗೇ ನನ್ನ ಕೈ ಚೆಲ್ಲಿದ್ದೇನೆ. ಆದ್ರೆ ಈ ಪ್ರಪಂಚ ಬಾಳಾ ಕೆಟ್ಟದು ಆದ್ರಿಂದ ನಾವುಗಳು ಸೋಂಬೇರಿಗಳಾದ್ರೂ ಜಗತ್ತಿಗೆ ತೋರಿಸ್ಕೋಬಾರ್ದು ಸಾರ್, ಸದಾ ಏನಾದ್ರೂ ಮಾಡೋ ಕರ್ಮಠರಂತೆ ಕೊನೆಗೆ ಏನಿಲ್ಲವೆಂದರೂ ಮುಸುಡಿಯನ್ನೊಂದು ಮಾಡಿಕೊಂಡಿದ್ರೆ ನಿಮ್ಮ ಬೇಳೇಕಾಳು ಬೆಂದಂತೆಯೇ.

ದಿನಾ ಆಫೀಸ್‌ನಲ್ಲಿ ಅದು-ಇದೂ ಮಾಡು ಅಂತ ಅವರೂ-ಇವರೂ ಹೇಳ್ತಾನೇ ಇರ್ತಾರೆ, ನಾನೋ ಎಷ್ಟು ಕಡಿಮೆ ಕೆಲ್ಸಾ ಮಾಡಿದ್ರೆ ಅಷ್ಟು ಒಳ್ಳೇದು ಅಂತ ಲೆಕ್ಕಾ ಹಾಕ್ತೀನಿ, ಸುಮ್ಮನೇ ರಿಪೀಟೆಬಲ್ ಆಗಿ ಅದೇ-ಅದೇ ಕೆಲ್ಸಾ ಮಾಡಿಕೊಂಡು ಹೆಚ್ಚು ಸಮಯಾ ವ್ಯಯಿಸೋ ಬದ್ಲಿ ಒಂದು ಫಾರ್ಮುಲಾನೋ ಅಥವಾ ಮ್ಯಾಕ್ರೋನೋ ಬರೀತೀನಿ, ಅದರಿಂದ ಕೆಲ್ಸಾ ಜಲ್ದಿ ಆಗುತ್ತೆ, ಆದ್ರೆ ಮಿಕ್ಕುಳಿಯೋ ಟೈಮಲ್ಲಿ ಏನ್ ಮಾಡ್ತೀನಿ ಅಂದ್ರೆ ಬದುಕಿನ್ ಬಗ್ಗೆ ಯೋಚಿಸ್ತೀನಿ. ಸುಮ್ನೇ ಯೋಚಿಸ್ತಾ ಕೂರೋದನ್ನ ನಾನು ಕೆಲ್ಸಾ ಅಂತ ಯಾವತ್ತೂ ಕರದೇ ಇಲ್ಲ. ಎಲ್ರೂ ಏನಾದ್ರೂ ಮಾಡಿ ತೋರಿಸು ಅಂತಾರೇ ವಿನಾ ಯೋಚನೆ ಮಾಡಿ ತೋರಿಸು ಅಂತ ಯಾರೂ ಹೇಳಿದ್ದನ್ನ ನಾನ್ ಕೇಳಿಲ್ಲ...ಅದೂ ಅಲ್ದೇ ಯೋಚನೇ ಮಾಡಿ ತೋರಿಸೋದಾದ್ರೂ ಏನನ್ನ? ನನಗೆ ಒಂದೊಂದ್ ಸರ್ತಿ ಅನುಮಾನ ಬರುತ್ತೆ, ಕೆಲವರು 'ನಾನು ಬಹಳ ದೊಡ್ಡ ಸೋಮಾರಿ!' ಅಂತ ತಮ್ಮನ್ನು ತಾವೇ ಅಂದ್‌ಕೊಳ್ತಾರೆ, ಸೋಮಾರಿತನದಲ್ಲೂ ದೊಡ್ಡದು-ಸಣ್ಣದೂ ಅನ್ನೋದು ಇದೆಯೋ ಅನ್ನೋದು ಬೇರೆ ಪ್ರಶ್ನೆ - ಹೀಗೆ ಸೋಮಾರಿ ಅಂದ್ ಕೊಳ್ಳೋರೆಲ್ಲ ಹೆಚ್ಚು ಹೆಚ್ಚು ಕೆಲ್ಸಾ ಮಾಡ್ತಾನೇ ಇರೋದನ್ನ ನೋಡಿದ್ರೆ, ನನ್ನಂಥಾ ನಿಜವಾದ ಮೈಗಳ್ಳರಿಗೂ ಅವರಿಗೂ ಏನ್ ವ್ಯತ್ಯಾಸ ಅನ್ನೋದು ಅಷ್ಟು ಕೂಡ್ಲೇ ಹೊಳೆಯೋದಿಲ್ಲ. ಅವರವರ ಕೆಲ್ಸಾ ಅವರದ್ದು, ಅದರಲ್ಲಿ ಯಾರು ಯಾರು ಕಡಿಮೆ ಮಾಡ್ತಾರೋ ಅವರೆಲ್ಲ ಶುದ್ಧ ಸೋಂಬೇರಿಗಳು ಅನ್ನೋದನ್ನ ಹೊಸ ವ್ಯಾಖ್ಯಾನ ಅಂತ ಒಪ್ಪಿಕೊಳ್ಳೋದು ಬಿಡೋದು ಎಲ್ಲಾ ನಿಮಗೇ ಸೇರಿದ್ದು.

ಈ ಲೇಜಿನೆಸ್, ಸೋಮಾರಿತನ, ಸೋಂಬೇರಿತನ, ಮೈಗಳ್ಳತನ ಅನ್ನೋದರಲ್ಲೆಲ್ಲಾ ನನಗೆ 'ಮೈಗಳ್ಳತನ' ಅನ್ನೋದು ಬಹಳ ಹಿಡಿಸಿದ ಶಬ್ದ. ಮೈ ಕಳ್ಳತನ ಅನ್ನೋದನ್ನ ಮೈ ಬಗ್ಗಿಸಿ ದುಡಿಯದವರಿಗೆ ಹೇಳೋ ಮಾತು. ಕೆಲಸಕಳ್ಳತನ ಅನ್ನೋದರಲ್ಲಿ ಅಂತಹ ಮಜಾ ಏನೂ ಇಲ್ಲ, ಇಲ್ಲಿ ಮೈ ಕಡಿಮೆ ದುಡಿಯುವಂತೆ ಮಾಡುವುದು ಕೆಟ್ಟ ಮನಸ್ಸಾದರೂ, ಕ್ರಿಯೆಯನ್ನು ಆಧರಿಸಿ ಮೈಗೆ ಕೆಟ್ಟ ಹೆಸರು ಬಂದಿತೇ ವಿನಾ ಮನಸ್ಸಿಗಲ್ಲ ನೋಡಿ. ಅದಕ್ಕೇ ದೊಡ್ಡೋರು ಅನ್ನೋದು 'ಮನ್ನಸ್ಸನ್ನ ನಿಯಂತ್ರಣದಲ್ಲಿಟ್ಟುಕೋ' ಎಂದು, ಇಲ್ಲಾ ಅಂದ್ರೆ ಹೇಳೋದು ಮನಸ್ಸು, ಮಾಡೋದು ಮೈ ಆದ್ದರಿಂದ ಮಂಗ ಮೊಸರು ತಿಂದು ಮೇಕೆ ಮುಸುಡಿಗೆ ಒರಸಿದ ಕಥೆ ಆಗುತ್ತೇ ಅಷ್ಟೇ. ನನಗೂ ಇರೋ ಬಹಳವಾದ ಆಸೆಗಳಲ್ಲಿ ವಿಶ್ವ ಮೈಗಳ್ಳರ ಸಂಘವನ್ನು ಸ್ಥಾಪಿಸಿ ಅದರ ಪ್ರಥಮ ಅಧ್ಯಕ್ಷನಾಗಿ ಮೆರೀಬೇಕು (ಕೆಲ್ಸಾ ಮಾಡಬಾರದು), ಮೈಗಳ್ಳರಲ್ಲಿ ಒಗ್ಗಟ್ಟು ಮೂಡಿಸಿ ಹುರುಪು ತರಬೇಕು ಅನ್ನೋದೂ ಒಂದು. ಹೀಗೆ ಈ ಆಸೆ ಬರುತ್ತೆ ಹೋಗುತ್ತೆ, ಹಾಗೇ ಹಲವಾರು ಯೋಚನೆಗಳೂ ಸಹ. ಹೀಗೆ ಅವ್ಯಾಹತವಾಗಿ ಬರೋ ಯೋಚನೆಗಳನ್ನೆಲ್ಲ ನಿರ್ಲಕ್ಷಿಸಿ ಸುಮ್ಮನೇ ಕುಳಿತು ಅದನ್ನ ಹೇಗೆ ನಿರ್ಲಕ್ಷಿಸಿದೆ ಎಂದು ಯೋಚಿಸುತ್ತಾ ಕೂರುವುದಿದೆ ನೋಡಿ ಅದರಲ್ಲಿರೋ ಗಮ್ಮತ್ತೇ ಬೇರೆ.

ನನ್ ಹಾಗೆ ಬೇಕಾದಷ್ಟು ಜನ ಇದ್ದಾರೆ, ಅವರುಗಳಿಗೆಲ್ಲ ಯಾವ್ ಯಾವ ಪದ ಹೊಂದುತ್ತೋ ಯಾರಿಗ್ ಗೊತ್ತು? ನನಗೊತ್ತಿಲ್ಲದ್ದೇನಾದ್ರೂ ಇದ್ರೆ, ಅದನ್ನು ತಿಳಿಸಿದ್ರೆ, ಸೋಮಾರಿ ಸಂಘದ ಬುಲೆಟಿನ್ ಬೋರ್ಡ್‌ನಲ್ಲಿ ಸದಸ್ಯರಲ್ಲದವರು ಯಾರಾದ್ರೂ ಸಿಕ್ರೆ ಪಬ್ಲಿಷ್ ಮಾಡ್‌ಸ್ತೀವಿ. ಆಸಲ್ಯ ಅಂದ್ರೆ status quo, ಅಮೃತ ಅಂದ್ರೆ ಏನೋ ಒಂದಿಷ್ಟು ತಗೊಂಡು ಕುಡೀಬೇಕು - ಯಾರು ಕೊಡ್ತಾರೆ, ಎಷ್ಟು ಕೊಡ್ತಾರೆ, ಎಷ್ಟು ಕುಡಿದ್ರೆ ಒಳ್ಳೇದು...ಮುಂತಾದ ಪ್ರಶ್ನೆಗಳಿಗೆಲ್ಲ ಉತ್ರ ಕಂಡ್ ಹಿಡೀಬೇಕಾಗುತ್ತೆ, ಆದ್ದರಿಂದಲೇ ನಾನು ಹೇಳ್ತಾ ಇರೋದು - ಆಲಸ್ಯಂ ಸತ್ಯಂ, ಅಮೃತಂ ಮಿತ್ಯo

Thursday, February 4, 2010

ಸಂಭಂದಗಳು ......

ಇವತ್ತು ಆಫೀಸಿನಿಂದ ಮನೆಗೆ ಬರ್ತಾ ಯಾವುದೋ ರೆಡಿಯೋ ಕಾರ್ಯಕ್ರಮದಲ್ಲಿ ಸಂಬಂಧಗಳ ಬಗ್ಗೆ ಏನೋ ಮಾತುಕಥೆಗಳನ್ನು ಕೇಳಿಕೊಂಡು ಬರ್ತಾ ಇದ್ದೆ, ಆ ಕಾರ್ಯಕ್ರಮದಲ್ಲಿ ಮಾತನಾಡಿದೋರೆಲ್ಲ, ಅಕ್ಕ, ತಂಗಿ, ಅಣ್ಣ, ತಮ್ಮ, ಗರ್ಲ್ ಫ್ರೆಂಡ್, ಬಾಯ್ ಪ್ರೆಂಡ್, ಗಂಡ-ಹೆಂಡತಿ, ಮದುವೆ, ವಿಚ್ಛೇದನ ಎಂದು ಏನೇನೋ ಹೇಳಿಕೊಂಡು ಬರುತ್ತಿದ್ದರು, ಇವನ್ನೆಲ್ಲ ಕೇಳಿಕೊಂಡ ನನ್ನ ಮನಸ್ಸಿನಲ್ಲಿ ಹಲವಾರು ಆಲೋಚನೆಗಳು ಟಿಸಿಲೊಡೆಯತೊಡಗಿದವು - ಈ ಅಲೋಚನೆಗಳ ಕೊನೆಗೋ ಮೊದಲಿಗೋ what bothers me most ಅನ್ನೋ ಒಂದು ಪ್ರಶ್ನೆ ಮನದಲ್ಲಿ ಉದ್ಭವವಾಗಿದ್ದೇ ತಡ ಮನಸ್ಸು ಒಂದು ರೀತಿ ಜ್ವರ ಬಂದವರ ಥರ ಆಗಿಹೋಯಿತು.

ನಾವೆಲ್ಲರೂ ಅವಕಾಶಗಳನ್ನು ಹುಡುಕಿಕೊಂಡು ಬದುಕನ್ನು ನಡೆಸಿಕೊಂಡು ಒಂದಲ್ಲ ಒಂದು ಕಡೆಗೆ ಹೋಗೋದೇನೋ ನಿಜ, ಆದರೆ ನಮ್ಮನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದ ಕೆಲವು ಋಣಾನುಬಂಧಗಳನ್ನು ನಾವು ಎಲ್ಲಿ ಮರೆಯುತ್ತೇವೋ ಅನ್ನೋದು ನನ್ನ ದುಗುಡದ ಮೂಲವಾಗಿತ್ತು, ಈ ರೀತಿಯ ಮೊರೆಯನ್ನು ಬೇರೆ ಬರಹಗಳಲ್ಲೂ ಓದಿದ್ದೇನೆ. ನನ್ನ ಮಟ್ಟಿಗೆ ಹೇಳೋದಾದರೆ ನನ್ನ ಪುಲ್‌ಟೈಮ್ ವಿದ್ಯಾಭ್ಯಾಸಕ್ಕೆ ಸಹಾಯಮಾಡಿ ನನ್ನನ್ನು ಈ ಸ್ಥಿತಿಗೆ ತಂದವರನ್ನು ನಾನು ನೆನೆಸಿಕೊಂಡು ಅವರ ಜೊತೆ ಮಾತನಾಡೋದೇ ವಾರಕ್ಕೊಂದು ದಿನ, ಅದರಲ್ಲೂ ಕೆಲವು ದಿನಗಳು ಮಾತ್ರ ಎನ್ನುವುದನ್ನು ನನ್ನ ನೆಲೆಯನ್ನು ಬಿಟ್ಟು ಬೇರೆ ನೆಲೆಯಲ್ಲಿ ನಿಂತು ನೋಡಿದರೆ ದುಃಖ ಉಮ್ಮಳಿಸಿ ಬರುತ್ತದೆ. ನನ್ನಂತಹ ಅನಿವಾಸಿಗಳಿಗೆ ಈ ಒಂದು ಭೌತಿಕ ದೂರವೂ ತೊಡಕಾಗಿ ನಿಲ್ಲುತ್ತದೆಯೇ ಹೊರತು ಸಹಾಯಕ್ಕೇನೂ ಬರೋದಿಲ್ಲ. ನಾವೆಲ್ಲ ಸಿಂಗಲ್ ಆಗಿದ್ದಾಗ, ಕೆಲಸಕ್ಕೆಂದು ಬಂದ ಮೊದಲ ದಿನಗಳಲ್ಲಿ ಈ ದೇಶದಲ್ಲೇ ಕ್ರಮೇಣ ಉಳಿದುಕೊಂಡು ಬಿಡುತ್ತೇವೆ ಅನ್ನೋದನ್ನ ನಾನಂತೂ ಯೋಚಿಸಿರಲಿಲ್ಲವೆಂದು ಕಾಣುತ್ತದೆ. ನನ್ನ ವಾರಿಗೆಯವರು ಮಾಹಿತಿ ತಂತ್ರಜ್ಞಾನವನ್ನು ಬೆನ್ನು ಹತ್ತಿ ಗುಳೆ ಹೊರಟುಹೋಗುವವರ ತರಹ ಬಂದವರೇ ವಿನಾ ಖಾಯಂ ವಲಸೆಗಾರರಾಗೇನೂ ಅಲ್ಲ. ಆದರೆ ವಾಸ್ತವದಲ್ಲಿ ಹೇಗಾಗುತ್ತದೆಯೆಂದರೆ ತಿಂಗಳುಗಳು, ವರ್ಷಗಳು ಉರುಳಿ ಕೊನೆಗೆ ಇದೇ ನಮ್ಮ ನೆಲೆಯಾಗಿಬಿಡುತ್ತದೆ, ಆ ಕ್ಷಣದಲ್ಲಿ ನಾವು ಏಕ್‌ದಂ ಎಲ್ಲರಿಂದ ದೂರ ಬಂದು ಬಿಟ್ಟೆವೆ ಎಂದು ಹೆದರಿಕೆಯಾಗತೊಡಗುತ್ತದೆ.

ನಮ್ಮ ಸಂಬಂಧಗಳು ದಿನನಿತ್ಯ ಮಾಮೂಲಿ ಗಮನವನ್ನು ಬೇಡುವಂತಹವು, ಅದರ ದಾಹವನ್ನು ವರ್ಷಕ್ಕೊಮ್ಮೆ ಹೋಗಿ ಮುಖ ತೋರಿಸುವುದರಿಂದ ತಣಿಸಲಾಗದು. ಪ್ರತಿನಿತ್ಯ ವ್ಯಾಯಾಮ ಮಾಡಿ ಸ್ನಾಯುಗಳು ಬಲವಂತವಾಗುವಂತೆ, ದಿನೇ-ದಿನೇ ಮಾಡುವ ಧ್ಯಾನದಿಂದ ಮನಸ್ಸು ಪರಿಪಕ್ವವಾಗುವಂತೆ ಸಂಬಂಧಗಳ ನಿರ್ವಹಣೆಯೂ ಪ್ರತಿನಿತ್ಯದ ಕಾಯಕವಾಗಬೇಕಲ್ಲವೇ? 'ಎಷ್ಟೋ ವರ್ಷದ ಮೇಲೆ ಮುಖ ತೋರಿಸೋಕೆ ಬಂದೋನು, ಕೇವಲ ಕೆಲವೇ ಘಂಟೆಗಳ ಮಟ್ಟಿಗೆ ಇರ್ತಾನಂತೆ!' ಎಂದು ನನ್ನನ್ನು ನನ್ನ ಅಕ್ಕ-ತಂಗಿಯರು ಧಾರಾಳವಾಗಿ ನನ್ನ ಎದುರೇ ಬೈದುಕೊಳ್ಳುತ್ತಾರೆ - ಕ್ಷಮಿಸಿ, ಅವರಿಗೆ ನಾನು ಮಾಡುತ್ತಿರುವ ಕೆಲಸದ ಗೋಜು-ಗೊಂದಲಗಳೊಂದೂ ತಿಳಿಯದು, ಅವರಿಗೆ ನನ್ನಿಂದ ಬೇಕಾಗಿರುವುದು ಏನೂ ಇಲ್ಲ, ಹಾಗಿದ್ದರೂ ನಾನು ಅವರೊಂದಿಗಿರಲಿ ಎಂದು ಅವರು ಆಶಿಸುವುದರಲ್ಲಿ ಸಹಜವಾದ ಸಹೋದರ ಪ್ರೇಮವಿದೆಯೇ ವಿನಾ ಮತ್ತೇನೂ ನನ್ನ ಕಣ್ಣಿಗೆ ಕಾಣಿಸದು. ಹಾಗಂತ ನಾನು ಹೋದಲ್ಲಿ ಬಂದಲ್ಲಿ ಎಲ್ಲರ ಮನೆಯಲ್ಲೂ ಉಳಿದುಕೊಳ್ಳಲೂ ನನಗೆ ಸಾಧ್ಯವಿಲ್ಲದಾಗಿ ಹೋಗಿದೆ, ನಾನು ಒಂದು ರೀತಿ ಬಿಳಿ ಆನೆಯ ಥರ, ನನ್ನನ್ನು ಪೋಷಿಸುವವರು ಹಲವಾರು ಜನರಿಲ್ಲದಿದ್ದರೆ ನನ್ನ ಕೈಕಾಲುಗಳೇ ಅಲ್ಲಾಡವು - ನಮ್ಮಮ್ಮ ಹೇಳೋ ಹಾಗೆ 'ಸಗಣಿ ತಿನ್ನೋರಿಗೆ ಮೀಸೆ ತಿಕ್ಕೋರು ಹದಿನಾರು ಜನ' ಎಂಬಂತೆ. ನನ್ನ ಅಣ್ಣ-ಅಕ್ಕನ ಮಕ್ಕಳಿಗೆ ನಾನು ಎಷ್ಟೋ ವರ್ಷಕ್ಕೊಮ್ಮೆ ಹೋಗಿ ಹೇಗೆ ಓದುತ್ತಾ ಇದ್ದಿ, ಹೋಮ್‌ವರ್ಕ್ ಮಾಡ್ತಾ ಇದ್ದೀಯಾ ಎಂದು ಕೇಳಿದಾಕ್ಷಣ ನನ್ನ ಜವಾಬ್ದಾರಿ ಮುಗಿಯಿತು ಎಂದು ನಾನೇಕೆ ನಿರುಮ್ಮಳವಾಗುತ್ತೇನೋ? ನನ್ನ ಸೋದರತ್ತೆ, ಚಿಕ್ಕಪ್ಪಂದಿರು ಹಾಗೆಯೇ ಮಾಡಿದ್ದರೆ ನಾನು ಇಷ್ಟೊತ್ತಿಗೆ ಎಲ್ಲಿರುತ್ತಿದ್ದೆನೋ ಯಾರಿಗೆ ಗೂತ್ತು? ನಾನೇನೋ ದೊಡ್ಡ ಮನುಷ್ಯ ಎಂದು ಅವರೆಲ್ಲರೂ ನನ್ನೆಡೆಗೆ ನೋಡುವಾಗ ನಾನು ವರ್ಷಗಳಿಗೊಮ್ಮೆ ಅವತರಿಸಿ ಬಂದರೆ ಸಾಕೇ?

ದೂರ ಇರೋದರ ಪ್ರತೀಕ ಅಗಲಿಕೆ - ನಮಗೆ ಬೇಕಾದವರಿಂದ ಎನ್ನುವುದಕ್ಕಿಂತಲೂ ನಮ್ಮ ಅಗತ್ಯವಿರುವವರಿಂದ ಎಂದರೆ ಸರಿ - ಅದನ್ನು ಯಾರು ಸರಿಪಡಿಸದಿದ್ದರೂ ಕಾಲವೇ ಸರಿ ಪಡಿಸಿಕೊಳ್ಳುತ್ತದೆ. ಮನೆಯ ಒಬ್ಬ ವ್ಯಕ್ತಿ ಮುಂದುವರಿದು ಹೋಗುತ್ತಾನೆ ಎನ್ನುವುದು ದೊಡ್ಡದೊಂದು void ಅನ್ನು ಸೃಷ್ಟಿಸದಿರಲಿ ಎನ್ನುವುದು ನನ್ನ ಇಂಗಿತ, ಹೀಗೆ ಈಗಾಗಲೇ ಹುಟ್ಟಿದ ಕಂದಕಗಳನ್ನು ಏನಾದರೂ ಮಾಡಿ ಪ್ರಯತ್ನ ಪಟ್ಟು ಮುಚ್ಚುವುದನ್ನು ಬಿಟ್ಟರೆ ಬೇರೆ ವಿಧಿಯೇ ಇಲ್ಲ. ಮುಪ್ಪಿನಾವಸ್ಥೆಯಲ್ಲಿ ಮತ್ತೆ ನಮಗೆ ಆಸರೆ ಸಿಗಲಿ ಎನ್ನುವುದಕ್ಕಿಂತಲೂ ಈಗ ನಾವು ಗಟ್ಟಿಯಾಗಿರುವಾಗ ಏನೇನು ಮಾಡಬೇಕೋ ಅದನ್ನೆಲ್ಲ ಮಾಡಬೇಕು ಎನ್ನುವುದಕ್ಕೆ ಒತ್ತುಕೊಡುತ್ತಿದ್ದೇನೆ. ಸಂಬಂಧಗಳು ಬೇಡುವ ಗಮನವನ್ನು ದುಡ್ಡಿನಿಂದಲೋ ಮತ್ತೊಂದರಿಂದಲೋ ತುಂಬಿಕೊಡುತ್ತೇನೆ ಎನ್ನುವ ಹುಂಬತನದಿಂದ ದೂರವಿದ್ದರೆ ಆಯಿತು.

***

'ಅಂತರಂಗ'ದಲ್ಲಿ ಸಂಬಂಧಗಳ ಬಗ್ಗೆ ಬಹಳ ಬರೆದಿದ್ದೇನೆ ಎನ್ನಿಸಿ ಹುಡುಕಿ ನೋಡಿದಾಗ ಸುಮಾರು ೧೬೫ ರೆಫೆರೆನ್ಸ್‌ಗಳು ಸಿಕ್ಕವು, ನನ್ನನ್ನು ಕೇಳಿದರೆ ಕನ್ನಡ ಪದಕೋಶದಲ್ಲಿ ನನಗೆ ಅತ್ಯಂತ ಇಷ್ಟವಾಗುವ ಪದ ಎಂದರೆ 'ಬದುಕು', ಅದನ್ನು ಬಿಟ್ಟರೆ 'ಸಂಬಂಧ' - ಆದರೆ ನನಗೇ ಆಶ್ಚರ್ಯವಾಗುವ ಹಾಗೆ 'ಬದುಕು' ಎನ್ನುವುದಕ್ಕೂ ೧೬೫ ರೆಫೆರೆನ್ಸ್‌ಗಳು ಸಿಕ್ಕವು! ಅದು ಗೂಗಲ್ ಅನ್ನು ಉಪಯೋಗಿಸಿ ಹುಡುಕುವುದರ ಮಿತಿ ಇದ್ದಿರಬಹುದು ಅಥವಾ ಕಾಕತಾಳೀಯವಾಗಿರಬಹುದು. ಏನೇ ಆಗಲಿ, ನನ್ನ ಬರಹಗಳಲ್ಲಿ 'ಬದುಕು' ಹಾಗೂ 'ಸಂಬಂಧ'ಗಳು ಧಾರಾಳವಾಗಿ ತೆರೆದುಕೊಂಡಿದ್ದರೆ ಅಷ್ಟೇ ಸಾಕು.

ಸಂಬಂಧಗಳು ವಿಧಿಯ ಮಸಲತ್ತಿರಬಹುದು, ಪೂರ್ವನಿಯೋಜಿತವಾಗಿರಬಹುದು; ಹಾಗಿದ್ದರೆ ಅದನ್ನು ನಿಭಾಯಿಸಿಕೊಂಡು ಹೋಗುವುದೂ ಅಷ್ಟೇ ಸಹಜವೆಂದೆನಿಸೋದಿಲ್ಲವೇಕೆ?

ಕಾಯೋ ಕೆಲಸ ಯಾರಿಗೆ ಬೇಕು .......?

ಕಾಯೋ ಕಷ್ಟಾ ಇದೇ ನೋಡಿ ಅದರಂಥಾ ಸ್ಲೋ ಪಾಯಿಜನ್ ಇನ್ನೊಂದಿಲ್ಲ! ಯಾಕೆ ಅಂತೀರೋ, ಇನ್ನೇನು ಮತ್ತೆ - ಪ್ಲಾನ್ ಮಾಡೀ ಮಾಡೀ ಇಂಥಾ ದಿನಾ ಬರುತ್ತೇ ಹೀಗ್ ಹೀಗೇ ಆಗುತ್ತೇ ಎಂದು ಮನಸ್ಸು ಏನೇನೋ ತಿಪ್ಪರ್‌ಲಾಗಾ ಹಾಕಿದ್ರೂ ಕೊನೇಗೆ ಆಗೋದೇ ಬೇರೆ, ಆದ್ದರಿಂದ ನಾನು ಇವತ್ತಿಂದ ಕಾಯೋದೋ ಬೇಡಾ ಪ್ಲ್ಯಾನ್ ಮಾಡೋದ್ ಬೇಡಾ ಅನ್ನೋ ಹೊಸಾ ನೀತಿಯೊಂದನ್ನ ಪ್ರಪಂಚಕ್ಕೆ ಸಾರೋ ಪಣಾ ತೊಟ್ಟಿದ್ದೇನೆ. ನನ್ ಪ್ರಕಾರ ಯಾರೂ ಕಾಯ್ಲೂ ಬಾರ್ದೂ ಪ್ಲಾನ್ ಮಾಡ್ಲೂ ಬಾರ್ದೂ, ಆವಾಗ್ಲೇ ಚೆಂದ, ಏನಂತೀರಿ?

ಮದ್ನ್ಯಾಹ್ನ ಆಫೀಸ್‌ನಲ್ಲಿ ಒಂದೊಂದ್ ದಿನಾ ಪಿಜ್ಜಾ ತಿನ್ನೋದೇ ಗತಿಯಾಗಿ ಹೋಗುತ್ತೆ, ಒಂದು ಸಮಯಕ್ಕೆ ಸರಿಯಾಗಿ ಕ್ಯಾಫೆಟೇರಿಯಾಕ್ಕೆ ಹೋಗೋದಕ್ಕೆ ಆಗದೇ ಇರೋದರ ಪರಿಣಾಮ, ಇನ್ನೊಂದು ಹೊಟ್ಟೆ ಪರಮಾತ್ಮನ ಆರ್ತ ಮೊರೆಗೆ ಓಗೊಟ್ಟು ಅರ್ಜೆ‌ನ್ಟಾಗಿ ಏನಾದ್ರೂ ಸಿಗುತ್ತೇನೋ ಅಂದ್ರೆ - ಅದೂ ವೆಜಿಟೇರಿಯನ್ನೇ ಆಗಬೇಕು ನೋಡಿ, ಈ ದೇಶದಲ್ಲಿ ವೆಜಿಟೇರಿಯನ್ ತಿನ್ನೋ ಈ ಹಣೇಬರಹಕ್ಕೆ ಒಂದಿಷ್ಟು ಬೆಂಕಿ ಹಾಕಾ - ನಮ್ಮಲ್ಲಿ ಸಿಗೋದೇ ವೆಜ್ಜಿ ಪಿಜ್ಜಾ - ಅದನ್ನ ತಗೊಂಡು ನಮ್ ಚೆಫ್ ಹೈ ಸ್ಪೀಡ್ ಅವನ್ ನಲ್ಲಿಟ್ಟು ಒಂದೆರಡು ನಿಮಿಷ ಕಾಯಿ ಅಂತಾನೆ, ಅವಾಗಿರೋ ತಹತಹ ಇದೇ ನೋಡಿ ಅದರಂಥ ಕೆಟ್ಟ ಸ್ಥಿತಿ ಇನ್ನೊಂದಿಲ್ಲ. ಹೊಟ್ಟೆ ಒಂದೆರಡು ಸರ್ತಿ ಮುರ್ದು ಕುರ್ರ್ ಅಂತ ಬೇರೆ ಬೇರೆ ಸೌಂಡ್ ಮಾಡಿ 'ನನಗೆ ಹಸಿವಾಗಿದೆ' ಅಂತ ಹೇಳಿ ಚುರುಗುಟ್ಟೋ ಹೊತ್ನಲ್ಲಿ ಎಂಥಾ ಆಧುನಿಕ ತಂತ್ರಜ್ಞಾನದ ಹೈ ಸ್ಪೀಡ್ ಅವನ್ನೂ ನಿಧಾನ ಅನ್ನಿಸಿಬಿಡುತ್ತೆ. ಎಷ್ಟೋ ಸಾರಿ ಹಾಗೆ ತಣ್ಣಗಿರೋದನ್ನೇ ಯಾಕೆ ತಿನ್ನಬಾರ್ದೂ ಅಂತ ಅನ್ನಿಸಿಯೂ ಬಿಟ್ಟಿದೆ.

ಅದಿರ್ಲಿ, ಊಟತಿಂಡಿ ವಿಚಾರ ಬಿಡಿ, ಇನ್ನ್ಯಾವುದರಲ್ಲಾದರೂ ನೀವು ಯಾವತ್ತಾದ್ರೂ ಆಲೋಚಿಸಿದ ಹಾಗೆ, ಪ್ಲಾನ್ ಮಾಡಿದ ಹಾಗೆ ಆಗಿದೆಯಾ? ಅಕಸ್ಮಾತ್ ಹಾಗೆ ಆಗಿದ್ರೂ ಎಲ್ಲೋ ಕಡಿಮೆ ಪ್ರಮಾಣದಲ್ಲಿ ಅನ್ನೋದನ್ನ ನೀವೂ ಒಪ್ಪೋದಿಲ್ವೇ? ನಾವು ಅಂದ್‌ಕೊಂಡ ಹಾಗೆ ಆಗೋದಿಲ್ಲ ಅನ್ನೋದಾದ್ರೆ ಪ್ಲ್ಯಾನ್ ಯಾಕ್ ಮಾಡಬೇಕು ಅನ್ನೋದು ಇವತ್ತಿನ ಹೊಸ ಜಿಜ್ಞಾಸೆ. ಅಲ್ದೇ ಪ್ರತಿಯೊಂದ್ ಪ್ಲ್ಯಾನ್‌ನಲ್ಲೂ ಒಂದಿಷ್ಟು ಕಾಯಲೇ ಬೇಕಾದ ಖಾಯಿಲೆಯನ್ನೂ ನಾವು ಏನು ಮಾಡಿದ್ರೂ ಅವಾಯ್ಡ್ ಮಾಡೋಕಾಗಲ್ಲ ಅಂದ್‌ಮೇಲೆ ಮೊದಲೇ ಪೂರ್ವಯೋಜಿತವಾದ 'ಕಾಯುವಿಕೆ'ಯನ್ನ ಕಾಯುವಿಕೆ ಅಂತ ಕರೆಯದೇ ಅದನ್ನ ಇನ್ನ್ಯಾವುದಾದ್ರೂ ಒಂದ್ ಹೆಸರಲ್ಲಿ ಕರೆದ್ರೆ ಹೆಂಗೆ?

ನೀವು 'ಕಾಯೋ ತಂದೆಯೇ, ದೇವಾ ಕರುಣಿಸು...' ಅನ್ನೋ ಹಾಡು ಕೇಳಿಲ್ವಾ? ಅದನ್ನ ಬರೆದ ಕವಿ, ದೇವರಿಗೇ 'ಸ್ವಲ್ಪ ತಡಿ - ಕರುಣಿಸುವ ಮುನ್ನ' ಅಂತ ಯಾಕೆ ಹೇಳಿದ ಅಂತಾ ನಾನು ಬಹಳ ಯೋಚ್ನೇ ಮಾಡಿದ್ದೇನೆ. ಇಲ್ಲವೆಂದ್ರೆ ದೇವರಿಗೆ 'ನಮ್ಮನ್ನು ಕಾಯೋ' ಅಂತ ಹೇಳೋದರಲ್ಲೇನಾದ್ರೂ ಅರ್ಥಾ ಇದೆಯಾ? ಅಥವಾ ದೇವರಿಗೆ ನಾವು 'ಕಾಯ್‌ಬೇಡಾ' ಅಂದ್ರೆ ಕಾಯೋದಿಲ್ಲಾ ಅಂತ ಅರ್ಥವೇ? ನನಗೆ ಬಹಳ ಇಷ್ಟವಾದ ಹಾಡುಗಳಲ್ಲಿ 'ಕೃಷ್ಣಾ ನೀ ಬೇಗನೆ ಬಾರೋ...' ಕೂಡಾ ಒಂದು. ಮತ್ತೆ, ಆತ ಕೃಷ್ಣಾ ಪರಮಾತ್ಮ ಆದರೇನು, ಯಾರ್ ಆದರೇನು 'ಬೇಗನೆ' ಬರಬೇಕಪ್ಪಾ! ಆವಾಗ್ಲೇ ಮಜಾ ಇರೋದು...ಅಕಸ್ಮಾತ್ ಒಂದ್ ಘಳಿಗೆ ಏನಾದ್ರೂ ಬರೋದು ಹೆಚ್ಚೂ ಕಡಿಮೆ ಆದ್ರೆ ದುರುಳ ದುಶ್ಯಾಸನನಂತಹವರು ಎಷ್ಟೋ ಜನ ದ್ರೌಪದಿಯಂತಹವರ ಸೀರೆ ಸೆರೆಯೋದಕ್ಕೆ ರೆಡಿ ಇರ್ತಾರೆ, ಆ ಸಮಯದಲ್ಲಿ ದುಶ್ಯಾಸನನಂತಹವರಿಗೆ ತಡೆಯೋಕ್ ಆಗೋದಿಲ್ಲ, ಇನ್ನು ದ್ರೌಪದಿಯಂತಹವರಿಗೆ ಹೇಗೆ ಆಗುತ್ತೆ? ಆದ್ರಿಂದ್ಲೇ ಕೃಷ್ಣ ಬೇಗನೆ ಬರಬೇಕು. ನಮ್ ಕವಿಗಳಿಗೆ ಇನ್ನು ಮುಂದೆ ಏನ್ ಬೇಕಾದ್ರೂ ಬರೀರಿ, ಎಲ್ಲಾ ಕಡೆ ಬರೋದು-ಹೋಗೋದು, ಆಗೋದು-ಬಿಡೋದು ಇವನ್ನೆಲ್ಲ ಆದಷ್ಟು ಬೇಗನೆ ಮಾಡಲು ಹುಮ್ಮಸ್ಸು ಕೊಡುವಂತೆ ನನ್ನ ಚಿಕ್ಕದೊಂದು ಮನವಿ ಸಲ್ಲಿಸಿಬಿಟ್ರೆ ಅಂತಾ ಎಷ್ಟೋ ಸರ್ತಿ ಯೋಚ್ನೇ ಮಾಡಿದ್ದೇನೆ.

ಬದುಕು ಅಂದ್ರೆ ಒಂದ್ ಸಿನಿಮಾ ಇದ್ದಂಗಿರಬೇಕಪ್ಪಾ, ಹುಟ್ಟಿದ ಮಕ್ಳು ಕಾಲೇಜ್ ಸೇರೋದಕ್ಕೆ ಕೇವಲ ಕೆಲವೇ ನಿಮಿಷಗಳು ಬೇಕಾಗೋ ಹಾಗೇ, ಯುವಕರಿಂದ ಮುದುಕರು ಆಗೋದಕ್ಕೆ ಒಂದೆರಡು ಘಂಟೆ ಮಾತ್ರ ಸಾಕಾಗೋ ಹಾಗೆ, ದಿನಗಳು ಉರುಳೋದಕ್ಕೆ ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರನ್ನು ಗಾಳಿಗೆ ಹಾರಿಸೋದನ್ನು ತೋರಿಸಿದ ಹಾಗೆ - ಎಲ್ಲವೂ ವೇಗಮಯ. ಇಲ್ಲಾ ಅಂದ್ರೆ 'ಬೀಸ್ ಸಾಲ್ ಬಾದ್' ಅನ್ನೋ ಸಿನಿಮಾನ ಮೊದಲ ಭಾಗ ಶುರೂ ಮಾಡಿ, ಮುಂದಿನ ಭಾಗವನ್ನ ಇಪ್ಪತ್ತು ವರ್ಷ ಬಿಟ್ಟು ಬಂದ್ ನೋಡಿ ಅನ್ನೋ ಹಾಗಿದ್ರೆ ಏನ್ ಮಜಾ ಇರ್ತಿತ್ತು ಅದರಲ್ಲಿ? ಬೀಸ್ ಸಾಲ್ ಪೆಹಲೆ ಆಗಿರೋ ಘಟನೆಗಳನ್ನೆಲ್ಲ ಚಿಕ್ ಚಿಕ್ ಹುಡುಗ್ರು ನೆನಪಿಟ್ಟುಕೊಂಡು ಪ್ರತಿಯೊಂದರ ಡೀಟೈಲನ್ನೂ ಹೇಳೀ ಹೇಳೀ ಖಳನಾಯಕನಿಗೆ ಒದೆಯೋದಿಲ್ವಾ? ಒಂದೆರಡು ಘಂಟೆ ಆದಮೇಲೆ ಬರೋ ಇಂಥಾ ಸನ್ನಿವೇಶಗಳು ನಮೆಗೆಲ್ಲಾ ಮಜಾ ಕೊಟ್ಟು ಇಂಥಾ ಚಿತ್ರಗಳು ನೂರು ಇನ್ನೂರು ದಿನಾ ಓಡೋದಿಲ್ವಾ? ಹಾಗಿರಬೇಕು ನೋಡಿ ಬದುಕು ಅಂದ್ರೆ - ಅದನ್ನ ಬಿಟ್ಟು ಪ್ರತಿಯೊಂದಕ್ಕೂ ಕಾಯಿ ಅಂತ ಯಾರೋ ಒಂದು ಗೆರೆ ಎಳೆದು ಹೋದ ಹಾಗಿದೆ ಅನ್ಸುತ್ತೇ ಎಷ್ಟೋ ಸರ್ತಿ. It is not fair, if I have to wait, I will lose weight ಅಂತಾ ಎಷ್ಟ್ ಕೂಗಿದ್ರೂ ಯಾರೂ ಕೇಳೋದಿಲ್ಲ - ಎಲ್ಲಾ ಬಿಡಿ ನಾವು ಮಾಡೋ ಚಾಟ್ ವಿಂಡೋಗಳಲ್ಲೂ brb ಅಂಥಾ ಹೋದೋರು ಎಷ್ಟೋ ಸರ್ತಿ ಹಿಂತಿರುಗಿ ಬರೋದೇ ಇಲ್ಲಾ. ಹೋಗ್ತೀವಿ ಅಂತ ಹೇಳಿ ಹೋದ್ರೆ ಅವರಪ್ಪನ್ ಮನೆ ಗಂಟೇನು ಖರ್ಚಾಗುತ್ತೇ? ಇನ್ನೇನು ಬಂದೆ ಅಂಥ ಹೇಳೀ ಒಂದ್ ರೀತಿ ಬ್ರಹ್ಮಶೌಚಕ್ಕೆ ಹೋದ ಹಾಗೆ ಹೋಗೋರನ್ನ ನಾನು ಕೂತು ಕಾಯೋದೇ ಬಂತು, ಅವರು ಬರೋ ಹೊತ್ತಿಗೆ ಒಂದೆರಡು ಕೇಜಿ ತೂಕ ಕಡಿಮೆ ಆಗೋದಿರಲಿ, ಒಂದೆರಡು ತಿಂಗಳ ವಯಸ್ಸೂ ಹೆಚ್ಚಾಗಿ ಹೋಗಿರುತ್ತೆ!

ನೀವೂ ಎಲ್ಲಾ ಕಡೆ ಕಾಯ್‌ತೀರಾ? ನಾನಂತೂ ಎಲ್ಲಾ ಕಡೆ ಕಾಯ್ತೀನಿ - ಸೋಮವಾರ ಬೆಳಿಗೆ ಆರಂಭವಾಗುವ ಟ್ರಾಫಿಕ್ ಲೈಟ್‌ಗಳಿಂದ ಹಿಡಿದು ಬದುಕು ಹೀಗಾಗುತ್ತೇ ಹಾಗಾಗುತ್ತೆ ಅಂತ ದೊಡ್ಡ ದೊಡ್ಡ ಯೋಚ್ನೆಗಳನ್ನೆಲ್ಲ ತಲೆ ತುಂಬ ಹೊತ್ತ್‌ಕೊಂಡು, ಕಣ್ಣಲ್ಲಿ ಬಣ್ಣವನ್ನು ತುಂಬಿಕೊಂಡು ಯಾವುಯಾವುದಕ್ಕೋ ಕಾಯ್ತೀನಿ. ಪ್ರತಿಯೊಂದು ಕಾಯುವಿಕೆಯೂ ಒಂದ್ ರೀತಿ ರೊಟ್ಟಿ ಹೆಂಚಿನ ಮೇಲೆ ಕಾದ ಅನುಭವಕ್ಕೆ ಸರಿಸಮವಾಗಿ (ಹೆಚ್ಚೂ ಕಡಿಮೆ) ಇದ್ರೂ, ಕಾಯೋದೇ ಕೈಲಾಸ ಅಂತ ಯಾವತ್ತೂ ಅನ್ಸಿದ್ದೇ ಇಲ್ಲ. ಕಾಯೋದು ಕೈಲಾಸ ಆದ್ರೆ, ಆ ದೇವ್ರಾಣೆ ನನಗೆ ಅದು ಬ್ಯಾಡಪ್ಪಾ, ಕೈಲಾಸವಾಸಿಗಳಾದ ಮೇಲೂ ಇನ್ನೂ ಕಾಯೋದೂ ಅಂದ್ರೆ ಯಾವುದಕ್ಕಾಗಿ, ಮುಂದಿನ ಜನ್ಮಾಕ್ಕಾಗಿಯೇ? ಅಥವಾ ಇಂಥಹ ಹಲವು ಮಿಲಿಯನ್ ಜನ್ಮಗಳ ನಂತರ ಬರೋ ಮೋಕ್ಷಕ್ಕಾಗಿಯೇ? ನೀವೇ ಹೇಳಿ ಇವತ್ತೂ ನಾಳೆ ಆಗದಿರೋ ಹೋಗದಿರೋದು ಮೋಕ್ಷ ಯಾವನಿಗ್ ಬೇಕಾಗಿದೆ? ಅಂಥ ಮೋಕ್ಷ ನಿಮಗೇ ಇರಲಿ, ಅಲ್ಲೀ ತನಕ 'ನಾರಾಯಣ ನಾರಾಯಣ' ಎಂದು ಜಪತಪ ಮಾಡ್‌ಕೊಂಡ್ ಕಾಯ್ತಾನೇ ಇರಿ, ನನಗಂತೂ ಬೇಕಾಗಿಲ್ಲಪ್ಪ!

***

ಕಾಯೋದು ನನ್ ಹಣೇಬರಹ, ಅದಕ್ಕೇನು ಮಾಡೋಕಾಗಲ್ಲ ಅಂತ ಈಗತಾನೇ ಯಾರೋ ಒಬ್ರು ಹೇಳಿದ್ರು. ಸರಿ, ನನ್ನ್ ಜೊತೆ ಲೋಕಾನೇ ಕಾಯೋ ಹಾಗಿದ್ರೆ ಎಷ್ಟೋ ಚೆನ್ನಾಗಿರ್ತಿತ್ತು, ಎಲ್ಲಾ ಕಡೇ ನಾನೊಬ್ಬನೇ ಕಾಯ್‌ಬೇಕಾ...ನನ್ ಹಾಗೆ ಈ ಕಾಯೋದು ಅನ್ನೋದು ಎಲ್ಲರಿಗೂ ಕಾಮನ್ ಆಗಿದ್ರೆ, ಅದನ್ನ ಯಾಕೆ ಬ್ರಾಕೆಟ್ ಇಂದ ಹೊರಗೆ ತೆಗೀಬಾರ್ದು? ಪ್ರತಿಯೊಬ್ಬರಿಗೂ ಅಪ್ಲೈ ಮಾಡೋ ಬದ್ಲು ಒಂದು ದೊಡ್ಡ ವೇರಿಯಬಲ್ ಅನ್ನು ಎಲ್ಲರಿಗೂ ಯಾಕೆ ಸೃಷ್ಟಿಸಬಾರ್ದು? ಇಷ್ಟು ಹೇಳಿ ಅಲ್ಲಲ್ಲ ಬರೆಯೋ ಹೊತ್ನಲ್ಲಿ 'ಕಾಯ್ದೇ ಕೆನೆ ಕಟ್ಟೋದಿಲ್ಲಾ...' ಅಂತ ಅಡುಗೆಮನೆಯಿಂದ ಸ್ವರ ಬರ್ತಾ ಇದೆ, ಸ್ವಲ್ಪ ನೋಡ್ತೀನಿ ನನಗೋಸ್ಕರ ಏನ್ ಕಾದಿದೆಯೋ ಎಂದು!

***

ಹೀಗೆ ಹೋಗಿ ಹಾಗೆ ಎಮ್. ಎಸ್. ಮಾಡಿ ಬಂದೆ, ಅಥವಾ ಎಚ್.ಒನ್. ವೀಸಾದಲ್ಲಿ ಸಿಕ್ಕಿರೋ ಕೆಲ್ಸಾ ಕೇವಲ ಆರೇ ವರ್ಷಾ ಅಂತ ಹೇಳಿ ಬಂದಿರೋ ನನ್ನಂತಹವರನ್ನ ಎಷ್ಟು ಜನ ಎಲ್ಲೆಲ್ಲಿ ಕಾಯ್ತಾ ಇದ್ದಾರೋ, ಅವರಿಗೆಲ್ಲ ನನ್ನಂಥವರು brb ಅಂತ ಹೇಳಿ ಎಷ್ಟು ವರ್ಷಗಳಾಯ್ತೋ ಅಂತ ಅನ್ನಿಸ್ತು ಈ ಲೇಖನ ಮುಗಿಸಿ ಪೋಸ್ಟ್ ಮಾಡೋದಕ್ಕೆ ಕಾಯೋದೊರಳಗೆ!

ಕಣ್ಣಿನ ಭಾಷೆಗೆ ಪದಗಳು ಏಕೆ ಬೇಕು ?

ಒರಟರಲ್ಲಿ ಒರಟ ಊರು ಎಂದರೆ ನಮ್ಮೂರು, ಏಕೆಂದರೆ ಅಲ್ಲಿ 'ಥ್ಯಾಂಕ್ಯೂ' ಎನ್ನೋ ಪದಬಳಸದೇ ದಿನವನ್ನೇಕೆ ವರ್ಷಗಳನ್ನೇ ಕಳೆಯಬಹುದು. ಆದರೂ ತಮ್ಮ ಊರು ದೇಶಗಳಲ್ಲೇ ಪರದೇಶಿಗಳಾದ ನನ್ನಂತಹವರು ಕಲಿತ ಯಾವುದೋ ಒಂದಿಷ್ಟು ಪದಗಳನ್ನು ಹೊತ್ತು ತಂದು ಸಾಕಿಕೊಂಡಿದ್ದಿದೆ, ಆದರೂ ನಾನು 'ಥ್ಯಾಂಕ್ಯೂ' ಎಂದಾಗಲೆಲ್ಲ ಹೆಚ್ಚು ಎಂದರೆ 'ನೋ ಮೆನ್ಷನ್' ಬರುತ್ತದೆಯೇ ಹೊರತು, 'ಯು ಆರ್ ವೆಲ್‌ಕಂ' ಅನ್ನೋದು ಉತ್ತರವಾಗೋದಕ್ಕೆ ಸಾಧ್ಯವೇ ಇಲ್ಲ! ನನ್ನ 'ಥ್ಯಾಂಕ್ಯೂ'ಗಳನ್ನು ತಮಗೆ ಗೊತ್ತಿರುವ ಯಾವುದೇ ಪರಿಭಾಷೆಯಲ್ಲಿ ಅಳತೆ ಮಾಡಲಾಗದಿರುವ ಸರಳ ಹಾಗೂ ಮುಗ್ಧರ ಮುಂದೆ ಬಾಯಿಬಿಟ್ಟು ಆಡುವ ಮಾತುಗಳಿಗಿಂತ ಕಣ್ಣಿನ ಭಾಷೆಗೇ ಹೆಚ್ಚು ಪ್ರಾಧಾನ್ಯತೆ, ಇವತ್ತಿಗೂ ಅದು ನಮಗೆ ಚೆನ್ನಾಗಿ ಗೊತ್ತು.

'ತಾಯೀ, ಮೇಷ್ಟ್ರು ಮಗಾ ಬಂದಾರೆ, ಒಂದಿಷ್ಟು ಹಣ್ಣ್ ಕೊಟ್ಟ್ ಕಳುಸು...' ಎನ್ನೋ ಮಾತಿನಲ್ಲಿ ಒಬ್ಬ ಬಡ ರೈತನ ಔದಾರ್ಯತೆ ತುಂಬಿ ತುಳುಕುತ್ತದೆ, ಅಂಥೋರ ಮುಂದೆ ನಾನು ಹೇಗಾದರೂ ಹಲ್ಲು ಗಿಂಜಿ ಥ್ಯಾಂಕ್ಯೂ ಎನ್ನಲಿ? ಹಾಗೇ ಬುಟ್ಟಿಯಲ್ಲಿ ತುಂಬಿಕೊಟ್ಟ ಹಣ್ಣುಗಳಾಗಲೀ, 'ನಿಮಗೆ ಎಷ್ಟು ಬೇಕೋ ಅಷ್ಟು ಅನಾನಸ್ ತಗೊಳ್ರೀ' ಎನ್ನೋ ದೊಡ್ಡತನದ ಮುಂದೆ ನನಗೆ ಗೊತ್ತಿರುವ ನಾಗರಿಕ ಪ್ರಪಂಚದ ಮಾತುಗಳೆಲ್ಲವೂ ಕಟ್ಟಿಹೋಗುತ್ತವೆ. ನಾನು ಇವತ್ತೂ ನಿನ್ನೆ ವರ್ಷಗಳಿಗೊಮ್ಮೆ ಮುಖ ತೋರಿಸುವ ಪರದೇಶಿಯಾದದ್ದಕ್ಕೆ ಸಿಕ್ಕ ಬಳುವಳಿಯ ಬಗ್ಗೆ ಹೇಳುತ್ತಿಲ್ಲ, ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ನನ್ನ ಹೈ ಸ್ಕೂಲಿನ ದಿನಗಳಲ್ಲಿಯೂ ಇವೇ ಮಾತುಗಳು ಸತ್ಯವಾಗಿದ್ದವು. ನಮ್ಮೂರಿನ ಓದುಬಾರದ ರೈತರು ತಾವು ಬೆಳೆದ ಬೆಳೆ, ತಮ್ಮಲ್ಲಿ ದೊರೆಯುವ ಹಣ್ಣು ಹಂಪಲುಗಳು, ತಿಂಡಿ ತಿನಿಸುಗಳ ಬಗ್ಗೆ ಎಂದಿಗೂ ಚೌಕಾಸಿ ಮಾಡಿದ್ದನ್ನು ನಾನು ಕಾಣೆ.

ಹಾಗೇ ಊರೂರು ತಿರುಗುತ್ತಾ, ಅಲ್ಲಿಲ್ಲಿ ಹೊರಗಿನ ಪರಿಸರವನ್ನು ನೋಡಿ ಕಲಿಯುತ್ತಾ ನಿಧಾನವಾಗಿ 'ಥ್ಯಾಂಕ್ಯೂ-ವೆಲ್‌ಕಮ್' ನನ್ನ ಮನೆಯ ಮಾತಾಗತೊಡಗಿದವು. ಕಲಿತದ್ದು ತುಸು ಹೆಚ್ಚೇ ಎನ್ನುವಂತೆ ನನಗೆ ಮನೆಯಲ್ಲಿ ಊಟಬಡಿಸಿದವರಿಗೂ ದೇವಸ್ಥಾನದಲ್ಲಿ ತೀರ್ಥ ಕೊಟ್ಟವರಿಗೂ ನಾನು 'ಥ್ಯಾಂಕ್ಯೂ' ಎಂದು ಬಹಿರಂಗವಾಗಿ ಹೇಳಿ ನಾಲಿಗೆಯ ತುದಿ ಸುಟ್ಟವರಂತೆ ಮುಖ ಮಾಡಿಕೊಂಡು ಮನದಲ್ಲೇ ಹಳಿದುಕೊಂಡ ದಿನಗಳು ಬಹಳ ಹಳೆಯವೇನಲ್ಲ. ಇವತ್ತಿಗೂ ಈ ಕಡೆ ಅಮೇರಿಕನ್ ಶೈಲಿಯಲ್ಲಿ 'ಥ್ಯಾಂಕ್ಯೂ'ವನ್ನು ಬಳಸಲು ಬರದೇ, ಅತ್ತ ನಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸುವುದನ್ನೂ ಸರಿಯಾಗಿ ಅಭಿವ್ಯಕ್ತಗೊಳಿಸದೇ ಎಷ್ಟೋ ಸಾರಿ ತೊಳಲಾಡಿದ್ದೇನೆ. ನನ್ನ ಇಂಗ್ಲೀಷ್ ಎಷ್ಟು ಬೇಕಾದರೂ ಸುಧಾರಿಸಲಿ, ಸುಧಾರಿಸುತ್ತಲೇ ಇರಲಿ, ನಾನು ಬಳಸುವ 'ಥ್ಯಾಂಕ್ಯೂ-ವೆಲ್‌ಕಮ್-ನೋ ಥ್ಯಾಂಕ್ಸ್' ಮುಂತಾದ ಪದಗಳಿಗೆ ಜೀವ ಮೂಡಿಸುವ ಕಲೆ ನನ್ನಲ್ಲಿನ್ನೂ ಮೈಗೂಡಿಲ್ಲವೆಂದೇ ಹೇಳಬೇಕು.

ಮಾನವ ಸಹಜವಾದ ಪ್ರಕ್ರಿಯೆಗಳಲ್ಲಿ ನಾವು ಕೃತಜ್ಞತೆಯನ್ನು ತೋರಿಸುವುದೂ ನಮ್ಮ ಸಂವಹನದ ಒಂದು ಮುಖ್ಯವಾದ ಅಂಗ. ಅದನ್ನು ಬೇರೆಬೇರೆ ಪರಿಸರ, ಹಿನ್ನೆಲೆ ಹಾಗೂ ಸಂಸ್ಕೃತಿಗಳಲ್ಲಿ ರೂಢಿಯಲ್ಲಿ ಬೆಳೆಸಿಕೊಳ್ಳುತ್ತೇವೆ. ಹಾಗಿದ್ದಾಗ ಉತ್ತರದ ಆಚಾರ-ವಿಚಾರಗಳು ದಕ್ಷಿಣದವರಿಗಿಂತಲೂ, ಪೂರ್ವದ ವೈವಿಧ್ಯತೆಗಳು ಪಶ್ಚಿಮದವರಿಗಿಂತಲೂ ವ್ಯತ್ಯಾಸವಾಗಿರುತ್ತವೆ ಎಂದರೆ ಅದೊಂದು ಸಹಜವಾದ ಅಂಶ. ಸರಿ, ನನಗೆ ಇಲ್ಲಿ ಒಪ್ಪಿಗೆಯಾಗುವ ನಡವಳಿಕೆಗಳನ್ನು ನಾನು ಮತ್ತೊಂದು ಪರಿಸರದಲ್ಲಿ ಬಲವಂತವಾಗೇಕೆ ಹೇರಬೇಕು ಹಾಗೂ ಅಲ್ಲಿನವರಿಂದ ಇಲ್ಲಿ ದೊರಕಬಹುದಾದ ಪ್ರತಿಕ್ರಿಯೆಯನ್ನೇಕೆ ನಿರೀಕ್ಷಿಸಬೇಕು? ನಾನು ಹೋದಲ್ಲಿ ಬಂದಲ್ಲಿ ನನ್ನ ದೇಶೀಯ (native) ಪರಿಸರವನ್ನು ತೆಗೆದುಕೊಂಡು ಹೋಗೋದೇನೋ ನಿಜ, ಆದರೆ ನನ್ನ ಪರಿಧಿಯಿಂದಾಚೆಗಿರುವ ದೊಡ್ಡದಾದ ಸಮೂಹ ಅಳವಡಿಸಿಕೊಂಡಿರುವ ನಡವಳಿಕೆಗಳಲ್ಲಿ ನನ್ನನ್ನು ನಾನು ಕಂಡುಕೊಳ್ಳಬೇಕೇ ವಿನಾ ನನ್ನ ಹಾಗೆ ಅವರಿರಲಿ ಎನ್ನಲಾದೀತೇ?

ಭಾರತದಲ್ಲಿ, ಇನ್ನೂ ಸರಿಯಾಗಿ ಹೇಳಬೇಕೆಂದರೆ ನಮ್ಮೂರುಗಳಲ್ಲಿ ನಾವು ಯಾರೂ ನಿಶ್ಚಿತವಾಗಿ (explicit) 'ಧನ್ಯವಾದ'ಗಳನ್ನು ಅರ್ಪಿಸೋದಿಲ್ಲ. 'ಬಹಳ ಧನ್ಯವಾದಗಳು...' ಎನ್ನೋ ಮಾತು ನನಗೆ ಸಹಜವೆನಿಸೋದಿಲ್ಲ, ಅದರ ಬದಲಿಗೆ ಒಂದು ತುಂಬಿದ ನೋಟ ಹಲವಾರು ಪದಗಳನ್ನು ಅವ್ಯಕ್ತವಾಗಿ (implicit) ಹೊರಹಾಕಬಲ್ಲವು - ಅದು ಒಬ್ಬ ಓದು ಬಾರದ ರೈತನ ನೋಟವಿರಬಹುದು, ಶಾಲಾ ಬಾಲಕನದ್ದಿರಬಹುದು, ಅಥವಾ ಸರ್ಕಾರಿ ಅಧಿಕಾರಿಯದ್ದಿರಬಹುದು. ಪದಗಳ ದಾಕ್ಷಿಣ್ಯದಲ್ಲಿ ಬಿದ್ದು ಒದ್ದಾಡುವ ಭಾಷೆಯಲ್ಲಿ ನಾವು ಅಂದುಕೊಂಡಿದ್ದನ್ನೆಲ್ಲಾ ವ್ಯಕ್ತಗೊಳಿಸಲು ಸಾಧ್ಯವಿಲ್ಲವೆನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿದೆ ಎಂದುಕೊಂಡರೆ, ಪದಗಳನ್ನು (ಪದಾತೀತ) ಮೀರಿದ ಸಂವಹನದಲ್ಲಿ ನಮಗೇಕೆ ಅಷ್ಟೊಂದು ನಂಬಿಕೆ ಇಲ್ಲವೋ, ಅಥವಾ ಅಂತಹ ಸಂವಹನಗಳು ಬೆಳೆಯುವುದು, ಉಳಿಯುವುದು ನಮಗ್ಯಾರಿಗೂ ಬೇಕಾಗಿಲ್ಲವೋ, ಅಥವಾ ಮಾತಿನಲ್ಲಿ ಹೇಳಿದ್ದೇ ದೊಡ್ಡದು ಎನ್ನುವ ಹುಂಬ ನಂಬಿಕೆಯೋ, ಇನ್ನೇನು ಕಾರಣವೋ? ಸರಿ, ಒಬ್ಬರನ್ನೊಬ್ಬರು ನೋಡಿಯೇನೋ ಕಣ್ಣ ಭಾಷೆಯಲ್ಲಿ ಪ್ರತಿಕ್ರಿಯೆ ತೋರಿಸಿಕೊಳ್ಳಬಹುದು, ದೂರದೂರಿನಲ್ಲಿದ್ದವರಿಗೆ ನಾವು ಕೃತಜ್ಞತೆಗಳನ್ನು ಹೇಗೆ ಹೇಳಬಲ್ಲೆವು? ನಮ್ಮೂರಿನಲ್ಲಿನ್ನೂ ಜನಗಳು ಪತ್ರ ಬರೆಯುತ್ತಾರೆ, ಪತ್ರಗಳ ಜೊತೆಗೆ ಉಡುಗೊರೆಗಳ ವಿನಿಮಯ ನಡೆಯುತ್ತದೆ - ಹೀಗೆ ಕೊಟ್ಟುತೆಗೆದುಕೊಳ್ಳುವ ಪ್ರಕ್ರಿಯೆ 'ಧನ್ಯವಾದ'ದ ಕುರುಹಾಗಿ ಬೆಳೆಯುತ್ತದೆಯೇ ವಿನಾ 'ಥ್ಯಾಂಕ್ಯೂ' ಎನ್ನುವ ಪದದ ಬಳಕೆ ಎಲ್ಲೂ ಆಗೋದಿಲ್ಲ. ಹೆಚ್ಚು ಎಂದರೆ, ಉಪಕಾರ ಸ್ಮರಣೆಯ ಅಂಗವಾಗಿ ಎದುರುಗಿದ್ದವರ ಎರಡೂ ಕೈಗಳನ್ನು ಹಿಡಿದು 'ನಿಮ್ಮ ಉಪಕಾರವನ್ನು ಹೇಗೆ ತೀರಿಸಬೇಕೋ ಗೊತ್ತಿಲ್ಲ', ಅಥವಾ 'ನಿಮಗೆ ನಾವೆಂದೂ ಅಬಾರಿ' ಎಂದರೆ ಆಗಿಹೋಯಿತು. ಈ ಉಪಕಾರವನ್ನು ಋಣ ಎಂದುಕೊಂಡರಂತೂ ಮುಗಿದೇ ಹೋಯಿತು, ಅದು ಜನ್ಮಜನ್ಮಕ್ಕೂ ಅಂಟಿಕೊಂಡು ಬರುವಂತಾಗುತ್ತದೆ, ಇಂಥ ಸಂದರ್ಭಗಳಲ್ಲೇ 'ಯಾವ ಜನ್ಮದಲ್ಲಿ ನಮಗೆ ನೀವೇನು ಆಗಿದ್ದಿರೋ, ಇಂದು ದೇವರ ಹಾಗೆ ಬಂದು ಸಹಾಯ ಮಾಡಿದಿರಿ, ನಿಮ್ಮ ಋಣವನ್ನು ನಾವು ಹೇಗೆ ತೀರಿಸಬೇಕೋ?' ಎನ್ನುವ ಮಾತುಗಳು ಹೊರಬರಬಲ್ಲವು.

'ಥ್ಯಾಂಕ್ಸ್ ಮಚ್', 'ಥ್ಯಾಂಕ್ಯೂ ಸೋ ಮಚ್', 'ಥ್ಯಾಂಕ್ಯೂ ವೆರಿಮಚ್' ಎನ್ನುವಲ್ಲಿ ನನ್ನ ಮೆಟ್ರಿಕ್ ಮೂಲಮಾನಗಳು ಸೋತುಹೋಗುತ್ತವೆ, ಯಾವುದರ ತೂಕ ಎಷ್ಟೆಷ್ಟು ಎಂದು ಅಳೆಯುವುದರಲ್ಲಿ ಇಂದಿಗೂ ವಿಫಲನಾಗಿದ್ದೇನೆ - ಅದು ನಿಜ - ಏಕೆಂದರೆ ಉಪಕಾರವನ್ನು ಸ್ಮರಿಸಬೇಕೇ ವಿನಾ ಅದನ್ನು ಅಳತೆ ಮಾಡಲಾದೀತೇ? ಹೀಗೆ ಉದ್ದಗಲಗಳಿಗೆ ನಿಲುಕದ, ಸೀಮಾತೀತ ಭಾವನೆಗಳನ್ನು ಪದಗಳಿಲ್ಲದೇ ಕಣ್ಣಿನಿಂದಲೇ ಸೂಚಿಸುವ ನಮ್ಮೂರಿನವರು ತತ್‍ಕ್ಷಣ ಬಹಳ ದೊಡ್ಡವರಾಗಿ ಕಂಡುಬರುತ್ತಾರೆ. ಹೇಳಬೇಕಾದುದರಲ್ಲಿ ನನ್ನಷ್ಟು ನಯನಾಜೂಕುಗಳು ಅವರಲ್ಲಿಲ್ಲದಿದ್ದರೇನಂತೆ ಅವರು ಭಾವನೆಗಳನ್ನು ಹೊರಹಾಕುವಲ್ಲಿ ಯಾರಿಗಿಂತಲೂ ಹಿಂದಿಲ್ಲ - ವಿಶ್ವದ ಒಂದು ಅವಿಭಾಜ್ಯ ಅಂಗವಾಗಿ ನಮ್ಮೂರಿನ ಕಣ್ಣಿನ ಭಾಷೆ ಎಲ್ಲ ಕಡೆಯೂ ಚಾಲ್ತಿಗೆ ಬರುತ್ತದೆ, ಆದರೆ ತೆರೆದು ಹೇಳುವ ಭಾಷೆಗೆ ಆ ಸೌಲಭ್ಯವೆಂದೂ ಸಿಗದು.

'ಥ್ಯಾಂಕ್ಯೂ' ಹೇಳದವರು ಒರಟರೇ? ನನ್ನನ್ನೂ ಆ ಪಟ್ಟಿಯಲ್ಲಿ ಸೇರಿಸಿಬಿಡಿ - ಏಕೆಂದರೆ ನಾನು ಬರೀ 'ಧನ್ಯವಾದ'ಗಳನ್ನು ಹೇಳಿ/ತಿಳಿಸಿ ಕೈ ತೊಳೆದುಕೊಳ್ಳುವವನಲ್ಲ, ಎಷ್ಟೋ ವರ್ಷಗಳ ಹಿಂದೆ ಯಾರೋ ಮಾಡಿದ ಉಪಕಾರವನ್ನೂ ಇವತ್ತಿಗೂ ಅಷ್ಟೇ ಮುಗ್ಧತೆಯಿಂದ ಸ್ಮರಿಸುತ್ತೇನೆ. ಜೊತೆಗೆ ನನ್ನ ಜನ್ಮದಿಂದ ಜನ್ಮಕ್ಕೆ ವರ್ಗಾವಣೆ (transfer) ಆಗುವ ಮಾರ್ಪಾಟುಹೊಂದಬಹುದಾದವುಗಳಲ್ಲಿ (variable) ಉಪಕಾರ ಸ್ಮರಣೆ, ಋಣ ಮುಂತಾದವೂ ಸೇರಿಹೋಗುತ್ತವೆ.

ಸುಲಭವಾಗಿ ಸಂವಹನವಾಗುವ ಭಾಷೆಯ ಪರಿಧಿಯಲ್ಲಿ ಹುಟ್ಟುವ ಪದಲಾಲಿತ್ಯಗಳಿಗಿಂತಲೂ ಪದವೇ ಇಲ್ಲದ ಭಾಷೆಯಲ್ಲಿ ಹುಟ್ಟ ಬಹುದಾದ ಭಾವನೆಗಳ ಅಲೆಗಳು ಬಹಳ ದೂರ ಹೋಗಬಹುದಾದುದನ್ನು ಕಲ್ಪಿಸಿಕೊಳ್ಳುತ್ತಾ 'ಥ್ಯಾಂಕ್ಸ್‌ಗಿವಿಂಗ್' ರಜೆ ದಿನಗಳಲ್ಲಿ ಏನೇನು ಮಾಡಬಹುದು ಎಂದು ಯೋಚಿಸುತ್ತಾ ಕೂರುತ್ತೇನೆ!

ನೆಗಡಿ ಅಂತ ರೋಗವಿಲ್ಲ .......

ಏನೇ ಹೇಳಿ ಈ ಟೆಕ್ನಾಲಜಿ ಅನ್ನೋದು ಏನೇನ್ ಬಂದ್ರೂ ನೆಗಡಿ ಆದೋರ್ಗೇನೂ ಸಹಾಯ ಮಾಡೋ ಹಾಗ್ ಕಾಣ್ಸೋದಿಲ್ಲ. ಯಾಕೆ ಈ ಮಾತ್ ಹೇಳ್ತಾ ಇದ್ದೀನಿ ಅಂದ್ರೆ ನೀವೆಲ್ಲ ಈ ಮಾತನ್ನ ಕೇಳೇ ಇರ್ತೀರಿ - ನೆಗಡಿಗೆ ಔಷಧಿ ತೆಗೊಂಡ್ರೆ ಗುಣಾ ಆಗೋಕೆ ಒಂದ್ ವಾರ ಬೇಕು, ಇಲ್ಲಾ ಅಂತಂದ್ರೆ ಅದೇ ತನ್ನಷ್ಟಕ್ಕೆ ತಾನೆ ಏಳ್ ದಿನಗಳಲ್ಲಿ ಹೊರಟುಹೋಗುತ್ತೇ ಅಂತಾ. ನಮ್ ಕಡೇ ಒಂದ್ ಗಾದೇನೂ ಸೇರ್ಸಿ ಬಿಟ್ಟಿದ್ದಾರೆ - ನೆಗಡೀ ಅಂತಾ ರೋಗಾ ಇಲ್ಲಾ ಬುಗುಡೀ ಅಂತಾ ಒಡವೇ ಇಲ್ಲಾ! ಈಗಿನ್ ಕಾಲದಲ್ಲಿ ಸೊಂಟಕ್ಕೆ ಬುಗಡಿ-ಪಗಡೀ ಹಾಕ್ಕೋತಾರೋ ಬಿಡ್ತಾರೋ, ಯಾವ್ ಕಾಲ ಬಂದ್ರೂ ನೆಗಡೀ ಆಗೋದೇನೂ ನಿಂತ್ ಹಾಗ್ ಕಾಣ್ಸೋಲ್ಲ.

ಈ ಜಪಾನೂ ಜರ್ಮನೀಯವರು ಏನೇನೋ ಕಂಡ್ ಹಿಡೀತಾರೆ, ಈ ಟಾಯ್ಲೆಟ್ ಪೇಪರ್ ರೋಲಿನ ಹಾಗೇ ಟಿಶ್ಯೂ ಪೇಪರ್ರನ್ನು ಒಂದಿಷ್ಟು ತಲೇ ಮೇಲೇ ಸುತ್ತಿಕೊಳ್ಳೋ ಹಾಗೆ ಒಂದ್ ರೋಲನ್ನ ಯಾಕೆ ಯಾರೂ ಸೃಷ್ಟೀಸೋದಿಲ್ವೋ? ಹಾಗೇನಾದ್ರೂ ಮಾಡಿದ್ರೂ ಅಂದ್ರೆ ಅಂಥೋರಿಗೆ ಪೇಟೆಂಟ್ ಮಾಡಿಸ್‌ಕೊಳ್ಳಿಕ್ಕೆ ನಾನ್ ಸಹಾಯ ಮಾಡ್ತೀನಿ. ಇಲ್ಲಂತೂ ನಮ್ಮೂರುಗಳಲ್ಲಿ ಜೇಬಿನಲ್ಲಿ ಕರ್ಚೀಪು ತುರುಕಿಕೊಂಡ ಹಾಗೇ ಯಾರೂ ಕರ್ಚೀಪು ತುಂಬಿಕೊಳ್ಳೋದಿಲ್ಲ, ಬರೀ ಟಿಶ್ಯೂ ಪೇಪರುಗಳನ್ನ ಮಡಿಕೆ ಮಾಡಿ ಇಟ್ಟುಕೊಂಡು ಎಲ್ಲಿ ನೋಡಿದ್ರೆ ಅಲ್ಲಿ ಸೂ...ಸೂ... ಅಂತಾ ಮೂಗಿನ ಒರೆಸಿಕೊಳ್ತಾನೇ ಇರ್ತಾರೆ. ಆದ್ರೆ ಒಂದ್ ಮೂಗ್ನಲ್ಲಿ ಗಂಗಾ, ಮತ್ತೊಂದ್ ಮೂಗ್ನಲ್ಲಿ ಯಮುನಾ ಹರಿಯೋ ನನ್ನಂಥೋರಿಗೆ ಈ ಸಣ್ಣ ಸಣ್ಣ ಪೇಪರ್ ತುಂಡುಗಳು ಯಾವ್ ಲೆಕ್ಕಾ - ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಹಾಗೆ - ಸೋತ್ ಹೋಗ್ ಬಿಡ್ತಾವೆ.

ಯಾರ್ ಹತ್ರಾನೂ ಹೇಳೋಕ್ ಹೋಗ್ಬೇಡಿ, ಸುಮ್ನೇ ಹೀಗೊಂದು ಐಡಿಯಾ ಬಂತು - ಆಕಾಶ್‌‍ದಲ್ಲಿ ಬೆಳ್ಳಿ ಮೋಡಗಳು ತೇಲಿಕೊಂಡು ಹೋಗ್ತಾ ಇರ್ತಾವಲ್ಲ, ಅವುಗಳನ್ನು ಈ ನೆಗಡೀ ಪರಮಾತ್ಮನ ಸೇವೆಗೆ ಯಾಕ್ ಬಳಸ್‌ಬಾರ್ದು? 'ಬೆಳ್ಳಿ ಮೋಡವೇ, ಎಲ್ಲಿ ಓಡುವೆ ನನ್ನ ಬಳಿಗೆ ನಲಿದು ಬಾ...' ಎಂದು ಪ್ರೀತಿಯಿಂದ ಕರೆದು, ಹತ್ತಿ ಉಂಡೆಗಳಂತಿರೋ ಅವುಗಳನ್ನ ಸ್ವಲ್ಪ ಹಿಂಜಿ ಮೂಗನ್ನ ಒರೆಸಿ ಕಸದ ಡಬ್ಬಿಗೆ ಬಿಸಾಡೋ ಹಾಗಿದ್ರೆ ಹೇಗಿರ್ತಿತ್ತು? ಒಂಥರಾ ಗಗನಸಖಿಯರು ಕೊಡೋ ವೆಟ್ ಟವೆಲ್ಲುಗಳ ಹಾಗೆ... ನಮ್ ಕೈಯಲ್ಲೆಲ್ಲ ಮೋಡಗಳನ್ನ ಆಟ್ರ್ಯಾಕ್ಟ್ ಮಾಡೋ ಹಾಗೆ ಒಂದ್ ಅಯಸ್ಕಾಂತ ಇರಬೇಕಿತ್ತು, ಆಗ ಎಂಥಾ ನೆಗಡಿಗೂ ಔಷಧಿ ಅನ್ನೋದೇ ಬೇಡವಾಗ್ತಿತ್ತು, ಕಹಿ ಕಷಾಯ ಕುಡಿಯೋದಿರ್ಲಿ, ಪೇಪರ್ರನ್ನ ಉಪಯೋಗಿಸಿ ಮೂಗ್ ಒರೆಸೋದಿರಲಿ, ಶೇಕಡಾ ನೂರಕ್ಕೆ ನೂರು ನ್ಯಾಚುರ್ರಲ್ಲಾಗಿರೋ ಮೋಡಗಳಿಂದ ಮೂಗನ್ನ ಒರೆಸೋ ತಂತ್ರಜ್ಞಾನ ಯಾವತ್ತು ಬರುತ್ತೋ ಯಾರಿಗೆ ಗೊತ್ತು! ಆಗ 'ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ...' ಅನ್ನೋ ಹಾಡಿಗೆ ಬಹಳ ದೊಡ್ಡ ಅರ್ಥ ಬರ್ತಿತ್ತು.

'ರಾವಣನಿಗೆ ಎಷ್ಟು ತಲೆ ಅಂದ್ರೆ, ಶುಂಬಳಕ್ಕೂ ಕಫಕ್ಕೂ ಎನ್ ವ್ಯತ್ಯಾಸ' ಕೇಳಿದನಂತೆ... ಅನ್ನೋದು ನಾನು ಕಟ್ಟಿರೋ ಜಾಣ್ಣುಡಿ. ರಾವಣಗೆ ನೆಗಡಿ ಅನ್ನೋದೇನಾದ್ರೂ ಆದ್ರೆ ಹೆಂಗಿರತ್ತೆ ಅಂತ can you imagine? ಯಾವ ಮೂಗಲ್ಲಿ ಶುಂಬಳ ಬರುತ್ತೆ, ಯಾವ ಗಂಟಲಲ್ಲಿ ಕಫ ಇರುತ್ತೆ? ಅವನ ಕೈಗಳು ಒಳ್ಳೇ ಯಂತ್ರಗಳ ಹಾಗೆ ಒಂದೊಂದೇ ಮೂಗನ್ನ ಒರೆಸೀ ಒರೆಸೀ ಹಾಕ್ತಾ ಇರಬೇಕಾದ್ರೆ ಅದನ್ನ ನೋಡೋಕೇ ಎರಡು ಕಣ್ಣುಗಳು ಸಾಲವು. ಎಲ್ಲಿ ನೋಡಿದ್ರೂ ದಶಕಂಠ ಲಂಕೇಶ ಅನ್ನೋ ವಿವರಣೆ ಬರುತ್ತೇ ವಿನಾ ಇಪ್ಪತ್ತು ಕೈಗಳ್ಳುವನು ಅನ್ನೋ ಅರ್ಥ ಬರೋ ವಾಕ್ಯಗಳನ್ನಾಗಲಿ ಚಿತ್ರವನ್ನಾಗಲೀ ನೋಡ್ಲೇ ಇಲ್ಲಾ ನಾನು. ಅದೇ ನೋಡಿ, ದೇವತೆಗಳಿಗೆ ಒಂದು ತಲೆ ಅಥವಾ ಮಲ್ಟಿಪಲ್ ತಲೆ ಇದ್ದಲ್ಲೆಲ್ಲ ಮಲ್ಟಿಪಲ್ ಕೈಗಳನ್ನೂ ನಾನು ನೋಡಿದ್ದೀನಿ. ಅಂದ್ರೆ ಈ ದೇವಾನುದೇವತೆಗಳನ್ನು ಚಿತ್ರ ಬರೆದು ನಮ್ಮ ಮನಸ್ಸು ತುಂಬೋ ಈ ಕಲಾವಿದರು ಎಷ್ಟು ಪಾರ್ಷಿಯಾಲಿಟಿ ಮಾಡ್ತಾರೆ ಅನ್ಸಲ್ಲ್ವಾ? ಪಾಪ, ರಾವಣನಿಗೊಂದು ಥರಾ, ಬ್ರಹ್ಮನಿಗೊಂದು ಥರಾ. ಬ್ರಹ್ಮನಿಗಾದ್ರೆ ನಾಲ್ಕು ದಿಕ್ಕಿಗೆ ನಾಲ್ಕು ತಲೆಗಳು, ಅದೇ ರಾವಣನಿಗೆ ಎಲ್ಲಾ ತಲೆಗಳೂ ಒಂದೇ ದಿಕ್ಕಿಗೆ ಮುಖ ಮಾಡಿರೋವು, ಅಂದ್ರೆ ಒಂದು ಮುಸುಡಿಗೆ ನೆಗಡಿ ಆಯ್ತು ಅಂದ್ರೆ, ಇನ್ನೊಂದಕ್ಕೆ ತಗಲೋದು ಬಹಳ ಸುಲಭ ಅನ್ನೋ ಅರ್ಥದಲ್ಲಿ...ಪಾಪ ಅನ್ಸುತ್ತೆ ನೆಗಡಿ ಬಂದ ರಾವಣನನ್ನ ನೆನಸಿಕೊಂಡು.

ನಿಮಗೆಲ್ಲಾ ಹೀಗೆ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ನನಗೆ ಅಪರೂಪಕ್ಕೊಮ್ಮೆ ಎರಡು ಮೂಗಿನ ಹೊಳ್ಳೆಗಳಲ್ಲಿ, ಒಂದೇ ಹೊಳ್ಳೆಗೆ ನೆಗಡಿ ಆಗಿ ಅದು ಕಟ್ಟಿಕೊಂಡು ಕೇವಲ ಒಂದೇ ಕಡೆಯಿಂದ ಉಸಿರಾಡೋ ಹಾಗಾಗುತ್ತೆ, ಒಂದು ರೀತಿ ಕಟ್ಟು ಬಿದ್ದು ಪ್ರಾಣಾಯಾಮಾ ಮಾಡೋರ್ ಥರಾ. ಹಾಗಿದ್ದಾಗ ನಾನು ನೆಗಡಿಗೆ ಔಷಧಿ ಏನಾದ್ರೂ ತೆಗೊಂಡ್ರೆ ಏನ್ ಆಗುತ್ತೋ ಅಂತ ಬಹಳ ಕುತೂಹಲ ಬೇರೆ. ಈ ಅಲೋಪಥಿಕ್ ಔಷಧದ ಅಣುಅಣುವಿಗೆ ಇಂಥಾ ಮೂಗಿನ ಹೊಳ್ಳೆಗೇ ನೆಗಡಿ ಆಗಿದೆ ಅನ್ನೋದ್ ಹೇಗೆ ತಿಳಿಯತ್ತೋ? ಎಲ್ಲಾ ವಿಚಿತ್ರಾನೇ - ಕಾಲಿಗೆ ನೋವಾದ್ರೂ ಔಷಧ ತಗೋಳೋದು ಮಾತ್ರ ಬಾಯಿನೇ.

ನಿಮಗೆ ನೆಗಡಿ ಆಗುತ್ತೋ ಬಿಡುತ್ತೋ, ನನಗೂ ಆಗುತ್ತೆ, once a year... ಆವಾಗ ನನ್ ಪಜೀತಿ ಬಿಡಿ, ಪ್ರತೀ ಸಾರಿ ನಾನು ಸೀನಿದಾಗೆಲ್ಲ ನನ್ ಪಕ್ಕದ ಕ್ಯೂಬಿನಲ್ಲಿ ಕೂತಿರೋ ಅಮೇರಿಕನ್ ಚೆಲುವೆ bless you! ಅನ್ನೋ ಕಷ್ಟಾ ಕೇಳಿ ನನಗೆ ಕೆಲವೊಮ್ಮೆ ಬೇಸರ, ಕೆಲವೊಮ್ಮೆ ಖುಷಿಯಾಗುತ್ತೆ...ಆದ್ರೆ ನಾನು ದಿನಕ್ಕೊಂದೇ ಸರ್ತಿ thank you! ಅನ್ನೋದು, ಅವಳು ಬ್ಲೆಸ್ ಯೂ ಅಂದಾಗೆಲ್ಲಾ ನಾನ್ ಥ್ಯಾಂಕ್ಯೂ ಅಂದ್ರೆ ಅವುಗಳ ಲೆಕ್ಕ ಇಟ್ಟ್ಕೊಳ್ಳೋದ್ ಯಾರು? ನನ್ನ ಸೀನಿನ ಧ್ವನಿಗೂ ಬಹಳ ವೇರಿಯೇಷನ್ನುಗಳಿವೆ, ನಾನು ಮನೆಯಲ್ಲಿ ಸೀನಿದ್ರೆ, ಕೆದಲಾಯ್ ಮೇಷ್ಟ್ರು ಥರಾ ಕೊನೇ ಪಕ್ಷ ಅಕ್ಕಪಕ್ಕದ ಎರಡು ಬೀದಿಗಳಿಗಾದ್ರೂ ಕೇಳುತ್ತೆ, ಆಫೀಸಿನಲ್ಲಿ ಅದರದ್ದೇ ಆದ ಒಂದು ಸ್ಮಾಲ್ ವರ್ಷನ್ ಇದೆ...ಏನೇ ಹೇಳಿ ಮನಸ್ಸು ಬಿಚ್ಚಿ ಗಟ್ಟಿಯಾಗಿ ಸೀನಿದ ತೃಪ್ತಿ ಬರೋದಿಲ್ಲ, ಅದಕ್ಕೇ ನಾನು ಹಾಡೊಂದನ್ನು ಕಟ್ಟಿದ್ದೀನಿ...'ಸೀನೋದರಲ್ಲೂ ಸುಖಾ ಇದೆ ಅಂತ ಗೊತ್ತೇ ಇರಲಿಲ್ಲಾ...'.

ನೆಗಡಿ ಬಂತು...ನೆಗಡಿ ಹೋಯ್ತು ಎನ್ನುವಾಗ ಒಂದು ವಾರವಾಯ್ತು... ಎಂಥಾ ರಾಜರುಗಳಿಂದ ಹಿಡಿದು ನನ್ನಂತ ಸಾಧಾರಣ ಜನರನ್ನೂ ಬಿಡದೇ ಒಂದೇ ಸಮನೆ ತಗಲಿಕೊಳ್ಳೋ ಈ ನೆಗಡಿಯ ವೈರಾಣುಗಳ ಸಮಾಜವಾದವನ್ನು ಕಂಡು ಅವುಗಳ ಮೇಲೆ ಬಹಳ ಅಭಿಮಾನ ಮೂಡಿ, ನಾನಂತೂ equality ಯನ್ನು ಪ್ರೂವ್ ಮಾಡೋ ಅವುಗಳ ಅಭಿಮಾನಿಯಾಗಿ ಹೋಗಿದ್ದೀನಿ, ನೀವು?

ನಮ್ಮ ಊರಿನ ರಸ್ತೆ ಮತ್ತು ಜನರ ಸ್ತಿತಿ ಗತಿ .....

"Roads are horrible in India...don't know why people don't realize that and do something about it..." ಎನ್ನೋ ಕಾಮೆಂಟ್ ಅನ್ನು ಪಾಶ್ಚಿಮಾತ್ಯ ದೇಶದ ಪ್ರವಾಸಿಗರು ಹೇಳೋದನ್ನ ಕೇಳಿದ್ದೇನೆ. ನಮ್ಮ ಭಾರತದ ರಸ್ತೆಗಳೇ ಹಾಗೆ...which ever the road you take it is always a treacherous journey! ಶ್ರೀಮಂತ ದೇಶದ ಜನರಿಗೆ ತೃತೀಯ ಜಗತ್ತಿನ ಅರಿವಾಗುವುದು ಕಷ್ಟ ಸಾಧ್ಯವೂ ಹೌದು. ಅಲ್ಲಿ ಸಾಮಾನ್ಯವಾಗಿ ಕಂಡು ಬರುವ ಲಂಚ, ವಂಚನೆ, ಭ್ರಷ್ಟಾಚಾರ, ಹಿಂಸೆ, ಅನಕ್ಷರತೆ ಮೊದಲಾದವುಗಳನ್ನು ಬೇಕಾದಷ್ಟು ರೀತಿಯಲ್ಲಿ ಪ್ರಶ್ನಿಸಿಕೊಳ್ಳಬಹುದು.

ಒಂದು ದೇಶದ ಉನ್ನತಿ ಆ ದೇಶದಲ್ಲಿ ದೊರೆಯುವ ಸಂಪನ್ಮೂಲ ಹಾಗೂ ಆ ದೇಶದ ಜನರ ಅರಿವಿನ ಮೇಲೆ ಅವಲಂಭಿತವಾಗಿರುತ್ತದೆ. ಹೀಗೆ ಮಾಡಬಹುದು ಅನ್ನೋ ತಂತ್ರಜ್ಞಾನಕ್ಕೂ ಸಹ ಸರಿಯಾದ ಸಲಕರಣೆ ಪರಿಕರಗಳು ಇದ್ದರೆ ಮಾತ್ರ ಆ ತಂತ್ರಜ್ಞಾನವನ್ನು ಉಪಯೋಗಿಸಲು ಸಾಧ್ಯವಾಗುತ್ತದೆ. ಜೊತೆಗೆ ಒಂದು ದೇಶದ ಹವಾಮಾನ ಕೂಡ ಅಲ್ಲಿನ ರಸ್ತೆಗಳ ವಿನ್ಯಾಸ, ಅಗಲ ಹಾಗೂ ಕ್ವಾಲಿಟಿಗಳನ್ನು ನಿರ್ಧರಿಸಬಲ್ಲದು ಎನ್ನುವ ವಿಷಯ ಇತ್ತೀಚೆಗಷ್ಟೇ ಮನಸಿಗೆ ಬಂದಿದ್ದು. ಭೂ ವಿಸ್ತಾರದಲ್ಲಿ ಹೆಚ್ಚಾಗಿಯೂ ಜನ ಸಂಖ್ಯೆಯಲ್ಲಿ ಕಡಿಮೆಯೂ ಇರುವ ದೇಶಗಳ ಸವಾಲಿಗೂ ಅಧಿಕ ಜನಸಂಖ್ಯೆಯ ಸಣ್ಣ ದೇಶಗಳ ಸವಾಲಿಗೂ ಬಹಳ ವ್ಯತ್ಯಾಸವಿದೆ.

ಇಲ್ಲಿ ನಾವಿರುವ ರಾಜ್ಯವನ್ನೇ ತೆಗೆದುಕೊಳ್ಳೋಣ, ನ್ಯೂ ಜೆರ್ಸಿ ಹೆಚ್ಚು ಜನ ಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದು. ಛಳಿಗಾಲದಲ್ಲಿ ಒಮ್ಮೊಮ್ಮೆ ಒಂದು ಅಡಿಗಿಂತಲೂ ಹೆಚ್ಚು ಸ್ನೋ ಬೀಳುವುದೂ, ವರ್ಷದಲ್ಲಿ ಕೊನೇ ಪಕ್ಷ ನಾಲ್ಕು ತಿಂಗಳಾದರೂ ಭಯಂಕರ ಛಳಿಯ ವಾತಾವರಣ ಇರೋದು ನಿಜ. ಸ್ನೋ ಬಿದ್ದಾಗ ಅಥವಾ ಛಳಿಯಲ್ಲಿ ಹೆಪ್ಪುಗಟ್ಟಿದ ಹಿಮವನ್ನು ರಸ್ತೆಯ ಬದಿಗೊತ್ತಿ ವಾಹನಾಳಿಗೆ ದಾರಿ ಮಾಡಿಕೊಡಲು ರಾಜ್ಯ/ಪಟ್ಟಣಗಳ ಬೊಕ್ಕಸದಿಂದ ವರ್ಷಕ್ಕಿಷ್ಟು ಎಂದು ಹಣ ತೆಗೆದಿಡಲಾಗುತ್ತದೆ. ದೊಡ್ಡ ಹೈವೆಗಳಲ್ಲಿ ರಸ್ತೆಯ ಪಕ್ಕಕ್ಕೆ ಒಂದು ಲೇನ್ ಅಗಲಕ್ಕಿಂತಲೂ ಹೆಚ್ಚು ಅಗಲವಾದ ಶೋಲ್ಡರುಗಳಿರುತ್ತವೆ. ಇನ್ನು ಅಷ್ಟು ಅಗಲವಲ್ಲದ ಶೋಲ್ಡರ್ ಇರುವ ಎರಡು ಲೇನ್ ರಸ್ತೆಗಳು ವಿಂಟರ್‌ನಲ್ಲಿ ಒಂದು ಲೇನ್ ರಸ್ತೆಗಳಾಗಿಯೂ ಉಪಯೋಗಿಸಲ್ಪಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಜನರ ಹಾಗೂ ಅವರ ಅಟೋಮೊಬೈಲುಗಳ ಸಂಬಂಧ ಅಧಿಕ. ಇಲ್ಲಿ ತಲಾ ಒಂದೊಂದು ಕಾರು ಎನ್ನುವುದು ನಿತ್ಯೋಪಯೋಗಿ ವಸ್ತುವೇ ಹೊರತು ಲಕ್ಷುರಿಯಂತೂ ಅಲ್ಲ. ಪ್ರತಿಯೊಬ್ಬರೂ ಸಣ್ಣ ಪುಟ್ಟ ದೂರಗಳಿಂದ ಹಿಡಿದು ನೂರಾರು ಮೈಲುಗಳ ಪ್ರಯಾಣಕ್ಕೂ ತಮ್ಮ ಕಾರುಗಳನ್ನೇ ನಂಬಿರುವ ಪರಿಸ್ಥಿತಿ. ಹೀಗಿರುವಾಗ ಕೆಟ್ಟ ರಸ್ತೆಗಳು ಹೇಗೆ ತಾನೇ ಹುಟ್ಟ ಬಲ್ಲವು. ಒಂದು ವೇಳೆ ಒಳ್ಳೆಯ ರಸ್ತೆ ಕೆಟ್ಟ ರಸ್ತೆಯಾಗಿ ಪರಿವರ್ತನೆಗೊಂಡರೂ (ಹೊಂಡ, ಗುಂಡಿ, ಬಿರುಕು, ಗಲೀಜು ಮುಂತಾದವುಗಳಿಂದ) ಇಲ್ಲಿನ ಜನರು ಸ್ಥಳೀಯ ಆಡಳಿತವನ್ನು ಕೇಳುವ ವ್ಯವಸ್ಥೆ ಇದೆ, ಅದಕ್ಕಿಂತ ಮೊದಲು ಹಾಗಿರುವ ರಸ್ತೆಗಳನ್ನು ತುರಂತ ರಿಪೇರಿ ಮಾಡುವ ವ್ಯವಸ್ಥೆ ಇದೆ, ಅಲ್ಲದೆ ಪ್ರತಿಯೊಂದು ರಸ್ತೆಯನ್ನು ಮೇಂಟೈನ್ ಮಾಡುವ ಪದ್ಧತಿ ಅಥವಾ ವ್ಯವಸ್ಥೆ ಇದೆ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ತಮ್ಮ ನೆರೆಹೊರೆಯನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿ ಇಡುವಲ್ಲಿ ಶ್ರಮಿಸುತ್ತವೆ.

ಭಾರತದಲ್ಲಿ ಹೈವೇಗಳಿಂದ ಹಿಡಿದು ಸ್ಥಳೀಯ ರಸ್ತೆಗಳಲ್ಲಿ ಲೇನ್‌ಗಳು ಹೊಸತು. ರಸ್ತೆಯ ಮೇಲೆ ಬಿಳಿಯ ಪಟ್ಟೆಗಳನ್ನು ಉದ್ದಾನುದ್ದ ಎಳೆದು ಅವನ್ನು ಮೇಂಟೇನ್ ಮಾಡುವುದಕ್ಕೆ ತೊಡಗಿಸಬೇಕಾದ ಹಣ, ಹಾಗೆ ಮಾಡುವುದರ ಹಿಂದಿನ ಟೆಕ್ನಾಲಜಿ, ಜನರ ತಿಳುವಳಿಕೆ ಮೊದಲಾದವುಗಳು ಇನ್ನೂ ಹೊಸತು. ಎಲ್ಲದಕ್ಕಿಂತ ಮುಖ್ಯವಾಗಿ ಜನರಿಗೆ ಅರಿವು ಅಥವಾ ತಿಳುವಳಿಕೆ ಇಲ್ಲದಿರುವುದು ಗೊತ್ತಾಗುತ್ತದೆ. ನಾನು ನೋಡಿದ ಕನ್ನಡ ಸಿನಿಮಾಗಳಲ್ಲಿ ತೋರಿಸುವ ಈ ರಸ್ತೆಗಳಲ್ಲಿ ಜನರು ಕಾರು/ಜೀಪು ಓಡಿಸಿಕೊಂಡು ಹೋಗುವುದನ್ನು ನೋಡಿದರೆ ಅಲ್ಲಿ ಯಾರೂ ತೆಪ್ಪಗೆ ತಮ್ಮ ಲೇನ್ ನಲ್ಲಿ ಹೋಗೋದಿಲ್ಲ. ಜನನಿಬಿಡ ರಸ್ತೆಗಳಿಂದ ಹಿಡಿದು ಖಾಲೀ ರಸ್ತೆಗಳವರೆಗೆ ಎರೆಡೆರೆಡು ಲೇನ್‌ಗಳ ನಡುವೆ ಕಾರು ಓಡಿಸಿಕೊಂಡು ಹೋಗುವುದು ಒಂದು ರೀತಿಯ ಶೋಕಿ ಅಥವಾ ಅಜ್ಞಾನ. ಜೊತೆಗೆ ಪಾರ್ಕಿಂಗ್ ಮಾಡುವಲ್ಲಿಯೂ ಸಹ ಎರೆಡೆರಡು ಕಾರು ಪಾರ್ಕ್ ಮಾಡಬಹುದಾದ ಸ್ಥಳಗಳಲ್ಲಿ ಒಂದು ಕಾರನ್ನು ಮನಸ್ಸಿಗೆ ಬಂದ ಹಾಗೆ ನಿಲ್ಲಿಸಿ ಹೋಗುವುದಾಗಲೀ, ಟ್ರಾಫಿಕ್ ನಿಯಮ ಹಾಗೂ ಉಲ್ಲಂಘಿಸುವುದನ್ನೆಲ್ಲ ಆದರ್ಶವಾಗಿ ತೋರಿಸುವ ವ್ಯವಸ್ಥೆ ಇದೆ. ತಪ್ಪು ಮಾಡೋದು ಸಹಜ ಎಂದು ಒಪ್ಪೋ ಮನಸ್ಸಿಗೆ ಅದಕ್ಕೆ ತಕ್ಕ ಶಿಕ್ಷೆಯೂ ಸಹಜ ಎಂದು ಏಕೆ ಹೊಳೆಯೋದಿಲ್ಲ ಎನ್ನುವ ಪ್ರಶ್ನೆ ಹುಟ್ಟುತ್ತದೆ. ವಿದ್ಯಾಭ್ಯಾಸ ಹಾಗೂ ಅರಿವು ಹೆಚ್ಚಿದಂತೆ ಜನರ ನಡವಳಿಕೆಗಳಲ್ಲಿ ಬದಲಾಗುತ್ತದೆ ಎನ್ನುವುದನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗಾಗುತ್ತದೆ.

ಸಂಪನ್ಮೂಲಗಳು ಇರಲಿ ಇಲ್ಲದಿರಲಿ, ಇದ್ದುದ್ದನ್ನು ಚೆನ್ನಾಗಿ ನೋಡಿಕೊಂಡು ಹೋಗುವ ಮನಸ್ಥಿತಿ ಮುಖ್ಯ. ಬಡದೇಶಗಳಲ್ಲಿ ಹಾಗೂ ಮುಂದುವರೆಯುತ್ತಿರುವ ದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿ ಅದನ್ನು ಉಳಿಸಿಕೊಂಡು ಹೋಗಲು ಕಷ್ಟವಾಗಬಹುದು, ಆದರೆ ಎಲ್ಲಿಯವರೆಗೂ ಜನರು ಹಾಗೂ ಜನರ ಅರಿವು ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಕೇವಲ ಸಂಪನ್ಮೂಲಗಳೊಂದೇ ಏನೂ ಮಾಡಲಾರವು. ಸಾವಿರಾರು ವರ್ಷಗಳಲ್ಲಿ ಬದಲಾಗದ ಜನರ ಅರಿವು ಇನ್ನು ನೂರಿನ್ನೂರು ವರ್ಷಗಳಲ್ಲಿ ಬದಲಾದೀತು ಎನ್ನುವುದಕ್ಕೇನು ಆಧಾರ ಅಥವಾ ಗ್ಯಾರಂಟಿ?

Tuesday, February 2, 2010

ಈಗಿನ ಹುಡುಗರ ಕಥೆ

ಪಾಪ, ಈಗಿನ ಹುಡ್ರು ತಮ್ ತಮ್ ಒಳಗೆ ಹಿಂಗೂ ಮಾತಾಡ್‌ಕೊಂತರೆ ನೋಡಿ, ಕರ್ರಗಿದ್ದೋರನ್ನ ಕರಿಯಾ ಅನ್ನೋದರಲ್ಲಿ ಅಫೆನ್ಸ್ ಏನಿದೆ? ದಿನಕ್ಕೆ ಐವತ್ತು ಸೆಂಟ್ಸ್ ಕೊಟ್ಟು ವಾರಕ್ಕೊಂದು ಸರ್ತಿ ಉದಯಾ ಟಿವಿ ನೋಡೋ ಭಾಗ್ಯದ ದೆಸೆಯಿಂದ ಈ ಹಾಡು ಕಿವಿಗೆ ಬಿದ್ದು ಹೀಗೆ ಬರೀಬೇಕಾಯ್ತು ನೋಡಿ.ಕರಿಯಾ ಐ ಲವ್ ಯೂಕರುನಾಡ ಮೇಲ್ ಆಣೆಬೆಳ್ಳಿ ಐ ಲವ್ ಯೂಬಿಳಿ ಮೋಡದಾ ಮೇಲ್ ಆಣೆಭಾಳಾ ಹಿಂದಕೆ ಏನಿಲ್ಲ ಪ್ರೇಮಿಗಳೆಲ್ಲ ಇನ್ನೂ ಏನೇನನ್ನೋ ಇಟ್ಟು ಆಣೆ ಮಾಡಿಕೊಂತಿದ್ರು ಇಂದಿನ್ ಕಾಲ್ದಲ್ಲಿ ಅವೆಲ್ಲಾ ಶಾನೆ ಬದ್ಲಾಗಿರಂಗಿದೆ ಬಿಡಿ, ಏನ್ ಮಾಡಣ. ಇವತ್ತಿನ್ ಹುಡ್ರೆಲ್ಲಾ ಟೈಪ್‌ರೈಟರ್ ಕುಟ್ಟಿ ನೋಡಿಲ್ಲ, ರೆಕಾರ್ಡ್ ಪ್ಲೇಯುರ್ ತಟ್ಟೇನೆಲ್ಲ ಕಂಡೇ ಇಲ್ಲ. ನಮ್ ಕಾಲ್ದ ರೆಕಾರ್ಡ್ ತಟ್ಟೆಗಳ ಮೇಲ್ ಧೂಳೂ ಪಾಳೂ ಕುಂತಿದ್ದೇ ಆದ್ರೆ ಬರೀ ಹೇಳಿದ್ದೇ ಹೇಳ್ತಿತ್ತು, ಅದೇ ಈಗಿನ ಕಾಲ್ದ ತಟ್ಟೆಗಳೋ ಕೆಲ್ಸಾ ಮಾಡೋದೇ ನಿಲ್ಲಿಸ್ತವೆ. ಹೇಳಿದ್ದೇ ಹೇಳೋದ್ ಬೆಷ್ಟೋ ಅಥ್ವಾ ಕೆಲ್ಸಾ ನಿಲ್ಸೋದ್ ಬೆಷ್ಟೋ ನಿಮ್ ನಿಮ್ಗೇ ಬಿಟ್ಟಿದ್ದು. ಕೆಲವಂದ್ ಸರ್ತಿ ಹೇಳಿದ್ದೇ ಹೇಳೋ ಕಿಸ್‌ಬಾಯ್ ದಾಸ್ರೇ ಸರಿ, ಸುಮ್ಕಿರ್ ಮಂಗ್ಯಾನ್ ಮಕ್ಳೀಗ್ ಹೋಲ್ಸಿ ನೋಡಿದ್ರೆ ಅನ್ಸಲ್ಲಾ?ನಿನಗೊಂದು ಪ್ರೇಮದ ಪತ್ರಾಬರೆಯೋದು ನನಗಾಸೆನಾನೆ ಇರುವೇ ಹತ್ರಬಿಡು ಆಸೆ ಓ ಕೂಸೇಆಯ್ತಲ್ಲಾ ಕಥೇ, ಪ್ರೇಮದ ಪತ್ರಾ ಇರ್ಲಿ, ಪತ್ರದ ಗೋಜಿಗೇ ಹೋಗಂಗಿಲ್ಲ ಈಗಿನ ಹುಡ್ರೂ ಅಂತೀನಿ. ಎಲ್ಲೋ ಇ-ಮೇಲೂ ಪಾಮೇಲೂ ಅಂತ ಕುಟ್ಟಿಗಂಡು ಬದುಕ್ಯಂಡಿದ್ದ್ ಬಡ್ಡಿ ಹೈಕ್ಳು ಈಗೀಗ ಎಸ್‌ಎಮ್ಮೆಸ್ ದಾರಿ ಹಿಡಕಂಡು ಒಂಥರಾ ಕಾಡುಕುದ್ರೆ ದಾರಿ ಹಿಡಿದವೆ ಇವರ ಕಮ್ಮ್ಯೂನಿಕೇಷನ್ನು. ಜೊತೆಗೆ ಸೆಂಟ್ರಲೈಜ್ಡ್ ಪೋಸ್ಟ್ ಆಫೀಸ್ ಕಥೆ ಏನ್ ಹೇಳಾಣ, ಅವರ ಪತ್ರಗಳ ಎಣಿಕೆ ಕಡಿಮೆ ಆದಂತೆ ಅವರ ಕಮ್ಮೀ ಆದ ಆದಾಯ ನೋಡಿ ಇಂದಿನ ಪೋಸ್ಟ್ ಮಾಸ್ಟರ್ ಜನರಲ್ಲುಗಳಿಗೆ ರಾತ್ರಿ ನಿದ್ದೇನೇ ಬರಂಗಿಲ್ಲಂತೆ ನಿಜವೇ? ಇವತ್ತಿನ ಮೊಬೈಲ್ ಫೋನ್ ಜಮಾನಾದಾಗೆ ಜನಗಳು ಲೆಟ್ರು ಬರೆಯೋದಿರ್ಲಿ ಮಾತೇ ಆಡೇ ಬರೀ ಫಿಂಗರ್ರುಗಳ ಮಸಲ್ಲುಗಳನ್ನು ಬೆಳೆಸ್ತಾ ಇದಾರಂತೆ ಹಿಂಗೇ ನಡೆದ್ರೆ ಇನ್ನು ಮುಂದಿನ ಪೀಳಿಗೆಗಳಿಗೆ ಒಂದೊಂದು ಬೆರಳು ಹೆಚ್ಚು ಹುಟ್ಟುತ್ತೋ ಏನೋ - ವಿಕಾಸವಾದದ ದೊರೆಗಳ್ನೇ ಕೇಳ್ಬೇಕು. ಬ್ಲ್ಯಾಕ್‌ಬೆರಿ ಅಂತಂದು ಜೀವನದುದ್ದಕ್ಕೂ ಯಾವ್ದೇ ಬೆರ್ರಿನ್ನೂ ಚೆರ್ರಿನ್ನೂ ನೋಡ್ದೇ ಇರೋರಿಗೆ ಕಮ್ಮ್ಯೂನಿಕೇಷನ್ನ್ ಫಿವರ್ರ್ ಹುಟ್ಟಿಸಿರೋರನ್ನ ಜೈಲಿಗೆ ಹಾಕ್ಬೇಕು, ಮತ್ತೇನು. ಇಷ್ಟೆಲ್ಲಾ ಮಾಧ್ಯಮಾ, ಕಮ್ಮ್ಯೂನಿಕೇಷನ್ನೂ ಅಂತಾ ಇದ್ರೂ ಜನಗಳ ನಡ್ವೆ ಸಂಬಂಧಗಳ ಅಪಸ್ವರ ಹೆಚ್ತಾನೇ ಇರೋದು ಇನ್ಯಾವ ವಾದದ ಮಾತೂ ಅಂತೀನಿ.ಇವತ್ತಿನ ಕಾಯಂಗಿಲ್ಲ, ಕೆನೆ ಕಟ್ಟಂಗಿಲ್ಲ. ನೋಡಿಕ್ಯಂತಿರಿ ಇವತ್ತಲ್ಲ ನಾಳೆ ಒಂದು ನಿಮಿಷದೊಳಗೆ ಹಾಲು ಕೆನೆಕಟ್ಟೋ ಯಂತ್ರ ಕಂಡ್ ಹಿಡಿತಾರೋ ಇಲ್ಲಾ ಅಂತ. ಮೊಸರಿಗೆ ಇಡೋವಾಗ ಹಾಲನ್ನು ಬಿಸಿ ಮಾಡಿ ಆಮೇಲೆ ತಣ್ಣಗೆ ಮಾಡಿ ಅದರ ಮೇಲೆ ಹೆಪ್ಪು ಯಾಕ್ ಹಾಕಬೇಕು, ಯಾರ್ ಮಾಡಿದ್ರಪ್ಪಾ ಆ ನೀತೀನ.

ನಾವು ಮಹಾ ಬುದ್ದಿವಂತರು ಸಾರ್ ...........?

ನಾವು ಕನ್ನಡಿಗರು ತುಂಬಾ ಬುದ್ಧಿವಂತರು ಅಂತ ಅನ್ಸಿದ್ದು ಇತ್ತೀಚೆಗಷ್ಟೇ ನೋಡಿ. ನಮ್ ಆಫೀಸಿನಲ್ಲಿ ನನ್ನ ಸಹೋದ್ಯೋಗಿ ಒಬ್ರು ತಮ್ಮ ಮಗಳ ಮಗು, ಅಂದ್ರೆ ಮೊಮ್ಮಗ ಜನಿಸಿದ ಸಂದರ್ಭದಲ್ಲಿ ’ನಾನೂ ಗ್ರ್ಯಾಂಡ್‌ಮದರ್ ಆಗಿಬಿಟ್ಟೆ!’ ಎಂದು ಸಂಭ್ರಮಿಸುತ್ತಿದ್ದರು. ನಾನೂ ಅವರ ಖುಷಿಯಲ್ಲಿ ಪಾಲ್ಗೊಳ್ಳುತ್ತಾ ಅವರು ಯಾವ ವಯಸ್ಸಿಗೆ ’ಅಜ್ಜಿ’ಯಾದರು ಎಂದು ವಿಚಾರಿಸಿದಾಗ ಅವರಿಗೆ ಕೇವಲ ಐವತ್ತೇ ವರ್ಷ ಎಂದು ತಿಳಿದು ಒಮ್ಮೆ ಶಾಕ್ ಆದಂತಾಯಿತು, ಮತ್ತೆ ಕೇಳಿ ತಿಳಿದಾಗ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಮಕ್ಕಳಾಗಿದ್ದವೆಂದು ಒಪ್ಪಿಕೊಂಡರು.ನಿಮ್ ಕಡೆಯೆಲ್ಲ ಹೇಗೋ ಗೊತ್ತಿಲ್ಲ ನಮ್ ಕಡೆ ’ನಾನು ಅಜ್ಜ/ಅಜ್ಜಿ ಯಾದೆ’ ಎಂದು ಸಲೀಸಾಗಿ ಒಪ್ಪಿಕೊಳ್ಳೋದಿಲ್ಲ ಜನ. ಎಷ್ಟೋ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳಿಂದ ’ದೊಡ್ಡಮ್ಮ’ ’ಅಮ್ಮಮ್ಮ’ ಎಂದು ಕರೆಸಿಕೊಳ್ಳೋದು ಪ್ರತೀತಿ.’ಅಲ್ರೀ, ಬುದ್ಧಿವಂತ ಕನ್ನಡಿಗರಿಗೂ ನಿಮ್ಮ ಆಫೀಸ್ನಲ್ಲಿ ಯಾರೋ (ಚಿಕ್ಕ ವಯಸ್ಸಿನಲ್ಲಿ) ಅಜ್ಜಿಯಾಗಿರೋದಕ್ಕೂ ಏನ್ರೀ ಸಂಬಂಧ?’ ಅಂತ ನೀವ್ ಕೇಳ್ತೀರಿ ಅಂತ ನನಗೂ ಗೊತ್ತು. ಸ್ವಲ್ಪ ತಡೀರಿ.ಎರಡು ವಾರದ ಹಿಂದೆ ಕನ್ನಡ ಸಂಘದ ಸಮಾರಂಭವೊಂದರಲ್ಲಿ ಯಾರೋ ಪರಿಚಯಸ್ಥರು, ’ಏನ್ಸಾರ್, ನಮ್ಮ್ ಕನ್ನಡಿಗರ ಜಾಯಮಾನ - ಮದುವೆಯಾಗಿ ಮಕ್ಕಳು ಆಗೋ ಹೊತ್ತಿಗೆಲ್ಲಾ ಸುಮಾರು ಜನಕ್ಕೆ ನಲವತ್ತು ತುಂಬಿರುತ್ತೆ ನೋಡಿ!’ ಎಂದು ನಾವೆಲ್ಲ ಮನೆ-ಮಠ-ಮಕ್ಕಳು ಎಂದು ಮಾತನಾಡುತ್ತಿದ್ದಾಗ ಹೇಳಿಕೊಂಡರು. ಅದು ನಿಜವಾದ ಅಬ್ಸರ್‌ವೇಷನ್ ಅನ್ನಿಸುವಲ್ಲಿ ನನ್ನ ಹಿಂದಿನ ಸಹೋದ್ಯೋಗಿ ಹೇಳಿದ ಮಾತುಗಳು ನೆನಪಿಗೆ ಬಂದವು. ಅವನು ಆಂಧ್ರಪ್ರದೇಶದವನಾದರೂ ದಾವಣಗೆರೆಯಲ್ಲಿ ಓದಿದವನು, ಅವರ ಮೇಷ್ಟ್ರು ಒಬ್ಬರಿಗೆ ನಲವತ್ತರ ಸಮೀಪ ಮದುವೆಯಾದದ್ದನ್ನು ನೋಡಿ ಅವರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರಂತೆ - ಅವನ ’ಯಾಕೆ, ಕನ್ನಡ ಜನ ತಡವಾಗಿ ಮದುವೆಯಾಗೋದು?’ ಅನ್ನೋ ಪ್ರಶ್ನೆಗೆ ಏನು ಉತ್ತರ ಕೊಟ್ಟಿದ್ದೆ ಅಂತ್ಲೇ ನನಗೆ ಇಂದು ನೆನಪಿಲ್ಲ! ನನಗಿನ್ನೂ ಮದುವೆಯಾಗೇ ಇರದಿದ್ದ ಹೊತ್ತಿಗೆ ಅವನಿಗೆ ನಾಲ್ಕಾರು ವರ್ಷದ ಎರಡು ಮಕ್ಕಳಿದ್ದುದೂ ನಿಜ.ಈಗ ನಿಮಗೇ ಅನ್ಸಲ್ವೇ? ಮುವತ್ತರ ಹೊತ್ತಿಗೆ ಮದುವೆಯಾಗಿ ನಂತರ ಮಕ್ಕಳಾದ ಮೇಲೆ ಐವತ್ತು ವರ್ಷಕ್ಕೆಲ್ಲ ನಾವು ಅಜ್ಜ/ಅಜ್ಜಿಯರಾಗೋದು ಕಷ್ಟಸಾಧ್ಯವಲ್ಲವೇ? ಆದ್ದರಿಂದಲೇ ಹೇಳಿದ್ದು ಕನ್ನಡಿಗರು ಬುದ್ಧಿವಂತರೆಂದು.***ಕನ್ನಡಿಗರು ಮಹಾ ಬುದ್ಧಿವಂತರು ಅನ್ನೋದಕ್ಕೆ ಹೀಗೇ ಹುಡುಕ್ತಾ ಹೋದ್ರೆ ಬೇಕಾದಷ್ಟು ಸಮಜಾಯಿಷಿ ಸಿಗುತ್ತೆ:- ಈ ಮನುಕುಲದಲ್ಲಿ ಇದ್ದ ಇರದಿದ್ದ ಜಾತಿಯ ವ್ಯಾಪ್ತಿಗೆ ಕನ್ನಡಿಗರ ಕಾಂಟ್ರಿಬ್ಯೂಷನ್ನೇ ಹೆಚ್ಚು ಅಂತ ನನ್ನ ಅಭಿಪ್ರಾಯ. ಗೌಡ್ರು, ಲಿಂಗಾಯ್ತ್ರು, ಕುರುಬ್ರು... ಮುಂತಾದ ಅನೇಕ ಅನೇಕ ಜಾತಿಗಳು ನಮ್ಮಲ್ಲೇ ಇದಾವೇ ಅಂತ ನನ್ನ ನಂಬಿಕೆ. ಅವೆಲ್ಲಿಂದ ಬಂದ್ವೋ ಹೇಗೋ ಅಂತ ಗೊತ್ತಿಲ್ದೇ ಹೋದ್ರೂ ನಮ್ಮಲ್ಲಿ ಉತ್ತರ ಭಾರತದ ಹಾಗೆ ಸರ್‌ನೇಮ್ ಬಳಸ್ದೇ ಹೋದ್ರೂ ನಮ್ ಜನಗಳಿಗೆ ಯಾರು ಯಾರು ಯಾವ ಜಾತಿ ಅಂತ ಅದೆಷ್ಟು ಬೇಗ ಗೊತ್ತಾಗುತ್ತೇ ಅಂದ್ರೆ? ನೀವು ಯಾವ್ದೇ ಆರ್ಟಿಕಲ್ಲ್ ಬರೀರಿ, ಬುಕ್ ಬರೀರಿ, ಕಾಮೆಂಟ್ ಹೇಳಿ, ನಿಮ್ ಅಭಿಪ್ರಾಯ ತಿಳಿಸಿ ಇವೆಲ್ಲವನ್ನೂ ಜಾತಿಯ ಮಸೂರದಲ್ಲಿ ನೋಡೋ ವ್ಯವಸ್ಥೆ ಇದೇ ಅಂತ ನಿಮಗ್ಗೊತ್ತಾ? ಹೀಗೆ ಇದ್ದ ಮನುಕುಲದ ಜಾತಿ-ಮತಗಳಿಗೆ ಮತ್ತಿನ್ನಷ್ಟು ಕಾಂಟ್ರಿಬ್ಯೂಷನ್ನ್ ಮಾಡಿಕೊಂಡು ಎರಡು ಸಾವಿರದ ಎಂಟು ಬಂದ್ರೂ ಇನ್ನೂ ಚಿಟುಕೆ ಹೊಡೆಯುವುದರಲ್ಲಿ ಚಮ್ಮಾರ-ಕಂಬಾರ-ಕುಂಬಾರ ರನ್ನು ಗುರುತಿಸುವ ಚಾಕಚಕ್ಯತೆ ಇರೋ ನಾವು ಮಹಾ ಬುದ್ಧಿವಂತರಲ್ವೇನು?- ನಮಗೆ ನಮ್ದೇ ಊಟ-ತಿಂಡಿ ಅಂತ ಬೇರೆ ಇರುತ್ತೇನ್ರಿ? ಬಿಸಿ ಬೇಳೆ ಬಾತ್ ಅಂತೀವಿ, ಅದಕ್ಕೊಂದಿಷ್ಟು ಮರಾಠಿ ಟಚ್ ಕೊಡ್ತೀವಿ. ಚಪಾತಿ ಅಂತ ಮಾಡ್ತೀವಿ, ಇತ್ಲಾಗ್ ನಾರ್ತೂ ಅಲ್ಲ ಸೌತೂ ಅಲ್ಲ ಅನ್ನಂಗಿರುತ್ತೆ. ಪುಳಿಯೊಗರೆ ಅಂತ ಹಳೆಗನ್ನಡಕ್ಕೆ ಜೋತು ಬೀಳ್ತೀವೋ ಅಂತ ಕೊಂಚ ತಮಿಳನ್ನೂ ಸೇರುಸ್ತೀವೋ? ಕನ್ನಡಿಗರ ಸಮಾರಂಭ ಅಂತ ಯಾರೋ ಬೇಡೇಕರ್ ಉಪ್ಪಿನಕಾಯಿ ಇಟ್ಟಿದ್ರಂತೆ ಹಾಗಾಯ್ತು! ಹೋಳಿಗೆ-ಒಬ್ಬಟ್ಟು ಅವು ಪಕ್ಕಾ ನಮ್ದೇ. ಹೀಗೆ ನಮ್ ಕರ್ನಾಟಕ ಅನ್ನೋದು ಒಂದು ಪ್ರತ್ಯೇಕ ದೇಶವಾಗಿ ಬೆಳೆಯೋಷ್ಟು ದೊಡ್ಡದಲ್ಲದಿದ್ರೂ ಎಲ್ಲೋ ಒಂದು ಮೂಲೆನಲ್ಲಿ ಚೂರೂಪಾರೂ ಉಳಿಸ್ಕೊಂಡ್ ಬಂದಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಸೌತ್ ಇಂಡಿಯನ್ ಕೆಫೆಗಳಲ್ಲಿ ಕೆಲಸ ಮಾಡೋ ಹಿಸ್ಪ್ಯಾನಿಕ್ ಅಥವಾ ಆಫ್ರಿಕನ್ ಅಮೇರಿಕನ್ ಕುಕ್‌ಗಳೂ ಬೆಳೆದು ಬಂದಿದಾರೆ ಬಿಡಿ. ಯಾವ ಸೌತ್ ಇಂಡಿಯನ್-ನಾರ್ತ್ ಇಂಡಿಯನ್ ಪ್ರೋಗ್ರಾಮಿಗೂ ಅವ್ರೇ ಕೆಲವೊಮ್ಮೆ ಅಡುಗೆ ಮಾಡೋದು. ಅಂತಾ ಇಂಟರ್‌ನ್ಯಾಷನಲ್ ಅಡುಗೆ ವಿಷಯಕ್ಕೆ ಸೌತೂ-ನಾರ್ತೂ ಅಂತ ಲಿಮಿಟ್ ಹಾಕಕ್ಕ್ ಆಗುತ್ಯೇ, ಛೇ! ಹೀಗೆ ದೇಶದಿಂದ ದೇಶಕ್ಕೆ ಬಂದ ಕ್ಯುಲಿನರಿ ಪರ್‌ಫೆಕ್ಷನ್ನ್ ಅನ್ನೋ ಸಂಭ್ರಮಕ್ಕೆ ಇಲ್ಲಿನ ಪಟೇಲ್ ಬ್ರದರ್ಸ್ ತರಕಾರಿ ಹಾಗೂ ಸಾಮಗ್ರಿಗಳನ್ನ ಬೆರೆಸಿ ಇಲ್ಲಿಯ ’ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ’ಗಳಲ್ಲಿ ಅದೆಲ್ಲಿಂದ್ಲೋ ಬರೋ (ಒಂಥರಾ ಸ್ಮೆಲ್ಲಿರೋ) ಗ್ಯಾಸ್ ಒಲೆಯ ಮೇಲೆ ಬೇಯಿಸಿ ಅಲ್ಯುಮಿನಮ್ ಕಂಟೇನರುಗಳಲ್ಲಿ ಮುಚ್ಚಿ ಇನ್ನೂ ಬಿಸಿಬಿಸಿಯಾಗಿಯೇ ಇರೋದನ್ನ ತಂದು ಬಡಿಸಿದ್ದನ್ನ ಬಾಯಿ ಬಡಬಡಿಸದೇ ಹಪಾಹಪಿಗಳಾಗಿ ತಿಂದ್ರೆ ಅನ್ನಕ್ಕೇ ಅವಮಾನ ಅಲ್ವೇನು? ಅದ್ಕೇ ನಾವು ಊಟ-ತಿಂಡಿ ವಿಷಯದಲ್ಲಿ ಅಷ್ಟು ಶಿಸ್ತು ಹಾಗೂ ಕಟ್ಟು ನಿಟ್ಟು.ವಾರಾಂತ್ಯದ ದಿನಗಳಲ್ಲಿ ಅದೇ ಮುರುಕುಲು ಬ್ರೆಡ್ಡಿನ ಚೂರುಗಳನ್ನು ತಳದಲ್ಲಿ ಯಾವಾಗ್ಲೂ ಸುಡ್ತಾ ಇರೋ ಬ್ರೆಡ್ಡು ಟೋಸ್ಟರಿಗೆ ಇನ್ನೊಂದು ಸ್ಲೈಸು ಬ್ರೆಡ್ಡ್ ಹಾಕಿಕೊಂಡು ಗರಮ್ ಮಾಡಿಕೊಂಡು ಅದಕ್ಕೆ ಮ್ಯಾಗೀ ಹಾಟ್ ಅಂಡ್ ಸ್ವೀಟ್ ಚಿಲ್ಲೀ ಸಾಸ್ (what's the difference!) ಹಾಕಿಕೊಂಡು ಮುಕ್ಕೋ ನಮಗೆ ಯಾರೋ ಒಂದಿಷ್ಟು ಉಸುಳಿ, ಉಪ್ಪಿಟ್ಟು, ಕೇಸರಿ ಬಾತ್, ಅವಲಕ್ಕಿ, ಇಡ್ಲಿ, ವಡೆಗಳ ರುಚಿ ತೋರಿಸಿದ್ರೆ ಸಾಕು ನಮ್ಮ ಜಾಯಮಾನವೇ ನಮ್ಮ ಮೂಗಿನ ತುದಿಗೆ ಬಂದು ಅದರಲ್ಲಿ ತಪ್ಪು ಹುಡುಕುತ್ತೆ!ಹೀಗೆ ಅಮೇರಿಕದಿಂದ ಕರ್ನಾಟಕಕ್ಕೆ (and back) ಕೇವಲ ಒಂದು ನ್ಯಾನೋ ಸೆಕೆಂಡಿನಲ್ಲಿ ಹರಿದಾಡೋ ನಾವು ಮಹಾ ಬುದ್ಧಿವಂತರಲ್ವೇನು?- Every other sentence ಇಂಗ್ಲೀಷ್ ಮಾತನಾಡೋ ನಾವು, ’ಹೌದು/ಅಲ್ಲ’ ಅಂತ ಬಾಯಲ್ಲಿ ಬರ್ಗರ್ ಇಟ್ಟುಕೊಂಡ ಹಾಗೆ ಪ್ರೊನೌನ್ಸ್ ಮಾಡೋ ನಮ್ಮ್ ಮಕ್ಳು ಇವುಗಳಿಗೆಲ್ಲ ನಾವು ನಮ್ಮ ಸಂಸ್ಕೃತಿ, ಪರಂಪರೆ ಅಂತ ದೊಡ್ಡ ದೊಡ್ಡದಾಗಿ ಇಂಗ್ಲೀಷ್ ನಲ್ಲಿ ಏನೇನೋ ತಿಳಿ ಹೇಳ್ತೀವಿ ನೋಡಿ. ಯಾವ್ದಾದ್ರೂ ಕನ್ನಡ ಸಂಘದ ಕಾರ್ಯಕ್ರಮ ಇದ್ದಾಗ ಮಾತ್ರ ಜರತಾರಿ ಉಡ್ರಿ ಅಂದ್ರೆ ನಮ್ ಮಕ್ಳು ಹೆಂಗಾದ್ರೂ ಕೇಳ್ತಾವ್ರೀ? ಅದೆಲ್ಲಾ ಏನೂ ಬೇಡ, ವರ್ಷಕ್ಕೊಂದೆರಡು ಕನ್ನಡ ಸಂಘದ ಕಾರ್ಯಕ್ರಮ ನೋಡ್ಕೊಂಡು ಕಂಡೋರಿಗೆಲ್ಲ ನಮಸ್ಕಾರ ಅಂದು ಹಲ್ಲು ಗಿಂಜಿಕೊಂಡು ಏನೋ ದೊಡ್ಡ ಕೆಲ್ಸ ಕಡ್ದಿದೀವಿ ಅಂದುಕೊಳ್ಳೋದು ಶ್ಯಾಣೇತನ ಅಲ್ದೇ ಇನ್ನೇನ್ರಿ? ಕನ್ನಡತನ ಉಳಿಸೋ ನಿಟ್ಟಿನಲ್ಲಿ ನಮ್ಮ ಮಕ್ಳು ಕನ್ನಡ ಮಾತನಾಡ್ತಿದ್ರೂ ಪರವಾಗಿಲ್ಲ ಭರತನಾಟ್ಯ ಕಲಿಯೋದನ್ನ ಬಿಡಬಾರ್ದು ಅನ್ನೋ ಲಿಮಿಟ್ಟಿಗೆ ಬಂದು ಬಿಟ್ಟಿದ್ದೇವೆ, ಅದು ಈ ಶತಮಾನದ ಮಹಾ ಅಚೀವ್‌ಮೆಂಟೇ ಸರಿ.ಇಂಥವನ್ನೆಲ್ಲ ಹಾಗೂ ಇನ್ನೂ ಅನೇಕಾನೇಕ ಕನ್‌ವೆನ್ಷನ್ನುಗಳನ್ನು ಹುಟ್ಟಿ ಹಾಕಿಕೊಂಡಿರೋ ನಾವು ಕನ್ನಡಿಗರು ಹಾಗೂ ಮಹಾ ಬುದ್ಧಿವಂತರು!
Posted by Satish at 5:51 AM 5 comments Links to this post
Labels: , ,
Monday, September 24, 2007

ಏನು ರೋಷ, ಏಕೀ ವೈಭವೀಕರಣ?
ಈಗ್ಗೆ ಮೂರ್ನಾಲ್ಕು ತಿಂಗಳಿನಿಂದ ಉದಯ ಟಿವಿ ಸಬ್‌ಸ್ಕ್ರೈಬ್ ಮಾಡಿಕೊಂಡು ಕನ್ನಡ ಕಾರ್ಯಕ್ರಮಗಳನ್ನು ಬಿಡುವಿನಲ್ಲೋ ಅಥವಾ ಡಿವಿಆರ್ ಕೃಪಾಕಟಾಕ್ಷದಿಂದಲೋ ನೋಡಿ ಒಂದು ಹೆಜ್ಜೆ ನಮ್ಮೂರಿಗೆ ಹತ್ತಿರವಾಗುತ್ತೇನೆ ಎಂದುಕೊಂಡಿದ್ದ ನನಗೆ ಸಂತೋಷಕ್ಕಿಂತಲೂ ಭ್ರಮನಿರಸನವಾದದ್ದೇ ಹೆಚ್ಚು ಎಂದರೆ ತಪ್ಪಾಗಲಾರದು. ನನ್ನ ಈ ಮಾನಸಿಕ ಜಾಗೃತಿಯ ಹಿಂದೆ ಕನ್ನಡಿಗರದ್ದಾಗಲೀ, ಉದಯ ಟಿವಿಯವರದ್ದಾಗಲೀ ತಪ್ಪು ಇದೆ ಎನ್ನುವುದಕ್ಕಿಂತಲೂ ನನ್ನಲ್ಲಿನ ಬದಲಾವಣೆಯನ್ನು ಒರೆಗೆ ಹಚ್ಚಿ ಸುತ್ತಲನ್ನು ವಿಶೇಷವಾಗಿ ನೋಡುವ ಪ್ರಯತ್ನವಿದು ಅಷ್ಟೇ.ನನಗೆ ಬುದ್ಧಿ ತಿಳಿದಾಗಿನಿಂದಲೂ ಕನ್ನಡ ನಾಟಕ, ಸಿನಿಮಾ, ದೊಡ್ಡಾಟ, ಬಯಲಾಟ, ವೀರಗಾಸೆ, ಯಕ್ಷಗಾನ, ಜಾನಪದ ಗಾಯನ/ನೃತ್ಯ ಮುಂತಾದವುಗಳನ್ನು ಸಹಜವಾಗಿ ನೋಡಿ ಬೆಳೆದವನು ನಾನು. ಇವತ್ತಿಗೂ ಯಕ್ಷಗಾನದ ಒಂದು ಪದವಾಗಲೀ ಸಂಭಾಷಣೆಯಾಗಲಿ ಮೈನವಿರೇಳುವಂತೆ ಮಾಡುವುದು ಖಂಡಿತ. ಅದೇ ರೀತಿ ಹಳೆಯ ಜಾನಪದ ಹಾಡುಗಳಾಗಲೀ, ಮಟ್ಟಾಗಲೀ ಮತ್ತೊಂದಾಗಲೀ ಅವುಗಳನ್ನು ಕೇಳುವುದೇ ಮನದಲ್ಲಿ ಬಹಳಷ್ಟು ಉತ್ಸಾಹವನ್ನು ಉಂಟು ಮಾಡುತ್ತವೆ. ಕೆರೆಗೆಹಾರದ ಕಥೆಯಾಗಿರಬಹುದು, ಗೋವಿನ ಹಾಡಾಗಿರಬಹುದು, ಮಾಯದಂಥ ಮಳೆಯಾಗಿರಬಹುದು, ಹಳೆಯ ಸಿನಿಮಾ ಹಾಡುಗಳಾಗಿರಬಹುದು - ಇವುಗಳಲ್ಲಿ ಏಕತಾನತೆ ಇದೆ, ಒರಿಜಿನಾಲಿಟಿ ಇದೆ, ಮೂಲವಿದೆ ಹಾಗೂ ಶೋಧಿಸುವ ಮನಸ್ಸಿಗೆ ಮುದ ನೀಡುವ ಗುಂಗಿದೆ. ಹಲವಾರು ಸಾಮಾಜಿಕ ನಾಟಕಗಳಲ್ಲಿ, ತಾಳಮದ್ದಳೆಗಳಲ್ಲಿ, ನಮ್ಮ ಜನರ ನಡುವೆ ಹಾಸುಹೊಕ್ಕಾದ ಯಾವುದೊಂದು ಮನೋರಂಜನಾ ಪ್ರಬೇಧದಲ್ಲಿಯೂ ನಮ್ಮದೇ ಆದ ಒಂದು ಸೊಗಡಿದೆ. ಕ್ಷಮಿಸಿ, ನಮ್ಮ ಜನರ ನಡುವೆ ಹಾಸುಹೊಕ್ಕಾದ ಮನೋರಂಜನಾ ಪ್ರಬೇಧದ ಜೀವ ಸಂಕುಲದಲ್ಲಿ ಸಿನಿಮಾ ಪ್ರಪಂಚವಾಗಲೀ, ಅಥವಾ ಇಂದಿನ ಕಿರುತೆರೆಯ ಕಣ್ಣೀರಿನ ಕೋಡಿಗಳಾಗಲೀ ಇವೆಯೇ ಅನ್ನೋದು ಬಹು ದೊಡ್ಡ ಪ್ರಶ್ನೆ. ಆದರೆ ನೀವೇ ನೋಡಿದಂತೆ ನನಗೆ ಅಪ್ಯಾಯಮಾನವಾಗುವಂತಹ ಯಾವುದೇ ಮಾಧ್ಯಮದ ಹತ್ತಿರಕ್ಕೂ ಸಿನಿಮಾ ಬಂದಿಲ್ಲ, ಅದರಲ್ಲಿಯೂ ಇತ್ತೀಚಿನ ಸಿನಿಮಾಗಳಾಗಲೀ ಹಾಗೂ ಅನೇಕ ಕಿರುತೆರೆಯ ಕಾರ್ಯಕ್ರಮಗಳಾಗಲೀ ಬಹು ದೂರ.ನಾವು ಹೈ ಸ್ಕೂಲು ಕಾಲೇಜುಗಳಲ್ಲಿ ಅನೇಕ ಚರ್ಚಾಸ್ಪರ್ಧೆಗಳಲ್ಲಿ ವಾದ ಮಾಡುತ್ತಿದ್ದುದು ಇನ್ನೂ ನನಗೆ ಚೆನ್ನಾಗಿ ನೆನಪಿದೆ - ಭಾರತದ ಸುದ್ದಿ ಮಾಧ್ಯಮಗಳು ಸ್ವಾಯುತ್ತವಾಗಬೇಕು, ಶಾಲಾ ಕಾಲೇಜುಗಳಲ್ಲಿ ಮುಕ್ತವಾಗಿ ಲೈಂಗಿಕತೆಯ ಬಗ್ಗೆ ಪಾಠ ಹೇಳಿಕೊಡಬೇಕು, ವಿದೇಶಿ ಮಾಧ್ಯಮಗಳ ನಡೆನುಡಿ ಸಂಸ್ಕೃತಿಗಳ ಅನುಕರಣೆ ಸಲ್ಲ - ಮುಂತಾಗಿ. ಇಂದಿಗೂ ನಮ್ಮಲ್ಲಿನ ಸುದ್ದಿ ಮಾಧ್ಯಮಗಳು (ಟಿವಿ, ರೆಡಿಯೋ ಹಾಗೂ ವೃತ್ತಪತ್ರಿಕೆಗಳು) ಸ್ವಾಯುತ್ತವಾಗಿವೆ ಎಂದೇನೂ ನನಗನ್ನಿಸೋದಿಲ್ಲ, ಆದರೆ ಯಾವುದಾದರೊಂದು ಕ್ರೈಮ್ ಸಂಗತಿಯನ್ನು ವರದಿ ಮಾಡುವಾಗ ನಮ್ಮಲ್ಲಿನ ಮಾಧ್ಯಮಗಳಿಗೆ ಯಾವುದೇ ರೀತಿಯ ಸಾಮಾಜಿಕ ಜವಾಬ್ದಾರಿ ಎಂಬುದೇ ಇಲ್ಲ ಎನ್ನಿಸಿದೆ. ರಕ್ತದ ಹೊಳೆ, ಕೊಳೆತು ಕೃಶವಾಗುತ್ತಿರುವ ಹೆಣಗಳು, ಸತ್ತ ಮಕ್ಕಳು, ಛಿದ್ರವಿಛಿದ್ರವಾದ ಜಾನುವಾರುಗಳು, ಮುಖದ ಮೇಲೆ ಬ್ಲೇಡಿನಿಂದ ಕೊಯಿಸಿಕೊಂಡು ಹತ್ಯೆಗೊಳಗಾದ ರೌಡಿಗಳು, ಗುಂಡಿನೇಟು ತಿಂದು ರಕ್ತದ ಮಡುವಿನಲ್ಲಿ ಬಿದ್ದ ದೇಹಗಳು ಇತ್ಯಾದಿ - ಇವುಗಳನ್ನೆಲ್ಲ ವಾರ್ತಾ ಮಾಧ್ಯಮದಲ್ಲಿ ನೋಡಿ ನನಗಂತೂ ಸಾಕಾಗಿ ಹೋಗಿದೆ. ನಿಜವಾಗಿಯೂ ಕೇಳುಗರಿಗೆ ಆ ಪ್ರಮಾಣದ ಡೀಟೈಲ್‌ನ ಅವಶ್ಯಕತೆ ಇದೆಯೇ? ನಮ್ಮಲ್ಲಿನ ಸುದ್ಧಿ ಮಾಧ್ಯಮಗಳ ಕಾರ್ಯಕ್ರಮ ಹಾಗೂ ಬರಹ ಯಾವ ರೇಟಿಂಗ್‌ಗೆ ಒಳಪಡುತ್ತವೆ? ಶಾಲಾ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಓದಿ/ನೋಡಲು ಅವು ಲಾಯಕ್ಕೇ ಎನ್ನುವ ಪ್ರಶ್ನೆ ನನಗಂತೂ ಪದೇಪದೇ ಮನಸ್ಸಿನಲ್ಲಿ ಏಳುತ್ತಿರುತ್ತದೆ. ಆದರೆ ಅವುಗಳಿಗೆಲ್ಲಾ ಇನ್ನೂ ಉತ್ತರ ಸಿಕ್ಕಿಲ್ಲ. ಈ ಮಾಧ್ಯಮಗಳ ತಂತ್ರಜ್ಞಾನ ಏನೇ ಬದಲಾದರೂ ಅವು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು, ವರದಿಗಳನ್ನು ಹೀಗೆಯೇ ತೋರಿಸಿಕೊಂಡು ಬಂದಿದ್ದರೆ ಇಂದು ಅಂತಹ ಕಾರ್ಯಕ್ರಮಗಳನ್ನು ವಿಶೇಷವಾಗಿ ನೋಡುತ್ತಿರುವ ನನ್ನಲ್ಲಿನ ಬದಲಾವಣೆಗಳನ್ನೇ ದೂರಲೇ? ಅಥವಾ ಸದಾ ವಿದೇಶಿ ಸೋಗನ್ನು ಹಾಕಿಕೊಂಡಿರುವ ದೇಶಿಗಳಿಗೆ ಬೇಕಾದಷ್ಟು ವಿದೇಶಿ ಚಾನೆಲ್ಲುಗಳ ಕಾರ್ಯಕ್ರಮಗಳ ರೂಪುರೇಶೆಯನ್ನು ನೋಡಿ ಕಲಿಯುವುದಾಗಲೀ, ತಮಗೆ ಅನ್ವಯಿಸಿಕೊಳ್ಳುವುದಾಗಲೀ ಏನೂ ಇಲ್ಲವೇ?ನಾನು ಹಿಂದಿ ಸಿನಿಮಾಗಳನ್ನು ನೋಡದೇ ಹಲವಾರು ವರ್ಷಗಳೇ ಕಳೆದು ಹೋದವು, ಇತ್ತೀಚಿನ ಅನೇಕ ಕನ್ನಡ ಚಲನ ಚಿತ್ರಗಳನ್ನು ನೋಡಿ ನನಗಂತೂ ಪರಿಸ್ಥಿತಿ ಬಹಳಷ್ಟು ಗಂಭೀರವಾಗಿದೆ ಹಾಗೂ ಬಿಗಡಾಯಿಸಿದೆ ಎನ್ನಿಸಿಬಿಟ್ಟಿತು. ಇಂದಿನ ಸಿನಿಮಾಗಳು ಜನಪ್ರಿಯತೆಯ ಸೋಗಿಗೆ ಕಟ್ಟುಬಿದ್ದು ಅನೇಕ ರಂಗುರಂಗಿನ ಅಂಶಗಳನ್ನು ಒಳಗೊಂಡು ಈಗಿನ ಟಿವಿ-ವಿಸಿಡಿ ಕಾಲದಲ್ಲೂ ಪ್ರೇಕ್ಷಕ ಪರಮಾತ್ಮನನ್ನು ಥಿಯೇಟರಿಗೆ ಹೊರಡಿಸುವ ಯಾವುದೋ ಒಂದು ಮಹಾನ್ ಪ್ರಯತ್ನವಿದ್ದಿರಬಹುದು, ನನ್ನಂತಹವರು ಥಿಯೇಟರಿಗೆ ಹೊಕ್ಕು ಕೊಡುವ ರೂಪಾಯಿಯನ್ನು ನಂಬದೇ ಇದ್ದಿರಬಹುದಾದ ಒಂದು ವ್ಯವಸ್ಥಿತ ಇಂಡಸ್ಟ್ರಿಯಾಗಿರಬಹುದು. ಆದರೆ, ಇಂದು ಥಿಯೇಟರಿನಲ್ಲಿ ಬಿಡುಗಡೆಯಾದದ್ದು ನಾಳೆ ಪುಕ್ಕಟೆಯಾಗಿ ಟಿವಿ ಮುಂತಾದ ಮಾಧ್ಯಮಗಳ ಮೂಲಕ ಬಿಕರಿಯಾಗಿ ಸಮಾಜವನ್ನು ಅಲ್ಲೋಲಕಲ್ಲೋಲಗೊಳಿಸುತ್ತಲ್ಲಾ, ಅದಕ್ಕ್ಯಾರು ಜವಾಬ್ದಾರರು? ಇಂದಿನ ಹೀರೋಗಳಿಗೆ ಅದೇನು ರೋಷ, ಅದೇನು ಆವೇಶ, ಸಿನಿಮಾಗಳಲ್ಲಿ ಸೇಡು-ರೋಷದ ಅದೇನು ವೈಭವಿಕರಣ? ಪ್ರೇಕ್ಷಕರನ್ನು ಕುರಿಗಳೆಂದು ಭಾವಿಸಿ ಸಿನಿಮಾದಲ್ಲಿ ಹೀರೋಗಳ ರೂಪುರೇಶೆಯನ್ನು ಅವರ ನಡತೆಯನ್ನು ಯದ್ವಾತದ್ವಾ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಕಲಾವಿದರ ಹೆಸರಿನಲ್ಲಿ ಕಳಪೆಯನ್ನು ಮಾರಿ ಹೊಟ್ಟೆ ಹೊರೆದುಕೊಳ್ಳುತ್ತಿರುವ ತಂಡದವರಿಗೆ ಧಿಕ್ಕಾರವಿರಲಿ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅದು ಹೇಗೆ ತಾನೇ ನ್ಯಾಯವಾದೀತು? ಇವರ ಮನೆಯಲ್ಲಿರೋ ಶಾಲೆಗೆ ಹೋಗೋ ಮಕ್ಕಳು ಆ ರೀತಿಯ ಪ್ರಶ್ನೆಗಳನ್ನು ಕೇಳೋದಿಲ್ಲವೇ? ಒಬ್ಬನನ್ನು ಕೊಲೆಗೈದವನು ಕೊಲೆಗಡುಕನೇ - ಯಾವ ಕಾರಣಕ್ಕಾದರೇನಂತೆ, ಅದಕ್ಕೆ ನ್ಯಾಯಾನ್ಯಾಯ ಹೇಳುವುದು ಎರಡೂವರೆ ಘಂಟೆ ನಂತರ ಸಿನಿಮಾದ ಕರ್ಕಶ ಶಬ್ದಗಳಿಗೆ ಅಲ್ಲಿ ಹುಟ್ಟಿ ಹೊರಬರುವ ಧ್ವನಿಗಳಿಗೆ ಕಂಗಾಲಾದ ಪ್ರೇಕ್ಷಕನ ಮನಸ್ಥಿತಿಯಲ್ಲ. ಸಾಮಾಜಿಕ ನ್ಯಾಯ ಎಂದಿಗೂ ಸಾಮಾಜಿಕ ನ್ಯಾಯವೇ ಎನ್ನುವ ಸರಳ ಸಮೀಕರಣ ನಮ್ಮ ಪರಂಪರೆಗೆ ಏಕೆ ಸಿದ್ಧಿಸದೋ ಕಾಣೆ. ಗಟ್ಟಿ ಇದ್ದವನು ಬದುಕುತ್ತಾನೆ ಅನ್ನೋದು ಹೊಡೆದಾಡಿ ಬಡಿದಾಡಿ ಬದುಕುವುದು ಎನ್ನುವ ಮಟ್ಟಿಗೆ ಸಂದು ಹೋಗಿರೋದು ನಮ್ಮವರ ಸಮಸ್ಯೆ ಅಲ್ಲ, ನನ್ನ ಸಮಸ್ಯೆ - ಏಕೆಂದರೆ ಮೊದಲೆಲ್ಲ ಈ ರೀತಿಯ ವಿಷಯಗಳು ಕಾಣಿಸುತ್ತಿರಲಿಲ್ಲ, ಕಾಣಿಸಿದ್ದರೂ ಅವು ಎಲ್ಲೋ ಹುಟ್ಟಿ ಕರಗುವ ಧ್ವನಿಗಳಾಗುತ್ತಿದ್ದವು, ಆದರೆ ಇಂದು ಅಂತಹ ಧ್ವನಿಗಳೇ ಮುಖ್ಯವಾಹಿನಿಗಳಾಗಿವೆ ನನ್ನ ಮನಸ್ಸಿನಲ್ಲಿ.ನಮ್ಮ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಪರಂಪರೆಗೆ ಬೇಕಾದಷ್ಟು ಸೃಜನಶೀಲತೆ ಇದೆ. ಇವತ್ತಿಗೂ ಒಂದು ಪ್ರೇಮಗೀತೆಯಿಂದ ಹಿಡಿದು, ಧಾರುಣ ಕಥೆಯವರೆಗೆ ಹೆಣಿಗೆಯನ್ನು ನೇಯಬಲ್ಲ ಒರಿಜಿನಾಲಿಟಿ ನಮ್ಮಲ್ಲೂ ಇದೆ. ಹಾಗಿದ್ದಾಗ ಹೊರಗಿನಿಂದ ಕದ್ದು ತಂದು ತಮ್ಮದನ್ನಾಗಿ ಮಾಡಿ ತೋರಿಸುವ ಅವಸ್ಥೆ ಯಾರಿಗೂ ಬೇಡ. ನಮ್ಮಲ್ಲಿನ ಯುವಕರಾಗಲೀ, ವೃತ್ತಿಕರ್ಮಿಗಳಾಗಲೀ ತಟ್ಟನೆ ಪ್ರತಿಫಲವನ್ನು ಹುಡುಕಿ ಹೀಗಾಯಿತೋ ಎಂದು ಎಷ್ಟೋ ಸಾರಿ ಯೋಚಿಸಿದ್ದೇನೆ. ಹತ್ತು-ಹದಿನೈದು ವರ್ಷ ಸಂಗೀತ ಸಾಧನೆ ಮಾಡಿ ಮುಂದೆ ಬರಲಿ - ಆಗ ಒಡಲೊಳಗಿನ ಪ್ರತಿಭೆಗೆ ಒಂದು ಒರೆಹಚ್ಚಿ ತೀಡಿದಂತಾಗಿ ಪ್ರಭೆ ಹೊರ ಸೂಸುತ್ತಿತ್ತೋ ಏನೋ ಆದರೆ ನಮ್ಮಲ್ಲಿನ ವಜ್ರದ ಹರಳುಗಳು ಅದರಿನ ರೂಪದಲ್ಲೇ ಹೊಳೆಯಲು ಹೊರಟು ಯಾವುದೋ ವಕ್ರಕಿರಣ-ವರ್ಣಗಳನ್ನು ಸೂಸುವುದನ್ನು ನೋಡಲು ಸಾಧ್ಯವೇ ಇಲ್ಲ ಎನ್ನಿಸಿದೆ. ಮನೋರಂಜನೆಗೆ ಸೀಮಿತವಾದ ಯಾವುದೇ ಅಂಗವಿರಲಿ - ನಿರ್ದೇಶನವಿರಲಿ, ವಸ್ತ್ರವಿನ್ಯಾಸವಿರಲಿ, ಚಿತ್ರಕಥೆ ಬರೆಯುವುದಿರಲಿ, ಸಂಕಲನ ಮಾಡುವುದಿರಲಿ - ಇವುಗಳಿಗೆ ತಕ್ಕ ಮಟ್ಟಿನ ತರಬೇತಿ ಇಲ್ಲದೇ ನಾನೂ ಕೆಲಸ ಮಾಡುತ್ತೇನೆ ಎಂದು ಮೀಡಿಯೋಕರ್ ಕೆಲಸ ಮಾಡಿ ಅದರ ಮೇಲೆ ಜೀವನವನ್ನಾಧರಿಸುವುದಿದೆ ನೋಡಿ - ಅದು ಬಹಳ ಕಷ್ಟದ ಕೆಲಸ. ವಿದೇಶದ ಸಿಂಫನಿ ಆರ್ಕೇಷ್ಟ್ರಾಗಳಲ್ಲಿ ದಿನಕ್ಕೆ ಹತ್ತು ಘಂಟೆಗಳಿಗಿಂತ ಹೆಚ್ಚು ನಿರಂತರವಾಗಿ ದುಡಿದು ಅದರ ಮೇಲೇ ಜೀವನವನ್ನಾಧರಿಸುವ ಸಾಮಾಜಿಕ ನೆಲೆಗಟ್ಟು ನಮ್ಮಲ್ಲಿ ಇಲ್ಲದಿರಬಹುದು, ಕಲಾವಿದರಿಗೆ ಅವರ ಪ್ರತಿಭೆಗೆ ತಕ್ಕ ಪೋಷಣೆ ಸಿಗದೇ ಇರಬಹುದು ಆದರೆ ನನ್ನಂತಹ ಸಾಮಾನ್ಯನಿಗೂ ಗೊತ್ತಾಗುವಷ್ಟು ಕಳಪೆ ಗುಣಮಟ್ಟದ ಕಾರ್ಯಕ್ರಮಗಳನ್ನು ಹೊರತರುವುದಾದರೂ ಏಕೆ? ಅದರಿಂದ ಯಾರಿಗೇನು ಲಾಭವಿದೆ ಹೇಳಿ ನೋಡೋಣ.ಮಚ್ಚೂ-ಲಾಂಗು ಸಂಸ್ಕೃತಿ ನಮ್ಮದೇ, ಇಲ್ಲವೆಂದಾದರೆ ಎಲ್ಲಿಂದ ಬಂತು? ಒಂದು ಕಾಲದಲ್ಲಿ ರಿವಾಲ್ವರ್‌ನಿಂದ ಗುಂಡು ಹೊಡೆಸಿಕೊಂಡು ಸಾಯುವುದೇ ಅಪರೂಪವಾಗಿರುವಂಥ ಕನ್ನಡ ನಾಡಿನಲ್ಲಿ ಇಂದು ಎಷ್ಟೋ ಜನರ ಕೊಲೆಯನ್ನು ಗುರುತು ಸಿಗದ ಮುಸುಕುಧಾರಿಗಳು ಮಾಡಿ ತಪ್ಪಿಸಿಕೊಳ್ಳುವುದಕ್ಕೆ ಏನು ಕಾರಣ? ಸಿನಿಮಾದಿಂದ ಸಮಾಜ ಪ್ರೇರಣೆ ಪಡೆಯುತ್ತದೆಯೋ, ಅಥವಾ ಸಮಾಜ ಇರುವುದನ್ನು ಸಿನಿಮಾ ಹೀಗೆ ಎಂದು ಗುರುತಿಸುತ್ತದೆಯೋ? ಕಾಲೇಜ್‌ಗೆ ಚಕ್ಕರ್ ಹೊಡೆದು ಮನೆಯಲ್ಲಿ ಅಪ್ಪ ಅಮ್ಮರಿಗೆ ತಿನ್ನೋಕೆ ಗತಿ ಇರದ ಪರಿಸ್ಥಿತಿಯಲ್ಲಿನ ನಾಯಕನನ್ನು ವೈಭವೀಕರಿಸಿ ನಮ್ಮ ಸಿನಿಮಾ ಕಥೆಗಳು ಯಾವ ನ್ಯಾಯವನ್ನು ಸಾರುತ್ತಿವೆ? ಸಿನಿಮಾ ಹೀರೋಗಳೆಲ್ಲಾ ಗೆಲ್ಲಲೇ ಬೇಕೆಂದರೆ ಹಾಗಾದರೆ ಅವು ಸಮಾಜದ ನಿಜವಾದ ಪ್ರತಿಬಿಂಬವಲ್ಲ ಎಂದಂತಾಗಲಿಲ್ಲವೇ? ಬುದ್ಧಿವಂತರು ಕಳಪೆ ಸಿನಿಮಾವನ್ನೇಕೆ ನೋಡಬೇಕು, ಅವುಗಳಿಗೆ ನಮ್ಮ ಭಾಷೆ, ಭಾವನೆ, ಹಾಗೂ ನಾವು ನೆಚ್ಚುವ ನಾಯಕರನ್ನೇಕೆ ಬಲಿಕೊಡಬೇಕು?ನೀವು ಏನೇ ಹೇಳಿ ಕಳಪೆಯನ್ನು, ಕಡಿಮೆ ಗುಣಮಟ್ಟದ್ದನ್ನು ಹೀಗಿದೆ ಎಂದು ಹೇಳುವ ಸ್ಪಷ್ಟತೆ ನಮ್ಮಲ್ಲಿನ್ನೂ ಬರಲೇ ಇಲ್ಲ - ನಾನೋದುವ ಸಿನಿಮಾ ವಿಮರ್ಶೆಗಳಿಗೆ ಜೀವವೇ ಇರೋದಿಲ್ಲ. ವಿಮರ್ಶೆಗೆ ಒಳಪಡದ ಮಾಧ್ಯಮಕ್ಕೆ ಒಂದು ರೀತಿ ಲಂಗುಲಗಾಮು ಎನ್ನುವ ಪ್ರಶ್ನೆಯೇ ಬರೋದಿಲ್ಲ. ಒಂದು ಕಾಲದಲ್ಲಿ ನಾನೋದುತ್ತಿದ್ದ ’ವಿಜಯಚಿತ್ರ’ ವಾರಪತ್ರಿಕೆಯಲ್ಲಿ ’ಮೆಚ್ಚದ್ದು-ಮೆಚ್ಚಿದ್ದು’ ಎಂಬ ಅಂಕಣದಲ್ಲಾದರೂ ನಮ್ಮಂತಹವರು ಒಂದಿಷ್ಟು ಸಂಕಷ್ಟಗಳನ್ನು ತೋಡಿಕೊಳ್ಳುತ್ತಿದ್ದೆವು. ಇಂದಿನ ಮುಂದುವರೆದ ಮಾಧ್ಯಮಗಳಲ್ಲಿ ಅಂತಹ ಸುಲಭವಾದ ಸಾಧನಗಳು ಪ್ರೇಕ್ಷಕನಿಗೆ ಇವೆಯೋ ಇಲ್ಲವೋ, ಇದ್ದರೂ ಅಲ್ಲಿಂದ ಅಣಿಮುತ್ತುಗಳನ್ನು ಆರಿಸಿ ತಮ್ಮನ್ನು ತಾವು ಬೆಳೆಯಲು ಬಳಸಿಕೊಳ್ಳುವ ಮಹಾನ್ ಕಲಾವಿದರ ಕಾಲವಂತೂ ಇದ್ದಂತಿಲ್ಲ...ಕ್ಷಮಿಸಿ, ಇವೆಲ್ಲವೂ ನನ್ನಲ್ಲಿನ ಬದಲಾವಣೆಯಿಂದ ಹುಟ್ಟಿಬಂದವುಗಳು - ನಮ್ಮ ಮಾಧ್ಯಮಗಳು ಹೇಗಿವೆಯೋ ಹಾಗೇ ಇರಲಿ!