Saturday, January 30, 2010

ನನ್ನ ಬಗ್ಗೆ ನಿಮಗೆ ಚೂರು ಮಾಹಿತಿ .......

ಸ್ನೇಹಿತರೆ ನಾನು ಸಂತೋಷ. ಮೂಲತಹ ನನ್ನ ಊರು ಬೆಳಗಾವಿ . ನನ್ನ ತಂದೆ ಭಾರತೀಯ ಸೇನೆ ಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು . ನನ್ನ ತಾಯಿ ದೇವರು ಗ್ರಹಿಣಿ . ನಮ್ಮ ಮನೆಯಲ್ಲಿ ಯಾವಾಗಲು ಮಿಲ್ಟ್ರಿ ಶಿಸ್ತು ಇತ್ತು ಆದರೆ ನಾ ಮಾತ್ರ ಶಿಸ್ತು ಮುರಿದು ನಮ್ಮ ಅಪ್ಪಾಜಿ ಸಿಟ್ಟಿಗೆ ಗುರಿ ಆಗುತ್ತಾ ಇದ್ದೆ .ನಾನು ಹುಟ್ಟಿದ್ದು ಪಂಜಾಬ್ ರಾಜ್ಯದ ಪಠಣಕೋಟ ನಲ್ಲಿ .ನಾನು ಒಂದನೆಯ ತರಗತಿಯಿಂದ ನಾಲ್ಕನೆಯ ತರಗತಿವರೆಗೆ ಓದಿದ್ದು .ಮದ್ಯ ಪ್ರದೇಶ್ ರಾಜ್ಯದ ಭೂಪಾಲ್ ನಲ್ಲಿ. ನಂತರ ನನ್ನ ವಿಧ್ಯಾಭ್ಯಾಸ ಮುಂದು ಒರೆದದ್ದು Ooty Boarding School.ನಾನು ಇಲ್ಲಿ 5 ತರಗತಿಯಿಂದ 10 ತರಗತಿವರೆಗೆ ಓದಿದೆ .ನಾನೇನು ತುಂಬಾ ಜಾಣ ವಿಧ್ಯಾರ್ಥಿ ಆಗಿರಲಿಲ್ಲ . ಒಬ್ಬ ಸಾಧಾರಣ ವಿಧ್ಯಾರ್ಥಿ ಯಾಗಿ ನನ್ನ ಪ್ರಾಥಮಿಕ ಮತ್ತು ಹೈಸ್ಕೂಲ್ ವಿಧ್ಯಾಭ್ಯಾಸ ಮುಗಿಸಿದೆ .ನಮ್ಮ ಅಣ್ಣ ಸುರೇಶ ಮತ್ತು ಅಕ್ಕ ಸುನಂದಾ ನಾನು ಓದುವ ಶಾಲೆಯಲ್ಲಿ ಓದಿದ್ದರು ಅವರೆಲ್ಲ ಇಲ್ಲಿ ಶಾಲೆಗೆ ಫಸ್ಟ್ ಬರುತ್ತಿದ್ದರು (rank) ಅವರು ತುಂಬಾ ಜಾಣ ವಿಧ್ಯಾರ್ಥಿ ಗಳು .ನಾನು ಮಾತ್ರ ದಡ್ಡ ಸಿಕಮಣಿ .ನಂತರ ನಾನು ನನ್ನ ಕಾಲೇಜ್ ವಿಧ್ಯಾಭ್ಯಾಸವನ್ನು ಇಲ್ಲಿಯೇ ಮುಂದುವರಿಸಿದೆ. ನನ್ನ ತಂದೆ ನನಗೆ ಯಾವಾಗಲು ಬೈಯುತ್ತ ಇದ್ದರು ಏಕೆ ಅಂದ್ರೆ ನಾನು ಜಾಣ ವಿಧ್ಯಾರ್ಥಿ ಆಗಿರಲಿಲ್ಲ ಸರಿಯಾಗಿ ಓದುತಿರಲಿಲ್ಲ .ಅವರಿಗೆ ನಂದೇ ಚಿಂತೆ ನನ್ನ ಭವಿಷ್ಯದ ಕುರಿತು .ನನ್ನ ತಂದೆ ಗೆ ಅವರ ಸ್ನೇಹಿತ್ ನನ್ನ ಎದುರು ನನ್ನ ವಿಧ್ಯಭ್ಯಸದ ಕುರಿತು ತುಂಬಾ ಕೇವಲವಾಗಿ ಮಾತನ್ನಾಡಿದ ನಾನು ಅವತ್ತೇ ನಿರ್ಧಾರ ಮಾಡಿದೆ ನಾನು ಚೆನ್ನಾಗಿ ಓದಬೇಕು ಎಂದು .ಅವತ್ತಿನ ನನ್ನ ನಿರ್ಧಾರ ನಾನು ಒಬ್ಬ Rank Student ಆಗಿ ರೂಪ ಗೊಳ್ಳಲು ಕಾರಣ ವಾಯಿತು .ಒಬ್ಬ ಸಾಮಾನ್ಯ ವಿಧ್ಯಾರ್ಥಿ ಯಾಗಿದ್ದ ನಾನು rank ವಿಧ್ಯಾರ್ಥಿ ಯಾಗಿ ನಾನು ರೂಪ ಗೊಂಡೆ .ನಂತರ ನಾನು Engineering ವಿಧ್ಯಾಭ್ಯಾಸ ವನ್ನು IIT Gohuti(Assam) ನಲ್ಲಿ ಮುಗಿಸಿದೆ .ನನ್ನ ಮೇಲೆ ನನ್ನ ತಂದೆ ಇಟ್ಟ ನಂಬಿಕೆ ಯನ್ನು ನಾನು ಉಳಿಸಿದೆ .ನನ್ನ ಅಕ್ಕ ಈಗ INDIAN ARMYನಲ್ಲಿ Captain ಆಗಿ ಸೇವೆಯನ್ನು ಸಲ್ಲಿಸುತ್ತ ಇದ್ದಾಳೆ .ನನ್ನ ಹಿರಿ ಅಣ್ಣ ದೇಶಕ್ಕೆ ಅನ್ನ ನಿಡಿವ ರೈತ .ಇದು ನನ್ನ ಮತ್ತು ನಮ್ಮ ಕುಟುಂಬದ ವಿಷಯ . ನಂಗೆ ಕನ್ನಡ ಓದಲು ಬರೆಯಲು ಕಳಿಸಿದ್ದು ರವಿಕುಮಾರ್ .ಹಾ ಇಲ್ಲಿ ರವಿ ಕುಮಾರ ಬಗ್ಗೆ ಹೇಳದೆ ಇದ್ದರೇ ತಪ್ಪಾಗುತ್ತದೆ . ಈ ರವಿ ನನ್ನ ಪ್ರಾಣ ಸ್ನೇಹಿತ್ ನಾನು ಇವನನ್ನು ಎಷ್ಟು ಗಾಡವಾಗಿ ಪ್ರೀತಿ ಸುತ್ತೇನೆ ಅವನು ನನ್ನ ಅಸ್ಟೇ ದ್ವೆಸುಸುತ್ತಾನೆ .ರವಿ ನಂಗೆ ತುಂಬಾ ಅಂದ್ರೆ ತುಂಬಾ ಸಹಾಯ ಮಾಡಿದ್ದಾನೆ .ತಂದೆಯ ಹಾಗೆ ರಕ್ಷಣೆ ನೀಡಿದ್ದಾನೆ . ತಾಯಿಯ ಹಾಗೆ ನನ್ನ ಪಾಲನೆ ಮಾಡಿದ್ದಾನೆ ಈತನ ಉಪಕಾರ ವನ್ನು ನಾನು ತೀರಿಸಲು ಸಾದ್ಯವಿಲ್ಲ .ನಂಗೆ ಕನ್ನಡ ಬರೆಯಲು ಓದಲು ಕಳಿಸಿದ್ದು ನನ್ನ ಈ ಸ್ನೇಹಿತ ರವಿ
.ನಾನು ಅಂಗ್ಲೇ ಭಾಷೆಯನ್ನೇ ವಟ್ ಗುಡುತ್ತಾ ಇದ್ದೆ ನನ್ನನ್ನು ಕನ್ನದಕರಿಸಿದ್ದು ನನ್ನ ಈ ಸ್ನೇಹಿತ್ ರವಿ . ದೇವಸ್ಥಾನಗಳಿಂದ ದೂರ ಇದ್ದ ನನ್ನನ್ನು ದೇವರ ದೇವಸ್ಥಾನಗಳಿಗೆ ಹೋಗುವಂತೆ ಮಾಡಿದ್ದೂ ಸಹ ರವಿ . ನಾನು ನನ್ನ ಈ ಪ್ರಾಣ ಸ್ನೇಹಿತನಿಂದ ತುಂಬಾ ಅಂದ್ರೆ ತುಂಬಾ ಕಲಿತಿದ್ದೇನೆ ಆದ್ರೆ ನಾ ಮಾತ್ರ ಇತನಿಗಾಗಿ ಒಂದು ಚೂರು ಸಹಾಯವನ್ನು ಮಾಡಲಿಲ್ಲ .ಇತನು ಕೊಟ್ಟ ವಸ್ತು ಗಳನ್ನೂ ನಾನು ಮರಳಿ ಕೊಡಲು ಆಗುತ್ತಾ ಇಲ್ಲ . ನಾನು ಮರಳಿ ಕೊಟ್ಟರೆ ಆ ವಸ್ತುಗಳಿಗೆ ಬೆಲೆ ಕೊಟ್ಟಂಥಹ ದಾಗುತ್ತದೆ ಅದ್ದರಿಂದ ನಾ ಆ ವಸ್ತುಗಳಿಗೆ ಮರಳಿ ಕೊಡುತ್ತ ಇಲ್ಲ .ಆ ವಸ್ತುಗಳಿಗೆ ಬೆಲೆ ಕಟ್ಟಲು ನನ್ನಿಂದ ಸಾದ್ಯವಿಲ್ಲ . ನನ್ನ ಉಸಿರು ಇರುವವರೆಗೆ ಇತನು ಮಾಡಿದ ಸಹಾಯವನ್ನು ಮರಿಯುವದಿಲ್ಲ .ನನ್ನ ಜೀವನದಲ್ಲಿ ನಾನು ಹೆಚ್ಚು ಗೌರವ್ ಕೊಡುವದು ನನ್ನ ಕುಟುಂಬದ ಸದಸ್ಯರಿಗೆ ಮತ್ತು ನನ್ನ ಸ್ನೇಹಿತ ರಾದ ಪ್ರಿನ್ಸ್ ಮತ್ತು ರಶ್ಮಿ ಅಕ್ಕನಿಗೆ ಇವರನ್ನು ನಾನು ತುಂಬಾ ಅಂದ್ರೆ ತುಂಬಾ ಪ್ರೀತಿಸುತ್ತೇನೆ .ಇವರಿಬ್ಬರು ನನ್ನ ಅಪ್ಪ ಅಮ್ಮ ಅಂದ್ರೆ ತಪ್ಪಾಗಲಾರದು . ಇವರು ಮಾಡಿದ ಉಪಕಾರವನ್ನು ನಾನು ಎಂದೆಂದಿಗೂ ಮರೆಯುವದಿಲ್ಲ .ಇವರು ನನ್ನನ್ನು ಇವರು ಹೆತ್ತ ಮಗುವಿನ ಹಾಗೆ ನನ್ನ ಲಾಲನೆ ಪಾಲನೆ ಮಾಡಿದ್ದರೆ .ಇವರಿಬ್ಬರು ನನಗೆ ಪರಿಚಯ ಆಗಿದ್ದು ಇನ್ಫೋಸಿಸ್ ನಲ್ಲಿ . ನಾನು ಇವರ ಟೀಂ ನಲ್ಲಿ ಹೊಸದಾಗಿ ಸೇರಿಕೊಂಡಿದ್ದೆ . ಆಗ ನಮಗೆ ಪ್ರಿನ್ಸ್ ಟೀಂ ಲೀಡರ್ .ಮುಂದೆ ನಾವು ಒಂದೇ ಮನೆಯಲ್ಲಿ ವಾಸ ಮಾಡಿದೆವು . ನಾನು ಆಗ ತುಂಬಾ ಅಂದ್ರೆ ತುಂಬಾ ಮುಗ್ದ ನಂಗೆ ವರ್ಕ್ ನಾಲೆಜ್ ಇತ್ತು ವಿನಃ .ಯಾವರೀತಿ ನಡೆದು ಕೊಳ್ಳಬೇಕು ಅಂತ ಗೊತ್ತು ಇರಲಿಲ್ಲ .ತುಂಬಾ ತುಂಟ ಇದ್ದೆ . ಸರಿಯಾಗಿ ಅಡಿಗೆ ಮಾಡಲು ಬರುವದಾಗಲಿ ಬಟ್ಟೆ ವಾಶ್ ಮಾಡುವದಾಗಲಿ ನಂಗೆ ಬರುತ್ತಿರಲಿಲ್ಲ . ಪ್ರತಿಯೊಂದನ್ನು ನಂಗೆ ಕಳಿಸಿ ಕೊಟ್ಟಂತಹ ಮಾತಾ ಪಿತಾ ಅಂದ್ರೆ ತಪ್ಪಾಗಲಾರದು .ನಾವು ಒಟ್ಟಿಗೆ ಮೂರು ವರ್ಷ ಗಳ ಕಾಲ ಒಟ್ಟಿಗೆ ಇದ್ದೆವು . ಆದ್ರೆ ಈಗ ಬೇರೆ ಬೇರೆ ಆಗಿದ್ದೇವೆ . ಆದರೂ ಸಹ ಅವರನ್ನು ಮರೆಯಲು ಆಗುತ್ತಾ ಇಲ್ಲ . ಮಣ್ಣಿನ ಮುದ್ದೆ ಯಂತೆ ಇದ್ದ ನನ್ನನ್ನು ಒಂದು ಸುಂದರ ಮೂರ್ತಿ ಯನ್ನಾಗಿ ಮಾಡಲು ನನ್ನ ಸ್ನೇಹಿತ ರಾದ ಪ್ರಿನ್ಸ್ ರಶ್ಮಿ ಅಕ್ಕ ಮತ್ತು ರವಿಕಿಮಾರ್ ಹಾಗೂ ನನ್ನ ತಾಯಿ ದೇವರು ,ಅಪ್ಪ ,ಅಕ್ಕ ಸುನಂದಾ ಅಣ್ಣ ಗಣೇಶ್ ಇವರನ್ನು ನಾನು ಪ್ರಾಣ ಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ ಮತ್ತು ಅರಾದೆಸುತ್ತೇನೆ .

ನಿಮ್ಮನ್ನು ನೀವು ಮೆಚ್ಚಿಸುವ ವಿಧಾನ ಭಾಗ ಒಂದು

ಎರಡು ಅಂಶಗಳನ್ನು ಮೊದಲೇ ಹೇಳಿ ಬಿಟ್ಟರೆ ಒಳ್ಳೆಯದು: ೧) ನೀವು ಏನು ಮಾಡುತ್ತೀರಿ, ಬಿಡುತ್ತೀರಿ ಎನ್ನುವುದು ನಿಮಗೇ ಬಿಟ್ಟದ್ದು, ನಿಮ್ಮ ಬಗ್ಗೆ ಯೋಚಿಸಲು ಉಳಿದವರಿಗೆ ಪುರುಸ್ತೊತ್ತಿಲ್ಲ; ೨) ನೀವು ಏನನ್ನು ತೊಟ್ಟುಕೊಂಡಿದ್ದೀರಿ, ಹೇಗೆ ಮಾತನಾಡುತ್ತೀರಿ, ನಿಮ್ಮನ್ನು ನೀವು ಹೇಗೆ ತೋರಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧಾರಿತವಾಗುತ್ತದೆ.ಮೇಲಿನ ಹೇಳಿಕೆಗಳಲ್ಲಿ ೧) ಮತ್ತು ೨) ಒಂದಕ್ಕೊಂದು contradictory ಆಗಿ ಕಾಣುತ್ತಿವೆಯೇ? ಹಾಗೆ ಕಾಣಲಿ ಎಂಬುದೇ ನನ್ನ ಉದ್ದೇಶ!ನಾನು ಅಮೇರಿಕೆಗೆ ಬಂದ ಹೊಸತರಲ್ಲಿ ನನ್ನ ಸಹೋದ್ಯೋಗಿ ಕೆನ್ ಲೆನರ್ಡ್ (Ken Leonard) ನನಗೆ ಸಾಕಷ್ಟು ವಿಷಯಗಳಲ್ಲಿ ಮಾರ್ಗದರ್ಶಿಯಾಗಿದ್ದ. ಅವನೇನೂ ನನಗೆ ಕಲಿಸಬೇಕು ಎಂದು ಕಲಿಸುತ್ತಿರಲಿಲ್ಲ, ಅವನು ಹೇಳುವ ವಿಷಯಗಳಲ್ಲಿ ನನಗೆ ಸಾಕಷ್ಟು ಕ್ಲೂ ಸಿಗುತ್ತಿದ್ದವು. ಒಂದು ದಿನ ಮುಂಜಾನೆ ಕಾಫಿ ಕುಡಿಯಲು ಹೋಗುತ್ತಿರುವಾಗ ಮಧ್ಯೆ ನಮ್ಮ ಆಫೀಸಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಒಬ್ಬರ ಪರಿಚಯವನ್ನು ಕೆನ್ ಮಾಡಿಕೊಟ್ಟ - ಹೊಸದಾಗಿ ಅಂದರೆ ಒಂದು ವರ್ಷದ ಒಳಗೆ. 'ನಾವೆಲ್ಲರೂ ಬಿಸಿನೆಸ್ ಕ್ಯಾಷುವಲ್ ದಿರಿಸಿನಲ್ಲಿದ್ದರೆ ಆ ಮನುಷ್ಯ ಯಾವಾಗಲೂ ಸೂಟ್ ತೊಟ್ಟಿರುತ್ತಾನೆ, ಅವನು ಏನು ಮಾಡುತ್ತಾನೋ ಬಿಡುತ್ತಾನೋ ನನಗಂತೂ ಗೊತ್ತಿಲ್ಲ, ಆದರೆ ಅವನು ಬಂದಂದಿನಿಂದ ಮ್ಯಾನೇಜ್‌ಮೆಂಟ್ ಕ್ಯಾಡರ್ ನಲ್ಲಿ ಮೇಲೇರುತ್ತಲೇ ಇದ್ದಾನೆ' ಎಂದು ನಂತರ ಹೇಳಿದ, ನನಗೇನೂ ಅನ್ನಿಸಲಿಲ್ಲ, ನಾನು ಆ ಮಾತನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟೆ.ಆದರೆ ಅಂದಿನಿಂದ ಯಾರು ಯಾರು ಏನನ್ನು ತೊಡುತ್ತಾರೆ, ಹೇಗೆ ವ್ಯವಹರಿಸುತ್ತಾರೆ ಎನ್ನುವುದನ್ನೆಲ್ಲ ಸೂಕ್ಷ್ಮವಾಗಿ ಗಮನಿಸತೊಡಗಿದೆ. ಮುಂದೆ ಕೆನ್ ಕೆಲಸವನ್ನು ಬಿಟ್ಟು ಮತ್ತೆಲ್ಲೋ ಹೋದ, ನಾನೂ ಆ ಕಂಪನಿಯನ್ನು ಬಿಟ್ಟು ಬೇರೊಂದನ್ನು ಸೇರಿಕೊಂಡೆ.ಈಗ ಸ್ವಲ್ಪ ಕಾಲ ಹಿಂದೆ ಹೋಗೋಣ - ನಾವೆಲ್ಲರೂ ಹೈಸ್ಕೂಲು ಮುಗಿಸಿ ಕಾಲೇಜು ಸೇರಿದಾಗ, ಪಿಯುಸಿ ಮುಗಿಸಿ ಡಿಗ್ರಿ ಸೇರಿಕೊಂಡಾಗ, ಮುಂದೆ ಕೆಲಸಕ್ಕೆ ಸೇರಿಕೊಂಡಾಗ ನಮ್ಮಲ್ಲೆಲ್ಲಾ ಆದ ಬದಲಾವಣೆಗಳನ್ನು ನಾವು ಗುರುತಿಸಿಕೊಂಡಿದ್ದೇವೆಯೇ? ನಾವು ಹಲ್ಲುಜ್ಜುವುದನ್ನು ಹೇಗೆ ಕಲಿತುಕೊಂಡೆವೋ, ಶೇವ್ ಮಾಡುವುದನ್ನು ಯಾರಿಂದ ಕಲಿತೆವೋ, ಮುಖಕ್ಕೆ ಮೇಕಪ್ ತೀಡುವುದನ್ನು ಎಲ್ಲಿಂದ ಶುರು ಮಾಡಿದೆವೋ ಎಂದೆಲ್ಲಾ ತಿರುಗಿ ನೋಡುತ್ತಾ ಹೋದಾಗ ನಾವು ಆಫೀಸಿಗೆ ಯಾವ ರೀತಿಯ ಬಟ್ಟೆಗಳನ್ನು ತೊಡುತ್ತೇವೆ, ಸಂದರ್ಶನಗಳಿಗೆ ಯಾವ ರೀತಿಯ ಬಟ್ಟೆಯನ್ನು ತೊಡಬೇಕು ಎನ್ನುವುದನ್ನೆಲ್ಲ ಹೇಗೆ ಕಲಿತೆವು, ಯಾರು ಹೇಳಿಕೊಟ್ಟರು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ, ಅಗತ್ಯವಿದ್ದಲ್ಲಿ ಧನಾತ್ಮಕ ಬದಲಾವಣೆಗಳನ್ನು ಮಾಡಿ ನಾವು ನಮ್ಮನ್ನು ಹೆಚ್ಚಿನ ಮಟ್ಟದಲ್ಲಿ marketing ಮಾಡಿಕೊಳ್ಳುವುದೇ ಈ ಬರಹದ ಉದ್ದೇಶ. ನಾವು ಅನುಸರಿಸುವ ರೀತಿ-ನೀತಿಗಳು ನಮಗೆ ಅಭ್ಯಾಸವಾಗಿ ಹೋಗಿವೆ, ಅವು ನಮ್ಮ ಸ್ವಭಾವದ ಒಂದು ಭಾಗವಾಗಿ ಹೋಗಿರೋದರಿಂದ ಬದಲಾವಣೆಯೇನಾದರೂ ಮಾಡಬೇಕಾಗಿ ಬಂದರೆ ಅಂತಹ ಬದಲಾವಣೆಗಳು ಸಾಕಷ್ಟು ಪ್ರತಿರೋಧವನ್ನು ಎದುರಿಸಬೇಕಾಗಿ ಬರುತ್ತದೆ.ಈಗ ನಾವು ತೊಡುವ ಶೂಸ್ ನಿಂದ ಆರಂಭಿಸೋಣ - ಗಂಡಸರಿಗೆ ಇವು ಕೆಲವು ಕೆಲವು ಬಣ್ಣಗಳಲ್ಲಿ ಮಾತ್ರ ಲಭ್ಯ, ಕಪ್ಪು, ಕಂದು (tan), ತಿಳಿ ಹಳದಿ, ಇನ್ನೇನೇ ಬಣ್ಣಗಳಿದ್ದರೂ - ಅವುಗಳನ್ನೆಲ್ಲ ನ್ಯೂಟ್ರಲ್ ಗುಂಪಿಗೆ ಸೇರಿಸೋಣ (ಶೂ ಪಾಲಿಷ್ ಸಿಗುವುದು ಹಾಗೆ ಮಾತ್ರ ತಾನೆ), ಅದೇ ಹೆಂಗಸರಿಗಾದರೆ ಇನ್ನೊಂದಿಷ್ಟು ಬಣ್ಣಗಳನ್ನು ಸೇರಿಸಬಹುದು, ಆದರೆ ಅವರು ಶೂ ಪಾಲಿಷ್ ಮಾಡುತ್ತಾರಾ ಬಿಡುತ್ತಾರಾ ಅನ್ನೋದನ್ನು ಅವರಿಗೇ ಬಿಡೋಣ.ರೂಲ್ ನಂಬರ್ ೧: ಬಿಸಿನೆಸ್ ಕ್ಯಾಷುಯಲ್, ಅಥವಾ ಡ್ರೆಸ್ (ಫಾರ್ಮಲ್) ವೇರ್‌ನ ಇತಿಮಿತಿಯಲ್ಲಿ - ನಿಮ್ಮ ಶೂಸ್ ಬಣ್ಣ ಹಾಗೂ ನೀವು ತೊಡುವ ಬೆಲ್ಟ್ ಬಣ್ಣ ಒಂದೇ ಆಗಿರಬೇಕು.ರೂಲ್ ನಂಬರ್ ೨: ನೀವು ಧರಿಸುವ ಫ್ಯಾಂಟ್ ಬಣ್ಣ ಹಾಗೂ ನೀವು ಧರಿಸುವ ಸಾಕ್ಸ್ ಬಣ್ಣ ಎರಡೂ ಮ್ಯಾಚ್ ಆಗಬೇಕು.ಇವೆರಡೂ ಬಹಳ ಸರಳವಾದ ರೂಲ್ ಅನ್ನಿಸಬಹುದು, ಇಂದಿನಿಂದ ನೀವೇ ನೋಡುತ್ತಾ ಹೋಗಿ ಎಷ್ಟು ಜನರು ಇದನ್ನು ಫಾಲೋ ಮಾಡುತ್ತಾರೆ ಎಂದು. ಈ ರೂಲ್‌ಗಳನ್ನು ನಾನು ಸೃಷ್ಟಿಸಿಲ್ಲ, ಬಹಳಷ್ಟು ಜನರು ಬಳಸಬಹುದಾದ ರೀತಿ-ನೀತಿ ನನ್ನ ಕಣ್ಣಿಗೆ ಹಾಗೆ ಕಂಡುಬಂದಿದೆ, ಅಷ್ಟೇ.ರೂಲ್ ನಂಬರ್ ೩: ನೀವು ಇಸ್ತ್ರಿ ಹಾಕಿಸದ ಬಟ್ಟೆಯನ್ನು ಆಫೀಸಿಗಾಗಲೀ, ಸಂದರ್ಶನಕ್ಕಾಗಲೀ ತೊಡಲೇಬೇಡಿ. ನಿಮಗೆ ನಿಮ್ಮ ಬಟ್ಟೆಗಳನ್ನು ಒಗೆದು, ಇಸ್ತ್ರಿ ಹಾಕಿಸಲು ಸಮಯವಿಲ್ಲದಿದ್ದರೆ ಸ್ವಲ್ಪ ಕಾಸು ಬಿಚ್ಚಿ.ಡಾರ್ಕ್ ಬಣ್ಣದ ಪ್ಯಾಂಟು ಅಥವಾ ಸೂಟಿಗೆ ಲೈಟ್ ಬಣ್ಣದ ಶರ್ಟ್ ಹಾಕಬೇಕು ಎಂದೇನೂ ನಿಯಮವಿಲ್ಲ, ನಿಮ್ಮ ಚರ್ಮದ ಬಣ್ಣಕ್ಕೆ ಅನುಗುಣವಾಗಿ, ನಿಮಗೆ ಇಷ್ಟವಾಗುವ ಯಾವ ಬಣ್ಣದ ಶರ್ಟನ್ನಾದರೂ ಧರಿಸಿ, ಆದರೆ ಹೊಸ ಹೊಸ ಪ್ರಯೋಗಗಳನ್ನು ಇಂಟರ್‌ವ್ಯೂ ದಿನ ಮಾಡದೇ ಅದನ್ನೆಲ್ಲ ಇನ್ಯಾವುದೋ ಒಂದು ದಿನ ಇಟ್ಟುಕೊಳ್ಳಿ.ರೂಲ್ ನಂಬರ್ ೪: ನೀವು ತೊಡುವ ಟೈ ಬಣ್ಣ ನಿಮ್ಮ ಸೂಟು ಹಾಗು ಶರ್ಟ್ ಎರಡಕ್ಕೂ ಹೊಂದುವಂತಿರಲಿ, ಅಲ್ಲದೇ ಟೈ ಉದ್ದ ಪ್ಯಾಂಟಿನ ಬಕಲ್‌ನ ಕೆಳಭಾಗಕ್ಕೆ ಬರುವಂತಿರಲಿ.ಥರಾವರಿ ಸೂಟುಗಳು, ಅವುಗಳ ವಿಧದಲ್ಲಿ ಯಾವುದನ್ನು ತೊಡುವುದು, ಬಿಡುವುದು ಎನ್ನುವ ಸಂದೇಹವಿದ್ದರೆ ಸಿಂಗಲ್ ಬ್ರೆಸ್ಟೆಡ್ ಅಥವಾ ಡಬಲ್ ಬ್ರೆಸ್ಟೆಡ್ ಸೂಟು ಯಾವುದಾದರೂ ಆದೀತು. ಆದರೆ ಡಬಲ್ ಬ್ರೆಸ್ಟೆಡ್ ಸೂಟ್ ಇದ್ದರೆ ಅದಕ್ಕೆ ತಕ್ಕಂತೆ ಧರಿಸುವ ಶರ್ಟ್ ಕಾಲರ್ ತುದಿಯಲ್ಲಿ ಬಟನ್ ಇಲ್ಲದಿರಲಿ.ಇನ್ನು ಪ್ಯಾಂಟಿನ ವಿಷಯಕ್ಕೆ ಬಂದರೆ - ಅದರ ಉದ್ದ ನೀವು ಶೂಸ್ ಧರಿಸಿದ ಮೇಲೆ ನಿಮ್ಮ ಎತ್ತರಕ್ಕೆ ತಕ್ಕನಾಗಿರಲಿ, ಮೇಲಿಂದ ಕೆಳಗೆ ಎಲ್ಲೂ ಬ್ರೇಕ್ ಆಗದೆ ಪ್ಯಾಂಟಿನ ಹೆಮ್ ಶೂಸ್ ಮುಟ್ಟುವಲ್ಲಿ ಒಂದು ಮಡಿಕೆ ಬಿದ್ದರೆ ಸಾಕು. ನಿಮ್ಮ ಪ್ಯಾಂಟಿನಲ್ಲಿ ನೆರಿಗೆ (pleat) ಇದ್ದರೆ ಕೆಳಗೆ ಹೆಮ್ ಹಾಕುವಲ್ಲಿ ಫೋಲ್ಡ್ ಮಾಡಿ ಹೊಲಿದಿದ್ದರೆ ಚೆನ್ನಾಗಿರುತ್ತೆ, ಇಲ್ಲವೆಂದರೂ ಪರವಾಗಿಲ್ಲ.ಇನ್ನು ಕೊನೆಯದಾಗಿ, ಅದು ಶುಕ್ರವಾರವಿರಲಿ, ಶನಿವಾರವಿರಲಿ ಆಫೀಸಿನ ಕೆಲಸದಲ್ಲಿರುವಾಗ ಜೀನ್ಸ್ ಹಾಗೂ ಸ್ನೀಕರ್ಸ್ ಅನ್ನು ತೊಡಲೇಬೇಡಿ - ಬುಸಿನೆಸ್ ಕ್ಯಾಷುವಲ್ ಬಟ್ಟೆಗಳಲ್ಲಿ ಜೀನ್ಸ್ ಬರುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಾನು ಅಲ್ಲಿ-ಇಲ್ಲಿ ಓದಿದಂತೆ ಜೀನ್ಸ್ ತೊಡುವುದನ್ನು ಯಾರೂ ರೆಕಮಂಡ್ ಮಾಡಿದ ಹಾಗಿಲ್ಲ.ಇನ್ನು ಮುಂದಿನವಾರಗಳಲ್ಲಿ ಡ್ರೆಸ್ ಮಾಡುವುದರ ಬಗ್ಗೆ ಮುಂದುವರಿಸುತ್ತೇನೆ, ಜೊತೆಯಲ್ಲಿ ವಾಸನೆಯ ಬಗ್ಗೆಯೂ ಚರ್ಚಿಸೋಣ.

ನಿಮ್ಮ ಬಗ್ಗೆ ಹೇಳುವದಕ್ಕೆ ಸಂಕೋಚವೇಕೆ .............?

ಈ ಸರಣಿಯಲ್ಲಿ ಇನ್ನೂ ಹಲವಾರು ವಿಷಯಗಳು ಬರೋದರಲ್ಲಿವೆ - ಅವುಗಳಲ್ಲಿ ಮುಖ್ಯವಾದವುಗಳು: Tell me about yourself, Resume, Cover letter, Thank you letter, Why should I hire you? How much money are you looking for? ಇತ್ಯಾದಿ...ಇವುಗಳಲ್ಲಿ ಒಂದೊಂದಾಗೇ ನೋಡಿಕೊಂಡು ಬರೋಣ.೩) Tell me about yourself!ನಿಮ್ಮ ಬಗ್ಗೇನೇ ಹೇಳಿಕೊಳ್ಳೋದಕ್ಕೆ ಸಂಕೋಚವೇಕೆ, ಅದಕ್ಕೂ ತಯಾರಿ ಅನ್ನೋದು ಬೇಕೆ ಎಂದರೆ ಹೌದು ಎನ್ನುತ್ತೇನೆ. ಸಂಕೋಚ ಎಲ್ಲರಿಗೂ ಇರಲಾರದು ಆದರೆ ಎಷ್ಟೋ ಬಾರಿ ಈ ಪ್ರಶ್ನೆಯ ಉತ್ತರವೇ ನಿಮ್ಮ ಸಂದರ್ಶನವನ್ನು make or break ಮಾಡಬಲ್ಲದು. ಆದ್ದರಿಂದ ನೀವು ಗಂಭೀರವಾಗಿ ಯಾವುದಾದರೂ ಸಂದರ್ಶನಕ್ಕೆ ತಯಾರಾಗುತ್ತಿದ್ದರೆ ಕೊನೇ ಪಕ್ಷ ಏನಿಲ್ಲವೆಂದರೂ ಈ ಪ್ರಶ್ನೆಯ ಉತ್ತರಕ್ಕಾದರೂ ತಯಾರಾಗಿ. ಎಷ್ಟೋ ಸಾರಿ icebreaker ಆಗಿ ಈ ರೀತಿಯ ಪ್ರಶ್ನೆಗಳನ್ನು ಕೇಳಿದರೂ, ಈ ಪ್ರಶ್ನೆಯನ್ನು ಕೇಳಿದ ಸಂದರ್ಶಕ ಏನನ್ನು ನಿರೀಕ್ಷಿಸುತ್ತಾನೆ/ಳೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡರೆ ಎಲ್ಲವೂ ಸುಲಭವಾದೀತು.ನಿಮ್ಮ ಸಂದರ್ಶನ ಒಂದೇ ಫೋನ್ ಮುಖಾಂತರ ನಡೆಯುತ್ತಿರಬಹುದು ಅಥವಾ ಮುಖಾಮುಖಿ ಇದ್ದಿರಬಹುದು, ಆದರೂ ಸಹ ನಾನು ನಡೆಸಿದ, ನಾನು ಸಂದರ್ಶಕನಾಗಿ ಹೋದ ಎಷ್ಟೋ ಸಂದರ್ಶನಗಳಲ್ಲಿ ಈ ಪ್ರಶ್ನೆಯನ್ನೆ ಮೊಟ್ಟಮೊದಲ ಪ್ರಶೆಯನ್ನಾಗಿ ಕೇಳಿದ್ದಿದೆ, ಹೀಗೆ ಇನ್ನು ಮುಂದೆ ಕೇಳುತ್ತಾರೆ ಎನ್ನುವ ನನ್ನ ನಂಬಿಕೆಯಿಂದಲೇ ನಾನು ಈ ಪ್ರಶ್ನೆಯ ಉತ್ತರ ಅತಿಮುಖ್ಯ ಎಂದು ಮೊದಲೇ ಹೇಳಿಬಿಡುತ್ತೇನೆ. ಜೊತೆಯಲ್ಲಿ ಈ ಪ್ರಶ್ನೆಗೆ ಉತ್ತರ ಸುಲಭವೆಂದು ನೀವೆಂದುಕೊಂಡಿರಬಹುದು, ಆದರೂ ಹೊಸ ಸ್ಥಳ, ಅಪರಿಚಿತರ ನಡುವೆ ನಿಮ್ಮ-ನಿಮ್ಮ ಪರಿಚಯವನ್ನು ಹೇಳಿಕೊಳ್ಳುವಲ್ಲಿ ತೊಂದರೆ ಏನಾದರೂ ಇದ್ದೀತೆಂದು ನಿಮಗನ್ನಿಸಿದರೆ ನೀವು ಈ ಪ್ರಶ್ನೆಯ ಉತ್ತರವನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕು. ಅಲ್ಲದೇ ಅವರು ಪ್ರಶ್ನೆ ಕೇಳಿದ ನಂತರ ಅದಕ್ಕೊಂದು ಉತ್ತರ ಸಿದ್ಧ ಪಡಿಸುವುದಕ್ಕಿಂತ ಮೊದಲೇ ಉತ್ತರವನ್ನು ಸಿದ್ಧಪಡಿಸಿಕೊಂಡು ಮನದಟ್ಟು ಮಾಡಿಕೊಂಡಿರುವುದು ಒಳ್ಳೆಯದು.ನಿಮಗೆ Tell me about yourself... ಎಂದು ಪ್ರಶ್ನೆ ಕೇಳಿದವರ ಮನಸ್ಸಿನಲ್ಲಿ ಏನಿದ್ದಿರಬಹುದು! ಅವರು ನಿಜವಾಗಿಯೂ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೋ ಅಥವಾ ನಿಮ್ಮ ಮಾತುಕಥೆಗಳು (communication skills) ಹೇಗಿವೆ ಎಂದು ಕಂಡುಕೊಳ್ಳುತ್ತಿದ್ದಾರೋ ಅಥವಾ ಈ ಎರಡೂ ಇದ್ದಿರಬಹುದು, ಮತ್ತೇನೋ ಇದ್ದಿರಬಹುದು. ಆದರೂ ಎಲ್ಲರಿಗೂ ಅನ್ವಯವಾಗುವಂತಹ ಒಂದು standard ಉತ್ತರವನ್ನು ತಯಾರಿ ಮಾಡಿಕೊಳ್ಳುವುದು ಒಳ್ಳೆಯದು.ಈ ಪ್ರಶ್ನೆಗೆ ಉತ್ತರವಾಗಿ, ಈ ಪ್ರಶ್ನೆಗಳನ್ನು ಕೇಳಿದವರಿಗೆ ನಿಮ್ಮ ಹೆಸರು ಈಗಾಗಲೇ ಗೊತ್ತಿದ್ದರೆ ಮತ್ತೆ ಅದನ್ನೇ ಹೇಳಬೇಡಿ ಇಲ್ಲವಾದರೆ, ಸೂಚ್ಯವಾಗಿ ಹೇಳಿ. (What is your name? ಎಂದು ಯಾರಾದರೂ ಕೇಳಿದಾಗ ಕೆ.ಜಿ. ಮಕ್ಕಳು ಹೇಳಿದಂತೆ My name is...ಎಂದು ಉಲಿಯಬೇಡಿ, ಅದರ ಬದಲಿಗೆ ಗಂಭೀರವಾಗಿ I am XYZ ಎಂದು ಮಾತ್ರ ಹೇಳಿ! ಕನ್ನಡದಲ್ಲಿ ಯಾರಾದರೂ ನಿಮ್ಮ ಹೆಸರೇನು ಎಂದರೆ ನೀವು ಅದಕ್ಕುತ್ತರವಾಗಿ 'ನನ್ನ ಹೆಸರು ...' ಎಂದೇನೂ ಹೇಳುವುದಿಲ್ಲ ತಾನೆ?!)Tell me about yourself ನಲ್ಲಿ ಮುಖ್ಯವಾಗಿ ಹೇಳಬೇಕಾದವುಗಳು:ನಿಮ್ಮ Profession, ಅಥವಾ level (ಉದಾಹರಣೆಗೆ - I am senior software engineer, I am manager of ...systems)a) Expertise - ನಿಮ್ಮ functions / capabalitiesb) Strengths include... - unique professional qualitiesc) Worked with/for ... - type of organizations / industries /groups (depends on the scope of the interview)ಇವುಗಳ ಸಹಾಯದಲ್ಲಿ ನೀವು ಏನನ್ನು ಮಾಡಿದ್ದೀರಿ ಎಂಬುದನ್ನು ಹೇಳಿ. ಅಕಸ್ಮಾತ್ ನಿಮಗೇನಾದರೂ ಇದು ಹೊಸ ಕೆಲಸವಾದರೆ, (ಅನುಭವ ಇದ್ದೂ ಬೇರೆ ಇಂಡಸ್ಟ್ರಿಗೆ ಹೋದರೆ) ಏನೇನು ಮಾಡಬಲ್ಲಿರಿ ಎಂಬುದನ್ನು ಹೇಳಬಹುದು.ಈ ಹಿನ್ನೆಲೆಯಲ್ಲಿ Tell me about yourself ಗೆ ಉತ್ತರವಾಗಿ: I am so and so...(ಹೆಸರು ಆಪ್ಷನಲ್ ಅಥವಾ ಅಗತ್ಯಕ್ಕೆ ತಕ್ಕಂತೆ), for the last X years I am working as a ((your designation)) in ((company/group name))(if it is a same company interview in a different group, then mention group name).Then include your expertiese - what you have done -ಉದಾಹರಣೆಗೆ:Designe(d) databases, systemsResolve(d) system issuesEnhance(d) performance of the systemsManage(d) a team of N number of individualsOversea/saw a part of the project in XYZ appplication ಇತ್ಯಾದಿ...ನಂತರ ನಿಮ್ಮ Unique functions/capabilities ಹೇಳಿ - ಇದನ್ನು ಹೇಳುವಾಗ ನೀವು ಅರ್ಜಿ ಗುಜರಾಯಿಸಿದ ಕೆಲಸವನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಹೇಳಿ.ನಂತರ ಎಲ್ಲೆಲ್ಲಿ ಕೆಲಸ ಮಾಡಿದ್ದೀರಿ, ಎಂಬುದನ್ನು ಸ್ಯೂಚ್ಯವಾಗಿ ಹೇಳಿ.ಈ ಪ್ರಶ್ನೆಗೆ ಉತ್ತರ ಸುಮಾರು ೨-೩ ನಿಮಿಷ ಹಿಡಿಯಬಹುದು, ಸಮಯವನ್ನು ನೀವೇ ಅಂದಾಜು ಮಾಡಬೇಕು, ನಿಮ್ಮ ಹಾಗೂ ಸಂದರ್ಶನ ನಡೆಸುವವರ ಅನುಕೂಲಕ್ಕೆ ತಕ್ಕಂತೆ. ಈ ಪ್ರಶ್ನೆಗೆ ಉತ್ತರವನ್ನು ಹೇಳುವಾಗ ನೀವು ನಿಮ್ಮ confidence level ನ ಉತ್ತುಂಗ ಸ್ಥಿತಿಯಲ್ಲಿರಬೇಕು. ಈ ಪ್ರಶ್ನೆಗೆ ಪೂರ್ವ ನಿರ್ಧಾರಿತ, ಅಥವಾ ಈಗಾಗಲೇ ಸಿದ್ಧಪಡಿಸಿದ ಉತ್ತರವನ್ನು ಶಾಲೆಯ ಮಕ್ಕಳು ಒಪ್ಪಿಸಿದ ಹಾಗೆ ಕೇಳುವವರ ಕಣ್ಣಿನಲ್ಲಿ ಕಣ್ಣನ್ನು ಇಟ್ಟು, ನೇರವಾಗಿ ಕುಳಿತು ಆದಷ್ಟು ಆತ್ಮವಿಶ್ವಾಸ, ಒಂದು ಕಿರುನಗೆಯನ್ನು ವ್ಯಕ್ತಪಡಿಸಿ ಹೇಳುವುದು.ದಯವಿಟ್ಟು ಜೋಲುಮೋರೆಯನ್ನು ಮಾತ್ರ ಹಾಕಿಕೊಳ್ಳಬೇಡಿ :-)೪) ನಿಮ್ಮ ರೆಸ್ಯೂಮೆ (ಅಥವಾ ನಿಮ್ಮ ಜಾತಕ, ಅಥವಾ ಹಣೆಬರಹ)ನನ್ನ ಅನುಭವದಲ್ಲಿ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಜನರನ್ನು ಸಂದರ್ಶನ ಮಾಡಿದ್ದೇನೆ ಹಾಗೂ ಬೇಕಾದಷ್ಟು ಸಂದರ್ಶನವನ್ನು ನಾನೇ ಅಭ್ಯರ್ಥಿಯಾಗಿ ಅಟೆಂಡ್ ಮಾಡಿದ್ದೇನೆ. ನೀವು ಮಾಡಬಹುದಾದ ದೊಡ್ಡ ತಪ್ಪುಗಳಲ್ಲಿ ಸರಿಯಾಗಿ ಸಿದ್ಧಪಡಿಸಿರದ ರೆಸ್ಯೂಮೆಯೂ ಒಂದು. ರೆಸ್ಯೂಮೆ ಅನ್ನೋದು ಅನ್ಯದೇಶೀಯ ಪದ, ಅದರ ಬದಲಿಗೆ bio-data, CV, candidate profile ಇತ್ಯಾದಿಗಳೂ ಬಳಕೆಯಲ್ಲಿವೆ. ಏನೇ ಇರಲಿ, ನೀವು ಎಷ್ಟೇ ದೊಡ್ಡ ಆಪೀಸರರಾಗಿರಲಿ, ಇನ್ನೂ ಈಗಷ್ಟೇ ಕಾಲೇಜು ಬಿಟ್ಟು ಹೊರಗಿನ ಬದುಕನ್ನು ನೋಡುತ್ತಿರಲಿ, ನಿಮ್ಮ ರೆಸ್ಯೂಮೆ ಎರಡು ಪುಟಗಳಿಗಿಂತ ಹೆಚ್ಚಿರುವುದು ಬೇಡ.ನಾನು ಹಲವಾರು ರೆಸ್ಯೂಮೆಗಳಲ್ಲಿ ನೋಡಿದಂತೆ ಅದರಲ್ಲಿ ನಿಮ್ಮ ಪಾಸ್‌ಪೋರ್ಟ್ ನಂಬರಾಗಲೀ, ಜನ್ಮ ದಿನಾಂಕವನ್ನಾಗಲೀ ನಮೂದಿಸುವುದು ಬೇಡ. ಸಂದರ್ಶನ ನಡೆದು ನೀವು ಹೊರದೇಶಕ್ಕೆ ಹೋಗಲು ಇನ್ನೂ ಬೇಕಾದಷ್ಟು ಸಮಯವಿರೋದರಿಂದ ವೀಸಾಬರುವವರೆಗೆ ಪಾಸ್‌ಪೋರ್ಟ್ ವಿವರವನ್ನು ನಿಮ್ಮ ಬಳಿಯಲ್ಲೇ ಇಟ್ಟುಕೊಂಡಿರಿ! ನೀವು ನಿಮ್ಮ ರೆಸ್ಯೂಮೆಯಲ್ಲಿ ತೋರಿಸಬೇಕಾದುದು ಮುಖ್ಯವಾಗಿ:* ನಿಮ್ಮ ಹೆಸರು,* ಪೂರ್ಣ ವಿಳಾಸ, ಫೋನ್ ನಂಬರ್, ಇ-ಮೇಲ್ ವಿಳಾಸಗಳ ಸಹಿತ(ನಿಮ್ಮ ಬಳಿ ಇರುವ ಹತ್ತು ಫೋನ್ ನಂಬರುಗಳು, ಇಪ್ಪತ್ತೈದು ಇ-ಮೇಲ್ ವಿಳಾಸಗಳ ಬದಲಿಗೆ ರಿಲೈಯಬಲ್ ಆಗಿರೋ ಒಂದೇ ಒಂದು ಸಾಕು)* ಇದಾದ ಮೇಲೆ ಒಂದು ನೀವು ಯಾರು ಎಂಬುದಕ್ಕೆ ಒಂದು Summary ಯನ್ನು ಕೊಡಿ(ಉದಾಹರಣೆಗೆ: I have X years of experience in <ನಿಮ್ಮ specialty>. I am so and so (ನಿಮ್ಮ current job profile). I have excellent interpersonal, organizational and follow-through skills.(ಎಕ್ಸಲೆಂಟ್ ಎಂದು ತೋರಿಸಿದ್ದರಿಂದ ನಿಮ್ಮ ಸ್ಕಿಲ್ಸ್ ಎಕ್ಸಲೆಂಟ್ ಆಗಿ ಇರಲೇಬೇಕೇ ಎನ್ನುವುದು million dollar ಪ್ರಶ್ನೆ - excellent in comparision to what?)* ನಿಮ್ಮ ಸ್ಕಿಲ್ಸ್‌ಗಳನ್ನು ಸಮರೈಸ್ ಮಾಡಿ - ಉದಾಹರಣೆಗೆ: hardware/software, speciality (internal medicine, dermatology), engineering... ನಿಮ್ಮ ಇಂಡಸ್ಟ್ರಿಗೆ ಅನ್ವಯವಾಗುವಂತಿರಲಿ.* ನಿಮ್ಮ ವಿದ್ಯಾಭ್ಯಾಸವನ್ನು ಸೂಚ್ಯವಾಗಿ ತಿಳಿಸಿ: ಡಿಗ್ರಿ, specialization, University, Year(ನಿಮ್ಮ ಕ್ಲಾಸಿನಲ್ಲಿ ಎಷ್ಟು ಜನರಿದ್ದರು, ನಿಮ್ಮ ಸ್ನೇಹಿತರ ವಿವರವೆಲ್ಲ ಇಲ್ಲಿ ಬೇಡ)* ನಿಮ್ಮ ಬಳಿ ಯಾವುದಾದರೂ ಸ್ಪೆಷಲೈಸ್ಡ್ ಸರ್ಟಿಫಿಕೇಷನ್ ಗಳಿದ್ದರೆ ಇಲ್ಲಿ ತಿಳಿಸಿ - Cisco, PMP, Java, ಇತ್ಯಾದಿ* ಅನುಭವ (Experience - starting with most current job)ಕಂಪನಿ ಹೆಸರು, ನಿಮ್ಮ ಹುದ್ದೆ, MM/YY - MM/YY ಫಾರ್ಮ್ಯಾಟ್ಅದರ ಕೆಳಗೆ ನಿಮ್ಮ ರೋಲ್ ಅನ್ನು ವಿವರಿಸಿ - ಪ್ರಾಜೆಕ್ಟ್/ಕೆಲಸ/ಕಂಪನಿಯ ಬಗ್ಗೆ ಕಡಿಮೆ ತಿಳಿಸಿ, ನೀವು ಏನು ಮಾಡುತ್ತಿದ್ದೀರಿ/ಮಾಡಿದ್ದಿರಿ ಎಂದು ತಿಳಿಸುವುದು ಒಳ್ಳೆಯದು.ಇದೇ ರೀತಿ ಉಳಿದೆಲ್ಲ ಪ್ರಾಜೆಕ್ಟ್/ಕಂಪನಿಗಳ ಬಗ್ಗೆಯೂ ತಿಳಿಸಿ, ಪ್ರಾಜೆಕ್ಟ್/ಕಂಪನಿ ಹಳೆಯದಾದಷ್ಟೂ ವಿವರ ಕಡಿಮೆ ಇರಲಿ. ನೀವು ಐದು ಅಥವಾ ಹತ್ತು ವರ್ಷದ ಹಿಂದೆ ಮಾಡಿದ ಕೆಲಸ ಬಗ್ಗೆ ಈ ಎಂಪ್ಲಾಯರ್ ಎಷ್ಟು ತಿಳಿದುಕೊಳ್ಳಬೇಕೋ ಅಷ್ಟಿರಲಿ.ನಿಮ್ಮ ಪ್ರಾಜೆಕ್ಟ್‌ನಲ್ಲಿರುವ ಮಾಡ್ಯೂಲ್‌ಗಳನ್ನು ವಿವರಿಸಿ ಎಲ್ಲರ ತಲೆ ತಿನ್ನುವ ಪ್ರಯತ್ನ ಮಾಡದೇ, ಸಿಗುವ ಸಮಯ ಹಾಗೂ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.- ನಿಮ್ಮ ಬಳಿ ಇರುವ ರೆಸ್ಯೂಮೆಯನ್ನು ನೀವು ಅರ್ಜಿ ಹಾಕುವ ಪ್ರತಿಯೊಂದು ಕೆಲಸಕ್ಕೂ ಅನ್ವಯವಾಗುವಂತೆ ಬದಲಾಯಿಸಿ, ಹಾಗೂ ಹಾಗೆ ಬದಲಾಯಿಸಿದ ಪ್ರತಿಯೊಂದನ್ನು ಆ ಕೆಲಸದ ವಿವರಗಳನ್ನೊಳಗೊಂಡ ಪುಟದ ಜೊತೆಯಲ್ಲಿ ಇಟ್ಟುಕೊಳ್ಳಿ. ನೀವು ಹಲವಾರು ಕೆಲಸಕ್ಕೆ ಅರ್ಜಿ ಗುಜರಾಯಿಸಿದ್ದರೆ, ರಿಕ್ರ್ಯೂಟರ್ ಅಥವಾ ಕಂಪನಿಯವರು ಕರೆದಾಗ ನೀವು ಯಾವ ರೆಸ್ಯೂಮೆಯನ್ನು ಅವರಿಗೆ ಕಳಿಸಿದ್ದೀರೆಂದು ನಿಮಗೇ ಗೊತ್ತಿಲ್ಲದಿದ್ದರೆ ಹೇಗೆ?- ಪ್ರತಿ ರೆಸ್ಯೂಮೆ ೯ ಸೆಕೆಂಡ್ ಪರೀಕ್ಷೆಗೆ ಒಳಪಡುತ್ತದೆಯಂತೆ (9 second test), ಅಂದರೆ ನೋಡೋರೇನಿದ್ದರೂ ಕೆಲವೇ ಕ್ಷಣಗಳಲ್ಲಿ ಅದನ್ನು ಗಮನಿಸೋದರಿಂದ ಯಾವಾಗಲೂ ಚಿಕ್ಕ ಹಾಗೂ ಚೊಕ್ಕ ರೆಸ್ಯೂಮೆ ಒಳ್ಳೆಯದು.- ನೀವು ಕೆಲಸಕ್ಕೆ ಅರ್ಜಿ ಹಾಕುವ ದೇಶ/ಭಾಷೆ/ಪರಿಸರವನ್ನು ಗಮನದಲ್ಲಿಟ್ಟುಕೊಂಡಿರಿ - ಭಾರತದಲ್ಲಿ 'ಒಳ್ಳೆಯ' ರೆಸ್ಯೂಮೆ ಅನ್ನಿಸಿಕೊಂಡಿದ್ದು, ಜಪಾನ್, ಅಥವಾ ಅಮೇರಿಕದಲ್ಲೂ ಒಳ್ಳೆಯ ರೆಸ್ಯೂಮೆ ಆಗಬೇಕೆಂದೇನೂ ಇಲ್ಲ, ಉತ್ತರದವರಿಗೆ ಇಷ್ಟವಾದದ್ದು ದಕ್ಷಿಣದವರಿಗೂ, ಪೂರ್ವದ್ದು ಪಶ್ಚಿಮದವರಿಗೂ ಅನ್ವಯವಾಗಬೇಕೆಂದೇನೂ ಇಲ್ಲ.ನಿಮ್ಮ ರೆಸ್ಯೂಮೆಯಲ್ಲಿ ಬಹಳ ಸರಳವಾದ ಫಾಂಟ್ ಹಾಗೂ ವಿನ್ಯಾಸವನ್ನು ಬಳಸಿರಿ - Arial ಅಥವಾ Times New Roman ಫಾಂಟ್ ಬಳಸಿ, ಹನ್ನೆರಡು ಸೈಜ್ ಇದ್ದರೆ ಒಳ್ಳೆಯದು, ಮಾರ್ಜಿನ್ ಬಹಳಷ್ಟು ಬಿಡಿ, Underline, Italicize ಬೇಡ (ಸ್ಕ್ಯಾನ್ ಮಾಡಿದರೆ ಅನುಕೂಲವಾಗಲಿ ಎಂದು), ಕಪ್ಪು ಅಲ್ಲದೇ ಬೇರೆ ಬಣ್ಣವನ್ನು ಬಳಸಲೇ ಬೇಡಿ.***ಹೀಗೆ ನಿಮ್ಮ ರೆಸ್ಯೂಮೆ ನಿಮ್ಮ ಮಾರ್ಕೆಟಿಂಗ್ ಟೂಲ್ ಆಗಿ ನಿಮ್ಮನ್ನು ಹೊರಗಡೆ 'ಸೇಲ್' ಮಾಡುವಲ್ಲಿ ಸಹಾಯಕವಾಗುವುದರಿಂದ ಅದು ಚೆನ್ನಾಗಿರುವಂತೆ ಅಲ್ಲದೇ ನೀವು ಬೆಳೆದ ಹಾಗೆ ಬೆಳೆದಂತೆ ನೋಡಿಕೊಳ್ಳುವುದೂ ಬಹಳ ಮುಖ್ಯ.

ಆತ್ಮ ವಿಶ್ವಾಸ ನಡೆದು ಬಂದ ದಾರಿ ಮತ್ತು ನಡೆ

ಕಳೆದ ಮೂರು ವರ್ಷಗಳಿಗಿಂತ ಹೆಚ್ಚು ಸ್ವಲ್ಪ ಅಲ್ಲಿ-ಹೆಚ್ಚಾಗಿ ಇಲ್ಲಿ ಕೆಲಸ ಮಾಡಿ, ಹಲವಾರು ವರ್ಷಗಳಿಂದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಷ್ಟೋ ಜನರಿಗೆ ಸಲಹೆಗಳನ್ನು ನೀಡುವುದರ ಮೂಲಕ, ನನ್ನ ಅನುಭವಗಳ ಹಿನ್ನೆಲೆಯಲ್ಲಿ, ಓದಿದ ಎಷ್ಟೋ ಪುಸ್ತಕಗಳ ಸಹಾಯದಿಂದ ಹಾಗೂ ನನ್ನನ್ನು ಅಲ್ಲಲ್ಲಿ ಕೈ ಹಿಡಿದು ನಡೆಸಿದ ದೊಡ್ಡವರ ನೆರಳಿನಲ್ಲಿ ನಾನೂ 'ಅಂತರಂಗ'ದಲ್ಲಿ ಪರ್ಸನಲ್ ಡೆವಲಪ್‌ಮೆಂಟ್, ಕರಿಯರ್ ಡೆವಲಪ್‌ಮೆಂಟ್ ಬಗ್ಗೆ ಬರೆದರೆ ಹೇಗೆ ಎನ್ನಿಸಿತು. ಇದರಿಂದ ಈ ಅಂಕಣವನ್ನು ಓದೋ ಎಷ್ಟೋ ಜನರಲ್ಲಿ ಕೆಲವರಿಗಾದರೂ ಮಾರ್ಗದರ್ಶನವಾದರೂ ಅದು ತುಂಬಾ ದೂರ ಹೋಗಬಲ್ಲದು. ಈ ನಿಟ್ಟಿನಲ್ಲಿ ಒಂದು ವೇದಿಕೆಯನ್ನು ಸಿದ್ಧ ಪಡಿಸಿ, ಇಲ್ಲಿ ಭಾರತದಲ್ಲಿ ಓದಿ ಭಾರತದಲ್ಲೇ ಕೆಲಸ ಮಾಡುತ್ತಿರುವ, ಮುಂದೆ ಎಂದಾದರೂ ವಿದೇಶಕ್ಕೆ ಬರುವ ಹವಣಿಕೆಯಲ್ಲಿರುವ ಹಾಗೂ ವಿದೇಶಕ್ಕೆ ಈಗಾಗಲೇ ಬಂದು ಇಲ್ಲಿನ ಮ್ಯಾನೇಜ್‌ಮೆಂಟ್ ಲೆವೆಲ್‌ಗಳಲ್ಲಿ ಅಲ್ಲಲ್ಲಿ ಕಣಗಳ ಹಾಗೆ ಸಿಕ್ಕಿ ಹಾಕಿಕೊಂಡಿರುವ (ನನ್ನನ್ನೂ ಸೇರಿ) ಕೆಲವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಸರಣಿಯನ್ನು ಬರೆಯುತ್ತಾ ಹೋಗುತ್ತೇನೆ. ಓದುಗರ ಪ್ರತಿಕ್ರಿಯೆಯನ್ನು ಅವಲಂಭಿಸಿ ಈ ಲೇಖನಗಳು ಯಾವ ತಿರುವನ್ನು ಬೇಕಾದರೂ ಪಡೆಯಬಹುದು. ಒಟ್ಟಿನಲ್ಲಿ ನನ್ನ ಸಲಹೆಗಳಿಂದ ನಿಮಗೇನಾದರೂ ಅನುಕೂಲವಾಗುವುದಾದರೆ ಅದು ನನ್ನ ಖುಷಿ, ಲೇಖನದುದ್ದಕ್ಕೂ ಬೋರ್ ಹೊಡೆಸದೆ ಅಲ್ಲಲ್ಲಿ ತಿಳಿ ಹಾಸ್ಯವನ್ನು ತುಂಬಿ ಓದಿಸಿಕೊಂಡು ಹೋಗುವಂತೆ ಮಾಡುವುದು ನನ್ನ ಸವಾಲು.ಪ್ರತಿ ಶನಿವಾರಗಳನ್ನು ಈ ಉದ್ದೇಶಕ್ಕೆ ಇಟ್ಟರೆ ಹೇಗೆ ಎಂದು ಯೋಚಿಸುತ್ತಿದ್ದೇನೆ - ನೋಡೋಣ ಇದು ಎಲ್ಲಿಯವರೆಗೆ ಬರುತ್ತೋ ಎಂದು!ಸೂಚನೆ: ಈ ಲೇಖನಗಳನ್ನು ನಾನು ಹೇಳೋ ಬುದ್ದಿವಾದ ಎಂದು ಓದಿ, ನೀನ್ಯಾವ ದೊಡ್ಡ ಮನುಷ್ಯ? ಎಂದು ನನ್ನನ್ನೇ ಪ್ರಶ್ನಿಸಬೇಡಿ. ಅದರ ಬದಲಿಗೆ ನಾನು 'ಕಲಿತ ಪಾಠ'ಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆಂದು ಓದಿದರೆ ಬಹಳ ಒಳ್ಳೆಯದು. ಈ ಲೇಖನಗಳಿಂದ ಅನುಕೂಲವಾಗಲಿ ಅನ್ನೋದು ನನ್ನ ಉದ್ದೇಶ, ಆದರೆ use your judgement.೧) ಆತ್ಮವಿಶ್ವಾಸ (confidence)ಸುಮ್ಮನೇ ಒಂದು ಕ್ಷಣ ಯೋಚಿಸಿ: ಭಾರತದಲ್ಲಿ ಇರೋ ಕೋಟ್ಯಾಂತರ ಜನರಲ್ಲಿ ನೀವೂ ಒಬ್ಬ ಇಂಜಿನಿಯರ್ ಅಥವಾ ಮತ್ತ್ಯಾವುದೋ ಪದವೀಧರ, ನಮ್ಮಲ್ಲಿ ಬೇಕಾದಷ್ಟು ಜನರಿಗೆ ಈ ಭಾಗ್ಯ ಇದೆ ಎಂದು ನೀವು ಅಂದುಕೊಂಡರೆ ತಪ್ಪು, ನಿಮ್ಮ ಒಂದನೇ ಕ್ಲಾಸಿನಲ್ಲಿ ಇದ್ದೋರಲ್ಲಿ ಇಂಜಿನಿಯರ್ ಆದವರಲ್ಲಿ ಎಷ್ಟು ಜನ ಎಂದು ಪ್ರಶ್ನಿಸಿಕೊಳ್ಳಿ - ಬೆಂಗಳೂರಿನ ವಾತಾವರಣದಲ್ಲಿ ಬೆಳೆದು ಬಂದವರಿಗೆ ಒಂದು ಉತ್ತರ ದೊರೆಯುತ್ತದೆ, ಆನವಟ್ಟಿಯ ವಾತಾವರಣದಲ್ಲಿ ಬೆಳೆದವರಿಗೆ ಮತ್ತೊಂದು - ಆದರೂ ಇಂದಿಗೂ ಕೋಟ್ಯಾಂತರ ಜನರಿಗೆ ತಮ್ಮ ಹೆಸರನ್ನೇ ಬರೆಯಲು ಬರದಿರುವಾಗ ಅವರೆಲ್ಲರ ಮಧ್ಯೆ ನೀವೊಬ್ಬ ಇಂಜಿನಿಯರ್ ಅಥವಾ ಸ್ನಾತಕೋತ್ತರ ಪದವೀಧರ ಎಂದುಕೊಂಡರೆ ಅದೇ ಮಹಾಭಾಗ್ಯ, ಎಲ್ಲರಿಗೂ ಅದು ದೊರೆಯೋದಿಲ್ಲ, ಅದಕ್ಕೂ ಪಡೆದುಕೊಂಡು ಬರಬೇಕು (ಏನನ್ನು ಅನ್ನೋದು ಇನ್ನೊಂದು ದಿನದ ವಿಷಯ).ಹಾಗೆಯೇ, ಅಮೇರಿಕದಲ್ಲಿ ನೂರಕ್ಕೆ ನೂರು ಸಾಕ್ಷರತೆ ಇದೆ ಎಂದಾಕ್ಷಣ ಇಲ್ಲಿಯ ಚಿತ್ರಣ ಭಾರತಕ್ಕಿಂತ ಏನು ವಿಭಿನ್ನವಲ್ಲ - ಎಲ್ಲ ದೇಶಗಳ ಹಾಗೆ ಇಲ್ಲಿಯೂ ದೊಡ್ಡ ದೊಡ್ಡ ಆಫೀಸರುಗಳಿದ್ದಾರೆ, ರಸ್ತೆಯ ಬದಿಯಲ್ಲಿ ಹಾಟ್‌ಡಾಗ್ ಮಾರುವವರೂ ಇದ್ದಾರೆ, ಬಹಳಷ್ಟು ಓದಿ ಮುಂದೆ ಬಂದವರೂ ಇದ್ದಾರೆ, ನಿರಕ್ಷರ ಕುಕ್ಷಿಗಳೂ ಇದ್ದಾರೆ.ನೀವು ಭಾರತದಲ್ಲೇ ಕೆಲಸ ಮಾಡಲಿ, ಅಥವಾ ಅಮೇರಿಕಕ್ಕೆ ಓದುವುದಕ್ಕಾಗಿಯೋ, ಅಥವಾ ಕೆಲಸ ಮಾಡುವ ಸಲುವಾಗಿಯೋ ಬಂದವರಾದರೆ ಸದಾ ಆತ್ಮವಿಶ್ವಾಸ ನಿಮ್ಮ ಜೊತೆಯಲ್ಲಿಯೇ ಇರಲಿ. ಪ್ರಪಂಚದಲ್ಲಿ ಎಷ್ಟೋ ಜನರಿಗೆ ಬರದಷ್ಟು ಇಂಗ್ಲೀಷ್ ನಿಮಗೆ ಬರುತ್ತದೆ, ಅಮೇರಿಕದ ೨೩೦+ ಮಿಲಿಯನ್ ಜನರಲ್ಲಿ ಎಲ್ಲರೂ ನಿಮ್ಮ ಹಾಗೆ ಇಂಜಿನಿಯರಿಂಗ್ ಮಾಡಿರೋದಿಲ್ಲ - ನೀವು ವಿದ್ಯಾಭ್ಯಾಸ, ಶಿಸ್ತು, ತಿಳುವಳಿಕೆಗಳಲ್ಲಿ ಈಗಾಗಲೇ ಅದೆಷ್ಟೋ ಜನರಿಗಿಂತ ಮುಂದಿದ್ದೀರಿ ಅನ್ನೋ ಆತ್ಮವಿಶ್ವಾಸ ನಿಮ್ಮಲ್ಲಿರಲಿ. ಈ ವಿಶ್ವಾಸ ದಾಷ್ಟ್ರ್ಯವಾಗಬಾರದು, ವಿನಯದ ಲೇಪನವಂತೂ ಯಾವಾಗಲೂ ಇರಲೇಬೇಕು, ಆದರೆ ನಿಮ್ಮ ಮನಸ್ಸಿನಲ್ಲಿರುವ ಯಾವುದೇ ರೀತಿಯ ಕೀಳರಿಮೆಯನ್ನೂ ಈ ವಿಶ್ವಾಸ ಹೋಗಲಾಡಿಸಲಿ.'ನಾನು ಯಾರಿಗಿಂತಲೂ ಕಡಿಮೆ ಏನೂ ಇಲ್ಲ, I am so happy to be here, I can do it!' ಎಂದು ನಿಮ್ಮಷ್ಟಕ್ಕೆ ನೀವೇ ಹೇಳಿಕೊಳ್ಳಿ/ಹೇಳಿಕೊಳ್ಳುತ್ತಿರಿ.ಈ ಆತ್ಮವಿಶ್ವಾಸವೆನ್ನುವುದು ಸುಮ್ಮನೇ ಹೇಳುವುದಕ್ಕೆ ಮಾತ್ರವಲ್ಲ, ದಿನನಿತ್ಯದ ಬದುಕಿನಲ್ಲೂ ಅಲ್ಲಲ್ಲಿ ನಿಮ್ಮನ್ನು ಕೈ ಹಿಡಿದು ನಡೆಸುತ್ತಲೇ ಇರುತ್ತೆ, ನನ್ನ ಹೈ ಸ್ಕೂಲಿನಲ್ಲಿ ವಿಜ್ಞಾನ ಪಾಠ ಮಾಡುವ ಜ್ಯೋತಿ ಮೇಷ್ಟ್ರು ನನಗೆ ಅತಿಯಾದ ಆತ್ಮವಿಶ್ವಾಸವಿರೋದರಿಂದ ನನಗೆ ಕೆಡುಕಾಗಬಹುದು ಎಂದು ಎಚ್ಚರಿಕೆ ಕೊಟ್ಟಿದ್ದರು. ಆದರೆ ನನಗೆ ಆಗಿದ್ದ ಅತಿಯಾದ ಆತ್ಮವಿಶ್ವಾಸ ಯಾವಾಗಲೂ ಇದ್ದ ಅತಿಯಾದ ಕೀಳರಿಮೆ ಜೊತೆಯಲ್ಲಿ ಕ್ಯಾನ್ಸಲ್ ಆದ್ದರಿಂದ ನನಗೆ ಒಳ್ಳೆಯದೇ ಎನಿಸಿದೆ, ಆದರೆ ನಿಮ್ಮ ಆತ್ಮವಿಶ್ವಾಸ ಅತಿಯಾಗದಿರಲಿ, ಅದು superiority complex ಅನ್ನು ಬೆಳೆಸದಿರಲಿ.೨) ನಡೆದು ಬರೋ ದಾರಿ ಮತ್ತು ಗುರಿ (means and destination)ಭಾರತದಲ್ಲಿ ನಾವೆಲ್ಲರೂ ಒಂದಲ್ಲ ಒಂದು ಕೋರ್ಸುಗಳಲ್ಲಿ ಇಂಜಿನಿಯರಿಂಗೋ ಮತ್ತೊಂದೋ ಪದವಿಯನ್ನು ಆಯ್ದುಕೊಳ್ಳುತ್ತೇವೆ, ಆದರೆ ಅಲ್ಲಿ ಕಲಿತದ್ದಕ್ಕೆ ಅನುಸಾರವಾಗಿ ಮಾಡುವ ಉದ್ಯೋಗಗಳೂ ಇರಲೇಬೇಕೆಂದೇನೂ ಇಲ್ಲ. ಉದಾಹರಣೆಗೆ ಒಬ್ಬ ಕೆಮಿಕಲ್ ಇಂಜಿನಿಯರಿಂಗ್ ಓದಿದವನು ಇನ್‌ಫರ್‌ಮೇಷನ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಬಹುದು, ಅಥವಾ ಒಬ್ಬ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದವನು ಇನ್ಯಾವುದೋ ಕ್ಷೇತ್ರದಲ್ಲಿ ದುಡಿಯಬಹುದು. ನೀವು ಕಲಿತ ಅಪರೇಟಿಂಗ್ ಸಿಸ್ಟಮ್ ಬೇಸಿಕ್ ಆಗಲಿ, ನೀವು ಬರೆದ ಕಂಪೈಲರ್ ಆಗಲಿ ಅಥವಾ ನೀವೇ ಕಂಡುಹಿಡಿದ ನ್ಯೂಮೆರಿಕಲ್ ಸೊಲ್ಯೂಷನ್ನ್ ಆಗಲಿ ಬಹಳ ದೂರಗಳವರೆಗೆ ನಿಮ್ಮ ಕೈ ಹಿಡಿದು ನಡೆಸಬಲ್ಲದು, ಆದರೆ... ನಿಜ ಜೀವನ ಬಹಳ ಭಿನ್ನವಾದದ್ದು, ನಮ್ಮ ಆಫೀಸಿನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಕಾಲೇಜ್ ಗ್ರ್ಯಾಜುಯೇಟ್‌ಗಳನ್ನೂ, ಹಲವಾರು ಕಾಲೇಜ್ ಇಂಟರ್ನ್‌ಗಳನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ರಿಯಲ್ ಲೈಫ್ ಅನ್ನೋದು ಶಾಲೆಯಲ್ಲಿ ಓದಿದ ಹಂದರಕ್ಕಿಂತ ಭಿನ್ನವಾದದ್ದು, ನಿಜವಾದ ಬದುಕು ಒಡ್ಡೋ ಸವಾಲುಗಳನ್ನು ಎದುರಿಸೋದಕ್ಕೆ ನಿಮ್ಮನಿಮ್ಮ ವಿದ್ಯೆ ತಯಾರು ಮಾಡಲಿ. ಆಫೀಸಿನಲ್ಲಿ ನಾನು ಮಾಡೋ ಕೆಲಸ ಬಹಳ ಗ್ಲಾಮರಸ್ ಆಗೇನೂ ಕಂಡು ಬರೋದಿಲ್ಲ, ಒಂದು ಪ್ರಾಜೆಕ್ಟಿನ ಸ್ಕೋಪಿನಲ್ಲಿ ಒಬ್ಬ ಕೀ ಪ್ಲೇಯರ್ ಆಗಿ ನನ್ನ ಕೆಲಸವನ್ನು 'ಹೀಗೆ-ಇಂಥದು' ಎಂದು ಈ ಕಾಲೇಜ್ ಗ್ರ್ಯಾಜುಯೇಟ್‌ಗಳಿಗೆ ವಿವರಿಸೋದಕ್ಕೆ ಮೊದಲು ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ keeping the end in mind, ಅಂದರೆ ನಾವು ಮಾಡೋ ಪ್ರಾಜೆಕ್ಟ್ ಕೆಲಸದ ಅಲ್ಟಿಮೇಟ್ ರಿಸಲ್ಟ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ದಿನೇ-ದಿನೇ ಮಾಡೋ ಕೆಲಸಗಳನ್ನು ವಿವರಿಸಿದಾಗ ಎಲ್ಲವೂ ಸುಲಭವಾಗುತ್ತದೆ. ಮೇಲ್ನೋಟಕ್ಕೆ ನಾನು ಬರೀ ಇ-ಮೇಲ್ ಗಳನ್ನು ಓದಿ ಉತ್ತರಿಸೋನ ಹಾಗೆ ಕಂಡು ಬಂದರೂ ಪ್ರತಿಯೊಂದು ಇ-ಮೇಲ್ ನ ಹಿನ್ನೆಲೆ, ಅದರ ಬಿಸಿನೆಸ್ ಇಂಪ್ಲಿಕೇಷನ್, ಮುಂದಾಗುವ ಕೆಲಸಗಳನ್ನು ಯೋಚಿಸಿಕೊಂಡಾಗ ಎಲ್ಲವೂ ಸ್ಪಷ್ಟವಾಗುತ್ತದೆ.ಬಹಳಷ್ಟು ಜನರು ಅಂದುಕೊಂಡ ಹಾಗೆ ನಿಜ ಜೀವನದ ಕೆಲಸಗಳು ಒಂದು ಸರಳ ಸಮೀಕರಣವಂತೂ ಅಲ್ಲ. ಅಲ್ಲದೇ ನಾವೂ- ನೀವು ಮಾಡೋ ಕೆಲಸಗಳಲ್ಲಿ ನಮ್ಮ ಗುರಿಗಳನ್ನು ನಾವು ತಲುಪುವಲ್ಲಿ external factors ಬೇಕಾದಷ್ಟು influence ಮಾಡುತ್ತವೆ: ಉದಾಹರಣೆಗೆ ನಾವು ಕೆಲಸ ಮಾಡೋ ಸಂಸ್ಥೆಗಳ ಸಂಸ್ಕೃತಿ ಅಲ್ಲಿನ ಆಗುಹೋಗುಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಒಂದು ಲಾಗಿನ್ ಆಕ್ಸೆಸ್ ಸಿಗುವುದಕ್ಕೆ ಒಂದು ದಿನ ಬೇಕಾ! ಎಂದು ಮೂಗಿನ ಮೇಲೆ ಬೆರಳಿಡುವ ಕಾಲೇಜ್ ಗ್ರ್ಯಾಜುಯೇಟ್‌ಗಳಿಗೆ ಅದರ ಹಿಂದಿನ ಪ್ರಾಸೆಸ್ಸುಗಳನ್ನು ಸುಮಾರು ಎರಡೂವರೆ ಲಕ್ಷ ಜನ ಕೆಲಸ ಮಾಡುವ ನಮ್ಮ Fortune 18 ನೇ ಕಂಪನಿಯಲ್ಲಿ ಹಿನ್ನೆಲೆಯಲ್ಲಿ ವಿವರಿಸುತ್ತೇನೆ, ಆಗ ಅವರುಗಳು ಮತ್ತೊಂದು ರೀತಿಯಲ್ಲಿ ಆಶ್ಚರ್ಯ ಚಕಿತರಾಗುವುದನ್ನೂ ನೋಡಿದ್ದೇನೆ.So, ಒಂದೇ ಸಾಲಿನಲ್ಲಿ ಹೇಳುವುದಾದರೆ - ಗಂಭೀರ ಹಾಗೂ ರಚನಾತ್ಮಕ ಉದ್ದೇಶಗಳುಳ್ಳ ಯಾರೇ ಆದರೂ ಸಾಕಷ್ಟು ಬೇಸರವನ್ನು ಸಹಿಸಿಕೊಳ್ಳಲು ಸಿದ್ಧರಿರಬೇಕು. ಅದು GMAT ನಲ್ಲಿ 800 ಕ್ಕೆ 720 ಸ್ಕೋರು ಮಾಡುವ ಶಾರ್ಟ್ ಟರ್ಮ್ ಗುರಿ ಇರಬಹುದು, ಅಥವಾ ಯಾವುದೋ ಒಂದು ದೊಡ್ಡ ಕಂಪನಿಯಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗುವ ಲಾಂಗ್ ಟರ್ಮ್ ಉದ್ದೇಶವಿರಬಹುದು.***ಈ ಬರಹಗಳನ್ನು ಬರೆಯುತ್ತಾ ಬರೆಯುತ್ತಾ ನಾನೂ ಕಲಿಯುತ್ತಿದ್ದೇನೆ, ಈ ರೀತಿ ಹಿಂದೆಲ್ಲೂ ಬರೆದಿಲ್ಲವಾದ್ದರಿಂದ ಭಾಷೆ, ಅದರ ಬಳಕೆಯೂ ನನಗೆ ತೊಂದರೆ ಕೊಡುತ್ತಿದೆ.ಈ ಸರಣಿಯ ಆರಂಭದ ಬಗ್ಗೆ ನಿಮ್ಮ ಅನಿಸಿಕೆಗಳೇನು? ನಿಮಗೆ ಇಂಥ ಲೇಖನಗಳಿಂದ ಏನಾದರೂ ಅನುಕೂಲ ಕಂಡು ಬರುತ್ತಿದೆಯೇ? ನಿಮ್ಮ ಪ್ರಶ್ನೆ-ಸಲಹೆ-ಅನಿಸಿಕೆಗಳನ್ನು ಬರೆಯಿರಿ, ಇಲ್ಲಾ ಇ-ಮೇಲ್ ಮುಖಾಂತರ ನನಗೆ ತಿಳಿಸಿ:santoshgadkar@ibibo.com ***

ನಿಮ್ಮನೇಕೆ ಕೆಲಸಕ್ಕೆ ತೆಗೆದು ಕೊಳ್ಳಬೇಕು........?

ಹಿಂದಿನ ಬರಹಗಳಲ್ಲಿ ರೆಸ್ಯೂಮೆ ಬಗ್ಗೆ ಬರೆದಾಗ ಹಾಗೂ ಕವರ್ ಲೆಟರ್ ಬಗ್ಗೆ ಬರೆದಾಗ 'ರೆಫೆರೆನ್ಸ್' ಬಗ್ಗೆನೂ ಬರೀಬೇಕು ಅಂದುಕೊಂಡಿದ್ದೆ, ಆದರೆ ಎಲ್ಲ ರೀತಿಯ ಕೆಲಸಗಳಲ್ಲೂ ರೆಫೆರೆನ್ಸ್ ಕೇಳೋದಿಲ್ಲ, ಮಾಹಿತಿ ತಂತ್ರಜ್ಞಾನದಲ್ಲಿ ನಾನು ತಿಳಿದುಕೊಂಡ ಮಟ್ಟಿಗೆ ರೆಫೆರೆನ್ಸ್‌ಗಳನ್ನು ಕೇಳಿ ಫಾಲೋ ಅಪ್ ಮಾಡಿದ ಸಂದರ್ಭಗಳು ಕಡಿಮೆ, ಅದೇ ವೈದ್ಯಕೀಯ ಸೇವೆಗೆ ಸಂಬಂಧಿಸಿದ ಕೆಲಸಗಳಲ್ಲಿ ಹೆಚ್ಚೂ ಕಡಿಮೆ ಪ್ರತಿಯೊಂದು ಸಂದರ್ಶನಕ್ಕೆ ಮೊದಲು ಅಥವಾ ನಂತರ 'ರೆಫೆರೆನ್ಸ್'ಗಳನ್ನು ಕೇಳಿಯೇ ಕೇಳುತ್ತಾರೆ.ನೀವು ಅರಸುತ್ತಿರುವ ಉದ್ಯೋಗಕ್ಕೆ ತಕ್ಕಂತೆ ಸೂಚ್ಯವಾಗಿ ನಿಮ್ಮ ರೆಸ್ಯೂಮೆಯಲ್ಲಿ References are available upon request ಎಂದು ಸೇರಿಸಿ, ಅದಕ್ಕೆ ತಕ್ಕಂತೆ ಮೂರು ಜನರಿಂದ ಐದು ಜನರವರೆಗೆ ರೆಫೆರೆನ್ಸ್‌ಗಳನ್ನು ಕೊಡುವುದಕ್ಕೆ ತಯಾರಾಗಿರಿ. ನೀವು ಕೊಡಬೇಕಾದ ವಿವರವೆಂದರೆ ಅವರ ಹೆಸರು, ಇ-ಮೇಲ್ ವಿಳಾಸ, ಫೋನ್ ನಂಬರ್. ಹಲವು ಕೆಲಸಗಳಲ್ಲಿ ರೆಫೆರೆನ್ಸ್ ಚೆಕ್‌ ಮಾಡುವುದಕ್ಕೋಸ್ಕರವೇ ಒಂದು ಪ್ರಶ್ನಾವಳಿ (questionnaire) ಯನ್ನು ಅವರಿಗೆ ಕಳಿಸಲಾಗುತ್ತೆ, ಇನ್ನು ಕೆಲವು ಕೆಲಸಗಳಲ್ಲಿ ರೆಫೆರೆನ್ಸ್ ಕೊಡುವವರು ಒಂದು ಪುಟದಲ್ಲಿ ನಿಮ್ಮ ಬಗ್ಗೆ ಬರೆದು ಫ್ಯಾಕ್ಸ್ ಅಥವಾ ಮೇಲ್ ಮಾಡಬೇಕಾಗುತ್ತೆ, ಇನ್ನು ಕೆಲವು ಕೆಲಸಗಳಲ್ಲಿ ಫೋನ್ ಮೂಲಕ ಐದು ಹತ್ತು ನಿಮಿಷಗಳಲ್ಲಿ ನಿಮ್ಮ ಬಗ್ಗೆ ಕೇಳಲಾಗುತ್ತೆ, ಇತ್ಯಾದಿ...ವಿವರಗಳೇನೇ ಇರಲಿ ನೀವು ಸಂದರ್ಶನ ಮಾಡುವವರಿಂದ ವಿವರಗಳನ್ನು ಪಡೆದು ನೀವು ರೆಫೆರೆನ್ಸ್ ನೀಡಿದವರಿಗೆ ಮುಂಚಿತವಾಗಿಯೇ ತಿಳಿಸುವುದು ಒಳ್ಳೆಯದು.ರೆಫೆರೆನ್ಸ್‌ಗೆ ಯಾರನ್ನೆಲ್ಲ ಕೊಡಬಹುದು ಎಂದರೆ ನಿಮ್ಮ ಸಹೋದ್ಯೋಗಿಗಳು (ಆಯ್ಕೆಯಲ್ಲಿ ಸ್ವಲ್ಪ ಹುಷಾರಾಗಿರಿ), ನಿಮ್ಮ ಹಿಂದಿನ ಬಾಸ್‌ಗಳು, ನಿಮ್ಮನ್ನು ಹತ್ತಿರದಿಂದ ಬಲ್ಲ ಪ್ರೊಫೆಸರುಗಳು, ನಿಮ್ಮ ಮ್ಯಾಟ್ರಿಕ್ಸ್ ಪದ್ದತಿಯ ಆರ್ಗನೈಸೇಷನ್ ಚಾರ್ಟ್‌ನಲ್ಲಿರುವ ಉಳಿದ ಡಿಪಾರ್ಟ್‌ಮೆಂಟಿನ ಮುಖ್ಯಸ್ಥರು (ಆಯ್ಕೆಯಲ್ಲಿ ಸ್ವಲ್ಪ ಹುಷಾರಾಗಿರಿ), ಇತ್ಯಾದಿ.ಈಗ ಮುಖ್ಯ ವಿಷಯಕ್ಕೆ ಬರೋಣ.೬) ನಿಮ್ಮನ್ನೇಕೆ ಅವರು ಕೆಲಸಕ್ಕೆ ತಗೋಬೇಕು?!೧೯೯೮ ಮೇ ತಿಂಗಳಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಸೊಲೋಮನ್ ಸ್ಮಿತ್ ಬಾರ್ನಿಯಲ್ಲಿ ನನಗೊಂದು ಟೆಕ್ನಿಕಲ್ ಪೊಸಿಷನ್‌ಗೆ ಇಂಟರ್‌ವ್ಯೂವ್ ಬಂದಿತ್ತು, ಎಂದಿನಂತೆ ತಯಾರಿ ನಡೆಸುತ್ತಿರುವಾಗ ಪಬ್ಲಿಕ್ ಲೈಬ್ರರಿಯಲ್ಲಿ ಯಾವುದೋ ಪುಸ್ತಕವೊಂದರಲ್ಲಿ ತೆಗೆದೊಡನೆ 'Why should we hire you?' ಅನ್ನೋ ಪ್ರಶ್ನೆ ಮುಖಕ್ಕೆ ರಾಚಿತು, ಒಂದು ಐದು ನಿಮಿಷ ಓದಿ ಅದರ ಸ್ವಾರಸ್ಯವನ್ನು ಮನನ ಮಾಡಿಕೊಂಡೆ, ಮರುದಿನ ಇಂಟರ್‌ವ್ಯೂವ್‌ನಲ್ಲಿ ನನಗೆ ಆಶ್ಚರ್ಯವಾಗುವಂತೆ ಅವರು ಕೇಳಿದ ಮೊದಲನೇ ಪ್ರಶ್ನೆಯೇ 'ನಾನೇಕೆ ನಿನ್ನನ್ನು ಈ ಕೆಲಸಕ್ಕೆ ತೆಗೆದುಕೊಳ್ಳಬೇಕು?' ಸ್ವಲ್ಪವಾದರೂ ತಯಾರಿ ನಡೆಸಿದ್ದರಿಂದ ಅಲ್ಲಿ ನಾನು ಕಕ್ಕಾಬಿಕ್ಕಿಯಾಗದೇ ಎಂದಿನ ಲವಲವಿಕೆಯಲ್ಲಿಯೇ ನನ್ನ ಉತ್ತರವನ್ನು ಒಪ್ಪಿಸಿದ್ದೆ! ತದನಂತರ ನನ್ನ ಸಂದರ್ಶನದಲ್ಲಿ ಪಾಸಾಗಿ ಅಲ್ಲಿ ಕೆಲಸಕ್ಕೆ ಕರೆದರೂ ನಾನು ಆ ಕಂಪನಿಯನ್ನು ಸೇರಿಕೊಳ್ಳಲಿಲ್ಲ, ಅದು ಬೇರೆ ವಿಷಯ.ನೀವು ಈ ಪ್ರಶ್ನೆಗೆ ಏನು/ಹೇಗೆ ಉತ್ತರಿಸುತ್ತೀರ ಎನ್ನುವುದು ಬಹಳ ಮುಖ್ಯ, ಈ ಪ್ರಶ್ನೆಯಲ್ಲಿ ನಿಮ್ಮ Sales pitch ಇರಬೇಕು, ಅಲ್ಲದೇ ನಿಮ್ಮ ಕಮ್ಮೂನಿಕೇಷನ್ ಸ್ಕಿಲ್ಸ್, ಬಾಡಿ ಲಾಂಗ್ವೇಜ್, ಮುಂತಾದವುಗಳನ್ನು ಗಮನಿಸಲಾಗುತ್ತೆ ಅನ್ನೋದು ಮನಸ್ಸಿನಲ್ಲಿರಲಿ, ಅಲ್ಲದೇ ನಿಮಗೆ ಈ ಕೆಲಸದಲ್ಲಿ ಆಸಕ್ತಿ ಇರದೇ ಹೋದರೆ ನೀವು ಈ ಹಂತವನ್ನು ತಲುಪುತ್ತಿರಲಿಲ್ಲವಾದ್ದರಿಂದ ಕೆಲಸ ಸಿಗುತ್ತದೆಯೋ ಬಿಡುತ್ತದೆಯೋ, ಕೆಲಸ ಸಿಕ್ಕರೆ ತೆಗೆದುಕೊಳ್ಳುತ್ತೀರೋ ಇಲ್ಲವೋ ಅದರ ಬಗ್ಗೆ ಯೋಚಿಸದೆ ನಿಮ್ಮನ್ನು ಈ ಹಂತದಲ್ಲಿ ಈ ಕೆಲಸಕ್ಕೆ ಏಕೆ ಅವರು ತೆಗೆದುಕೊಳ್ಳಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಧನಾತ್ಮಕವಾದ (positive) ಉತ್ತರವೊಂದನ್ನು ಸಿದ್ಧಮಾಡಿಕೊಳ್ಳಿ, ಹಾಗೆ ಸಿದ್ಧಮಾಡಿಕೊಂಡ ಉತ್ತರವೊಂದನ್ನು ನ್ಯಾಯವಾಗಿ ಒಪ್ಪಿಸಿ!ಈ ಕೆಲಸಕ್ಕೆ ಬೇಕಾದ Requirements ಮನಸ್ಸಿನಲ್ಲಿರಲಿ, Industry ಕೂಡಾ ಆಷ್ಟೇ ಮುಖ್ಯ, ಅಲ್ಲದೇ ನೀವು ಹೇಳಿದ ವಾಕ್ಯಗಳು ನಿಮ್ಮನ್ನೇ ಹಿಂತಿರುಗಿ ಹೊಡೆಯದಿರುವಂತೆ ಹಾಗೂ ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಸದಂತೆ ಮಾತನಾಡುವ ಜಾಣತನವೂ ಇರಲಿ - ಉದಾಹರಣೆಗೆ 'I love to work on patients with HIV!' ಎಂದೇನೋ ಆವೇಷದಲ್ಲಿ ಹೇಳಿ ಬಿಟ್ಟಿರಿ ಎಂದುಕೊಳ್ಳಿ, ನಾಳೆ ನಿಮ್ಮ ಸುತ್ತ ಮುತ್ತ ಇಂತಹ ರೋಗಿಗಳೇ ತುಂಬಿಕೊಂಡರೆ ಇಂಟರ್‌ವ್ಯೂವ್ ಮಾಡಿದವರೇ ನಿಮ್ಮ ಬಾಸೂ ಆದರೆ ಏನೆಂದು ದೂರು ಕೊಡುತ್ತೀರಿ - 'ನನಗೆ ಇಂತಹ ಪೇಷಂಟ್‌ಗಳು ಅಂದ್ರೆ ಪಂಚಪ್ರಾಣಾ ಅಂತ ನೀನೇ ಹೇಳಿದ್ದೆ!' ಎಂದು ಅವರು ತಿರುಗಿ ಪ್ರಶ್ನೆ ಹಾಕದಿದ್ದರೆ ಸಾಕು.ಈ ಪ್ರಶ್ನೆಗೆ ಉತ್ತರವಾಗಿ ಸೇರಿಸಬಹುದಾದ/ಬೇಕಾದ ವಾಕ್ಯಗಳೆಂದರೆ:- I have what it takes to do the job- I am a team player- I can hit the ground running- Consider addressing specific requirements in the answer (I have been a C++ developer specifically working on Virtual Reality applications)- Explain how you will be an asset to this project/team/groupಏನನ್ನು ಹೇಳಬಾರದೆಂದರೆ:- I really need this job- I am a hard worker- I have excellent communication skills- I like your company- I would like to be promotedಈ ಪ್ರಶ್ನೆಗೆ ಉತ್ತರವನ್ನು ತಯಾರಿಸುವಾಗ ನಿಮ್ಮ potential ನಿಮ್ಮ ಕಣ್ಣ ಮುಂದಿರಲಿ, ನಿಮ್ಮ ಬೇಕು-ಬೇಡಗಳು, strengths-weakness ನಿಮಗೆ ಗೊತ್ತಿರಲಿ. ನಿಮ್ಮ ಹಿನ್ನೆಲೆ, ಅನುಭವ ಇಂತಹ ಪ್ರಶ್ನೆಗಳನ್ನು ಉತ್ತರಿಸುವಲ್ಲಿ ಸಹಾಯ ಮಾಡಲಿ, ಈ ಪ್ರಶ್ನೆಯನ್ನು ಬೇರೆ ಯಾವುದೇ ವೇರಿಯೇಷನ್‌ನಲ್ಲಿ ಕೇಳಿದರೂ ನಿಮ್ಮ ಉತ್ತರ ಸ್ಥಿರವಾಗಿರಲಿ.ಮುಖ್ಯವಾಗಿ, ನೀವು ಈ ಪ್ರಶ್ನೆಗೆ ಕೊಟ್ಟ ಉತ್ತರದಿಂದ ಮಾತ್ರ ನಿಮ್ಮನ್ನು ಅವರು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆಂದು ಯೋಚಿಸದೇ ಒಂದೆರಡು ನಿಮಿಷಗಳಲ್ಲಿ ಇದನ್ನು ಉತ್ತರಿಸಿ ಮುಂದೆ ಹೋಗಿ.***

ಭಾನುವಾರದ ವಣಮನಸ್ಸು

ಇವತ್ತು ಬೆಳಗ್ಗಿನಿಂದಲೂ ಒಂಥರಾ ಯಾರ ಮೇಲಾದ್ರೂ ಕಿರುಚಾಡಬೇಕು ಅನ್ನೋ ಅಸ್ತವ್ಯಸ್ತ ಮನಸು, ಯಾಕ್ ಹೀಗೆ ಅಂತ ನೋಡ್ತಾ ಹೋದ್ರೆ ಸಾವಿರದ ಒಂದು ಕಾರಣಗಳು...ನಾನೂ moody ಆಗಿ ಬಿಟ್ಟೆನೇ ಎಂದು ಚಿವುಟಿ ನೋಡಿಕೊಳ್ಳುವಷ್ಟರ ಮಟ್ಟಿಗೆ... ಸ್ವಲ್ಪ ಕೆದಕಿ ನೋಡಿದಾಗ ಒಂದು ಮಹಾ ಕಾರಣ ಗಂಟು ಬಿದ್ದಿತು. ಎರಡು ವಾರದ ಹಿಂದೆ ನನ್ನ ಪರ್ಸನಲ್ ಲ್ಯಾಪ್‌ಟಾಪಿನ ಹಾರ್ಡ್ ಡ್ರೈವ್ ಮಠ ಹತ್ತಿ ಹೋಗಿದ್ದು, ಇವತ್ತು ಅದನ್ನು ರಿಪೇರಿ ಮಾಡಿ ಡೇಟಾ ರಿಕವರಿ ಮಾಡುವ ಪುಣ್ಯಾತ್ಮ ಕೊಟ್ಟ ಎಸ್ಟಿಮೇಟನ್ನ್ ನೋಡಿದ ಮೇಲೆ ಡೇಟಾ ಮುಖ್ಯವೋ ಹಣ ಮುಖ್ಯವೋ ಎಂದು ಒಂದನೇ ಕ್ಲಾಸಿನ ಹುಡುಗನ ಹಾಗೆ ಮನಸಿನಲ್ಲೇ ಕೂಡಿಸಿ ಭಾಗಿಸಿ ಗುಣಿಸಿ ಕಳೆದರೂ ಉತ್ತರ ದೊರೆಯವಲ್ಲದು.ಸುಮಾರು ಒಂದು ತಿಂಗಳ ಹಿಂದೆ ನನಗೇ ನಾನು ರಿಮೈಂಡರ್ ಬರೆದುಕೊಂಡು ಒಂದು ದಿನ ಪರ್ಸನಲ್ ಲ್ಯಾಪ್‌ಟಾಪಿನ ಡೇಟಾ ಬ್ಯಾಕ್‌ಅಪ್ ಮಾಡಿಡಬೇಕು ಎಂದುಕೊಂಡಿದ್ದೆ. ಅದಾದ ಒಂದು ವಾರದ ನಂತರ ಇದ್ದಕ್ಕಿದ್ದ ಹಾಗೆ ಒಂದು ಬ್ಲೂ ಸ್ಕ್ರೀನ್ ಎರರ್ ಮೆಸೇಜ್ ಬಂತು, ಎರರ್ ಅನ್ನು ಓದಿ ಬರೆದುಕೊಳ್ಳಲೂ ಆಸ್ಪದ ಕೊಡದ ಹಾಗೆ ಸಿಸ್ಟಂ ನಿಂತು ಹೋಯಿತು. ಮತ್ತೆ ಪುನಃ ಚಾಲೂ ಮಾಡಿ ನೋಡಿದರೆ ಕೆಲಸ ಮಾಡುತ್ತಿಲ್ಲ, ಬದಲಿಗೆ ’ಕ್ಲಿಕ್ ಕ್ಲಿಕ್’ ಶಬ್ದ ಬೇರೆ. ಅಷ್ಟು ಹೊತ್ತಿಗೆಲ್ಲಾ ನನಗೆ ಆಗಿದ್ದೇನು ಎಂದು ಗೊತ್ತಾಗಿ ಹೋಗಿತ್ತು, ಇನ್ನು ಹಾರ್ಡ್ ಡ್ರೈವ್ ತೆರೆದೇ ಅದರಲ್ಲಿರೋ ಡೇಟಾ ರಿಕವರಿ ಮಾಡಬೇಕು, ಹೆಚ್ಚೆಂದರೆ ಒಂದು ಐನೂರು ಡಾಲರ್ ಖರ್ಚಾಗುತ್ತೇನೋ ಎಂದುಕೊಂಡಿದ್ದವನಿಗೆ ಇವತ್ತಿನ ಎಸ್ಟಿಮೇಟ್ ಪ್ರಕಾರ ಸಾವಿರದ ಏಳುನೂರು ಡಾಲರುಗಳಂತೆ! ಬೇರೆಡೆ ಕೇಳಿ ನೋಡಬೇಕು, ಆದರೂ ಐನೂರು ಡಾಲರುಗಳಿಗೆ ಅದನ್ನು ಬಿಚ್ಚಿ ಸರಿ ಮಾಡುವ ಭೂಪ ಸಿಗುವವರೆಗೆ ಇನ್ನು ಅದೆಷ್ಟು ವರ್ಷಗಳು ನನಗೆ ಬೇಕೋ!ಆ ಹಾರ್ಡ್‌ಡ್ರೈವ್‌ನಲ್ಲಿ ಅಸಂಖ್ಯ ಫೈಲುಗಳು ನನಗೆ ಬೇಕಾದವುಗಳು ಇದ್ದವು - ಫೋಟೋಗಳು, ಹಾಡುಗಳು, ಸ್ಪ್ರೆಡ್‌ಶೀಟುಗಳು, ಡಾಕ್ಯುಮೆಂಟುಗಳು, ನಾನು ಈ ಕಂಪನಿ ಸೇರಿದಂದಿನ ಮೊದಲ ದಿನದಿಂದ ಪೇರಿಸಿಟ್ಟ ಇ-ಮೇಲುಗಳು, ’ಅಂತರಂಗ’ದ ಒರಿಜಿನಲ್ ಫೈಲುಗಳು, ನಾನಾ ರೀತಿಯ ಸಾಫ್ಟ್‌ವೇರುಗಳು, ಇತ್ಯಾದಿ. ಈಗ ಅವುಗಳಿಗೆಲ್ಲ ಒಂದೊಂದು ಬೆಲೆ ಕಟ್ಟಿ ಅವುಗಳ ಮೊತ್ತವನ್ನು ತುಲನೆ ಮಾಡಿ ನೋಡಬೇಕಾದ ಸಂದರ್ಭ ಬಂದಿದೆ. ಅವುಗಳೆಲ್ಲ ಬೇಕೋ, ಬೇಡವೋ...ಬೇಕಿದ್ದರೆ ಎಷ್ಟು ಹಣವನ್ನು ಖರ್ಚು ಮಾಡಬಲ್ಲೆ, ಇಡೀ ಕಂಪ್ಯೂಟರ್‌ಗೇ ಸಾವಿರದ ಇನ್ನೂರನ್ನು ಕೊಟ್ಟು ಮೂರು ವರ್ಷ ಉಪಯೋಗಿಸಿರುವ ನಾನು ಇನ್ನು ಕೇವಲ್ ಹಾರ್ಡ್‌ಡ್ರೈವ್ ಸರಿ ಮಾಡಿಸಲು ಹತ್ತಿರ ಹತ್ತಿರ ಅದರ ಎರಡು ಪಟ್ಟು ಹಣವನ್ನು ಖರ್ಚು ಮಾಡುವುದು ತರವೇ ಅಥವಾ ನಮ್ಮ ಮಾಹಿತಿ, ಡೇಟಾ ಮುಖ್ಯ ಅವುಗಳಿಗೆ ಯಾವ ಬೆಲೆಯನ್ನು ಕಟ್ಟಲಾಗದು ಎನ್ನುವುದು ಸರಿಯೇ?ಈ if ಮತ್ತು when ಗಳ ವ್ಯತ್ಯಾಸದಲ್ಲಿ ನಾನಂತೂ ನಲುಗಿ ಹೋಗಿದ್ದೇನೆ. If the hard drive crashes...ಎನ್ನುವುದಕ್ಕಿಂತ When the hard drive crashes ಎನ್ನುವುದು ಸರಿಯಾದದ್ದು. ಇವತ್ತಲ್ಲ ನಾಳೆ ಹಾಳಾಗುತ್ತದೆ ಎಂದು ಗೊತ್ತಿದ್ದ ನನಗೆ ಬೇಕಾದ್ದನ್ನು ಸಂರಕ್ಷಿಸಿಡ ತಪ್ಪಿಗೆ ಇಂದು ತೆರಬೇಕಾದ ಬೆಲೆ ಬಹಳ. ತಂತ್ರಜ್ಞಾನ ಯಾವುದೇ ರೀತಿಯಲ್ಲಿ ಮುಂದುವರೆಯಲಿ ಬಿಡಲಿ, ನಾವು ಅವಿಷ್ಕರಿಸುವ ಹೊಸ ಮಾರ್ಗಗಳು ಅಷ್ಟೇ ವಲ್ನರೆಬಲ್ ಅನ್ನಿಸೋಕೆ ಶುರುವಾಗಿದ್ದೇ ಇವತ್ತಿನ ಒಣಮನಸ್ಸಿನ ಹಿಂದಿನ ಮೂಲ ಕಾರಣ. ನನ್ನ ವಸ್ತುಗಳಿಗೆ, ಮಾಹಿತಿಗೆ, ಅವುಗಳ ಹಿಂದಿನ ಫೈಲುಗಳಿಗೆ ಬೆಲೆ ಕಟ್ಟಲಾಗದು ಸರಿ, ಆದರೆ ಇವತ್ತಲ್ಲ ನಾಳೆ ಎಂದು ಮುಂದೂಡುತ್ತಲೇ ಬಂದ ಬ್ಯಾಕ್‌ಅಪ್ ಕಾಯಕಕ್ಕೆ ಇಷ್ಟೊಂದು ದೊಡ್ಡ ಹೊಡೆತ ಬೀಳಬಾರದಿತ್ತು. ಹೀಗೇ ಒಂದು ದಿನ ಗೂಗಲ್ ವೇರ್‌ಹೌಸ್‌ಗಳಿಗೆ ಬೆಂಕಿ ಬಿದ್ದು ’ಅಂತರಂಗ’ದಂತಹ ಎಲ್ಲ ಬ್ಲಾಗ್‌ಗಳೂ ತಮ್ಮ ತಮ್ಮ ಹಿಂದಿನ ಫೈಲುಗಳನ್ನು ಕಳೆದುಕೊಂಡವೆನ್ನೋಣ, ಅಂದರೆ ನಮ್ಮ ಇತಿಹಾಸ, ನಾವು ನಡೆದು ಬಂದ ಹಾದಿಗೆ ಅಷ್ಟೇ ಬೆಲೆಯೇ? ಅಥವಾ ನಮ್ಮ ಇತಿಹಾಸ ಎನ್ನುವುದು ಕೆಲವು ಕಂಪ್ಯೂಟರ್ ಸರ್ವರ್ ಅಥವಾ ಹಾರ್ಡ್‌ಡ್ರೈವ್‌ಗಳ ಮೇಲೆ ಅವಲಂಭಿತವಾಗಬೇಕೆ? ಗೂಗಲ್ ಅಥವಾ ಯಾಹೂ ಅಂತಹ ಕಂಪನಿಗಳು ತಮ್ಮ ತಮ್ಮ ಡಿಸಾಸ್ಟರ್ ರಿಕವರಿ ಪ್ರೊಸೀಜರ್ ಪ್ರಕಾರ ಅವರ ಸರ್ವರ್ ಹಾಗೂ ಮಾಹಿತಿಯನ್ನು ಬ್ಯಾಕ್‌ಅಪ್ ಮಾಡಿ ಇನ್ನೆಲ್ಲೋ ಫಿಸಿಕಲ್ ಲೊಕೇಷನ್ನಲ್ಲಿ ಇಟ್ಟಿರಬಹುದು, ಇಡದೆಯೂ ಇರಬಹುದು - ಒಂದು ಇ-ಮೇಲ್ ಅಕೌಂಟ್ ತೆರೆದರೆ ಅದರಲ್ಲಿನ ಟರ್ಮ್ಸ್ ಮತ್ತು ಕಂಡೀಷನ್ಸ್ ಅನ್ನು ಪೂರ್ಣವಾಗಿ ಓದಿದ್ದವರಿಗೆ ಗೊತ್ತಿರುತ್ತದೆ, ಈ ಫ್ರೀ ಆಗಿ ಸಿಗಬಹುದಾದ ಅಮೂಲ್ಯ ಸಾಧನಗಳು ಅಷ್ಟೇ ವಲ್ನರಬಲ್ ಎಂಬುದಾಗಿ.ಕೆಟ್ಟ ಮೇಲೆ ಬುದ್ಧಿ ಬಂತು - ಎಂದ ಹಾಗೆ ನಾನು ನನ್ನೆಲ್ಲ ಮಾಹಿತಿ/ಡೇಟಾವನ್ನು ಬ್ಯಾಕ್‌‍ಅಪ್ ಮಾಡಿಟ್ಟು ಬಿಟ್ಟಿದ್ದೇನೆ ಎಂದುಕೊಂಡರೆ ಅದು ತಪ್ಪು. ಈಗ ಟೈಪ್ ಮಾಡುತ್ತಿರುವ ಆಫೀಸ್ ಲ್ಯಾಪ್‌ಟಾಪ್, ಮತ್ತೆ ಮನೆಯಲ್ಲಿರುವ ಡೆಸ್ಕ್‌ಟಾಪ್ ಇವೆಲ್ಲವನ್ನೂ ಹಾಗೇ ಬಿಟ್ಟಿದ್ದೇನೆ, ಕೆಟ್ಟು ಹೋದರೆ ಹೋಗಲಿ ಎಂದು. ಅಷ್ಟೊಂದು ಫೈಲುಗಳನ್ನು ಕಳೆದುಕೊಂಡವನಿಗೆ ಇನ್ನೊಂದಿಷ್ಟು ಹೋದರೆ ಏನೂ ಅನಿಸದಿರಬಹುದು ಎಂಬ ಹುಂಬ ನೆಪದ ಹಿನ್ನೆಲೆಯಲ್ಲಿ. ಆದರೆ ಇವತ್ತಲ್ಲ ನಾಳೆ ನನಗೆ ಬೇಕಾದ ಎಲ್ಲ ಫೈಲುಗಳನ್ನು ಡಿವಿಡಿ ಬರ್ನ್ ಮಾಡುವುದರ ಮೂಲಕ ಉಳಿಸಿಕೊಳ್ಳಬೇಕು, ಜೊತೆಗೆ ಯಾವುದಾದರು ಆನ್‌ಲೈನ್ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿ ಕೈ ತೊಳೆದುಕೊಳ್ಳಬೇಕು. ದುಡ್ಡುಕೊಟ್ಟಾದರೂ ಡೇಟಾವನ್ನು ಉಳಿಸಿಕೊಳ್ಳುವುದು ಜಾಣತನ, ಇಲ್ಲವೆಂದಾದರೆ ನನ್ನ ಹಾಗೆ ಒಣ ಭಾನುವಾರವನ್ನಷ್ಟೇ ಅಲ್ಲ, ಇಡೀ ವಾರವನ್ನು ಕಳೆದರೂ ಕಳೆದು ಹೋದುದು ಮತ್ತೆ ಬರಬೇಕಾದರೆ ಬಹಳ ಕಷ್ಟವಿದೆ.ಇವತ್ತಲ್ಲ ನಾಳೆ - ಹಾಳಾಗಿರುವ ಹಾರ್ಡ್‌ಡ್ರೈವ್ ಅನ್ನು ಭಾರತಕ್ಕೋ, ಸಿಂಗಪುರಕ್ಕೋ, ಮಲೇಶಿಯಾಕ್ಕೋ ಕಳಿಸಿ, ಅಷ್ಟೊಂದು ದುಬಾರಿ ಬೆಲೆಯನ್ನು ತೆರದೆ ಡೇಟಾ ರಿಕವರ್ ಮಾಡಿಸಬಹುದು ಎನ್ನುವುದು ಎಲ್ಲೋ ಅಂತರಾಳದಲ್ಲಿ ಹುಟ್ಟಿ ಬೆಳೆಯುವ ಅಲೆ, ಅಥವಾ ನಂಬಿಕೆ ಅಥವಾ ಹುಂಬತನದ ಪರಮಾವಧಿ. ಏಕೆಂದರೆ ಒಂದು ಪತ್ರವನ್ನು ಮೇಲ್ ಮಾಡೋದಕ್ಕೆ ಎರಡು ವಾರ ತೆಗೆದುಕೊಳ್ಳೋ ನಾನು ಇನ್ನು ಹಾರ್ಡ್‌ಡ್ರೈವ್ ಅನ್ನು ಮತ್ಯಾವುದೋ ದೇಶಕ್ಕೆ ಕಳಿಸಿ ಅದನ್ನು ಫಾಲ್ಲೋ ಅಪ್ ಮಾಡಿ ಯಶಸ್ವಿಯಾಗಿ ಹಿಂತಿರುಗಿಸಿಕೊಳ್ಳುವುದೆಂದರೆ ನನ್ನ ಮಟ್ಟಿಗೆ ಗೌರಿಶಂಕರವನ್ನು ಹತ್ತಿದಂತೆಯೇ ಸರಿ.ಈಗಿರುವ ಆಪ್ಷನ್ನುಗಳು ಇಷ್ಟೇ - ಒಂದೇ ಒಂದಕ್ಕೆರಡು ಅಥವಾ ಮೂರು ಪಟ್ಟು ಹಣ ತೆತ್ತು ಡೇಟಾ ರಿಕವರಿ ಮಾಡಿಸುವುದು, ಇಲ್ಲಾ ಹೋದರೆ ಹೋಗಲಿ ಎಂದು ಅದನ್ನು ಬದಿಗೆಸೆದು ಮತ್ತೊಂದನ್ನು ತಂದು ಕೂರಿಸುವುದು. ಎಲ್ಲಕ್ಕಿಂತ ಮುಖ್ಯವಾಗಿ ತಪ್ಪಿನಿಂದ ಪಾಠ ಕಲಿಯುವುದು, ಅಲ್ಲಲ್ಲ ಕಲಿತ ಪಾಠವನ್ನು ಆಚರಣೆಗೆ ತರುವುದು!

Friday, January 29, 2010

ಪ್ರೀತಿ ಅಂದ್ರೆ ಹೀಗೆ ನಾ .......?


ನಿಜಾ ಅಲ್ವ !ಈ ಪ್ರೀತಿನೆ ಹೀಗೆ ಯಾವಾಗ ಯಾರಿಂದ ಯಾರಿಗೆ ಹೇಗೆ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಿರಲ್ಲ ! ಪ್ರೀತಿ ಮಾಡೋರ್ನ ಕೇಳಿ ನೋಡಿ ಅವರೆಲ್ಲ ಹೇಳೋದು ಇಷ್ಟೇ "ಮಗ ಅವಳನ್ನ ನೋಡಿದ ತಕ್ಷಣ ನನಗೆ ಅವಳು ಇಷ್ಟ ಆಗಿಬಿಟ್ಲು " ಇನ್ನು ಕೆಲವರ್ನ ಕೇಳಿ ನೋಡಿ "ಅದೇಕೋ ಗೊತ್ತಿಲ್ಲ ಕಣೆ ಅವನು ಅಂದ್ರೆ ನನಗೆ ತುಂಬಾ ಇಷ್ಟ " ಅಂತಾರೆ ನಿಜಾ ಹೇಳಬೇಕು ಅಂದ್ರೆ ಅವರಲ್ಲಿ ಈ ಪ್ರೀತಿ ಹುಟ್ಟೋಕೆ ಏನು ಕಾರಣ ಅಂತ ಅವರಿಗೆ ಗೊತ್ತಿರಲ್ಲ ಅಥವಾ ನಾನು ಅವನ/ಅವಳನ್ನ ಯಾಕೆ ಲವ್ ಮಾಡ್ತಾ ಇದೀನಿ ಅಂತ ಗೊತ್ತಿರಲ್ಲ ಆದ್ರು ಅವರೆಲ್ಲ ಲವ್ ಮಾಡ್ತಾನೆ ಇರ್ತಾರೆ ಅಲ್ವ !ಒಂದು ಸರ್ವೇ ಪ್ರಕಾರ ಒಬ್ಬ ಹುಡುಗಿ ಒಬ್ಬ ಹುಡುಗನ್ನ ಇಷ್ಟ ಪಡ್ತಾ ಇದ್ದಾಳೆ ಅಂದ್ರೆ ಅವನಲ್ಲಿ ಇರೋ ಒಳ್ಳೆಯ ತನ, ನಿಸ್ವರ್ತ ಸ್ನೇಹ, ಪರಿಶುದ್ದ ಮನಸ್ಸು ಅಥವಾ ಯಾವುದೊ ಒಂದು ಕಾರಣಕ್ಕೆ ಅವಳಿಗೆ ಇಷ್ಟ ಆಗಿರ್ತಾನೆ ಆದ್ರೆ ಇನ್ನು ಕೆಲವರು ಹಾಗಲ್ಲ "ದಿನಕೊಂದು ಬೈಕ್ ತಗೊಂಡು ಫಿಲಂ ತೋರಿಸಿ ಅಲ್ಲಿ ಇಲ್ಲಿ ಸುತ್ತುಹರಿಸಿ ಕೇಳಿದನ್ನೆಲ್ಲ ಕೊಡಿಸುವಂತ ಹುಡುಗನ್ನೇ ಇಷ್ಟ ಪಡ್ತಾರೆ "ಹಾಗಾದ್ರೆ ಪ್ರೀತಿ ಅಂದ್ರೆ ಇದೇನಾ ?

ಪ್ರಯೋಜನಕ್ಕೆ ಬರದು ಅಂತ ಯಾರು ಅಂದವರು ............?

ಈ ಅನುಭವ ಅನ್ನೋದರ ಲಿಮಿಟೇಷನ್ನ್ ಏನೂ ಅಂತ ನನಗೆ ಹೊಳೆದಿದ್ದು ಇತ್ತೀಚೆಗೆ ಅಂತ್ಲೇ ಹೇಳಬೇಕು, ಯಾರೋ ತಾವ್ ಕಲಿತ ಪಾಠವನ್ನು ಅನುಭವ ಅಂತ ದೊಡ್ಡ ಕರೆದುಕೊಂಡಿದ್ದಿರಬಹುದು, ಅದಕ್ಕೆ ಅದು ಇಲ್ಲದೆ ಯಾವ ಕೆಲ್ಸಾನೂ ಅಷ್ಟು ಸಲೀಸಾಗಿ ಆಗಲ್ಲ, ಒಂದ್ಸರ್ತಿ ಮಾಡಿ (ಹೊಡೆತ ತಿಂದು) ಪಾಠ ಕಲಿತ ಮೇಲೆ ಅದನ್ನೇ ಅನುಭವ ಅಂತ ದೊಡ್ಡದಾಗಿ ಬೋರ್ಡು ಬರೆಸಿ ಹಾಕ್ಕೋಬಹುದು ನೋಡಿ.ನಮ್ಮನೇಲಿ ಒಂದೆರಡು ಕಿಟಕಿಗಳಿಗೆ ಹೊಸ ಸ್ಕ್ರೀನುಗಳನ್ನು ಹಾಕೋಣ ಅನ್ನೋ ಪ್ರಾಜೆಕ್ಟು ಹಲವಾರು ಕಾರಣಗಳಿಂದ ಮುಂದೂಡಿಕೊಂಡು ಮೊನ್ನೆ ಕೈಗೂಡಿತು ನೋಡಿ. ನಾನೋ ಹುಟ್ಟಿದಾರಭ್ಯ ಗೋಡೆಗೆ ಒಂದು ಮೊಳೆಯನ್ನೂ ಸಹ ಹೊಡೆಯದವನು, ಗೋಡೆಗೆ ಎಲ್ಲಿ ನೋವಾಗುತ್ತೋ ಅನ್ನೋ ಅರ್ಥದಿಂದಲ್ಲ, ಶಾಲೆಯಲ್ಲಿ ಮುಂದಿದ್ದ ಮಕ್ಕಳು ನಾವು ಯಾವತ್ತೂ ಹ್ಯಾಂಡಿಮ್ಯಾನ್ ಸ್ಕಿಲ್ಸ್‌ಗಳನ್ನು ರೂಢಿಸಿಕೊಳ್ಳಲೇ ಇಲ್ಲ. ಇವತ್ತಿಗೂ ಸಹ ಒಂದು ಏಣಿಯನ್ನು ಹತ್ತಿ ನಿಲ್ಲೋದು ಅಂದರೆ ಮುಜುಗರ, ಸಂಕೋಚ ಎಲ್ಲಕ್ಕಿಂತ ಮುಖ್ಯವಾಗಿ ಅದೇನೋ ಹಾಳು ಹೆದರಿಕೆ ಬೇರೆ ಕೇಡಿಗೆ. ಈ ಹ್ಯಾಂಡಿಮ್ಯಾನ್ ಕೆಲ್ಸದ ವಿಚಾರಕ್ಕೆ ಬಂದಾಗ ಒಂದಂತೂ ಗ್ಯಾರಂಟಿಯಾಗಿ ಕಲಿತುಕೊಂಡಿದ್ದೇನೆ - ಆಯಾ ಕೆಲಸಕ್ಕೆ ಸರಿಯಾದ ಟೂಲ್ಸ್ ಅನ್ನು ಇಟ್ಟುಕೊಂಡಿರುವುದು. ನಿಮ್ಮ ಬಳಿ ಸರಿಯಾದ, ಅಳತೆಗೆ ತಕ್ಕ ಟೂಲ್ಸ್ ಇಲ್ಲವೆಂದಾದರೆ ಸುಮ್ಮನೇ ನೀವು ಕೆಲಸಕ್ಕೆ ಕೈ ಹಾಕಿ ಕೆಟ್ಟಿರಿ. ಅದರ ಬದಲು ಸುಮ್ಮನಿರುವುದು ಒಳ್ಳೆಯದು ಇಲ್ಲವೆಂದರೆ ಇನ್ನೊಬ್ಬರಿಂದ ದುಡ್ಡು ಕೊಟ್ಟು ಮಾಡಿಸಿದರಾಯಿತು.ಒಂದು ಅರವತ್ತೈದು ಡಾಲರ್ ಕೊಟ್ಟು ಆರಡಿ ಎತ್ತರದ ಏಣಿಯನ್ನು ತೆಗೆದುಕೊಂಡಿರದ ಬುದ್ಧಿವಂತನಾದ ನಾನು, ಇರುವ ಕಿಚನ್ ಸ್ಟೆಪ್‌ಸ್ಟೂಲಿನಲ್ಲೇ ಎರಡು ಮೆಟ್ಟಿಲು ಹತ್ತಿ ಭಾರವಾದ ಡ್ರಿಲ್ ಸೆಟ್ ಅನ್ನು ನನ್ನ ಭುಜಕ್ಕಿಂತಲೂ ಎತ್ತರ ಮಟ್ಟದಲ್ಲಿಟ್ಟುಕೊಂಡು ಅದೆಷ್ಟು ಡ್ರಿಲ್‌ಗಳನ್ನು ಕೊರೆಯಲಾದೀತು? ಅದೆಷ್ಟು ಸ್ಕ್ರೂಗಳನ್ನು ಲೀಲಾಜಾಲವಾಗಿ ಒಳಗೆ ಸೇರಿಸಲಾದೀತು? ಇಂತಹ ಕಷ್ಟಕರ ಸನ್ನಿವೇಶಗಳಲ್ಲಿ ನನ್ನ ಬಾಯಿಯಿಂದ ಸಹಸ್ರನಾಮಾರ್ಚನೆ ತನ್ನಷ್ಟಕ್ಕೆ ತಾನೇ ಹೊರಟು ಬರುತ್ತದೆ, ಅದರ ಬೆನ್ನ ಹಿಂದೆ ಸಮಜಾಯಿಷಿ ಕೂಡ:- ಈ ಸುಡುಗಾಡು ಭಾರತೀಯರೆಲ್ಲ ಚಿಂಕರರು, ಪಕ್ಕದ ಮನೆಯವನು ಆರೂವರೆ ಅಡಿ ಎತ್ತರವಿದ್ದಾನೆ ಅವನೋ ನೆಲದ ಮೇಲೆ ನಿಂತೇ ಬಲ್ಬ್ ಬದಲಾಯಿಸುತ್ತಾನೆ!(ಭಾರತೀಯರರು ಕುಳ್ಳಕಿರುವುದು ಅವರ ತಪ್ಪೇ? ಪಕ್ಕದ ಮನೆಯವನು ಎತ್ತರವಿರುವುದು ಅವನ ತಪ್ಪೇ?)- ಈ ಥರ್ಡ್‌ಕ್ಲಾಸ್ ಅಮೇರಿಕದಲ್ಲಿ ಗರಾಜಿನಲ್ಲಿ ಅಲಂಕಾರಕ್ಕಿಡುವ ಏಣಿಯು ಅರವತ್ತೈದು ಡಾಲರ್ರೇ?(ನಿನಗೆ ಬೇಕಾದರೆ ಹತ್ತೇ ಡಾಲರಿನ ಏಣಿಯನ್ನು ತೆಗೆದುಕೊಂಡು ಬಾ, ಯಾರು ಬೇಡಾ ಅಂದೋರು?)- ಈ ಕಿಟಕಿಗಳಿಗೆ ಸ್ಕ್ರೀನ್ ಏಕೆ ಹಾಕಬೇಕು? ಅದರಿಂದ ಯಾವ ದೇಶ ಉದ್ದಾರವಾಗುತ್ತದೆ?(ಹಾಕೋದೇ ಬೇಡ ಬಿಡು, ಯಾರು ಹಾಕು ಅಂತ ಗಂಟುಬಿದ್ದೋರು ಈಗ).ಮೇಲೆ ಕೈ ಎತ್ತಿ ಹಿಡಿದೂ ಹಿಡಿದೂ ನೋವಾದ ಹಾಗೆ, ಎಂದೂ ಕೀ ಬೋರ್ಡನ್ನೇ ಕುಟ್ಟುತ್ತೇವೆ ಎಂದು ಶಪಥ ತೊಟ್ಟ ಕೈ ಬೆರಳುಗಳು ಯಾವತ್ತೋ ಒಮ್ಮೆ ಸ್ಕ್ರೂ ಡ್ರೈವರ್ರನ್ನು ತಿರುಗಿಸಿ ವ್ಯಥೆ ಪಟ್ಟು ಅವುಗಳ ಆಕ್ರಂದನ ಮುಗಿಲು ಮುಟ್ಟುತ್ತಿರುವ ಹಾಗೆ ಬಸ್ಸಿನ ಗಡಿಬಿಡಿಯಲ್ಲಿ ನಮ್ಮೂರಿನ ದೇವಸ್ಥಾನದ ಅರ್ಚಕರು ಹೈ-ಸ್ಪೀಡ್ ಅರ್ಚನೆ ಮಾಡುವ ಹಾಗೆ ನನ್ನ ಸಹಸ್ರನಾಮ ಹೊಸಹೊಸ ರೂಪವನ್ನು ಪಡೆದುಕೊಳ್ಳುತ್ತದೆ, ಆ ಹೊತ್ತಿನಲ್ಲಿ ಯಾರೇ ಕಣ್ಣಿಗೆ ಬಿದ್ದರೂ, ಏನೇ ಕಂಡರೂ ಅವುಗಳಿಗೆಲ್ಲ ಬೈಗಳು ಗ್ಯಾರಂಟಿ! ಕೊನೆಗೆ ಬೇಸತ್ತು ನನಗೆ ನಾನೆ ಬೈದುಕೊಳ್ಳುವುದೂ ಇದೆ:- ಒಂದ್ ದಿನಾನಾದ್ರೂ ಚಿಕ್ಕ ವಯಸ್ಸಿನಲ್ಲಿ ಒಂದಿಷ್ಟು ಹ್ಯಾಂಡಿ ಸ್ಕಿಲ್ಸ್‌ಗಳನ್ನು ಕಲಿಯಲಿಲ್ಲ, ಥೂ ನಿನ್ನ ಮುಸುಡಿಗೆ ಇಷ್ಟು ಬೆಂಕಿ ಹಾಕ!- ಅದೇನ್ ಸ್ಕೂಲ್‌ನಲ್ಲಿ ಕಿಸಿದು ಫಸ್ಟ್‌ಕ್ಲಾಸ್ ಬಂದಿದ್ದು ಅಷ್ಟರಲ್ಲೇ ಇದೆ, ಇವತ್ತಿಗೆ ನೆಟ್ಟಗೆ ಒಂದು ರೂಮಿಗೆ ಬಣ್ಣಾ ಹಚ್ಚೋಕ್ ಬರೋಲ್ವಲ್ಲೋ!- ಗಂಡಸು ಅಂತ ಮುಖದ ಮೇಲೆ ಮೀಸೆ ಹೊತ್ತ ಮೇಲೆ ಒಂದಿಷ್ಟು ಪ್ರಿಮಿಟಿವ್ ಕೆಲ್ಸಗಳೂ ಬರ್ದೇ ಇದ್ರೆ ಆ ಮೀಸೆಗೆ ಅವಮಾನ ಅಲ್ವಾ?!ಅಂತೂ ಇಂತೂ ಈ ಸಹಸ್ರನಾಮಾರ್ಚನೆಗಳ ಮಧ್ಯದಲ್ಲೇ (ಕಾಟಾಚಾರಕ್ಕೆ ಎನ್ನುವಂತೆ ಆರಂಭಿಸಿ ಮುಗಿಸಿದ) ಕೈಗೆತ್ತಿಕೊಂಡುದನ್ನು ಮುಗಿಸಿ ಆಯಿತು. ಮೌಂಟ್ ಎವರೆಸ್ಟ್ ಹತ್ತಿ ಇಳಿದ ತೇನ್‌ಸಿಂಗ್ ಕೂಡ ಅಷ್ಟೊಂದು ವ್ಯಥೆ ಪಟ್ಟಿರಲಾರ, ಕೆಲಸ ಮುಗಿಯುವ ಕೊನೆಯಲ್ಲಿ ಕೈ ಬೆರಳುಗಳು ಯಕ್ಷಗಾನದ ಕಾಳಿಂಗ ನಾವುಡರನ್ನು ಮೀರಿ ಭಾಗವತಿಕೆಯನ್ನು ಶುರು ಹಚ್ಚಿಕೊಂಡಿದ್ದವು. ಅದೆಷ್ಟೋ ತಪ್ಪುಗಳು, ಅವುಗಳ ನಡುವೆ ಅಲ್ಪಸ್ವಲ್ಪ ಸರಿಗಳಿಂದ ಹಿಡಿದ ಕೆಲಸವನ್ನೇನೋ ಮಾಡಿದೆ, ಕೊನೆಗೆ ಒಂದಿಷ್ಟು ಅನುಭವವಾಯ್ತು ಬಿಡು ಎಂದು ಒಮ್ಮೆ ತಂಪೆನಿಸಿತಾದರೂ - ಥೂ ಈ ಅನುಭವದ ಮನೆಗಿಷ್ಟು ಬೆಂಕೀ ಹಾಕ! ಅಂತ ಅನ್ನಿಸದೇ ಇರಲಿಲ್ಲ.***ನಿಮಗೆ ನನ್ನ ಮಾತಿನ ಮೇಲೆ ನಂಬಿಕೆ ಇರದಿದ್ದರೆ ಟಿವಿಯಲ್ಲಿ ಎಷ್ಟೊಂದು ಲೀಲಾಜಾಲವಾಗಿ ಸೀಲಿಂಗ್ ಪೈಂಟ್ ಮಾಡುತ್ತಾರೆ ಎಂದುಕೊಂಡು ನೀವು ನಿಮ್ಮ ಮನೆಯಲ್ಲಿನ ಒಂದು ಸಣ್ಣ ಕೊಠಡಿಯ ಸೀಲಿಂಗ್ ಅನ್ನು ಪೈಂಟ್ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಬಳಿ ಎಂಥ ಅದ್ಭುತ ರೋಲರ್‌ಗಳು ಇದ್ದರೂ (ಪೈಂಟ್ ಹೆಂಗಾದರೂ ಇರಲಿ, ಅದರ ಕಥೆ ಬೇರೆ) ಒಂದು ಛಾವಣಿ ಮುಗಿಯುವ ಹೊತ್ತಿಗೆ ನಿಮ್ಮ ಪುಪ್ಪುಸದಲ್ಲಿನ ಗಾಳಿಯೆಲ್ಲವೂ ಬರಿದಾಗಿ ನೀವು ಇನ್ನೊಂದು ಅರ್ಧ ಘಂಟೆಯಲ್ಲಿ ಕುಸಿದು ಬೀಳುತ್ತೀರಿ ಎಂದೆನಿಸದಿದ್ದರೆ ಖಂಡಿತ ನನಗೆ ತಿಳಿಸಿ. ಸೀಲಿಂಗ್ ಪೈಂಟ್ ಮಾಡುವುದಕ್ಕೆ ಅದೆಷ್ಟು ಅಪ್ಪರ್ ಬಾಡಿ ಸ್ಟ್ರೆಂಗ್ತ್ ಬೇಕು ಎನ್ನುವುದಕ್ಕೆ ನನಗೆ ತಿಳಿದ ಯಾವ ಯುನಿಟ್ಟುಗಳಿಂದಲೂ ಮೆಜರ್ ಮಾಡುವುದಕ್ಕಾಗುತ್ತಿಲ್ಲ, ಅದೇನಿದ್ದರೂ ಅನುಭವದಿಂದಲೇ ತಿಳಿಯಬೇಕು. ಹೀಗೇ ಒಂದು ದಿನ ಪೈಂಟಿಂಗ್ ಪ್ರಾಜೆಕ್ಟ್ ಅನ್ನು ನಮ್ಮ ಅಲೆಕ್ಸಾಂಡ್ರಿಯದ ಮನೆಯಲ್ಲಿ ಕೈಗೆತ್ತಿಕೊಂಡ ನನಗೆ ನಮ್ಮ ಆ ಸಣ್ಣ ಮನೆಯ ಸೀಲಿಂಗ್ ಒಮ್ಮೊಮ್ಮೆ ಅಟ್ಲಾಂಟಿಕ್ ಮಹಾಸಾಗರಕ್ಕಿಂತಲೂ ವಿಸ್ತಾರವಾಗಿ ತೋರುತ್ತಿತ್ತು ಎನ್ನುವುದರಲ್ಲಿ ಉತ್ಪ್ರೇಕ್ಷೆ ಇದ್ದಿರಲಾರದು!ಅದಕ್ಕೇ ಹೇಳಿದ್ದು, ಈ ಅನುಭವ ಅನ್ನೋದು ಪ್ರಯೋಜನಕ್ಕೆ ಬಾರದ್ದು ಅಂತಾ. ಒಮ್ಮೆ ಮಾಡಿ ಕೈ ಸುಟ್ಟುಕೊಂಡೋ ಹೊಡೆತ ತಿಂದ ಮೇಲೋ ಬರುವ ಭಾಗ್ಯವನ್ನು ನೀವು ಕರೆದುಕೊಳ್ಳಲು ನಾಲ್ಕಕ್ಷರದ ಸೌಭಾಗ್ಯ ಬೇಕೆಂದರೆ ಅದನ್ನು ಅನುಭವವೆಂದುಕೊಳ್ಳಿ. ಇಲ್ಲವೆಂದಾದರೆ ನನ್ನ ಹಾಗೆ ಚಪ್ಪಟೆ ಇರುವ ನಿಮ್ಮ ಹಣೆಯಲ್ಲಿ ಎರಡೆರಡು ಬಾರಿ ಗಟ್ಟಿಸಿಕೊಂಡು ಅದರ ಮೇಲೆ ಒಂದು ಕ್ಯೂಬ್ ಐಸ್ ಇಟ್ಟು ತಣ್ಣಗೆ ಮಾಡಿಕೊಳ್ಳಿ ಅಷ್ಟೇ.ವೇಷ್ಟು ಸಾರ್, ಎಲ್ಲಾ ವೇಷ್ಟ್ ಉ. ನಮ್ಮೂರಿನ ಮಕ್ಳು ನಾಳೆ ಶಾಲೆಯಲ್ಲಿ ಫಸ್ಟ್ ಕ್ಲಾಸ್ ಬರದಿದ್ದರೂ ಪರವಾಗಿಲ್ಲ ಮನೆ ಒಳಹೊರಗಿನ ಕೆಲಸವನ್ನು ಮಾಡಿಕೊಳ್ಳಲು ಬರಲೇ ಬೇಕು ಅಂತ ಹೊಸ ಕಾನೂನು ತರಬೇಕು ಅಂತ ಹೊಸ ಸರ್ಕಾರಕ್ಕೆ ನಾನು ಶಿಫಾರಸ್ಸು ಮಾಡ್ತೀನಿ. ಅನುಭವ ಇಲ್ಲದವರು ಮೀಸೆ ಬಿಡಲು ತಕ್ಕವರಲ್ಲ ಅಂತ ಹೊಸ ಶಾಸನವನ್ನು ಕೆತ್ತಿಸ್ತೀನಿ. ಕೈಲಾಗ್ತೋನ್ ಮೈಯೆಲ್ಲ ಪರಚಿಕೊಂಡ ಅಂತಾರಲ್ಲ ಹಾಗೆ ನನ್ನ ಕೈಯಲ್ಲಿ ಏನೂ ಮಾಡೋಕ್ ಆಗ್ತೇ ಇದ್ರೂ ಅಮೇರಿಕದ ನೀರಿನ ಋಣದ ದಯೆಯಿಂದ ಯಾವತ್ತೂ ನಾನು ಉದ್ದುದ್ದವಾಗಿ ಮಾತಾಡ್ತಲೇ ಇರ್ತೀನಿ.ಅನುಭವಗಳಿಗೆ ಧಿಕ್ಕಾರ, ಮೈಗಳ್ಳರ ಸಂಘಕ್ಕೆ ಜೈ!

ಹಾಡಿನ ಸವಾಲ್

ನಿನ್ನೆ ಏನನ್ನೋ ಹುಡುಕಿಕೊಂಡು ಕೂತಿರಬೇಕಾದ್ರೆ ಒಂದಿಷ್ಟು ಹಳೇ ಕನ್ನಡ ಚಲನಚಿತ್ರಗಳ ಉಗ್ರಾಣ ನನ್ನ ಕಂಪ್ಯೂಟರಿನಲ್ಲಿದ್ದದ್ದು ಕಣ್ಣಿಗೆ ಬಿತ್ತು. ಹಳೇ ಹಾಡುಗಳೂ ಅಂತಂದ್ರೆ ೯೦ ರ ದಶಕದಿಂದ ಈಚೆಯವು, ಅದಕ್ಕಿಂತ ಹಿಂದೆ ಹೋದ್ರೆ ಅದು ಪುರಾತನ ಆಗ್ಬಿಡುತ್ತೆ ಅಂತ್ಲೇ ಹೇಳ್ಬೇಕು.’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು...’ ಅಂತ ನಾನೇನಾದ್ರೂ ಕಾರ್‌ನಲ್ಲಿ ಕೂತಾಗ ಗೊಣಗಿಕೊಂಡೇ ಅಂತಂದ್ರೆ ಪಕ್ಕದವರಿಗೆ ನನ್ನ ವಯಸ್ಸೆಲ್ಲಿ ಗೊತ್ತಾಗಿಬಿಡುತ್ತೋ ಅನ್ನೋ ಹೆದರಿಕೇ ಬೇರೆ ಕೇಡಿಗೆ.ನನ್ನ ಉಗ್ರಾಣದಲ್ಲಿದ್ದ ಒಂದಿಷ್ಟು ಹಾಡುಗಳನ್ನ ಕೇಳ್ತಾ ಕೇಳ್ತಾ ಸಂತೋಷದ ಛಾಯೆ ಇರ್ಲಿ ಅದರ ನೆರಳೂ ಹತ್ತಿರ ಸುಳಿಯದಂತೆ ನಿರಾಶೆಯ ಮೋಡಗಳು ಆವರಸಿಕೊಳ್ಳತೊಡಗಿದವು. ನಾನು ಹುಟ್ಟಿದಾಗಿನಿಂದ ಕನ್ನಡಿಗನೇ ಹೌದು, ಆದರೆ ಇತ್ತೀಚಿನ ಸಾಹಿತ್ಯವೋ ಅಥವಾ ಅದನ್ನ ಹೇಳೋ ಅರೆಬರೆ ಕನ್ನಡಿಗರೋ ಅಸ್ಪುಟ ಕನ್ನಡವೋ ಅಥವಾ ಹಾಡಿನ ಪದಗಳನ್ನು ಮುಚ್ಚಿ ಮರೆಮಾಡುವಂತೆ ಕಿವಿಗಡಿಚಿಕ್ಕುವ ಮ್ಯೂಸಿಕ್ಕೂ - ಪದಗಳೇ ಸರಿಯಾಗಿ ಅರ್ಥವಾಗುತ್ತಿಲ್ಲ. ರಾಗ-ತಾಳವಂತೂ ನನಗೆ ಸಿಕ್ಕೋದೇ ಇಲ್ಲ ಬಿಡಿ, ಆದರೆ ಹಾಡಿನ ಸಾಹಿತ್ಯವೂ ನನಂಥ ಕೇಳುಗನಿಗೆ ಹೊಳೆಯದೇ ಹೋದರೆ ಹೇಗೆ?ಎ.ಕೆ. ೪೭ ಸಿನಿಮಾದ ಈ ಹಾಡನ್ನು ನೀವೇ ಕೇಳಿ ನೋಡಿ ಅಥವಾ ಓದಿ ನೋಡಿ, ’ಪ್ರೇಮಪತ್ರ ರವಾನಿಸಬೇಡ’ ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳೋದಕ್ಕೆ ಸ್ವಲ್ಪ ಹೊತ್ತೇ ಹಿಡಿಯಿತು. ಪ್ರಾಸಗಳನ್ನು ಜೋಡಿಸೋದಕ್ಕೆ ಹೋಗಿ ನಮ್ಮ ಕವಿಗಳು ಈ ರೀತಿ ಹಾಡನ್ನು ಕಟ್ಟೋದಲ್ದೇ ಅದನ್ನ ಯಾರು ಯಾರೋ ಗಂಟಲಲ್ಲಿ ಹೇಳಿಸಿ ಅದಕ್ಕಿನ್ನೊಂದು ಅರ್ಥ ಬರೋ ಹಾಗ್ ಮಾಡ್ತಾರಲ್ಲಪ್ಪಾ ಅನ್ನಿಸ್ತು.’ನುಡಿಮುತ್ತುದುರಿಸಬೇಡಪ್ರೇಮಪತ್ರ ರವಾನಿಸಬೇಡನಿನ್ನ ಮುತ್ತಿನ ನಗುವೇ ಸಾಕುಆ ನಗುವಲಿ ಒಪ್ಪಿಗೆ ಹಾಕುಅರೆ ಸಾಕು ಅರೆ ಸಾಕುಆ ನಗುವ ಬಿಸಾಕು’ಆ ನಗುವನ್ನು ಬಿಸಾಕೋದು ಅಂದ್ರೆ ಏನು, ಅದೇನು ಕಾಫಿ ಕುಡಿದು ಬಿಸಾಡೋ ಕಪ್ಪೇ? ಅಥವಾ ನಾಯಿಗಳಿಗೊಂದು ಬಿಸ್ಕಿಟ್ ಎಸೀತಾರಲ್ಲ ಹಾಗಾ? ಇಸ್ಪೀಟ್ ಎಲೇನ ಬಿಸಾಕೋದ್ ಕೇಳಿದ್ದೀನಿ...ಟ್ರಾಷ್ ಎತ್ತಿ ಬಿಸಾಕೋದು ಅಂದ್ರೆ ಗೊತ್ತು, ಆದರೆ ನಗುವನ್ನ ಚೆಲ್ಲಿ ಗೊತ್ತು, ಬಿಸಾಕಿ ಗೊತ್ತೇ ಇಲ್ಲ.ಈ ಬಿಸಾಕೋದರ ಬಗ್ಗೆ ಇನ್ನೂ ಕೇಳಿದ್ದೀವಿ - ’ಭಯಾನ್ ಬಿಸಾಕೋದು...’, ’ದಿಗಿಲ್ ದಬ್ಬಾಕೋದು’, ಇನ್ನೂ ಏನೇನನ್ನೋ ನಾವು ಕ್ರಿಯಾ ಪದಗಳಿಗೆ ಅಳವಡಿಸೋದೇ ಸಾಹಿತ್ಯ ಕೃಷಿ! ಎಷ್ಟೋ ದಶಕದಿಂದ ಹಾಡಿಕೊಂಡ್ ಬಂದಿರೋ ಎಸ್.ಪಿ. ಅಂಥೋರೇನೋ ಸ್ವಲ್ಪ ತಮ್ಮ್ ತಮ್ಮ್ ಉಚ್ಛಾರಣೆಯಲ್ಲಿ ಸುಧಾರಿಸಿಕೊಂಡ್ರೋ ಏನೋ (ಇಷ್ಟೊಂದ್ ದಿನ ಕನ್ನಡ ನೀರ್ ಕುಡ್ದು ಅಷ್ಟೂ ಮಾಡ್ಲಿಲ್ಲಾ ಅಂದ್ರೆ ಹೆಂಗೆ?), ಉಳಿದೋರ್ ಕಥೆ ಏನ್ ಹೇಳೋಣ?ಅಪ್ತಮಿತ್ರದ ’ಇದು ಹಕ್ಕೀ ಅಲ್ಲ’ ಹಾಡಿನಲ್ಲಿ ’ಬಾಲಾ ಇದ್ರೂನೂ ಕೋತೀ ಅಲ್ಲಾ’ ಅನ್ನೋ ಸಾಲು ಇವತ್ತಿಗೂ ನನಗೆ ನೈಜವಾಗಿ ಕೇಳೋದೇ ಇಲ್ಲ - ಎಲ್ಲಾ ಉತ್ತರ ಭಾರತದವರ ದಯೆ.ನಮ್ಮೂರಿನ ಸಿಲ್ವರ್ರು, ಗೋಲ್ಡೂ, ಪ್ಲಾಟಿನಮ್ಮ್ ಸ್ಟಾರ್‌ಗಳಿಗೆ ನಮ್ಮೋರ್ ಧ್ವನಿ, ಉಚ್ಛಾರಣೆ ಹಿನ್ನೆಲೇನಲ್ಲಿ ಇದ್ರೆ ಹೆಂಗೆ ಸ್ವಾಮೀ? ಸ್ವಲ್ಪ ಫ್ಯಾಷನ್ನೂ, ಗಿಮಿಕ್ಕೂ ಇದ್ರೇನೇ ಮಜಾ - ಅವ್ರುಗಳ ಮುಖಾಮುಸುಡಿ ಹೆಂಗಾದ್ರೂ ಇರ್ಲಿ ಹಿನ್ನೆಲೆ ಗಾಯನಕ್ಕೆ ಮಾತ್ರ ಒಂದು ದೊಡ್ಡ ಧ್ವನಿ ಬೇಕು. ಬೇರೇ ಏನೂ ಇಲ್ಲಾ ಅಂತದ್ರೂ ಧ್ವನಿ ಸುರುಳೀ ಅನ್ನೋ ಹೆಸರ್ನಲ್ಲಿ ಸೀ.ಡಿ.ಗಳನ್ನ ಮಾರೋಕಾಗುತ್ತಲ್ಲಾ ಅಷ್ಟೇ ಸಾಕು.ಪರವಾಗಿಲ್ಲ, ಬೆಂಗ್ಳೂರ್‌ನಲ್ಲಿ ಕೂತುಗೊಂಡು ಬ್ರೂಕ್ಲಿನ್ನಲ್ಲಿ ಹುಟ್ಟಿ ಬೆಳೆದೋರ್ ಥರ ರ್ಯಾಪ್ ಮ್ಯೂಸಿಕ್ಕನ್ನ ಹಾಡ್ತಾರ್ ಸಾರ್ ನಮ್ಮೋರು. ಹಾಡ್ರೋದ್ರು ಜೊತೆಗೆ ಅದನ್ನ ಕನ್ನಡದ ಹಾಡ್ನಲ್ಲೂ ಸೇರ್ಸಿ ಒಂದ್ ಥರಾ ಹೊಸ ರಿಧಮ್ಮನ್ನೇ ಜನ್ರ ಮನಸ್ನಲ್ಲಿ ತುಂಬ್ತಾರೆ. ರ್ಯಾಪ್‌ಗೇನಾಬೇಕು ಸುಮ್ನೇ ಉದ್ದಕ್ಕೆ ಬರೆದಿದ್ದನ್ನ ಫಾಸ್ಟ್ ಆಗಿ ಓದ್ಕೊಂಡ್ ಹೋದ್ರೇ ಸಾಲ್ದೇನು? ಎಲ್ಲೋ ಒಂದು ಧ್ವನಿ ಯಾವ್ದೋ ರಾಗ್ದಲ್ಲಿ ಹುಟ್ಟಿ ಬರ್ತಾ ಇರುತ್ತೆ, ಅದರ ಮಧ್ಯೆ ಕೀರ್ಲು ಧ್ವನೀನೂ ಸೇರುಸ್ತಾರೆ, ಸುಮ್ನೇ ತಮಟೇ-ಡ್ರಮ್ಮು-ನಗಾರಿಗಳನ್ನ ಬಡೀತಾರೆ - ಇಷ್ಟೆಲ್ಲಾ ಯಾಕ್ ಮಾಡ್ತಾರೇ ಅಂತಂದ್ರೆ ಚಿತ್ರಕಥೆ ಬರೆಯೋರು ’ನಾಯಕನ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವಾಗಿತ್ತು, ಸುತ್ತಲಿನಲ್ಲಿ ಕೋಲಾಹಲ ಮುತ್ತಿಕೊಂಡಿತ್ತು’ ಅಂತ ಬರೆದಿರ್ತಾರೋ ಏನೋ ಅನ್ನೋ ಅನುಮಾನ ನನ್ದು. ಹ್ಞೂ, ಅದೆಲ್ಲ ನನ್ ಲಿಮಿಟೇಷನ್ನ್ ಆಗಿದ್ರೆ ಎಷ್ಟೋ ಸೊಗಸಾಗಿರ್ತಿತ್ತು, ಆದರೆ ಚಿತ್ರವನ್ನ ನಿರ್ದೇಶನ ಮಾಡೋರ್ ಲಿಮಿಟ್ಟಾಗುತ್ತೇ ನೋಡಿ ಅದೇ ದೊಡ್ಡ ಕೊರಗು.***Really, this works - ಸುಮ್ನೇ ಪ್ರಾಸದ ಮೇಲೆ ಪ್ರಾಸ ಕಟ್ಟಿಕೊಂಡು ಹೋಗಿ, ಕನ್ನಡಿಗರಲ್ದೇ ಬೇರೆ ಯಾರುನ್ನೋ ಕರ್ದೋ ಇಲ್ಲಾ ಅವರ ಮನೇ ಬಾಗಿಲಿಗೆ ನೀವೇ ಹೋಗಿಯೋ ಹಾಡ್ಸಿ, ಅವರು ಹಾಡಿದ್ದನ್ನ ರೆಕಾರ್ಡ್ ಮಾಡಿಕೊಂಡು ಬಂದು ನಮ್ಮೋರಿಗೆ ಕೇಳ್ಸಿ, ಎಲ್ಲೆಲ್ಲಿ ಪದಗಳನ್ನ ಕಾಂಪ್ರೋಮೈಸ್ ಮಾಡ್ಕೊಂಡಿರ್ತೀರೋ ಅಲ್ಲೆಲ್ಲ ನಿಮ್ಮವರಿಗೆ ದೊಡ್ಡದಾಗಿ ಮ್ಯೂಸಿಕ್ ಬಾರ್ಸೋದಕ್ಕೆ ಹೇಳಿ, ಆ ಧ್ವನಿ ಸುರುಳಿ ಸೇಲ್ಸ್ ರೆಕಾರ್ಡ್ ಮುಟ್ಟುತ್ತೆ. ಬೀದರಿನಿಂದ ತಲಕಾಡಿನವರೆಗೆ ನಮ್ಮ ಕನ್ನಡದಲ್ಲಿ ಬೇಕಾದಷ್ಟು ಆಡುಭಾಷೆಗಳಿವೆ, ಅದರ ಜೊತೆಗೆ ಪದಗಳ ಸಂಪತ್ತೂ ಸಿಗುತ್ತೆ. ನಾವು ಸಾಗರ-ಶಿವಮೊಗ್ಗದಿಂದ ಮೈಸೂರಿಗೆ ಹೋದವರಿಗೆ ಅಲ್ಲಿಯವರು, ’ನಮ್ಮಪ್ಪ ಹಾರ್ಮ್‌ಕಾರ’ ಅಂತ ಹೇಳ್ದಾಗ ನಾವು ಡಿಕ್ಷನರಿ ತೆಕ್ಕೊಂಡು ನೋಡೋ, ಅವರಿವರನ್ನು ಕೇಳಿ ತಿಳಿದುಕೊಳ್ಳೋ ಹೊತ್ತಿಗೆ ಅದು ’ಆರಂಭಕಾರ’ ಎಂದು ಗೊತ್ತಾಗಿದ್ದು. ಹೀಗೇ, ’ಎಕ್ಕೂಟ್ಟೋಹೋಗೋದು’, ’ಅದೇನ್...ಕೆಟ್ಟೋಯ್ತೇ’, ಮುಂತಾದ ಪ್ರಯೋಗಗಳನ್ನೂ ಆಡುಭಾಷೆಯ ಒಂದು ವಿಧಾನ ಎಂತ್ಲೇ ನಾವು ಅರ್ಥ ಮಾಡ್ಕೊಂಡಿದ್ವಿ. ಹಾಗೇ, ನಾವು ಮಾತ್ ಮಾತಿಗೆ ’ಎಂಥಾ’ ಅನ್ನೋದನ್ನ ಅವ್ರೂ ಆಡ್ಕೋತಿದ್ರೂ ಅನ್ನಿ. ನಮ್ಮಲ್ಲಿನ್ನ ಡಯಲೆಕ್ಟುಗಳಿಗೆ ಅವುಗಳದ್ದೇ ಒಂದು ರೀತಿ ನೀತಿ ವಿಧಿ ವಿಧಾನ ಅಂತಿವೆ, ಅದು ಖಂಡಿತ ತಪ್ಪಲ್ಲ. ಹೀಗಿನ ಡಯಲೆಕ್ಟುಗಳಲ್ಲಿನ ಪದಗಳನ್ನ ನಾನು ಹಾಡಿಗೆ ತರ್ತೀನಿ ಅನ್ನೋದು ದೊಡ್ಡ ಸಾಹಸವೇ ಸರಿ.ಏನೂ ಬೇಡಾ ಸಾರ್, ನಮ್ಮಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಇದೆ, ಅದರ ಸಹಾಯದಿಂದ ಒಂದಿಷ್ಟು ಲಘು-ಗುರುಗಳನ್ನೆಲ್ಲ ಲೆಕ್ಕಾ ಹಾಕಿ ನಾವೂ ನಾಳೆಯಿಂದ ಬರೆದದ್ದೆನ್ನೆಲ್ಲ ಭಾಮಿನೀ, ವಾರ್ಧಕ ಷಟ್ಪದಿಗೆ ಬದಲಾಯಿಸಿಕೊಂಡ್ರೆ ಹೇಗಿರುತ್ತೆ? ಆ ಕುಮಾರವ್ಯಾಸ ಬರೆದದ್ದಲ್ಲ ಷಟ್ಪದಿಲೇ ಇರ್ತಿತ್ತಂತೆ, ನಾವು ಬರೆದದ್ದನ್ನು ಷಟ್ಪದಿಗೆ ಕನ್ವರ್ಟ್ ಮಾಡ್ಕೊಳ್ಳೋದಪ್ಪ - ಎಲ್ಲೆಲ್ಲಿ ಬ್ರೇಕ್ ಬೇಕೋ ಅಲ್ಲಲ್ಲಿ ಕೊಯ್‌ಕೊಂಡ್ರೆ ಆಯ್ತು! ಅದೂ ಬ್ಯಾಡ, ಪದಗಳ ಕಥೆ ಹಾಗಿರ್ಲಿ, ನಮಿಗೆ ಮಾಧುರ್ಯ-ಇಂಪು-ಕಂಪೂ ಅಂತಂದ್ರೆ ಭಾಳಾ ಆಸೆ ಅಲ್ವ? ಅದಕ್ಕೆ ಕಂಬಾರರ ’ಮರೆತೇನಂದರ ಮರೆಯಲಿ ಹೆಂಗಾs’ ಅನ್ನೋದನ್ನ ತಗೊಂಡು ಕುಮಾರ್ ಸಾನು ಹತ್ರ ಹಾಡ್ಸದಪಾ, ಭಾಳಾ ಚೆನ್ನಾಗಿರುತ್ತೆ. ಇನ್ನೂ ಚೆಂದಾ ಅಂತಂದ್ರೆ ಬೇಂದ್ರೆ ಅವರ ’ನಾಕು-ತಂತಿ’ ತಗೊಂಡ್ ಹೋಗಿ ಸೋನೂ ನಿಗಮ್‌ಗೆ ಕೊಟ್ರೆ ಆಯ್ತು.***ನಿಮಗ್ಯಾಕೆ? ನೀವ್ ಸಿನಿಮಾ ನೋಡಲ್ಲ, ಹಾಡಿನ ಸಿ.ಡಿ. ಕೊಳ್ಳೋಲ್ಲ, ಹಿಂಗೆ ಚೀಪ್ ಆಗಿ ಕ್ರಿಟಿಸಿಸಮ್ ಬರೆಯೋಕ್ ನಿಮಗ್ಯಾರ್ ಅಧಿಕಾರ ಕೊಟ್ರೂ? ನಮಗೂ ಭಾಷಾ ಸ್ವಾತಂತ್ರ್ಯಾ ಅನ್ನೋದ್ ಇದೆ, ನಮಿಗೆ ಹೆಂಗ್ ಬೇಕೋ ಹಂಗ್ ಬರಕಂತೀವ್, ಯಾವನ್ ಹತ್ರಾ ಬೇಕಾದ್ರೂ ಹೇಳಿಸಿಕ್ಯಂತೀವ್. ಅದನ್ನ ಕೇಳೋಕ್ ನೀವ್ ಯಾರು? ಯಾವ್ದೋ ದೇಶ್ದಲ್ಲ್ ಕುತಗಂಡು ಕನ್ನಡದ ಬಗ್ಗೇ ನೀವೇನ್ರಿ ಹೇಳೋದು? ಹಂಗಂತ ನಿಮ್ ಕನ್ನಡಾ ಚೆನ್ನಾಗಿದೆಯೇನು? ನೀವು ಬರೆದಿದ್ದೆಲ್ಲಾ ಭಯಂಕರವಾಗಿದೆಯೇನು? ಅಷ್ಟು ತಾಕತ್ತ್ ಇದ್ರೆ ನೀವೇ ಒಂದು ಸಿನಿಮಾ ಮಾಡಿ ತೋರ್ಸಿ. ಅದೂ ಬ್ಯಾಡಪ್ಪಾ - ಈ ಹಾಡಿನ್ ಚಿತ್ರೀಕರಣಕ್ಕೆ ನಲವತ್ತು ಲಕ್ಷಾ ಸುರಿದಿದ್ದೀವಿ, ಅದನ್ನ ನಿಮ್ ಕೈಗೆ ಕೊಡ್ತೀವಿ, ನಲವತ್ತ್ ಲಕ್ಷಾ ತೊಡಗಿಸಿ ನಲವತ್ತು ಹುಟ್ಟಿಸಿಕೊಡೀ ಧಂ ಇದ್ರೆ.ಥೂ, ಎಲ್ಲೋ ಕುತಗಂಡು ಉದಯಾ ಟಿವಿ ನೋಡ್ಕಂಡು ಅದನ್ನೇ ಬದುಕು ಅಂತ ಕೊರಗೋ ನಿಮ್ಮನ್ನ್ ಕಂಡು ಏನ್ ಹೇಳಣ?!

ಸ್ನೇಹ

ಸ್ನೇಹವೆಂದರೆ *************ಮರಕ್ಕೆ ಅಂಟಿಕೊಂಡ ಬಳ್ಳಿಯನ್ನು ಹೇಗೆ ಬೇರ್ಪಡಿಸಲು ಸಾದ್ಯವಿಲ್ಲವೂ ಹಾಗೆ ಇರಬೇಕು ಸ್ನೇಹ **********************ಭಾವಾಂತರಂಗ**********ಮಾತಿನಲ್ಲಿರುವ ಮರ್ಮ, ಮೌನದೊಳಗಿನ ಮಾತು ಮನಸ್ಸಿನೊಳಗಿನ ಭಾವನೆ, ಯರೂ ಅರಿಯದಂತಹಸುಂದರ ಭಾವ**************************ಮಾತು ಮನಸ್ಸಲಿದ್ದರೆ, ಮನಸ್ಸಿಗೆ ಬೇಸರ ಮಾತನ್ನ ಎದುರಿಗಾಡಿದರೆ, ಕೇಳುವವರಿಗೆ ಬೇಸರ****************************ಮಾತು ಮಾಯೆಯೋ? ಮೌನ ಮಾಯೆಯೋ??ಮಾತು ಮೌನಗಳೊಳಗಿನ ಮರ್ಮ ಮಾಯೆಯೋ??*****************************ಬಯಕೆ*********************ಬಯಸುತಿದೆ ಈ ಮನಸು ಕಷ್ಟವನು ಹಂಚಿಕೊಳ್ಳುವ ಹೆಗಲನು ಕಣ್ಣೀರೊರೆಸುವ ಕೈಯನು ಪ್ರೀತಿ ತೋರಿಸುವ ಸ್ನೇಹವನ್ನು *******************************ಸ್ಪೂರ್ತಿ ******************ಆಗದಿರಿ ನೀವು ಸ್ವಾರ್ಥಿ, ಇತರರಿಗೆ ನಿವಾಗಿ ಸ್ಪೂರ್ತಿ ಆದರಿಂದ ಹೆಚ್ಹುವುದು ನಿಮ್ಮೆಯ ಕೀರ್ತಿ ಎಲ್ಲರೂ ನೆನೆಯುವರು ನಿಮ್ಮನ್ನು ಜೀವನ ಪೂರ್ತಿ*****************************ಅರಿತು ಬಾಳಿದರೆ ಬಾಳು ಬಂಗಾರ, ಬೆರೆತು ಬಾಳಿದರೆ ಬಾಳು ಸಿಂಗಾರ ಅರಿತು ಬೆರೆತು ಬಾಳಿದರೆ ಅದುವೇ ಜೀವನ ಸಾಕ್ಷತ್ಕಾರಾ ******************************ಅನಿಸಿಕೆ *****************ಪ್ರೀತಿ ಯಾವಾಗಲು ಹಂಚುವಂತಹ ಪ್ರೀತಿಯಗಿರಬೇಕು .ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿರುವ ಪ್ರೀತಿಯಾಗಿರಬಾರದು .ಪ್ರೀತಿಯನ್ನು ಹಂಚಿದಾಗ ನಮಗೆ ಮತ್ತು ಪ್ರೀತಿಯನ್ನು ಪಡೆದವರಿಗೆಸಂತೋಷ ಇರುತ್ತೆ ಆದರೆ ಬಚ್ಚಿಟ್ಟ ಪ್ರೀತಿಯಿಂದ ಹೆಚ್ಚು ದುಃಖ ಮತ್ತು ಅಸಮಾಧಾನ ಇರುತ್ತೆ ಇದು ತಪ್ಪೂ ಸರಿನೂ ಗೊತ್ತಿಲ್ಲ .*********************"ಮುಳ್ಳಿಲ್ಲದ ಗುಲಾಬಿ ಬೆಳೆದವನ್ಯಾರುನೋವಿಲ್ಲದ ಪ್ರೀತಿ ಪಡೆದವನ್ಯಾರು"**********************ಅರಳುವ ಹೊಗಳಿಗೆ ಮುಂಜಾನೆ "ಮಂಜು"ಬಾಡಿದ ಹೃದಯಗಳಿಗೆ ಮುಸ್ಸಂಜೆ "ಮಂಜು"*************************ಎಲ್ಲೋ ಹುಡುಕಿದೆ ಇಲ್ಲದ ದೇವರಕಲ್ಲು ಮಣ್ಣುಗಳ ಗುಡಿಯೊಳಗೆಇಲ್ಲೇ ಇರುವ ಪ್ರೀತಿ ಸ್ನೇಹಗಳಗುರುತಿಸದಾದೆವು ನಮ್ಮೊಳಗೆ ಎಲ್ಲೋ ಎಲ್ಲಿದೆ ನಂದನ ಎಲ್ಲಿದೆ ಬಂಧನಎಲ್ಲಾ ಇವೆ ಈ ನಮ್ಮೊಳಗೆಒಳಗಿನ ತಿಳಿಯನು ಕಲಕದೆ ಇದ್ದರೆಅಮೃತದ ಸವಿಯಿದೆ ನಾಲಗೆಗೆ ಎಲ್ಲೋ ಹತ್ತಿರವಿದ್ದೂ ದೂರ ನಿಲ್ಲುವೆವುನಮ್ಮ ಅಹಂಮಿನ ಕೋಟೆಯಲಿಎಷ್ಟು ಕಷ್ಟವೋ ಹೊಂದಿಕೆಯೆಂಬುದುನಾಲ್ಕು ದಿನದ ಈ ಬದುಕಿನಲ್ಲಿ ಎಲ್ಲೋ

*'ಅವರವರ ಕರ್ಮ '

’ಅದು ಅವರವರ ಕರ್ಮ’ ಅನ್ನೋ ಮಾತನ್ನ ಅವರೂ ಇವರೂ ಬಳಸಿದ್ದನ್ನ ಕೇಳಿ ಅಭ್ಯಾಸವಿದ್ದ ನನಗೆ ಇತ್ತೀಚೆಗೆ ರಿಪೀಟ್ ಆಗುವಷ್ಟರ ಮಟ್ಟಿಗೆ ಈ ವಾಕ್ಯವನ್ನು ನಾನೇ ಬಳಸುತ್ತಿದ್ದೇನೆ ಎಂಬುದು ನಂಬಲಾಗದ ಮಾತೇ ಸರಿ. ಯಾವುದೇ ಕೆಟ್ಟ ಸುದ್ದಿ ಇರಲಿ ಒಳ್ಳೆಯ ಸುದ್ದಿ ಇರಲಿ, ಅವೆಲ್ಲಕ್ಕೂ ’ಅದನ್ನು ಅವರು ಪಡೆದುಕೊಂಡು ಬಂದಿದ್ದಾರೆ’ ಎನ್ನುವ ಅರ್ಥದಲ್ಲಿ ಬಳಸುವಂತೆ ’ಕರ್ಮ’ವೆಂಬ ಪದವನ್ನು ನಾನು ಉಪಯೋಗಿಸಿದ್ದು ನೋಡಿ ನನಗೇ ನಗು ಹಾಗೂ ಆಶ್ಚರ್ಯವೂ ಆಯಿತು.ಭಾರತ ದೇಶದಲ್ಲಿ ಬೆಳೆದು ಬಂದ ಹಿನ್ನೆಲೆಯವರಿಗೆ ತಮ್ಮ ಫಿಲಾಸಫಿಯಲ್ಲಿ ಸಿಕ್ಕುವ ಉಪಮೆ, ರೂಪಕ, ಉಪಮಾನ, ತತ್ವ, ಆದರ್ಶಗಳ ಪಟ್ಟಿಯನ್ನು ಮಾಡುತ್ತಲೇ ಹೋದರೆ ಎಂಥ ಪುಸ್ತಕವೂ ಸಾಕಾಗದು. ನಮ್ಮ ತತ್ವಗಳೇ ಬೇರೆ, ನಮ್ಮ ಆದರ್ಶಗಳೇ ಬೇರೆ. ಭಾರತವೆನ್ನುವುದು ಹೀಗೇ ಇದೆ ಎಂದು ಒಂದೆರಡು ಹೋಲಿಕೆ, ಉದಾಹರಣೆಗಳನ್ನು ಕೊಟ್ಟು ಮುಗಿಸಲಾರದ ಮಾತು. ನಮ್ಮ ದೇಶ ಒಂದು ಅಗಾಧವಾದ ಸಾಗರ ಅಥವ ಸಮುದ್ರ, ಅದರ ಅಲೆಗಳನ್ನು ನೋಡಿ ಸಾಗರವನ್ನು ಅಳೆಯಲಾಗುವುದೇ? ವಿಶೇಷವೆಂದರೆ, ಒಂದು ಬಹುರಾಷ್ಟ್ರೀಯ ವಾತಾವರಣದಲ್ಲಿ ಕೆಲಸ ಮಾಡುವವರಿಗೆ ಆಫ್ರಿಕಾದಿಂದ ಹಿಡಿದು ಚೀನಾದವರೆಗೆ, ಇಸ್ರೇಲ್‌ನಿಂದ ಹಿಡಿದು ಚಿಲಿಯವರೆಗಿನ ಜನರನ್ನು ಕಂಡು ಮಾತನಾಡಿಸಿ, ಅವರೊಡನೆ ವ್ಯವಹರಿಸಿ ಒಡನಾಡುವ ಸಂದರ್ಭಗಳು ಬಂದಾಗಲೆಲ್ಲ ನಮಗೆಲ್ಲ ನಮ್ಮ ಬೆನ್ನ ಮೇಲೆ ಮೂಟೆಗಳು ಇರುವ ಹಾಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಸಂಸ್ಕೃತಿಯ ಹಿನ್ನೆಲೆ ಇದೆ, ಜೊತೆಗೆ ಅದು ನಮಗಿಂತಲೂ ಬೇರೆಯದೇ ಆಗಿದೆ ಎನ್ನುವುದು ಗಮನಕ್ಕೆ ಬರುವ ಅಂಶ. ಉದಾಹರಣೆಗೆ, ಭಾರತದ ಹಿನ್ನೆಲೆಯಿಂದ ಬಂದವರಿಗೆ ಒಂದು ಕಡೆ ಶ್ರೀ ರಾಮಚಂದ್ರ ಮರ್ಯಾದಾಪುರುಷೋತ್ತಮನೆಂಬ ಆದರ್ಶವೂ ಮತ್ತೊಂದು ಕಡೆ ವಿಭಿನ್ನ ನೆಲೆಯ ಶ್ರೀಕೃಷ್ಣನೂ ಇಬ್ಬರೂ ಒಂದೇ ವ್ಯಕ್ತಿಯ ಆದರ್ಶಗಳಾಗಿ ಕಂಡುಬರುವುದು ಸಾಮಾನ್ಯವಾಗಿ ಕಾಣಬಹುದು. ಅದೇ ಅಂಶವನ್ನು ನೈಜೀರೀಯಾದವರಿಗೋ, ರಷ್ಯನ್ನರಿಗೋ ವಿವರಿಸಿ ಹೇಳುವಾಗ ’ಹೌದಲ್ಲಾ!’ ಎನ್ನುವ ಲೈಟ್‌ಬಲ್ಬ್ ಎಷ್ಟೋ ಜನರ ಮನಸ್ಸಿನ್ನಲ್ಲಿ ಹೊತ್ತಿಕೊಳ್ಳಬಹುದು. ’...ಇತರರ ಸಂಸ್ಕೃತಿಯನ್ನು ಪ್ರೀತಿಸು’ ಎಂದು ಎಷ್ಟೋ ವರ್ಷಗಳ ಹಿಂದೆ ಅಡಿಪಾಯವನ್ನು ಹಾಕಿದ ಗಾಂಧಿ ಮುಂಬರುವ ಗ್ಲೋಬಲೈಜೇಷನ್ನಿನ್ನ ಬಗ್ಗೆ ಆಲೋಚಿಸಿದ್ದರೇ ಅಥವಾ ನಮ್ಮೊಳಗೇ ಇರುವ ಅಪಾರ ಸಂಸ್ಕೃತಿಗಳ ಬಗ್ಗೆ ಬೆಳಕು ಚೆಲ್ಲಿದ್ದರೇ?ನಿಮ್ಮ ಕುಟುಂಬದಲ್ಲಿ ಯಾರಾದರೂ ಪೊಲೀಸ್ ಇಲಾಖೆಯಲ್ಲೋ, ವೈದ್ಯಕೀಯ ವೃತ್ತಿಯಲ್ಲೋ ಕೆಲಸ ಮಾಡುತ್ತಿದ್ದರೆ ದಿನಕ್ಕೊಂದು ಬಗೆಯ ಮನಕರಗುವ ವರದಿಗಳನ್ನು ನೀವು ಕೇಳಿಯೇ ಇರುತ್ತೀರಿ. ಯಾರೋ ಸತ್ತರು, ಯಾರೋ ಧಾರುಣವಾಗಿ ಅಪಘಾತದಲ್ಲಿ ಅನುಭವಿಸಿದರು, ಇಂಥವರು ತಮ್ಮ ಮಕ್ಕಳಿಂದ ನರಳುತ್ತಿದ್ದಾರೆ, ಅಂಥವರು ತಮ್ಮ ಪೋಷಕರಿಂದ ಕಂಗಾಲಾಗಿ ಹೋಗಿದ್ದಾರೆ ಇತ್ಯಾದಿ ಇತ್ಯಾದಿ - ಈ ಮನಕಲಕುವ ಸಂಗತಿಗಳು ನಿಲ್ಲುವುದೇ ಇಲ್ಲ. ಮೇಲಿಂದ ಮೇಲೆ ಒಂದಲ್ಲ ಒಂದು ಘಟನೆಯನ್ನು ನೋಡುತ್ತ ನೋಡುತ್ತಲೇ ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡುವವರ ಮನಸ್ಸು ರೋಸಿ ಹೋಗಿ, ’ಅದು ಅವರವರ ಕರ್ಮ’ ಎಂಬ ಜನರಲೈಸ್ಡ್ ಹೇಳಿಕೆಗಳು ಹೊರಬರುವುದೂ ಸಾಮಾನ್ಯವಾಗಿ ಹೋಗಿರಬಹುದು. ನಮ್ಮಲ್ಲಿ ಹೇಳೋ ಹಾಗೆ ’ದಿನಾ ಸಾಯೋರಿಗೆ ಅಳೋರು ಯಾರು?’. ಮೊನ್ನೆ ಇಲ್ಲಿ ಯಾವುದೋ ಒಂದು ಆಸ್ಪತ್ರೆಯ ಬಗ್ಗೆ ಓದುತ್ತಿದ್ದೆ ದಿನಕ್ಕೆ ಹದಿನಾರರಿಂದ-ಇಪ್ಪತ್ತು ಮಕ್ಕಳಿಗೆ ಹೆರಿಗೆ ಮಾಡಿಸುವ ಫೆಲಿಲಿಟಿ ಅದಂತೆ, ಅಲ್ಲಿ ಕೆಲಸ ಮಾಡುವ ನರ್ಸ್ ಅಥವಾ ಆಯಾಗಳ ಬದುಕನ್ನು ಊಹಿಸಿಕೊಂಡು ನೋಡಿ - ಮುಂಜಾನೆಯಿಂದ ಸಂಜೆ ಡ್ಯೂಟಿ ಮುಗಿಯುವವರೆಗೆ ಮಕ್ಕಳನ್ನು ಹೆರುವವರಿಗೆ ಸಹಾಯ ಮಾಡುವುದೇ ಕಾಯಕ - ಅವರ ಮನಸ್ಸಿನ ಚರ್ಮ ಅದೆಷ್ಟು ದಪ್ಪವಿರಬೇಡ!***’ಏನಮ್ಮಾ, ಒಂದಿಷ್ಟು ಹಾಲೂ ಮೊಸರನ್ನು ಚೆನ್ನಾಗಿ ತಗೋ, ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ...’ ಅನ್ನೋದು ನಾನು ನನ್ನಮ್ಮನಿಗೆ ವಾರಕ್ಕೊಮ್ಮೆ ಹೇಳೋ ಮಾತು. ಎಷ್ಟು ಹೇಳಿದ್ರೂ ನಮ್ಮಮ್ಮ ದಿನಕ್ಕೆ ಅರ್ಧ ಲೀಟರ್ ಹಾಲಿಗಿಂತ ಹೆಚ್ಚು ತೆಗೆದುಕೊಳ್ಳೋದೇ ಇಲ್ಲ, ಅದೂ ಸ್ಥಳೀಯ ಗೌಳಿಗರು ಕೊಡೋ ನೀರು ಹಾಲು (ಸಹಜವಾಗಿ ಫ್ಯಾಟ್ ಫ್ರೀ). ಅಯ್ಯೋ ನಾವಿಲ್ಲಿ ಎಷ್ಟೊಂದು ಐಶಾರಾಮದಲ್ಲಿ ಇದ್ದೇವೆ, ಅವರು ಅಲ್ಲಿ ಬಡವರಾಗಿ ಬದುಕುತ್ತಾರಲ್ಲ ಅನ್ನೋ ಒಂದು ನೋವು ನನ್ನ ಮನದಲ್ಲಿ ಯಾವತ್ತೂ ಇದ್ದೇ ಇರುತ್ತೆ. ನನ್ನನ್ನು ಹತ್ತಿರದಿಂದ ಬಲ್ಲವರು ಆ ನೋವನ್ನು ’ನೀವೇನೂ ನಿಮ್ಮ ಕುಟುಂಬಕ್ಕೆ ಮಾಡಿಲ್ಲ’ ಅನ್ನೋದು ನಿಮ್ಮ ಗಿಲ್ಟಿ ಮನೋಭಾವನೆ ಎಂದು ಸುಲಭವಾಗಿ ಹೇಳಿ ಬಿಡುತ್ತಾರಾದರೂ ನಾನು ಅಷ್ಟೊಂದು ಸುಲಭವಾಗಿ ಆ ಪಂಥದ ವಾದವನ್ನು ಒಪ್ಪಿಕೊಂಡಿಲ್ಲ. ದುಡ್ಡು ಕಳಿಸಿದರೂ ಎಷ್ಟೊಂದು ಹೇಳಿದರೂ ನನ್ನ ಅಮ್ಮ ಹಳ್ಳಿಯಲ್ಲಿನ ಬದುಕಿಗೆ ಒಗ್ಗಿ ಹೋಗಿದ್ದಾಳೆ, ಆಕೆಗೆ ಅದನ್ನು ಬಿಟ್ಟು ಬೇರೇನೇ ಇದ್ದರೂ ಅದು ಅಸಹಜ ಹಾಗೂ ಅಸಾಮಾನ್ಯ ಎನಿಸುವಾಗ ನಾನು ಏನೇ ಮಾಡಿದರೂ ಅದು ಹೊರಗೇ ಉಳಿದು ಹೋಗುತ್ತದೆ, ಹೋಗುತ್ತಿದೆ. ಆಫೀಸಿನಲ್ಲಿ ಬರೀ ಲೋಟಸ್ ನೋಟ್ಸ್‌ನಿಂದ ಔಟ್‌ಲುಕ್‌ಗೆ ಇ-ಮೇಲ್ ಬದಲಾಯಿಸಿದರೆನ್ನುವ ಬದಲಾವಣೆಯನ್ನು ಸ್ವೀಕರಿಸುವಾಗಲೇ ನನಗೆ ರೋಸಿ ಹೋಗುವಷ್ಟರ ಮಟ್ಟಿಗೆ ಉರಿದುಕೂಳ್ಳುವಾಗ ಇನ್ನು ಹಳ್ಳಿಯಲ್ಲೇ ತನ್ನ ಬದುಕನ್ನು ಸವೆಸಿದವಳನ್ನು ತೆಗೆದು ಪಟ್ಟಣದ ಬಂಗಲೆಯಲ್ಲಿ ಬಿಟ್ಟೆನಾದರೆ ಇಳಿ ವಯಸ್ಸಿನ ಆಕೆಯ ಮನಸ್ಸಿನ ಮೇಲೆ ಏನೇನು ಪರಿಣಾಮಗಳಾಗಲಿಕ್ಕಿಲ್ಲ? ಆ ಒಂದು ಸೆನ್ಸಿಟಿವಿಟಿಯಿಂದಲೇ ಆಕೆ ತನಗೆ ಬೇಕಾದ ಹಾಗೆ ಬದುಕಲಿ ಎಂದು ಸುಮ್ಮನಿದ್ದೇನೆ. ಅಲ್ಲಿ ಹೋಗಿ ಆಕೆಯ ಜೊತೆಯಲ್ಲಿ ಜೀವಿಸುವುದು ನನಗಾಗದ ವಿಚಾರ, ಆಕೆ ಇಲ್ಲಿಗೆ ಬಂದೋ ಅಥವಾ ನಾನಿರುವಲ್ಲಿಗೆ ಬಂದು ಬದುಕುವುದು ಆಗದ ಮಾತು. ಅದೇ ಅವರವರ ಕರ್ಮ, ಅದು ಅವರವರು ಪಡೆದುಕೊಂಡು ಬಂದುದು.ನಿಮ್ಮ ಸುತ್ತ ಮುತ್ತಲೂ ’ಪರಾಕ್’ ಹೇಳುವ ಏನೇನೇ ವ್ಯವಸ್ಥೆಗಳಿದ್ದರೂ ಕೊನೆಗೆ ನಿಮ್ಮನ್ನು ಸರಳತೆಯಲ್ಲದೇ ಮತ್ತೆನೇ ಆವರಿಸಿಕೊಂಡರೂ ನಿಮ್ಮ ಬದುಕು ಅಷ್ಟೇ ಸಂಕೀರ್ಣವಾಗಿ ಹೋಗುತ್ತದೆ. ಒಂದು ಕಾಲದಲ್ಲಿ ಹಳ್ಳಿಯ ಬದುಕು ಹಾಗಿದ್ದವು, ಬಹಳ ಸರಳವಾಗಿ ಒಮ್ಮುಖವಾಗಿ ಹೋಗುತ್ತಿದ್ದವು. ದಿನಕ್ಕೆ ಹತ್ತು ಬಾರಿ ಗಡಿಯಾರ ನೋಡದೆಯೂ, ಆಧುನಿಕ ಬದುಕು ಸೃಷ್ಟಿಸಿದ ಹಣಕಾಸು ಎಂಬ ಗೊಂದಲವಿರದೆಯೂ ಬದುಕು ನಡೆಯುತ್ತಲೇ ಇತ್ತು. ಹಾಗಂತ ಕಷ್ಟ-ನಷ್ಟಗಳು ಇರಲಿಲ್ಲವೆಂದೇನಲ್ಲ: ಮೇಷ್ಟ್ರಾಗಿ ಇಬ್ಬರೂ-ಮೂರು ಹೆಣ್ಣು ಮಕ್ಕಳ ಮದುವೆ ಮಾಡಿದವರಿಗೆ ಗೊತ್ತು, ಮಕ್ಕಳನ್ನು ಕಾಲೇಜಿನವರೆಗೆ ಜನರಲ್ ಮೆರಿಟ್‌ನಲ್ಲಿ ಓದಿಸಿದವರಿಗೆ ಗೊತ್ತು, ಜೀವನ ಪರ್ಯಂತ ಒಂದು ದಮಡಿ ಸಾಲವೆನ್ನದೇ ಇದ್ದಷ್ಟು ಚಾಚಿಕೊಂಡಿದ್ದವರಿಗೆ ಗೊತ್ತು ಕಷ್ಟಗಳು ಏನೆಂಬುದು. ನಮ್ಮ ಕಾಲದ ಜೀವನ ಸಂಘರ್ಷಗಳು ದಿನೇದಿನೇ ಹೆಚ್ಚುತ್ತಲೇ ಹೋಗುತ್ತಿವೆ ಎನ್ನುವುದಕ್ಕೆ ಮೊನ್ನೆ ರೆಡಿಯೋದಲ್ಲಿ ಕೇಳಿದ ಒಂದೆರಡು ಅವತರಣಿಕೆಗಳು ಸಾಕ್ಷಿಯಾಗಿದ್ದವು: ನಾವು ಹಿಂದಿಗಿಂತಲೂ ಅಧಿಕ ಮಾನಸಿಕ ಒತ್ತಡದಲ್ಲಿ ಬದುಕನ್ನು ಸವೆಸುತ್ತೇವೆ, ನಮ್ಮ ವಯೋಮಾನದಲ್ಲಿ ತಡವಾಗಿ ಮದುವೆಯಾಗಿ ಮಕ್ಕಳಾಗುತ್ತಿವೆ, ಹಿಂದಿಗಿಂತಲೂ ಹೆಚ್ಚು ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವ ಅಗತ್ಯ ನಮಗಿದೆ. ಹಳೆಯದೆಲ್ಲ ಒಳ್ಳೆಯದು ಎನ್ನುವ ಮಾತಿನ ಹಿಂದೆ ಬರೀ ಇನ್‌ಫ್ಲೇಷನ್ನ್ ಸಂಬಂಧದ ಸುಖ ನೆನಪುಗಳನ್ನು ಮೆಲುಕು ಹಾಕುತ್ತಿದ್ದವನಿಗೆ ಬರೀ ಹಣದುಬ್ಬರವೊಂದೇ ಅಲ್ಲ, ಕೆಸರಿನಲ್ಲಿ ನಮ್ಮನಡರಿಕೊಂಡ ಬಳ್ಳಿಯ ಹಾಗಿನ ಅನೇಕ ಬೆಳವಣಿಗೆಗಳೂ ಕಾರಣ ಎನ್ನುವುದು ಹೊಳೆಯಿತು. ಇಪ್ಪತ್ತು ವರ್ಷದ ಹಿಂದೆ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತರುತ್ತಿದ್ದವನು ಈಗ ಒಂದು ಕೆಜಿ ಅಕ್ಕಿಗೆ ಮೂವತ್ತು ರುಪಾಯಿ ಕೊಡಬೇಕಾಗಿ ಬಂದುದು ದೊಡ್ಡ ವಿಷಯ, ಆದರೆ ಆಗಿನ ವ್ಯವಸ್ಥೆ ಅಲ್ಲಿ ಒಬ್ಬ ಮನೆಯ ಯಜಮಾನ/ನಿಯ ಮನದಲ್ಲಿ ಆಗುತ್ತಿದ್ದ ಮಾನಸಿಕ ಕ್ಷೋಭೆಗಳಿಗೂ ಈಗಿನ ಕುಟುಂಬದ ಆರೋಗ್ಯಕ್ಕೂ ಬಹಳಷ್ಟು ವ್ಯತ್ಯಾಸವಿದೆ. ವೈಜ್ಞಾನಿಕವಾಗಿ ಅಭ್ಯಸಿಸಿದ ಇಂಥ ವಿಷಯಗಳನ್ನು ಈ ಬ್ಲಾಗ್ ಪರಿಧಿಯಲ್ಲಿ ಹೇಳುವುದಕ್ಕಾಗಲೀ ಕೇಳುವುದಕ್ಕಾಗಲೀ ಸರಿಯಾದ ವೇದಿಕೆ ಅಲ್ಲವೆಂಬುದರ ಅರಿವು ನನಗಿದೆ, ನನ್ನ ಸೋಲುತ್ತಿರುವ ಭಾಷೆಯಲ್ಲೇ ’ಅವರವರು ಪಡೆದುಕೊಂಡು ಬಂದದ್ದರ’ ಬಗ್ಗೆ, ನಮ್ಮ ಕರ್ಮದ ಬಗ್ಗೆ ಹೇಳುವ ಪ್ರಯತ್ನವನ್ನು ಮಾಡಿದ್ದೇನಷ್ಟೇ.ಇದನ್ನು ಓದುವುದೂ ಬಿಡುವುದೂ ನಿಮಗೆ ಬಿಟ್ಟಿದ್ದು!

ಪರಿಸ್ಥಿಯ ಕೈಗೊಂಬೆ

ಅಸಹಾಯಕತೆ ಅನ್ನೋದು ದೊಡ್ಡದು, ಆದರೆ ನಮ್ ನಮ್ ಕೈಯಲ್ಲಿ ಆಗೋಲ್ಲ ಅಂತ ಕೈ ಚೆಲ್ಲಿ ಕುಳಿತುಕೊಳ್ಳೋದು ದೊಡ್ಡದಲ್ಲ, ಆಯಾ ಪರಿಸ್ಥಿತಿಗೆ ತಕ್ಕಂತೆ ನಾವು ಏನು ಮಾಡಬಲ್ಲೆವು ಸುಮ್ಮನಿರೋದನ್ನು ಬಿಟ್ಟು ಅನ್ನೋದು ಮುಖ್ಯ. ಕೆಲವೊಮ್ಮೆ ವಿಷಯವನ್ನ ನಮ್ಮ ಕೈಗೆತ್ತಿಕೊಳ್ಳಬೇಕಾಗುತ್ತೆ, ಇನ್ನು ಕೆಲವು ಸಲ ಆದದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ಸುಮ್ಮನಿರುವುದೇ ಒಳಿತು ಅನ್ನಿಸಬಹುದು ಅನುಭವಗಳ ಹಿನ್ನೆಲೆ ಇದ್ದೋರಿಗೆ. ಹೀಗೆ ಹಳೆಯ ಕನ್ನಡ ಚಿತ್ರಗಳ ಡಿವಿಡಿಯೊಂದನ್ನು ನೋಡ್ತಾ ಇರುವಾಗ ಬಹಳ ದಿನಗಳಿಂದ ಯೋಚನೆಗೆ ಸಿಕ್ಕದ ನಮ್ಮೂರುಗಳಲ್ಲಿ ಜನ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುತ್ತಾರೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು.***ಹೊಡೆದಾಟ ಬಡಿದಾಟದಲ್ಲಿ ಬೇರೆ ಯಾರೂ ಬೇಡಪ್ಪ, ನನ್ನ ದೊಡ್ಡ ಅಣ್ಣನೇ ಸಾಕು. ನಾಲ್ಕು ಹೊಡೆತ ಕೊಟ್ಟೂ ಬರಬಲ್ಲ, ಹಾಗೇ ತಿಂದುಕೊಂಡು ಬಂದಿದ್ದೂ ಇದೆ. ಒಂದು ದಿನ ಯಾವುದೋ ಕೆಲಸ ಕಾರ್ಯ ಮಾಡಿಸಿಕೊಳ್ಳಲೆಂದು ನಮ್ಮೂರಿನ ಮಂಡಲ ಪಂಚಾಯಿತಿ ಪ್ರಧಾನರನ್ನು ಹುಡುಕಿಕೊಂಡು ನಮ್ಮಣ್ಣ ಬಸ್‌ಸ್ಟ್ಯಾಂಡ್ ಹಿಂಬಾಗವಿರೋ ಜರಮಲೆಯವರ ಸಾ ಮಿಲ್‌ ಆಫೀಸಿಗೆ ಹೋಗಿದ್ದನಂತೆ. ಅಲ್ಲಿ ಶ್ರೀಮಂತರುಗಳ ದಂಡು ದೊಡ್ಡದಾಗಿ ಜಮಾಯಿಸಿತ್ತಂತೆ. ನಮ್ಮಣ್ಣ ಏನೋ ಕಾರಣಕ್ಕೆಂದು ಹೋದವನು ಮಾತಿಗೆ ಮಾತು ಬೆಳೆದು ಅಲ್ಲಿ ದೊಡ್ಡ ಮನುಷ್ಯರುಗಳ ನಡುವೆ ಉಪಸ್ಥಿತರಿದ್ದ ಮಂಡಲ ಪ್ರಧಾನರ ಬಾಯಿಂದ ಸೂಳೇಮಗನೇ ಎಂದು ಬೈಯಿಸಿಕೊಂಡನಂತೆ. ಹಾಗೆ ಅವರು ಬೈದದ್ದೇ ತಡ ಇವನಿಗೆ ಇಲ್ಲಸಲ್ಲದ ಸಿಟ್ಟು ಬಂದು ಅಷ್ಟು ಜನರಿರುವಂತೆಯೇ ಪ್ರಧಾನರನ್ನು ಹಿಡಿದೆಳೆದು ಹಿಗ್ಗಾಮುಗ್ಗಾ ಹೊಡೆದು ಹೊಟ್ಟೆಯೊಳಗಿನ ಕರುಳೂ ಕಿತ್ತುಬರುವಂತೆ ಪಂಚ್ ಮಾಡಿ ಬಂದಿದ್ದ. ಮುಂದಾಗುವ ಕಷ್ಟನಷ್ಟಗಳನ್ನರಿತವನು ಅಲ್ಲೇ ಹತ್ತಿರವಿದ್ದ ಪೋಲೀಸ್ ಸ್ಟೇಷನ್ನಿಗೆ ಓಡಿಬಂದು ಸಬ್‌ಇನ್ಸ್ಪೆಕ್ಟರ್ ಹತ್ತಿರ ಇರುವ ವಿಷಯವೆಲ್ಲವನ್ನು ಹೇಳಿ ತಪ್ಪೊಪ್ಪಿಕೊಂಡಿದ್ದ.ಅಷ್ಟೊಂದು ಜನರ ಮುಂದೆ ಮಂಡಲ ಪ್ರಧಾನರನ್ನು ಆಸ್ಪತ್ರೆಗೆ ಸೇರಿಸುವಷ್ಟರ ಮಟ್ಟಿಗೆ ಹೊಡೆದರು ಅವರು ಬಿಟ್ಟಾರೇನು? ನಮ್ಮಣ್ಣನ ಮೇಲೆ 302, 302A ಮುಂತಾದ ಸೆಕ್ಷನ್ನುಗಳನ್ನು ಹೇರಿ, ಜೀವ ತೆಗೆಯಲು ಬಂದಿದ್ದನೆಂದು ಪುರಾವೆಗಳನ್ನೊದಗಿಸಿ ಸಾಬೀತು ಮಾಡಿದ್ದೂ ಆಯಿತು. ನಮ್ಮಣ್ಣ ಜೈಲಿನಿಂದ ಹೊರಬರುವಾಗ ಮತ್ತಿನ್ಯಾರದ್ದೋ ಕೈ ಕಾಲು ಹಿಡಿದು ಜಾಮೀನು ಪಡೆಯುವಂತಾಯ್ತು. ಇವೆಲ್ಲ ಆಗಿನ ಮಟ್ಟಿಗೆ ನಡೆದ ಕಷ್ಟಗಳಾದರೆ ಒಂದೆರಡು ದಿನಗಳಲ್ಲಿಯೇ ನಮ್ಮನೆಯ ಮುಂಬಾಗಿಲ ಬೀಗ-ಚಿಲಕವನ್ನು ಕಿತ್ತು ಎಸೆಯುವುದರಿಂದ ಹಿಡಿದು ಅನೇಕಾನೇಕ ಕಿರುಕುಳಗಳನ್ನು ಕೊಟ್ಟಿದ್ದೂ ಅಲ್ಲದೆ, ಇಂದಿಗೂ ಆ ಶ್ರೀಮಂತರ ತಂಡ ನಮ್ಮ ಮನೆಯವರನ್ನು ಕಂಡರೆ ಒಂದು ರೀತಿಯ ಅಸಡ್ಡೆಯನ್ನು ಪ್ರದರ್ಶಿಸುತ್ತದೆ ಎಂದರೂ ತಪ್ಪಲ್ಲ. ಇಷ್ಟೂ ಸಾಲದು ಎಂಬಂತೆ ವಾರ-ತಿಂಗಳುಗಟ್ಟಲೆ ಸೊರಬದ ಕೋರ್ಟಿಗೆ ಅಲೆದದ್ದೂ ಆಯಿತು, ಒಂದು ಬಗೆಯ ಒಪ್ಪಂದವನ್ನೂ ಮಾಡಿಕೊಂಡಿದ್ದಾಯಿತು.ನಾನು ಈ ಸಂಬಂಧವಾಗಿ ಈ ಘಟನೆ ನಮ್ಮ ನಡುವೆ ಮಾತಿಗೆ ಬಂದಾಗಲೆಲ್ಲ ನಮ್ಮಣ್ಣನನ್ನು ಮನಸೋ ಇಚ್ಛೆ ಬೈದಿದ್ದೇನೆ. ರಿಟೈರ್ ಆಗಿರುವ ಅಮ್ಮನಿಗೆ ಕಿರುಕುಳ ಕೊಡೋದಕ್ಕೆ ನೀನು ನಿನ್ನ ಶಕ್ತಿ ಪ್ರದರ್ಶನ ಮಾಡಬೇಕಿತ್ತೇನು? ಇಂದು ಅವರು ನಲ್ಲಿಯ ಪೈಪ್ ಅನ್ನು ಒಡೆದು ಹೋಗುತ್ತಾರೆ, ನಾಳೆ ಮತ್ತೊಂದನ್ನು ಮಾಡುತ್ತಾರೆ ಅವುಗಳಿಂದ ನೀನು ನಮ್ಮೆಲ್ಲರನ್ನು ರಕ್ಷಿಸುವ ತಾಕತ್ತಿದೆಯೇನು? ಅವರು ದುಡ್ಡಿದ್ದೋರು, ಅವರು ಹೇಳಿದಂತೆ ನಡೆಯೋ ಪೋಲೀಸು-ಕೋರ್ಟುಗಳ ಮುಂದೆ ಕೆಲಸವಿಲ್ಲದೇ ತಿರುಗೋ ನಿನ್ನ ದರ್ಪ ನಡೆಯೋದು ಅಷ್ಟರಲ್ಲೇ ಇದೆ! ಮುಂತಾಗಿ ಬೇಕಾದಷ್ಟು ಬೈದಿದ್ದೇನೆ, ಕೊರೆದಿದ್ದೇನೆ. ಇವೆಲ್ಲಕ್ಕೂ ನಮ್ಮಣ್ಣ ಹಿಂದೆ ’ಅವರು ಏನಂದರೂ ಅನ್ನಿಸಿಕೊಂಡು ಬರೋಕಾಗುತ್ತೇನು?’ ಎಂದು ಅದೇನೇನೋ ಹೇಳುತ್ತಿದ್ದವನು ಇಂದು ಮೌನ ಅವನ ಉತ್ತರವಾಗುತ್ತದೆ. ನಾನು ಬೇಕಾದರೆ ನಾಲ್ಕು ಹೊಡೆತ ತಿಂದುಕೊಂಡೋ ಬೈಯಿಸಿಕೊಂಡೋ ಮನೆಗೆ ಅತ್ತುಕೊಂಡು ಬರುತ್ತೇನೆಯೇ ವಿನಾ ಇವತ್ತಿಗೂ ಯಾವನಿಗೋ ಹೊಡೆದು ಆಸ್ಪತ್ರೆ ಸೇರಿಸಿ ಅವರು ನನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಜಾಮೀನು ಪಡೆಯೋ ಸ್ಥಿತಿ ಬರುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.***೧೯೮೩ ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ನಟಿಸಿರುವ ಚಿತ್ರ ಸಮಯದ ಗೊಂಬೆ, ಅದರಲ್ಲಿ ಅನಿಲ್ ಆಲಿಯಾಸ್ ಗುರುಮೂರ್ತಿಯಾಗಿ ನಟಿಸಿರುವ ರಾಜ್‌ಕುಮಾರ್ ಒಬ್ಬ ಸಾಮಾನ್ಯ ಲಾರಿ ಡ್ರೈವರ್. ಆತನ ಸಾಕು ತಂದೆ ಶಕ್ತಿ ಪ್ರಸಾದ್ ಚೀಟಿ ಹಣವೆಂದು ತೂಗುದೀಪ ಶ್ರೀನಿವಾಸ್ ಹತ್ತಿರ ಕೊಟ್ಟಿರುವ ಹತ್ತು ಸಾವಿರ ರೂಪಾಯಿ ಹಣವನ್ನು ಕೇಳೋದಕ್ಕೆ ಹೋದಾಗ ’ಮದುವೆ ದಿನ ಬಾ ಆ ದಿನವೇ ಕೊಡುತ್ತೇನೆ’ ಎಂದು ಸುಳ್ಳು ಹೇಳಿ ರಾಜ್‌ಕುಮಾರ್ ಮೇಲೆ ಹಳೆಯ ಹಗೆಯ ಸೇಡು ತೀರಿಸಿಕೊಳ್ಳುವ ಹವಣಿಕೆ ತೂಗುದೀಪ ಶ್ರೀನಿವಾಸ್‌ದು. ಇನ್ನೇನು ರಾಜ್‌ಕುಮಾರ್ ತಂಗಿಯ ಮದುವೆ ನಡೆಯುತ್ತಿದೆ, ಅಂತಹ ಒಳ್ಳೆಯ ಸಮಯದಲ್ಲಿ ಈ ಹಿಂದೆ ಯೋಚಿಸಿಟ್ಟುಕೊಂಡಂತೆ ತೂಗುದೀಪ ಶ್ರೀನಿವಾಸ್ ’ಯಾವ ಹಣ, ಅದನ್ನು ಕೊಟ್ಟಿದ್ದಕ್ಕೆ ಏನು ಸಾಕ್ಷಿ-ಆಧಾರವಿದೆ, ಕೊಡೋದಿಲ್ಲ...’ವೆಂದು ಗರ್ಜಿಸಿದ್ದನ್ನು ಕಂಡು ದೀನನಾಗಿ ಬೇಡಿಕೊಂಡು ಫಲ ಸಿಗದೇ ಶಕ್ತಿಪ್ರಸಾದ್ ಪೆಚ್ಚು ಮೋರೆ ಹಾಕಿಕೊಂಡು ಮದುವೆ ಮಂಟಪಕ್ಕೆ ಖಾಲೀ ಕೈ ಇಟ್ಟುಕೊಂಡು ಹಿಂತಿರುಗುತ್ತಾನೆ. ಮದುವೆಯ ಮಾತಿನ ಪ್ರಕಾರ ಸ್ಕೂಟರ್ ಖರೀದಿ ಹಣವೆಂದು ಹತ್ತು ಸಾವಿರ ರೂಪಾಯಿ ಹಣಕೊಡದಿದ್ದರೆ ಮದುವೆಯನ್ನೇ ನಿಲ್ಲಿಸುವುದಾಗಿ ಗಂಡಿನ ಕಡೆಯವರು ಪಟ್ಟು ಹಿಡಿದು ನಿಂತಾಗ, ತಂಗಿಯ ಮದುವೆಯ ಖರ್ಚಿಗೆಂದು ತಾನು ಓಡಿಸುತ್ತಿದ್ದ ಲಾರಿಯನ್ನು ಮಾರಿದ್ದ ರಾಜ್‌ಕುಮಾರ್‌ಗೆ ತೂಗುದೀಪ ಶ್ರೀನಿವಾಸ್ ಹತ್ತಿರ ಹೋಗಿ ನ್ಯಾಯಾನ್ಯಾಯ ಕೇಳದೇ ಬೇರೆ ನಿರ್ವಾಹವೇ ಇರೋದಿಲ್ಲ. ಒಂದು ಕಡೆ ಮಹೂರ್ತ ಬೇರೆ ಮೀರಿ ಹೋಗುತ್ತಿದೆ, ಮತ್ತೊಂದು ಕಡೆ ಮದುವೆ ನಿಂತು ಹೋದರೆ ಅಗಾಧವಾದ ಅವಮಾನ ಬೇರೆ.ಹೀಗಿರುವಾಗ ರಾಜ್‌ಕುಮಾರ್ ತೂಗುದೀಪ ಶ್ರೀನಿವಾಸ್ ಹತ್ತಿರ ಬಂದು ಕೇಳಿದಾಗ ಮತ್ತೆ ಅದೇ ಮಾತು, ’ಯಾವ ಹಣ, ಕೊಟ್ಟಿದ್ದಕ್ಕೆ ಏನು ಆಧಾರವಿದೆ, ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡಿಕೋ’...ಹೀಗಿರುವಾಗ ದುಷ್ಟರ ಗುಂಪಿಗೂ ರಾಜ್‌ಗೂ ಮಾರಾಮಾರಿ ನಡೆದು ಕೊನೆಗೆ ಬಲವಂತವಾಗಿ ತೂಗುದೀಪ ಶ್ರೀನಿವಾಸ್ ಹತ್ತಿರದಿಂದ ಹತ್ತು ಸಾವಿರ ರೂಪಾಯಿ ತಂದು ತಂಗಿಯ ಮದುವೆಯನ್ನು ರಾಜ್ ಪೂರೈಸುವ ಸಂದರ್ಭ ಬರುತ್ತದೆ. ಇನ್ನೇನು ಮದುವೆ ಮುಗಿಯಿತು ಎಂದ ಕೂಡಲೇ ತೂಗುದೀಪ ಶ್ರೀನಿವಾಸ್ ಪೋಲೀಸರೊಡನೆ ಬಂದು ರಾಜ್ ತನ್ನನ್ನು ಹೊಡೆದು ಬಡಿದು ದೋಚಿರುವುದಾಗಿ ಪಿರ್ಯಾದನ್ನು ಕೊಟ್ಟ ಕಾರಣ, ಪೋಲೀಸರು ರಾಜ್‌ ಅನ್ನು ಅರೆಷ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ. ಸಂತಸದಿಂದ ಕೊನೆಯಾಗ ಬೇಕಾಗಿದ್ದ ಮದುವೆ ಮನೆ ದುಃಖದ ಕಡಲಲ್ಲಿ ಮುಳುಗುತ್ತದೆ. ಕೆಲ ದಿನಗಳ ನಂತರ ಕೋರ್ಟಿನಲ್ಲಿ ರಾಜ್‌ದೇ ತಪ್ಪಿದೆಯೆಂದು ಸಾಬೀತಾಗಿ ಒಂದು ವರ್ಷಗಳ ಕಠಿಣ ಸಜೆಯನ್ನು ವಿಧಿಸಿ ರಾಜ್‌ಗೆ ಜೈಲಿಗೆ ತಳ್ಳಲಾಗುತ್ತದೆ.***ಇಂತಹ ಸಂದರ್ಭಗಳು ನಮ್ಮೂರಲ್ಲಿ ಹೊಸದೇನೂ ಅಲ್ಲ. ಕೊಂಕಣಿ ಎಮ್ಮೆಗೆ ಕೊಡತಿ ಪೆಟ್ಟು ಎಂದ ಹಾಗೆ ಕೆಲವರಿಗೆ ಏಟು ಬೀಳದೇ ಬಗ್ಗಲಾರರು. ರಾಜ್‌ ಪಾತ್ರದಲ್ಲಿ ಯಾರೇ ಇದ್ದರೂ ಏನು ಮಾಡಬಹುದಿತ್ತು? ತನ್ನ ತಂಗಿಯ ಮದುವೆ ನಿಂತು ಹೋಗುತ್ತಿರುವಾಗ ತಾನು ಕಾನೂನನ್ನು ಕೈಗೆ ತೆಗೆದುಕೊಂಡದ್ದು ಸರಿಯೇ, ತಪ್ಪೇ? ತೂಗುದೀಪ ಶ್ರೀನಿವಾಸರನ್ನು ಹೊಡೆಯದೇ ರಾಜ್ ಆತನ ಬಗ್ಗೆ ಕಂಪ್ಲೇಂಟನ್ನು ಬರೆದುಕೊಡಬಹುದಿತ್ತು, ಬೇರೆ ಯಾರಾದರೊಬ್ಬರ ಬಳಿ ಮದುವೆಯ ಮಹೂರ್ತ ಮೀರಿ ಹೋಗುವುದರೊಳಗೆ ಸಾಲ ಮಾಡಿ ಮುಂದೆ ಯೋಚಿಸಬಹುದಿತ್ತು, ಇತ್ಯಾದಿ ದಾರಿಗಳಿದ್ದರೂ ರಾಜ್ ಮಾಡಿದ್ದೇ ಸರಿ ಎನಿಸೋದಿಲ್ಲವೆ? ತನಗೆ ನ್ಯಾಯವಾಗಿ ಬರಬೇಕಾದ ಹಣವನ್ನು ಇನ್ನೊಬ್ಬರು ’ನೀನು ಕೊಟ್ಟೇ ಇಲ್ಲ’ ಎಂದರೆ ಅದನ್ನು ಕೇಳಿಕೊಂಡು ಸುಮ್ಮನೇ ನಕ್ಕು ಬರುವುದಕ್ಕೆ ಉಪ್ಪು ಹುಳಿ ಖಾರ ತಿಂದ ಯಾರಿಗಾದರೂ ಸಾಧ್ಯವಿದೆಯೇನು?

ಮಿನಿನ್ ತೊಟ್ಟಿ




ಮೀನಿನ ತೊಟ್ಟಿಯ ಚಿತ್ರ ಒಂದು ವಾರದ ಹಿಂದೆ ನನ್ನ ಆಫೀಸಿನ ಹತ್ತಿರವೇ ಕುಳಿತುಕೊಳ್ಳೋ ಆಡಮ್ ಆಫೀಸಿನ ಗಾಜಿನ ಗೋಡೆಯ ಮೇಲೆ ಹುಟ್ಟಿಕೊಂಡಿದ್ದು ನಮಗೆಲ್ಲರಿಗೂ ಆಶ್ಚರ್ಯ ತರಿಸಿತ್ತು. ಆಡಮ್ ತನ್ನ ಆಫೀಸಿನ ಒಳಗಡೆಯಿಂದ ಗಾಜಿನ ಮೇಲೆ ಚಿತ್ರ ಬರೆದಿದ್ದ, ಉಳಿದವರಿಗೆ ಹೊರಗಡೆಯಿಂದ ತಮಗೆ ಬೇಕಾದ ಅವತರಣಿಕೆಗಳನ್ನು ಸೇರಿಸುವ ಮುಕ್ತ ಅವಕಾಶ ಇತ್ತು. ಗಾಜಿನ ಗೋಡೆಯ ಮೇಲೆ ಎರಡೂ ಕಡೆಯಿಂದಲೂ ಚಿತ್ರಗಳನ್ನು ಬರೆಯಬಹುದು ಎಂದು ನನಗನ್ನಿಸಿದ್ದು ಆಗಲೆ.ಎರಡು ಮಕ್ಕಳಿರೋ ಆಡಮ್ ತನ್ನ ಚಿತ್ರದಲ್ಲಿ ನಾಲ್ಕು ಗೋಲ್ಡ್ ಫಿಶ್‌ಗಳು, ಅವುಗಳು ಉಸಿರಾಡೋದಕ್ಕೆ ಅನುಕೂಲವಾಗುವ ಹಾಗೆ ಏರ್ ಬಬಲ್ ಬರುವಂತೆ ಜೊತೆಗೆ ಒಂದು ಗಿಡವನ್ನೂ ಅದರ ಪಕ್ಕದಲ್ಲಿ ಬರೆದಿದ್ದ. ನೀರಿನ ಮಟ್ಟವನ್ನು ಸಾಕಷ್ಟು ಎತ್ತರಕ್ಕೆ ಏರಿಸಿ ’ಸ್ವಲ್ಪ ದಿನಗಳಲ್ಲಿ ನೀರು ಬತ್ತಿ ಹೋದರೂ ಅಡ್ಡಿ ಇಲ್ಲ’ ಎಂದಿದ್ದ. ನಾನು ಕೇಳಿದೆ, ’ನಮ್ಮ ಮನೆಯಲ್ಲಂತೂ ಮೇಂಟೆನೆನ್ಸ್‌ಗೆ ಸುಲಭವೆಂದು ಗೋಲ್ಡ್ ಫಿಶ್‌ ಇಟ್ಟಿದ್ದೇವೆ, ಚಿತ್ರದಲ್ಲಾದರೂ ಬೇರೆ ಮೀನುಗಳನ್ನು ಬರೆಯಬಹುದಿತ್ತಲ್ಲ?’ ಎಂದು. ಆಡಮ್ ’That's a good observation...' ಎಂದು ಚಿಕ್ಕದಾಗಿ ಹೇಳಿ ನಕ್ಕು ಬಿಟ್ಟಿದ್ದ. ಆತ ಬರೆದ ಚಿತ್ರ ಕೇವಲ ಒಂದೇ ಒಂದು ಅದರ ಮೂಲ ಸ್ವರೂಪದಲ್ಲಿ ಉಳಿದಿತ್ತು ಎಂದು ಹೇಳಬಹುದು. ಮರುದಿನ ಆತನೇ ಒಂದು ಗಿಡದ ಪಕ್ಕದಲ್ಲಿ ಮತ್ತೊಂದು ಚಿಕ್ಕ ಗಿಡವನ್ನು ಬರೆದ ಹಾಗೂ ಯಾರಿಗಾದರೂ ಸ್ಕೂಬಾ ಡೈವರ್‌ನ ಚಿತ್ರವನ್ನು ಬರೆಯಲು ಬರೆಯುತ್ತದೆಯೇ ಎಂದು ಕೇಳಿದ್ದೂ ಆಯಿತು. ಹೆಚ್ಚಿನ ನಮಗೆ ಬರೋದಿಲ್ಲ ಎಂದು ಹೆಗಲು ಕುಣಿಸಿದೆವು, ಪಕ್ಕದ ಆಫೀಸಿನ ಜೆಫ್ ಬಂದು ಕೇವಲ ಎರಡೇ ನಿಮಿಷಗಳಲ್ಲಿ ಸ್ಕೂಬಾ ಡೈವರ್ ಅನ್ನು ಸೇರಿಸಿಬಿಟ್ಟ. ಜೆಫ್ ಚಿತ್ರ ಬರೆಯೋದಕ್ಕೆ ಮೊದಲು ಸ್ಕೂಬಾ ಡೈವರ್ ಎಂದರೆ ಹೇಗೆ ಬರೆಯಬಹುದು ಎಂದೆಲ್ಲಾ ಯೋಚಿಸಿಕೊಂಡಿದ್ದ ನನಗೆ ಆತ ಚಿತ್ರ ಬರೆದ ಮೇಲೆ ’ಅಯ್ಯೋ ಇಷ್ಟು ಸುಲಭವೇ!’ ಎನ್ನಿಸಿದ್ದು ನಿಜ.ಮರುದಿನ ಮುಂಜಾನೆ ನೋಡಿದಾಗ, ಅಕ್ವೇರಿಯಮ್ ತಳಕ್ಕೆ ಒಂದೆರಡು ಹಸಿರು ಸ್ಟಿಕ್ಕರುಗಳು ಅಂಟಿಕೊಂಡಿದ್ದವು. ಅದೇ ದಿನ ಮಧ್ಯಾಹ್ನ ಒಂದು ದೊಡ್ಡ ಮೀನಿನ ಮುಖವೂ ಬದಿಯಿಂದ ಎದ್ದು ಕಾಣತೊಡಗಿತ್ತು, ಇನ್ನೇನು ಸಣ್ಣ ಮೀನನ್ನು ನುಂಗಿ ಬಿಡುವ ಹಾಗೆ. ಇದಾದ ತರುವಾಯ ಆಡಮ್ ಹಸಿರು ಗಿಡಗಳ ಎಲೆಗಳ ಸಂಖ್ಯೆಯನ್ನು ಹೆಚ್ಚಿಸುತ್ತ ಹೋದ. ಮುಂದಿನ ದಿನಗಳಲ್ಲಿ ಗಾಜಿನ ತೊಟ್ಟಿಯ ಮೇಲೆ ಮೀನು ಹಿಡಿಯಲು ಗಾಳ ಹಾಕಿ ಕುಳಿತ ಚಿತ್ರವೂ ಹಾಗೂ ಗಾಜಿನ ತೊಟ್ಟಿಗೆ ಅಡಿಯಿಂದ ಬಿಸಿ ಮಾಡುವಂತೆ ಯಾರೋ ಒಬ್ಬರು ಮೊಂಬತ್ತಿ (ಕ್ಯಾಂಡಲ್ಲ್) ಯನ್ನೂ ಹಚ್ಚಿ ಬಿಟ್ಟಿದ್ದರು! ಈ ಚಿತ್ರಕ್ಕೆ ಕೊನೆಯ ಬದಲಾವಣೆ ಎಂಬಂತೆ ಸಣ್ಣ ಮೀನನ್ನು ನುಂಗಲು ಹವಣಿಸುವ ದೊಡ್ಡ ಮೀನಿನ ಬಾಯಿಯಿಂದ ರಕ್ತ ಜಿನುಗಿದ ಹಾಗೆ ಮತ್ತು ದೊಡ್ಡ ಮೀನಿನ ಕಣ್ಣಿರುವ ಜಾಗೆಯಲ್ಲಿ ಒಂದು ಸ್ಮೈಲಿ ಸ್ಟಕ್ಕರ್ರೂ ಪ್ರತ್ಯಕ್ಷವಾದವು.ಹೀಗೆ ಒಂದು ವಾರದಲ್ಲಿ ಒಳಗಡೆಯಿಂದ ಆಡಮ್ ಚಿತ್ರವನ್ನು ಬೆಳೆಸುತ್ತಾ ಹೋದ ಹಾಗೆ ಹೊರಗಡೆಯಿಂದ ಅದೇ ಗಾಜಿನ ಮೇಲೆ ಅಕ್ಕ ಪಕ್ಕದ ಜನರು ತಮಗೆ ಬೇಕಾದ ’ಎಲಿಮೆಂಟು’ಗಳನ್ನು ಸೇರಿಸುತ್ತಾ ಹೋದರು. ಆಕ್ವೇರಿಯಮ್ ಎನ್ನುವುದು ನಿಜ ಜೀವನದಲ್ಲಿ ಒಂದು ಜೈವಿಕ ವ್ಯವಸ್ಥೆಯೆಂಬಂತೆ ಈ ಗಾಜಿನ ಮೇಲೆ ಬರೆದ ಚಿತ್ರವೂ ಚಿತ್ರದಲ್ಲಿ ಜೀವಂತವಾಗಿಯೇ ಇತ್ತು.***ಚಿತ್ರ ಬರೆಯುವವರ ಮನಸ್ಸಿನಲ್ಲಿದೆ ಎಲ್ಲ ಥರದ ಕಲ್ಪನೆಗಳು, ಅವು ದಿನಕ್ಕೆ, ಘಳಿಗೆಗೊಮ್ಮೆ ಬದಲಾಗುವುದು ಸಹಜ. ಜೊತೆಗೆ ನಿಜ ಜೀವನವೂ ಸಹ ನಾನಾ ರೀತಿಯ ಸವಾಲುಗಳನ್ನು ಒಡ್ಡುವುದು ಇದ್ದೇ ಇದೆ. ಒಂದು ಚಿತ್ರದ ವ್ಯವಸ್ಥೆಯಲ್ಲಿ ಹಲವಾರು ಸರಿ ಉತ್ತರಗಳಿವೆ, ಹೀಗೆ ಬರೆದರೆ ತಪ್ಪು ಎಂಬುವುದು ದೂರದ ಮಾತು. ನೀವು ವಾಷಿಂಗ್ಟನ್ ಡಿಸಿಯ ಕಲಾ ಮ್ಯೂಸಿಯಮ್‌ಗಳನ್ನು ನೋಡಿದ್ದರೆ ನಿಮಗೆ ಗೊತ್ತು, ಪುರಾತನ ಚಿತ್ರಕಲೆಯಿಂದ ಹಿಡಿದು ಆಧುನಿಕ (abstract) ಕಲೆಯವರೆಗೆ ಬೇಕಾದಷ್ಟು ವೇರಿಯೇಷನ್ನುಗಳಿಗೆ ಒಳಪಟ್ಟ ಮಾಧ್ಯಮವದು. ಆಕ್ವೇರಿಯಮ್ ಒಂದು ಜೈವಿಕ ವ್ಯವಸ್ಥೆ, ಅದರ ಹಲವಾರು ವಸ್ತುಗಳು ಅದರದ್ದೇ ಆದ ಒಂದು ವಿಶೇಷ ವಾತಾವರಣವನ್ನು (eco system) ಸೃಷ್ಟಿಸುತ್ತದೆ.ನೀವು ಬರ್ಲಿನ್ ಗೋಡೆಯ ಮೇಲೆ ಉದ್ದಾನುದ್ದಕ್ಕೂ ಜನರು ಥರಾವರಿ ಚಿತ್ರಗಳನ್ನು ಗೋಡೆಯ ಎರಡೂ ಬದಿಗೆ ಜನರು ಬರೆದ ಡಾಕ್ಯುಮೆಂಟರಿಯನ್ನು ನೋಡಿರಬಹುದು, ಆ ಬಗ್ಗೆ ಕೇಳಿರಬಹುದು. ಅದು ಒಂದು ರೀತಿಯ ಓಪನ್ ಕ್ಯಾನ್‌ವಾಸ್ ಇದ್ದ ಹಾಗೆ. ನಮ್ಮ ಆಫೀಸಿನಲ್ಲೂ ಬೇಕಾದಷ್ಟು ಜನರ ಆಫೀಸಿನಲ್ಲೂ ಈ ರೀತಿಯ ದೊಡ್ಡ ಗಾಜಿನ ಗೋಡೆಗಳಿದ್ದರೂ ಕೇವಲ್ ಆಡಮ್ ಮಾತ್ರ ನಾನು ಕಂಡಂತೆ ಮೊದಲ ಬಾರಿಗೆ ತನ್ನ ಬದಿಗಿದ್ದ ಗಾಜಿನ ಮೇಲ್ಮೈ ಮೇಲೆ ಚಿತ್ರ ಬರೆದು ಉಳಿದವರು ಅದಕ್ಕೇನೇನೋ ರೂಪಗಳನ್ನು ಕೊಡುತ್ತಿದ್ದರೂ ಅದನ್ನು ಪುರಸ್ಕರಿಸುತ್ತಿದ್ದ. ಹೀಗೆ ಒಂದು ವಾರ ಕಳೆದ ನಂತರ ನಿನ್ನೆ ನನ್ನ ಕಣ್ಣೆದೆರಿಗೇ ಈ ಚಿತ್ರವನ್ನು ಅಳಿಸಿ ಹಾಕಿದ, ಏಕೆ ಎಂದು ಕೇಳಿದ್ದಕ್ಕೆ ’ಚಿತ್ರ ಬರೆದದ್ದಾಯಿತು, ಅದು ಬೆಳೆದದ್ದೂ ಆಯಿತು, ಈಗ ಅದು ತನ್ನ ಚಾರ್ಮ್ ಕಳೆದುಕೊಂಡಿದೆ’ ಎಂದ. ಅದು ನಿಜವೂ ಹೌದು ಮೊದಮೊದಲು ಈ ಚಿತ್ರದ ಹತ್ತಿರ ಸುಳಿದಾಡುವವರು ಒಂದಲ್ಲ ಒಂದು ರೀತಿಯ ಕಾಮೆಂಟುಗಳನ್ನು ಹಾಕಿ ಹೋಗುತ್ತಿದ್ದರು, ಅನಂತರ ಈ ಚಿತ್ರ ಗೌಣವಾಯಿತು.***ನನಗೆ ಆಶ್ಚರ್ಯವಾಗುವಷ್ಟರ ಮಟ್ಟಿಗೆ ಈ ಚಿತ್ರ ಆಫೀಸಿನ ಕ್ರಿಯೇಟಿವಿಟಿಗೆ ಒಂದು ಮಾದರಿಯಾಗಿತ್ತು. ಕೆಲವರು ಮಾರ್ಕರ್ ಪೆನ್ನುಗಳಿಂದ ಚಿತ್ರಕ್ಕೆ ತಮ್ಮದೊಂದು ಕೊಡುಗೆಯನ್ನು ನೀಡಿದ್ದರೆ, ಇನ್ನು ಕೆಲವರು ವರ್ಬಲ್ ಕಾಮೆಂಟುಗಳನ್ನು ಹಂಚಿಕೊಂಡರು. ಕೆಲವರು ಚಿತ್ರವನ್ನು ಬೆಳೆಸಿದರೆ (constructive), ಇನ್ನು ಕೆಲವರು ಅದನ್ನು ಧ್ವಂಸ ಮಾಡಲು ನೋಡಿದರು (destructive). ಜನರ ಸೃಜನಶೀಲತೆ, ಅವರ ಮನಸ್ಸಿಗೆ ಹಿಡಿದ ಕನ್ನಡಿ ಎನ್ನುವುದು ಇಲ್ಲಿ ನನಗಂತೂ ಸ್ಪಷ್ಟವಾಗಿತ್ತು

ಬೇವು ಬೆಲ್ಲ ಇರದ ಹೊಸ ವರ್ಷಗಳು

ಓಹ್, ನಮಸ್ಕಾರ, ನಾವು ದಕ್ಷಿಣ ಭಾರತದ ಮಂದಿ ಹಾಗೂ ಇದು ನಮಗೆ ಹೊಸ ವರ್ಷ ಮತ್ತು ಅದರ ಆಚರಣೆ! ಅಯ್ಯೋ, ಇದೇನ್ odd ಈಗ ಏಪ್ರಿಲ್ ಮಧ್ಯೆ ಹೊಸವರ್ಷ ಶುರುವಾಯ್ತು ಅಂತೀರಾ? ಹಾಗೇ ಸಾರ್, ನಮ್ಮ ಕ್ಯಾಲೆಂಡರಿನಲ್ಲಿ ಮಹತ್ವದ ದಿನಗಳೆಲ್ಲ ಆರಂಭವಾಗೋದು ಇಂಗ್ಲೀಷಿನ ಕ್ಯಾಲೆಂಡರಿನ ಮಧ್ಯ ಭಾಗಕ್ಕೆ, ಅದನ್ನ odd ಅಂಥಾ ಬೇಕಾದ್ರೂ ಕರೆದುಕೊಳ್ಳಿ, even ಅಂಥಾನಾದ್ರೂ ಉದ್ಗರಿಸಿ ನಮಗೇನೂ ಇಲ್ಲ. ಇಂಗ್ಲೀಷ್ ಕ್ಯಾಲೆಂಡರ್ ಆರಂಭವಾಗೋದಕ್ಕೆ ಮೊದಲೂ ನಮ್ಮ ದಿನಗಳು ಹೀಗೇ ಇದ್ವು ಅನ್ನೋದಕ್ಕೆ ಹಲವರು ಪುರಾವೆಗಳನ್ನೇನು ಒದಗಿಸೋ ಅಗತ್ಯ ಇಲ್ಲ, ಒಂದೇ ಮಾತ್ನಲ್ಲಿ ಹೇಳೋದಾದ್ರೆ ನಮ್ಮದು ಹಳೇ ಸಂಸ್ಕೃತಿ, ಹಳೇ ಪರಂಪರೆ, ನಾವು ಹಳಬರು ಅಷ್ಟೇ!ನಿಮಗೆ ನಂಬಿಕೆ ಬರಲಿಲ್ಲಾಂತಂದ್ರೆ ನಿಮ್ಮ ಲಾನೋ ಗಾರ್ಡನ್ನಿನಲ್ಲಿರೋ ಗಿಡಮರಗಳನ್ನ ಹೋಗಿ ವಿಚಾರಿಸಿಕೊಂಡು ಬನ್ನಿ, ನಿಮ್ಮ Spring ಸೀಸನ್ ಮಾರ್ಚ್ ಇಪ್ಪತ್ತೊಂದಕ್ಕೇ ಶುರುವಾಗಿರಲೊಲ್ಲದ್ಯಾಕೆ, ಈ ಗಿಡಮರಗಳಿಗೆ ಏಪ್ರಿಲ್ ಆರನೇ ತಾರೀಖ್ ಚಿಗುರಿಕೊಳ್ಳೀ ಅಂಥಾ ನಾನೇನೂ ಆರ್ಡರ್ ಕಳಿಸಿಲ್ಲಪ್ಪಾ. ಈಗಾದ್ರೂ ಗೊತ್ತಾಯ್ತಾ ನಮ್ ಚೈತ್ರ ಮಾಸ, ವಸಂತ ಋತು ಅನ್ನೋ ಕಾನ್ಸೆಪ್ಟೂ, ಎನ್ ತಿಳಕೊಂಡಿದೀರಾ ನಮ್ಮ ಪರಂಪರೇನೇ ದೊಡ್ದು, ಅದರ ಮರ್ಮಾ ಇನ್ನೂ ಆಳ...ಆದ್ರೆ ನನಗೆ ಅಷ್ಟು ಡೀಟೇಲ್ ಗೊತ್ತಿಲ್ಲ ಏನ್ ಮಾಡ್ಲಿ ಹೇಳ್ರಿ?***ಬೇವು-ಬೆಲ್ಲ ತಿನ್ನದೇ ಯುಗಾದಿಯನ್ನೂ ಹೊಸವರ್ಷವನ್ನೂ ಆಚರಿಸಿಕೊಳ್ಳುತಿರೋ ಹಲವಾರು ವರ್ಷಗಳಲ್ಲಿ ಇದೂ ಒಂದು ನೋಡ್ರಿ. ಅವನೌವ್ವನ, ಏನ್ ಕಾನ್ಸೆಪ್ಟ್ ರೀ ಅದು, ಬದುಕಿನಲ್ಲಿ ಬೇವು-ಬೆಲ್ಲ ಎರಡೂ ಇರಬೇಕು ಅಂತ ಅದು ಯಾವನು ಯಾವತ್ತು ಕಾನೂನ್ ಮಾಡಿದ್ದಿರಬಹುದು? ಭಯಂಕರ ಕಾನ್ಸೆಪ್ಟ್ ಅಪಾ, ಎಂಥೆಂಥಾ ಫಿಲಾಸಫಿಗಳನ್ನೆಲ್ಲ ಬೇವು-ಬೆಲ್ಲದಲ್ಲೇ ಅರೆದು ಮುಚ್ಚಿ ಬಿಡುವಷ್ಟು ಗಹನವಾದದ್ದು. ನಾವೆಲ್ಲ ಹಿಂದೆ ಬೇವಿನ ಮರಾ ಹತ್ತಿ ಪ್ರೆಶ್ ಎಲೆಗಳನ್ನು ಕೊಯ್ದುಕೊಂಡು ಬಂದು ಪಂಚಕಜ್ಜಾಯದೊಳಗೆ ಅಮ್ಮ ಸೇರಿಸಿಕೊಡ್ತಾಳೆ ಅಂತಲೇ ಕಣ್ಣೂ-ಬಾಯಿ ಬಿಟಗೊಂಡು ಕಾಯ್‌ಕೊಂತ ಕುಂತಿರತಿದ್ವಿ. ನಾನಂತೂ ಬೇವಿನ ಮರದ ಮ್ಯಾಲೇ ಒಂದಿಷ್ಟು ಎಲೆಗಳನ್ನು ತಿಂದು ಒಂದ್ ಸರ್ತಿ ಕಹಿ ಕಷಾಯ ಕುಡಿದೋರ್ ಮಖಾ ಮಾಡಿದ್ರು, ಮತ್ತೊಂದು ಸರ್ತಿ ಇವನು ಬೇವಿನ ಎಲೇನೂ ಹಂಗೇ ತಿಂತಾನೇ ಭೇಷ್ ಎಂದು ಯಾರೋ ಬೆನ್ನು ಚಪ್ಪರಿಸಿದ ಹಾಗೆ ನನಗೆ ನಾನೇ ನೆನೆಸಿಕೊಂಡು ನಕ್ಕಿದ್ದಿದೆ. ನಮ್ಮೂರ್ನಾಗ್ ಆಗಿದ್ರೆ ಇಷ್ಟೊತ್ತಿಗೆ ಕಹಿ ಬೇವಿನ ಗಿಡಗಳು ಒಳ್ಳೇ ಹೂ ಬಿಟಗೊಂಡು ಮದುವೆಗೆ ಅಲಂಕಾರಗೊಂಡ ಹೆಣ್ಣಿನಂತೆ ಕಂಗೊಳಿಸುತ್ತಿದ್ದವು ಅಂತ ಆಲೋಚ್ನೆ ಬಂದಿದ್ದೆ ತಡ ಇಲ್ಲಿ ನಮ್ಮ ಗಾರ್ಡನ್ನಿನ್ಯಾಗೆ ಏನ್ ನಡದತಿ ಅಂತ ನೋಡೋ ಆಸೆ ಬಂತು. ತಕ್ಷಣ ಇನ್ನೂ ನಲವತ್ತರ ನಡುವೆ ಉಷ್ಣತೆ ಇರೋ ಈ ಊರಿನ ಛಳಿಗೆ ಹೆದರಿಕೆ ಆಗಲಿ ಎನ್ನುವಂತೆ ನನ್ನಲ್ಲಿದ ಬೆಚ್ಚನೆ ಜಾಕೆಟ್ ಒಂದನ್ನು ಹೊದ್ದು ಹೊರ ನಡೆದೆ.ಮನೆಯ ಸುತ್ತಲಿನ ಹುಲ್ಲು ಹಾಸೋ, ಕೆಲಸ ಕಳೆದುಕೊಂಡು ಹೊಸ ಕೆಲಸವನ್ನು ಹುಡುಕುತ್ತಿರೋ ನಿರುದ್ಯೋಗಿ ಯುವಕನ ಗಡ್ಡವನ್ನು ನೆನಪಿಗೆ ತಂದಿತು, ಈಗಲೋ ಆಗಲೋ ಚಿಗುರೊಡೆದು ಹುಲುಸಾಗಿ ಬೆಳೆಯುವ ಲಕ್ಷಣಗಳೆಲ್ಲ ಇದ್ದವು. ಹೊರಗಡೆಯ ಪೇಪರ್ ಬರ್ಚ್ ಮರಗಳು ಇಷ್ಟು ದಿನ ಗಾಳಿಗೆ ತೊನೆದೂ ತೊನೆದೂ ಕಷ್ಟಪಟ್ಟು ಕೆಲಸ ಮಾಡಿಯೂ ದಿನಗೂಲಿ ಸಂಬಳ ಪಡೆದು ಬದುಕನ್ನು ನಿಭಾಯಿಸೋ ಮನೆ ಯಜಮಾನನ ಮನಸ್ಥಿತಿಯನ್ನು ಹೊದ್ದು ನಿಂತಿದ್ದವು. ಅಕ್ಕ ಪಕ್ಕದ ಥರಾವರಿ ಹೂವಿನ ಗಿಡಗಳಲ್ಲಿ ಬದುಕಿನ ಸಂಚಾರ ಈಗಾಗಲೇ ಆರಂಭವಾಗಿದ್ದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ಸ್ಟೇಷನ್ನಿನಲ್ಲಿ ಮುಂಜಾನೆ ಐದೂವರೆಗೆಲ್ಲಾ ಸಿಟಿಬಸ್ಸುಗಳು ಪ್ರಾರಂಭವಾಗಿ ಮೊದಲ ಟ್ರಿಪ್ ಹೊರಡುವಾಗ ಇರುವ ಗಲಾಟೆ ವಾತಾವರಣ ಇದ್ದಂತಿತ್ತು. ಇನ್ನು ನನಗೆ ತಿಳಿಯದ ಅನೇಕ ಹೂವಿನ ಮರಗಳು ಮುಂಬರುವ ಅದ್ಯಾವುದೋ ಜಾತ್ರೆಗೆ ಸಿದ್ಧವಾಗುವ ತೇರಿನಂತೆ ನಿಧಾನವಾಗಿ ಮೊಗ್ಗೊಡೆಯುತ್ತಿದ್ದವು. ಇಷ್ಟು ದಿನ ಬಲವಾಗಿ ಬೀಸಿದ ಗಾಳಿಯ ದೆಸೆಯಿಂದ ನಮ್ಮ ಮನೆಯ ಬದಿಯಲ್ಲಿನ ಬರ್ಚ್ ಮರವೊಂದರ ದೊಡ್ಡ ಗೆಲ್ಲು ಮುರಿದು ಸಂಪೂರ್ಣ ಕೆಳಗೆ ವಾಲಿಕೊಂಡಿದ್ದು ಸ್ವಲ್ಪ ಹಿಡಿದೆಳೆದರೂ ಕಿತ್ತು ಬರುವಂತಿತ್ತು, ಇನ್ನೇನು ಕಿತ್ತೇ ಬಿಡೋಣ ಎಂದು ಮನಸು ಮಾಡಿ ಗೆಲ್ಲನ್ನು ಮುಟ್ಟಿದವನಿಗೆ ಮುರಿದು ಬಿದ್ದರೂ ಚಿಗುರುವುದನ್ನು ಮರೆಯದ ಆ ಗೆಲ್ಲಿನ ಜೀವಂತಿಕೆಗೆ ನಾನೇಕೆ ಭಂಗ ತರಲಿ ಎಂದು ಕೀಳದೇ ಹಾಗೆ ಬಿಟ್ಟು ಬಂದದ್ದಾಯಿತು. ಒಟ್ಟಿಗೆ ವಸಂತನಾಗಮನ ನಮ್ಮ ಮನೆಗೂ ಬಂದಿದೆ, ಬೇವು-ಬೆಲ್ಲ ತಿನ್ನದಿದ್ದರೇನಂತೆ, ಆ ರೀತಿಯಲ್ಲಿ ನಾವೂ ಹೊಸವರ್ಷದ ಭಾಗಿಗಳೇ ಎಂದು ನನ್ನ ನೆರೆಹೊರೆಯೂ ಸಂತೋಷದ ಮುಖಭಾವ ಹೊದ್ದುಕೊಂಡದ್ದು ಸ್ವಲ್ಪ ಸಮಾಧಾನವನ್ನು ತಂದಿತು.***ನಮಗೆ ನಮ್ಮ ನೀತಿ ಚೆಂದ. ಆದರೆ ನಮ್ಮ ಹೊಸವರ್ಷ ನಮಗೆ ಗೊತ್ತಿರೋ ಒಂದಿಷ್ಟು ಜನರಿಗೆ ’ಹೊಸವರ್ಷದ ಶುಭಾಶಯಗಳು’ ಎಂದು ಹೇಳಿ ಮುಗಿಸುವಲ್ಲಿಗೆ ಸೀಮಿತವಾಗಿ ಹೋಯಿತಲ್ಲ ಎಂದು ಒಂದು ರೀತಿಯ ಕಸಿವಿಸಿ. ತೆಲುಗರೋ ಕನ್ನಡಿಗರೋ ಒಟ್ಟಿಗೆ ದಕ್ಷಿಣ ಭಾರತದ ಹೆಚ್ಚು ಜನ ಆಚರಿಸುವ ಹೊಸ ವರ್ಷದ ಆಚರಣೆ ಇದು. ಚಾಂದ್ರಮಾನ ಯುಗಾದಿ ಇರುವ ಹಾಗೆ ಸೂರ್ಯಮಾನದ ಯುಗಾದಿಯೂ ಇದೆ. ಬದುಕಿನಲ್ಲಿ ಸ್ವಾತಂತ್ರ್ಯ ಅಂದರೆ ಇದೇ ಇರಬೇಕು, ನಿಮಗೆ ಯಾವಾಗ ಬೇಕು ಆಗ ಆಚರಿಸಿಕೊಳ್ಳಿ ಎನ್ನುವ ಫ್ರೀಡಮ್! ನಿಮಗೆ ಯಾವ ದೇವರು ಬೇಕು ಅದನ್ನು ಪೂಜಿಸಿಕೊಳ್ಳಿ ಎನ್ನುವ ಧೋರಣೆ. ನಿಮ್ಮ ತರ್ಕ ನಿಮ್ಮ ನೀತಿ ನಿಮ್ಮ ಧರ್ಮ, ಅದ್ದರಿಂದಲೇ ಇರಬೇಕು ಸನಾತನ ಧರ್ಮಕ್ಕೆ ಯಾವುದೇ ಪ್ರವಾದಿಗಳಿರದಿದ್ದುದು. ಇದು ಮತವಲ್ಲ, ಧರ್ಮ, ಜೀವನ ಕ್ರಮ, ಸ್ವಭಾವ, ನಿಮ್ಮ-ನಮ್ಮ ರೀತಿ ನೀತಿ - ಅವೆಲ್ಲವೂ ಒಡಗೂಡಿಯೇ ನಾವು ಒಂದಾಗಿರೋದು - ವೈವಿಧ್ಯತೆಯಲ್ಲೂ ಏಕತೆ.ನಿಮಗೆ ನಿಮ್ಮ ಹೊಸವರ್ಷ ಯಾವಾಗ ಬೇಕಾದರೂ ಆರಂಭವಾಗಲಿ, ನನಗಂತೂ ಹೊಸವರ್ಷ ಶುರುವಾಗಿದೆ...ಮುಂಬರುವ ದಿನಗಳು ನಮಗೆಲ್ಲ ಒಳ್ಳೆಯದನ್ನು ಮಾಡಲಿ!

ನಮ್ಮ ನಡುವಿನ ಸಂಭಂದಗಳ ಸೂಕ್ಷ್ಮತೆ

ನನ್ನ ಸ್ನೇಹಿತ, ಸಹೋದ್ಯೋಗಿಯಾಗಿದ್ದವನು ಇಂದು ಕರೆ ಮಾಡಿ ಏನೋ ಹೊಸ ಸುದ್ದಿಯನ್ನು ಹೇಳುತ್ತಾನೆ ಅಂದುಕೊಂಡರೆ ನನಗೆ ಖಂಡಿತವಾಗಿ ಆಶ್ಚರ್ಯ ಕಾದಿತ್ತು. ಆತನ ಮಾತನ್ನು ಕೇಳಿದ ಮೇಲೆ ಮಾನವ ಸಂಬಂಧಗಳನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುವಂತೆ ಆಗಿದ್ದು ನಿಜ. ಒಮ್ಮೆ ಆ ಮಟ್ಟಿಗಿನ ವೈರಾಗ್ಯ ನನ್ನನ್ನು ಹಾಗೆ ಆಲೋಚಿಸುವಂತೆ ಸ್ಪೂರ್ತಿ ನೀಡಿದ್ದಿರಬಹುದು, ಅಥವಾ ಪ್ರತಿಯೊಂದನ್ನು ಸೂಕ್ಷ್ಮವಾಗಿ ಅವಲೋಕಿಸುವ ನನ್ನ ರೀತಿ ಹಾಗೆಯೇ ಇರಬಹುದು.ಈಗ್ಗೆ ಕಳೆದ ಹದಿನಾರು ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿ ಕಳೆದು ಹನ್ನೊಂದು ವರ್ಷಗಳ ವೈವಾಹಿಕ ಜೀವನದಲ್ಲಿ ಮುದ್ದಾದ ಎರಡು ಮಕ್ಕಳನ್ನು ಪಡೆದ ನನ್ನ ಸ್ನೇಹಿತನ ಬದುಕು ಗಂಭೀರವಾಗಿದೆಯಂತೆ. ಆತನ ಹೆಂಡತಿ ಇದ್ದಕ್ಕಿದ್ದಂತೆ ಕಳೆದೊಂದು ವಾರದಲ್ಲಿ ಮಾತಿಗೆ ಮಾತು ಬೆಳೆಸಿ ತನ್ನ ಮಕ್ಕಳನ್ನು ಕರೆದುಕೊಂಡು ಇನ್ನೊಮ್ಮೆ ಬರುವುದಿಲ್ಲ ಎಂದುಕೊಂಡು ಒನ್ ವೇ ಟಿಕೇಟ್ ತೆಗೆದುಕೊಂಡು ಹೋಗಿದ್ದಾಳಂತೆ. ಮೊದಲಿನಿಂದಲೂ ಎರಡೂ ಮನೆಯವರಿಗೂ ಸಂಬಂಧಗಳಲ್ಲಿ ಅಷ್ಟೊಂದು ವಿಶ್ವಾಸವಿರಲಿಲ್ಲವೆಂದೂ ಯಾವಾಗಲೂ ಗಂಡ-ಹೆಂಡತಿಯರ ನಡುವೆ ಜಗಳವಿತ್ತೆಂದೂ, ಎಷ್ಟೋ ಸಾರಿ ಜಗಳ ತಾರಕಕ್ಕೇರಿ ವಿಚ್ಛೇದನದ ಮಾತಿನವರೆಗೂ ಹೋಗಿದೆ ಎಂದು ತಿಳಿದು ನನಗಂತೂ ಏನೂ ಹೇಳಲು ತೋಚದಂತಾಯಿತು.***ಇಂದಿನ ಯುಗದಲ್ಲಿ ನಮ್ಮ ನಮ್ಮ ನಡುವಿನ ಕಮ್ಮ್ಯುನಿಕೇಷನ್‌ಗೆ ಆದ್ಯತೆ ಕೊಡುವ ಕಾಲ, ನಮ್ಮ ಅಂತರಾಳದ ಸಂವಹನಕ್ಕೆ ಬೇಕಾದ ಸೂತ್ರಗಳಿವೆ, ಉಪಕರಣಗಳಿವೆ. ಹೀಗೆಲ್ಲ ಇರುವಾಗಲೇ ನಾನು ಗಂಡ-ಹೆಂಡತಿ ನಡುವೆ ಆಗಿ ಹೋಗದ ಮಾತುಗಳನ್ನೋ ಅಥವಾ ಹೆಚ್ಚು ವಿಚ್ಛೇದನದ ವಿಷಯವನ್ನೋ ಅಲ್ಲಲ್ಲಿ ಸುದ್ಧಿ-ವಿಚಾರವಾಗಿ ಕೇಳೋದೇ ಹೆಚ್ಚು. ಅಂದರೆ ಹಿಂದಿನ ಕಾಲದವರು ಕಷ್ಟವೋ-ಸುಖವೋ ಹೊಂದಿಕೊಂಡಿರುತ್ತಿದ್ದರೋ ಅಥವಾ ಅವರ ರಾದ್ಧಾಂತಗಳು ಹೊರಗೆ ಬರುತ್ತಿರಲಿಲ್ಲವೋ, ಅಥವಾ ಇಂದಿನವರ ಸವಾಲಿಗೂ ಅಂದಿನವರ ಸವಾಲಿಗೂ ವ್ಯತ್ಯಾಸವಿದೆಯೋ, ಅಥವಾ ಇವೆಲ್ಲ ನಿಜವೋ ಎನ್ನುವ ಆಲೋಚನೆ ಸಹಜವಾಗೇ ಬರುತ್ತದೆ. ಅದೂ ಇತ್ತೀಚಿನ ಗಂಡ-ಹೆಂಡತಿ ಇಬ್ಬರೂ ದುಡಿದು ಬರುವ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಮಕ್ಕಳಿರಲಿ ಬಿಡಲಿ ಮನೆಯ ಹಿರಿಯ ಅಥವಾ ಯಜಮಾನರಾಗಿ ಅವರೇ ಎಲ್ಲ ಜವಾಬ್ದಾರಿಯನ್ನು ಹೊತ್ತು ಸಂಸಾರ ರಥವನ್ನು ನಡೆಸುವ ಕಾಯಕವನ್ನು ಅನುಸರಿಸುತ್ತಿರುವಾಗ ಸಂಬಂಧಗಳ ಹೆಣಿಕೆಯಲ್ಲಿ ಒಂದು ಚೂರು ಊನವಾದರೂ ಸಂಸಾರ ರಥಕ್ಕೆ ಸಂಚಕಾರ ಬಂದಂತೆಯೇ ಎಂದು ಎಷ್ಟೋ ಸರತಿ ಅನ್ನಿಸಿದ್ದಿದೆ.ನಾನೇನೂ ಹೇಳೋದಿಲ್ಲ, ಹೇಳೋದಕ್ಕೆ ಉಳಿದಿರೋಲ್ಲ ಬಿಡಿ. ಈ ಸಂಸಾರ ತಾಪತ್ರಯದ ಒಡಕಲಿನ ವಿಷಯ ನನ್ನ ಕಿವಿಗೆ ಬೀಳುವ ಹೊತ್ತಿಗೆ ಆಗಬೇಕಾದ್ದದೆಲ್ಲ ಆಗಿ ಹೋಗಿರುತ್ತದೆ. ಗಂಡ-ಹೆಂಡತಿ ಇಬ್ಬರೂ ನನಗೆ ಪರಿಚಿತರೇ ಆದ ಸಂದರ್ಭಗಳಲ್ಲಿ ನಾವು ಯಾರೊಬ್ಬರ ಪರವನ್ನು ವಹಿಸಿ ಮಾತನಾಡುವುದು ತಪ್ಪಾದೀತು - ಬೆಂಕಿ ಇಲ್ಲದೇ ಹೊಗೆ ಬಾರದು ಎನ್ನುವಂತೆ ಏನೋ ಕ್ಷುಲ್ಲಕ ಕಾರಣ ಇದ್ದು ಅದು ದೊಡ್ಡ ಹೆಮ್ಮರವಾಗಿ ಬೆಳೆಯುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.***ಇಂದಿನ ಗಂಡ-ಹೆಂಡತಿ ಸಂಬಂಧವೆಂದರೆ ಸಾವಿರದ ಒಂಭೈನೂರ ಐವತ್ತರ ಸಮಯದ ಸಂಬಂಧಗಳ ಹಾಗೆ ಇರಬೇಕಾಗಿಲ್ಲ. ಗಂಡ ಉಂಡಾದ ನಂತರವೇ ಹೆಂಡತಿ ಊಟ ಮಾಡುವುದು ಎಂಬ ಕಾನೂನನ್ನು ತಲೆ ಸರಿ ಇರುವ ಯಾರೂ ಪಾಲಿಸಿಕೊಂಡು ಹೋಗಲಾರರು. ಆದರೆ ಗಂಡ-ಹೆಂಡತಿಯ ನಡುವೆ ವ್ಯತ್ಯಾಸವಿದ್ದಿರಲೇ ಬೇಕು, ಹಾಗಿದ್ದಾಗಲೇ ಚೆನ್ನು, ಆ ವ್ಯತ್ಯಾಸವನ್ನು ಆ ಕುಟುಂಬದ ಏಳಿಗೆಗೆ ಬಳಸದೇ ಅದನ್ನು ವಾದದ ಬೆಂಕಿಗೆ ಇಂಬುಕೊಡುವ ತುಪ್ಪವನ್ನಾಗಿ ಸುರಿದು ಮಾತಿಗೆ ಮಾತು ಬೆಳೆಸಿ ಕೋರ್ಟು ಕಛೇರಿ ಹತ್ತುವುದು ಆಯಾ ವ್ಯಕ್ತಿಯ ಹಿನ್ನೆಲೆಯಲ್ಲಿ ಸುಲಭವಾಗಿ ಕಾಣಿಸಿದರೂ ಇಡೀ ಕುಟುಂಬದ ಹಂದರಕ್ಕೆ ಅದರಿಂದ ಸಂಚಕಾರ ಬರುತ್ತದೆ. ಭಾರತದಲ್ಲೂ ಸಹ ಗಂಡ-ಹೆಂಡತಿ ಅಮೇರಿಕನ್ ಶೈಲಿಯಲ್ಲಿ ಮಕ್ಕಳನ್ನು ವಾರಾಂತ್ಯದಲ್ಲಿ ಕಷ್ಟಡಿಗೆ ತೆಗೆದುಕೊಂಡು ಸಾಕುತ್ತಾರೆ ಎನ್ನುವುದನ್ನು ಕೇಳಿದ ಮೇಲೆ ಎಲ್ಲೋ ನಮ್ಮ ಸಂಸ್ಕೃತಿಗೆ ವಿದೇಶಿ ಶಿಫಾರಸ್ಸು ಹೆಚ್ಚಾಗಿಯೇ ಸಿಕ್ಕಿದೆಯೆಂದು ಅರ್ಥವಾಯಿತು. ಮೊದಲೆಲ್ಲಾ ಹೇಗಿತ್ತೋ ಗೊತ್ತಿಲ್ಲ, ಆದರೆ ನಾನು ಭಾರತದಲ್ಲಿ ಮಕ್ಕಳನ್ನು ಕಷ್ಟಡಿಗೆ ತೆಗೆದುಕೊಂಡು ಸಾಕುವುದನ್ನು ಕೇಳಿದ್ದು ಇಂದೇ ಮೊದಲು.ಯಾವುದು ಎಲ್ಲಿ ತಪ್ಪಿತೋ ಎಂದು ಸೋಜಿಗ ಪಡುವ ಸಮಯವೋ, ಆದದ್ದಾಗಲಿ ಮುಂದಿನದು ಮುಖ್ಯ ಎನ್ನುವ ಧೋರಣೆಯನ್ನು ಬಿಗಿದಪ್ಪುವ ನಿಲುವೋ, ಈ ಸಂಬಂಧಗಳ ಗೊಂದಲವೇ ಬೇಡ ಎನ್ನುವ ಹಣಾಹಣಿಯೋ ಮತ್ತೊಂದೋ ತಪ್ಪಿದ್ದಲ್ಲ. ಅದು ಬದುಕು, ಅದೇ ಅದರ ನಿಯಮ ಹಾಗೋ ಅದರಲ್ಲಿರುವ ಸೂಕ್ಷ್ಮತೆಯ ಒಂದಲ್ಲ ಒಂದು ರೀತಿಯಲ್ಲಿ ನಾವು ಯೋಚಿಸುವುದು ನಮಗೆ ಅಂಟಿದ ಕಾಯಕ ಎಂದರೆ ತಪ್ಪೇನಿಲ್ಲ.

ಪಾಪ , ಇಂದಿನ ಮಕ್ಕಳು

ಆಫೀಸಿನಲ್ಲಿ ನನ್ನ ಅಕ್ಕ ಪಕ್ಕದ ಕ್ಯೂಬಿಕಲ್‌ಗಳಲ್ಲಿ ಕುಳಿತುಕೊಳ್ಳುವ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡ ನಾಲ್ಕು ಸಹೋದ್ಯೋಗಿಗಳಲ್ಲಿ ಕೆಲವು ಸಾಮ್ಯತೆಗಳನ್ನು ಕಂಡುಕೊಂಡಿದ್ದೇನೆ. ಅವರೆಲ್ಲ ವಯಸ್ಸಿನಲ್ಲಿ ಸುಮಾರು ಇಪ್ಪತ್ತನಾಲ್ಕು ವರ್ಷದ ಆಜುಬಾಜಿನವರು, ಭಿನ್ನ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದು ಓದಿದ್ದೂ ಸಹ ಹಾಗೂ ಇವತ್ತಿಗೂ ತಮ್ಮ ತಂದೆ-ತಾಯಿಯರ ಜೊತೆಗೇ ವಾಸಿಸುತ್ತಿರುವವರು. ಈ ನಾಲ್ಕು ಜನರು ಇಲ್ಲೇ ಹುಟ್ಟಿ ಬೆಳೆದವರಾದರೂ ನಮ್ಮ ಭಾರತೀಯ ಪರಂಪರೆಯಲ್ಲಿ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲುವವರೆಗೆ ತಮ್ಮ ತಮ್ಮ ಪೋಷಕರನ್ನು ಆಧರಿಸಿಕೊಂಡಿರುತ್ತಿದ್ದುದನ್ನು ಆಗಾಗ್ಗೆ ನೆನಪಿಗೆ ತಂದುಕೊಡುತ್ತಾರೆ. ಇವರನ್ನು ನೋಡಿದ ಬಳಿಕ ಅಮೇರಿಕನ್ ಮಕ್ಕಳು ಸ್ವಾತಂತ್ರ ಪ್ರಿಯರೋ ಅಥವಾ ಹದಿನೆಂಟು ವರ್ಷ ವಯಸ್ಸಾಗುತ್ತಿದ್ದಂತೆ ತಮ್ಮ ಪೋಷಕರನ್ನು ಬಿಟ್ಟು ದೂರ ಹೋಗಬಯಸುವವರೋ ಎಂದೆಲ್ಲ ಯೋಚಿಸಿಕೊಂಡಿದ್ದ ಅಥವಾ ಜೆನರಲೈಜೇಷನ್ನುಗಳ ಬಗ್ಗೆ ಕೇಳಿದ್ದು ಅಲ್ಲವೋ ಹೌದೋ ಎಂದು ಪ್ರಶ್ನೆ ಎದ್ದಿದ್ದಂತೂ ನಿಜ. ತಾವು ತಮ್ಮ ಕಾರುಗಳನು ಚಲಾಯಿಸಬಲ್ಲರಾದರೂ ತಮ್ಮ ಪೋಷಕರೊಡನೆ ಕೂಡಿ ಆಫೀಸಿಗೆ ಬಂದು ಹೋಗುವ ಅಥವಾ ಪೋಷಕರು ಮಕ್ಕಳನ್ನು ಆಫೀಸಿಗೆ ಬಿಟ್ಟು ಕರೆದುಕೊಂಡು ಹೋಗುವುದನ್ನು ನಾನು ನೋಡಿದ್ದು ಕಡಿಮೆಯೇ. ಹಿಂದೆ ನನ್ನ ಅಮೇರಿಕನ್ ಸ್ನೇಹಿತ ಕೆನ್ ಲೆನಾರ್ಡ್‌ನ ಕುಟುಂಬವನ್ನು ನಾನು ನೋಡಿದ ಹಾಗೆ ಎಷ್ಟೋ ರೀತಿಯಲ್ಲಿ ಭಾರತೀಯ ಕುಟುಂಬಗಳನ್ನು ಹೋಲುವಂತೆಯೇ ಆತನೂ ಹಲವಾರು ಗ್ರೌಂಡ್ ರೂಲ್ಸ್‌ಗಳ ಸಹಾಯ/ಆಧಾರದ ಮೇಲೆ ತನ್ನ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದುದರ ಬಗ್ಗೆ ಬರೆದಿದ್ದೆ.ನನ್ನ ಹಾಗಿನವರು ಬಹಳಷ್ಟು ಜನ ಹತ್ತನೇ ತರಗತಿ ಮುಗಿದ ಬಳಿಕ ಪಿಯುಸಿ ವಿದ್ಯಾಭ್ಯಾಸದಿಂದ ಹಿಡಿದು ತಮ್ಮ ಮುಂದಿನ ಜೀವನವನ್ನು ಪೋಷಕರಿಂದ ದೂರವಿದ್ದೇ ನಡೆಸಿಕೊಂಡು ಬರುತ್ತಿರುವುದು ಭಾರತದಲ್ಲಿ ಸಾಮಾನ್ಯವೆಂದು ಹೇಳಲಾಗದಿದ್ದರೂ ಅಲ್ಲಲ್ಲಿ ನೋಡಲು ಸಿಗುತ್ತದೆ ಎನ್ನಬಹುದಾದ ಅಂಶ. ಹತ್ತನೇ ತರಗತಿ ಮುಗಿದರೂ ನನಗೆ ಒಂದು ಬ್ಯಾಂಕಿಗೆ ಹೋಗಿ ಹತ್ತು ರೂಪಾಯಿ ಡಿಪಾಜಿಟ್ ಮಾಡುವುದು ಹೇಗೆ ಎಂದು ಗೊತ್ತಿರದಿದ್ದುದು ಇಂದಿಗೂ ಆಶ್ಚರ್ಯ ತರಿಸುತ್ತದೆ. ಮೊದಲನೆಯದಾಗಿ ಬ್ಯಾಂಕ್ ವ್ಯವಹಾರಗಳಾಗಲೀ ಹಣಕಾಸು ಸಂಬಂಧಿ ಚರ್ಚೆಗಳಾಗಲೀ ನಮ್ಮ ಅವಿಭಕ್ತ ಕುಟುಂಬಗಳಲ್ಲಿ (ನಮ್ಮೆದುರಿಗೆ) ಆಗುತ್ತಿದ್ದುದು ಕಡಿಮೆ. ಮನೆಯ ಯಜಮಾನನಾದವನು ನಡೆಸಿಕೊಂಡು ಹೋಗಬಹುದಾದ ಚರ್ಚೆ ಹಾಗೂ ವ್ಯವಹಾರಗಳಲ್ಲಿ ನಾವು ಚಿಕ್ಕವರಿಗೆ ಯಾವ ಸ್ಥಾನವೂ ಇದ್ದಿರಲಿಲ್ಲ. ಹೈ ಸ್ಕೂಲು ಮುಟ್ಟುವ ಹೊತ್ತಿಗೆ ಒಂದೆರಡು ಬಾರಿ ಯಾರೋ ಕೊಟ್ಟ ಚೆಕ್ ಡಿಪಾಜಿಟ್ ಮಾಡಿದ್ದೋ ಅಥವಾ ಬ್ಯಾಂಕಿನಿಂದ ಹಣವನ್ನು ತೆಗೆದುಕೊಂಡಿದ್ದನ್ನೋ ಬಿಟ್ಟರೆ ಮತ್ತೇನೂ ವಿಶೇಷ ಅನುಭವಗಳು ನಮ್ಮ ನೆನಪಿನಲ್ಲಿ ಇರಲಾರವು. ಇನ್ನು ಕೆಲವರು ಇಂಜಿನಿಯರಿಂಗ್ ಮುಗಿಯುವವರೆಗೆ, ಕೆಲಸ ಸಿಗುವವರೆಗೆ, ಮದುವೆಯಾಗಿ ಮಕ್ಕಳಾಗುವವರೆಗೂ ಪೋಷಕರನ್ನು ಆಧರಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ. ಈ ವಿಭಿನ್ನ ವ್ಯವಸ್ಥೆ-ವಿಧಾನಗಳಲ್ಲಿ ತಪ್ಪು ಸರಿ ಯಾವುದು ಎನ್ನುವುದಕ್ಕಿಂತ ಹಲವು ಮನಸ್ಥಿತಿ, ನನ್ನಂತಹವರು ಬೆಳೆದು ಬಂದ ರೀತಿ ಹಾಗೂ ಬದಲಾದ ಕಾಲಮಾನಗಳ ಅವಲೋಕನವನ್ನು ಮಾಡಿಕೊಡುವ ಒಂದು ಪ್ರಯತ್ನವಿದಷ್ಟೇ.’ಅಮೇರಿಕನ್ ಮಕ್ಕಳು ಬಹಳ ಇಂಡಿಪೆಂಡೆಂಟ್’ ಎನ್ನುವ ನೋಷನ್ನ್ ಅನ್ನು ನಾನು ಎನ್‌ಆರ್‍‌ಐ ಸಮುದಾಯಗಳಲ್ಲಿ, ನಮ್ಮ-ನಮ್ಮ ನಡುವಿನ ಮಾತುಕಥೆಗಳಲ್ಲಿ ಕೇಳಿದ್ದೇನೆ. ಈ ಬಗೆಯ ಜನರಲೈಜೇಷನ್ನಿಗಿಂತ ಇದೇ ಅವಲೋಕನವನ್ನು ಇಲ್ಲಿನ ಹಳ್ಳಿ-ಪಟ್ಟಣ-ನಗರ ಸಮುದಾಯಗಳಲ್ಲಿ ಮಾಡಿದಾಗ ಬೇಕಾದಷ್ಟು ರೀತಿಯ ಫಲಿತಾಂಶಗಳು ಹಾಗೂ ಮುಖ್ಯವಾಗಿ ಜನರಲೈಜೇಷನ್ನಿಗಿಂತ ಭಿನ್ನ ಅಂಕಿ-ಅಂಶಗಳೂ ಸಿಕ್ಕಬಹುದು. ನಮ್ಮ ಪುರೋಹಿತರು ಇಲ್ಲೇ ಹುಟ್ಟಿ ಬೆಳೆದ ಭಾರತೀಯ ಮೂಲದ ಮಕ್ಕಳಿಗೆ ಇಂಗ್ಲೀಷಿನಲ್ಲಿ ಬಾಲಕೃಷ್ಣನ ಲೀಲೆಗಳನ್ನು, ಕೃಷ್ಣ-ಬಲರಾಮರ ಬಗ್ಗೆ ಕಥೆಗಳನ್ನು ಹೇಳುತ್ತಿದ್ದರಂತೆ. ’ಕೃಷ್ಣ ಮತ್ತು ಆತನ ಸ್ನೇಹಿತರು ಬೆಣ್ಣೆಯನ್ನು ಮನೆಯಲ್ಲಿ ಹುಡುಕುತ್ತಿದ್ದರಂತೆ, ಮಡಿಕೆಯ ಕುಡಿಕೆಯನ್ನು ಯಶೋಧೆ ಮಾಳಿಗೆಯ ಕುಡಿಕೆಯಲ್ಲಿ ಬಿಗಿದು ಕಟ್ಟಿದ್ದನ್ನು ಇವರು ಕಂಡು ಹಿಡಿದರಂತೆ...’ ಎಂದು ಕಥೆ ಮುಂದುವರಿಸುತ್ತಿದ್ದಾಗ ಒಬ್ಬ ಹುಡುಗ ’ಅಂಕಲ್, ಅವರು ಬೆಣ್ಣೆಯನ್ನು ಏಕೆ ಹುಡುಕುತ್ತಿದ್ದರು, ಫ್ರಿಜ್ ಬಾಗಿಲು ತೆಗೆದು ನೋಡಿದ್ದರೆ ಅಲ್ಲೇ ಸಿಗುತ್ತಿರಲಿಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನೆ ಕೇಳಿದ್ದನ್ನು ಪುರೋಹಿತರು ನಗುತ್ತಲೇ ಇನ್ನೂ ಸ್ವಾರಸ್ಯವಾಗಿ ವಿವರಿಸಿ, ’ಇಂದಿನ ಮಕ್ಕಳು ಬಹಳ ಭಿನ್ನ ನಮ್ಮ ಕಾಲದವರ ಹಾಗಲ್ಲ’ ಎಂದು ಹೇಳಿದ್ದು ನೆನಪಿಗೆ ಬಂತು.ಇಂದಿನ ಮಕ್ಕಳ ಪ್ರಪಂಚ ಸಣ್ಣದು, ಆದರೆ ಅದರ ಒಳ ವಿಸ್ತಾರ ಬಹಳ ಹೆಚ್ಚು - ಅವರ ಆಟಿಕೆಗಳು ಬೇರೆ, ಅವರ ಪಾಠ-ಪುಸ್ತಕ ಪ್ರವಚನಗಳು ಬೇರೆ, ಅವರ ಬದುಕೇ ಭಿನ್ನ. ಕಂಪ್ಯೂಟರ್ ಕೀ ಬೋರ್ಡಿನಿಂದ ಹಿಡಿದು ವಿಡಿಯೋ ಗೇಮ್ ಆಟಗಳವರೆಗೆ, ಅವರು ಮಾತಿನಲ್ಲಿ ಬಳಸುವ ಶಬ್ದಗಳಿಂದ ಹಿಡಿದು ಅವರವರಲ್ಲೇ ಸಂವಹನಕ್ಕೆ ಬಳಸುವ ಮಾಧ್ಯಮಗಳವರೆಗೆ ಇಂದಿನ ಮಕ್ಕಳು ಬಹಳ ಭಿನ್ನ. ನಮ್ಮ ಪೋಷಕರು ನಾವು ಬೆಳೆಯುತ್ತಿದ್ದಾಗ ಅವರಿಗೂ ನಮಗೂ ಇದ್ದ ಅಂತರಕ್ಕಿಂತಲೂ ನಮಗೂ ನಮ್ಮ ಮಕ್ಕಳಿಗೂ ಇರುವ ಅಂತರ ಹೆಚ್ಚು ಎಂದರೆ ತಪ್ಪಾಗಲಾರದು. ನಮ್ಮ ತಲೆಯಲ್ಲಿ ಬಳಸಿ ಉಳಿದುಹೋದ ಪದಗಳಾದ - ಎತ್ತು ಏರಿ ಕಣ್ಣಿ ಮಿಣಿ ಕಡಗೋಲು ಮಜ್ಜಿಗೆ ಗಿಣ್ಣ ನೊಗ ಗೋಲಿ ಬುಗುರಿ ಚೆಂಡು ಚಿತ್ರ ಪರೀಕ್ಷೆ ಹಾಡು ಹಸೆ ಸ್ನಾನ - ಮೊದಲಾದವುಗಳಿಗೆ ಈಗಿನ ಮಕ್ಕಳ ತಲೆಯಲ್ಲಿ ಪರ್ಯಾಯ ಪದಗಳು ಬಂದಿರಬಹುದು ಅಥವಾ ಅವು ಉಪಯೋಗಕ್ಕೆ ಬಾರದೇ ಇರುವವಾಗಿರಬಹುದು. ಮೆಕ್ಯಾನಿಕಲ್ ಟೈಪ್‌ರೈಟರ್ ಎಂದರೆ ಏನು? ಎನ್ನುವವರಿಂದ ಹಿಡಿದು ತಮ್ಮಿಂದ ಕೇವಲ ಇಪ್ಪತ್ತೇ ಅಡಿ ದೂರದಲ್ಲಿರುವ ಗೆಳೆಯ-ಗೆಳತಿಯರೊಡನೆ ಕೇವಲ ಟೆಕ್ಸ್ಟ್ ಮೆಸ್ಸೇಜ್ ಸಂಭಾಷಣೆಯಲ್ಲೇ ನಿರತರಾಗಿದ್ದುಕೊಂಡು ಅದರ ಮಿತಿಯಲ್ಲೇ ತಮ್ಮ ಆಗುಹೋಗು ಅನಿಸಿಕೆಗಳನ್ನು ಹಂಚಿಕೊಳ್ಳುವವರು. ವಿಶ್ವದ ಎಲ್ಲ ಸಮಸ್ಯೆಗಳನ್ನೂ ಶಾಲಾ ಮಟ್ಟದಲ್ಲೇ ಇವರಿಗೆ ಪರಿಚಯಿಸಿ ಅದರ ಉತ್ತರ ಕಂಡುಹಿಡಿಯುವಂತೆ ಮಾಡುವ ಅಸೈನ್‌ಮೆಂಟ್‌ಗಳು ಇವರವಾಗಿರಬಹುದು. ತಮ್ಮ ಹಿರಿಯರು ಮನೆಗೆ ಬಂದವರು ಅತಿಥಿಗಳು ಮೊದಲಾದವರು ಯಾವುದೋ ಒಂದು ಶುಭ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ ಇವರು ಅದೇ ಹಾಲ್‌ನ ಒಂದು ಮೂಲೆಯ ಸೋಫಾದ ಮೇಲೆ ಕುಳಿತು ಹ್ಯಾಂಡ್‌ಹೆಲ್ಡ್ ಡಿವೈಸ್‌ನಿಂದ ಇಂದೇ ಪ್ರಪಂಚದ ಕೊನೆಯಾದೀತೇನೋ ಎಂಬ ತನ್ಮಯತೆಯಲ್ಲಿ ವಿಡಿಯೋ ಗೇಮ್‌ಗಳನ್ನು ಆಡುವವರು. ವಿಕಾಸವಾದದ ಮುನ್ನಡೆಯಾದಂತೆ ಇವರ ಮಿದುಳು ಪ್ರಚಂಡ ಇನ್‌ಫರ್ಮೇಷನನ್ನು ಸಂಸ್ಕರಿಸುವ ಹಾಗೂ ಒಂದೇ ಸಮಯದಲ್ಲಿ ಹಲವು ಕಾರ್ಯಗಳನ್ನು ಮಾಡುವ ಕ್ಷಮತೆಯನ್ನು ಹೊಂದಿರಬಹುದು ಅಥವಾ ವಿಡಿಯೋ ಗೇಮ್ ಆಡೀ ಆಡೀ ಇವರ ಕೈ ಬೆರಳುಗಳ ಸ್ನಾಯುಗಳು ಬಲಗೊಂಡು ಮುಂದೆ ಬ್ಲಾಕ್‌ಬೆರಿ ಉಪಯೋಗಿಸುವಲ್ಲಿ ನೆರವಾಗಬಹುದು ಅಥವಾ ಅದಕ್ಕೆಂದೇ ಹೊಸ ಸ್ನಾಯುಗಳ ಬೆಳವಣಿಗೆಯಾದರೂ ನನಗೇನೂ ಆಶ್ಚರ್ಯವಾಗೋದಿಲ್ಲ.ಆದರೆ ಇಂದಿನ ಮಕ್ಕಳನ್ನು ನೋಡಿದರೆ ಕಷ್ಟವಿದೆ ಎನ್ನಿಸುತ್ತೆ, ಅವರ ಬದುಕಿನ ಬಗ್ಗೆ ಅನುಕಂಪ ಖಂಡಿತ ಹುಟ್ಟುತ್ತೆ. ನಾವು ಎಂಭತ್ತರ ದಶಕದಲ್ಲಿ ಸಾಗರದಂತಹ ಪಟ್ಟಣಗಳಲ್ಲಿ ಪಿಯುಸಿ ಓದುತ್ತಿರುವಾಗ ನಮ್ಮ ಕ್ಲಾಸಿನಲ್ಲಿ ಒಂದಿಷ್ಟು ’ಮುಂದುವರೆದ’ ಕುಟುಂಬದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆ ಬರೆದು ಅದರ ಫಲಿತಾಂಶ ಬಂದು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುವ ಮೊದಲೇ ಮನೆಪಾಠಗಳಲ್ಲಿ ವ್ಯವಸ್ಥಿತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನನ್ನಂತಹ ಸಾಧಾರಣ ಹಳ್ಳಿಗಾಡಿನ ವಿದ್ಯಾರ್ಥಿಗಿಂತ ಬಹಳಷ್ಟು ಮುಂದಿರುತ್ತಿದ್ದರು. ಅದು ನನಗೆ ಆಗ ಆಶ್ಚರ್ಯ ತರಿಸಿತ್ತು. ಒಂದು ತರಗತಿಯ ಪರೀಕ್ಷೆಗಳು ಮುಗಿದ ಬಳಿಕ ನನ್ನಂತಹವರು ಅಜ್ಜ-ಅಜ್ಜಿಯ ಜೊತೆ ಸ್ನೇಹಿತರ ಜೊತೆ ಬೇಸಿಗೆ ರಜೆ ಕಳೆಯುವ ಸಂದರ್ಭಗಳಲ್ಲಿ ಮುಂದಿನ ತರಗತಿಗಳಾಗಲೀ ಬದುಕಿನ ಬಗ್ಗೆಯಾಗಲೀ ಯೋಚಿಸಿದ್ದಿರಲಾರೆವು, ಆದರೆ ’ಮುಂದುವರೆದ’ ವಿದ್ಯಾರ್ಥಿಗಳ ಜನರೇಷನ್ನ್ ಅಲ್ಲಿ ನಮಗೆ ವಿಶೇಷವಾಗಿತ್ತು, ಅದರಲ್ಲೂ ನಾವು ಯಾವ ನಿಟ್ಟಿನಲ್ಲಿ ಆಲೋಚಿಸಿಕೊಂಡರೂ ಅವರ ಎದುರಿಗೆ ನಮ್ಮ ಸ್ಪರ್ಧೆ ನೀರಸವಾಗುತ್ತಿತ್ತು. ಇಂದಿನ ಮಕ್ಕಳಿಗೆ ಎಲಿಮೆಂಟರಿ (ಪ್ರಾಥಮಿಕ) ಹಂತದಲ್ಲೆ ಮನೆ-ಪಾಠ (ಪೈವೇಟ್ ಟ್ಯೂಷನ್) ಆರಂಭವಾಗುತ್ತದೆ ಎಂದು ಕೇಳಿದಾಗ, ಅದರ ಬಗ್ಗೆ (ವಿರುದ್ಧವಾಗಿ) ಬೇಕಂತಲೇ ವಾದ ಮಾಡಿದಾಗ ನನ್ನನ್ನು ಮೃಗಾಲಯದ ಪ್ರಾಣಿಯನ್ನು ನೋಡುವ ಹಾಗೆ ಜನರು ನೋಡುವುದನ್ನು ನೆನಪಿಸಿಕೊಳ್ಳುತ್ತೇನೆ. ಅದಕ್ಕೇ ಹೇಳಿದ್ದು ಇಂದಿನ ಮಕ್ಕಳ ಬದುಕು ಕಷ್ಟ ಎಂದು. ನಮ್ಮ ಸರ್ವತೋಮುಖ ಬೆಳವಣಿಗೆ ಎನ್ನುವುದನ್ನು ಅದೆಷ್ಟರ ಮಟ್ಟಿಗೆ ಇಂದಿನ ಸ್ಪರ್ಧಾತ್ಮಕ ವ್ಯವಸ್ಥೆ ಆಧರಿಸುತ್ತದೆ ಎನ್ನುವುದು ಈ ಹೊತ್ತಿನ ಪ್ರಶ್ನೆ - ಅದರ ಬೆನ್ನ ಹಿಂದೆ ಹುಟ್ಟುತ್ತಿರುವುದೇ ಈ ಹೊತ್ತಿನ ತತ್ವ!ನನ್ನ ಬೆಳವಣಿಗೆ ಹೇಗೇ ಇರಲಿ ಇಂದಿನ ಬದುಕು ಯಾವ ರೀತಿಯಲ್ಲೇ ಇರಲಿ, ನನ್ನ ಬಾಲ್ಯವನ್ನು ಮಾತ್ರ ನಾನು ಯಾವಾಗಲೂ ಬೆಂಬಲಿಸುತ್ತೇನೆ. ನನ್ನ ಮಕ್ಕಳನ್ನು ಇಂದಿಗೆ ಹೋಲುವ ಹಾಗೆ ಅದೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸುವ ಹಾಗಿದ್ದರೆ ಎಂದು ಯೋಚಿಸುತ್ತೇನೆ. ನಮ್ಮ ನಡುವೆ ಇದ್ದ ಅವಿಭಕ್ತ ಕುಟುಂಬದ ವ್ಯವಸ್ಥೆಯ ಬೆನ್ನೆಲುಬಿನ ಮೇಲೆ ನಿಂತಿದ್ದ ನೀರು-ನಿಡಿ, ಪರಿಸರ-ನೆರೆಹೊರೆ, ನೆಂಟರು-ಇಷ್ಟರು, ಊರು-ಬಳಗ, ಸಂಪ್ರದಾಯ ಮೊದಲಾದವುಗಳನ್ನು ಇಂದಿನ ಮಕ್ಕಳ ಮನಸ್ಸಿಗೆ ಹೇಗೆ ಅನ್ವಯಿಸಬಹುದು ಎಂದು ಚಿಂತಿಸುತ್ತೇನೆ. ಮಕ್ಕಳು ಒಳ್ಳೆಯ ಶಾಲೆಗೆ ಸೇರಿವುದರಿಂದ ಹಿಡಿದು, ಒಳ್ಳೆಯ ಗ್ರೇಡು-ಮಾರ್ಕ್ಸ್‌ಗಳನ್ನು ಪಡೆಯುವವರೆಗೆ, ಅವರಿಗೆ ತಕ್ಕ/ಒಪ್ಪುವ/ದಕ್ಕುವ ಶಿಕ್ಷಣವನ್ನು ಆಧರಿಸುವವರೆಗೆ, ಮುಂದೆ ಉದ್ಯೋಗವನ್ನು ಕಂಡುಕೊಳ್ಳುವವರೆಗೆ, ಸಂಸಾರ ನಡೆಸಿಕೊಂಡು ಹೋಗುವವರೆಗೆ ಎಲ್ಲೆಲ್ಲಿ ನಮ್ಮ ಇನ್‌ಫ್ಲುಯೆನ್ಸ್‌ಗಳು ನಡೆಯುತ್ತವೆ ಎಂದು ಕೊರಗುತ್ತೇನೆ. ಮನೆ-ಪಾಠ, ಕೋಚಿಂಗ್ ಮೊದಲಾದವುಗಳನ್ನು ಕೊಟ್ಟು ಇವರನ್ನು ನಾವು ಮುಂದಿನ ಬದುಕಿಗೆ ತಯಾರು ಮಾಡುವುದು ನಮ್ಮ ಕೈಯಲ್ಲಿದೆಯೋ, ಅಥವಾ ಅವರೇ ತಮ್ಮ ತಮ್ಮ ದಾರಿ/ಗುರಿಯನ್ನು ರೂಪಿಸಿಕೊಳ್ಳುತ್ತಾರೋ, ನಮ್ಮ ಪೋಷಕರು ನಮ್ಮನ್ನು ಬೆಳೆಸಿದ ರೀತಿಯಲ್ಲಿ ನಾವು ಇವರನ್ನು ಬೆಳೆಸಲಾಗದಿದ್ದ ಮೇಲೆ ಇವರನ್ನು ನಾವು ಬೆಳೆಸುವ ರೀತಿಯೇ ಸರಿಯೆಂದು ನಮಗೆ ಗೊತ್ತಾಗುವುದು ಹೇಗೆ ಮತ್ತು ಎಂದು?

ವರ್ಚುವಲ್ ಪ್ರಪಂಚದ ಲೀಲೆ

ನನಗೆ ಅವಾಗಾವಾಗ ’ನೀವು ಆರ್ಕುಟ್‌ನಲ್ಲಿದ್ದೀರಾ?’, ’ಟ್ವಿಟ್ಟರ್ರ್ ನಲ್ಲಿದ್ದೀರಾ?’ ಮುಂತಾಗಿ ಪ್ರಶ್ನೆಗಳು ಬರ್ತಾನೇ ಇರ್ತವೆ. ನಾನು ಅಂತಹ ಪ್ರಶ್ನೆಗಳಿಗೆ ’ಟು ಡು ವಾಟ್?’ ಅನ್ನೋ ಮತ್ತೊಂದು ಪ್ರಶ್ನೆ ಎಸೆದು ಉತ್ರ ಕೊಡ್ತೀನಿ. ನನಗೆ ಸಿಗೋ ಎಲ್ಲ ಉತ್ತರ ಅಥವಾ ಸಮಜಾಯಿಷಿಗಳೂ ಇವೆಲ್ಲಾ ಸೋಷಿಯಲ್ಲ್ ನೆಟ್‌ವರ್ಕಿಂಗ್ ಸೈಟ್‌ಗಳು, ಅಲ್ಲಿಗೆ ಬಂದೂ ಹೋಗಿ ಮಾಡೋದ್ರಿಂದ ನಿಮ್ಮ ನಿಮ್ಮ ನೆಟ್‌ವರ್ಕ್ ಅಭಿವೃದ್ಧಿ ಆಗುತ್ತೆ ಅನ್ನೋ ರೀತಿ ಇರುತ್ವೆ. ನಾನಂತೀನಿ, ’ನಮ್ಮ ಸುತ್ ಮುತ್ಲು ಇರೋರ ಜೊತೆ ಬೆರೆತುಕೊಂಡಿರೋದೇ ದೊಡ್ಡ ಸವಾಲಾಗಿದೆ ಇನ್ನು ಈ ವರ್ಚುವಲ್ ಪ್ರಪಂಚದವರ ಜೊತೆ ಏಗೋದು ಯಾರೂ ಅಂತ?’ನೀವೇ ಯೋಚ್ನೆ ಮಾಡಿ, ಎಷ್ಟೊಂದು ಸೋಷಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳಿವೆ ಅಂತಾ - ಆರ್ಕುಟ್ಟು, ಫೇಸ್‌ಬುಕ್, ಮೈಸ್ಪೇಸ್, ಟ್ವಿಟ್ಟರ್ ಮುಂತಾಗಿ. ಇವುಗಳಿಗೆಲ್ಲ ಒಂದೊಂದು ಅಕೌಂಟ್ ಕ್ರಿಯೇಟ್ ಮಾಡಿಕೊಂಡಿರಬೇಕು, ಅವಕ್ಕೆಲ್ಲ ಒಂದೊಂದು ಯೂಸರ್ ಐಡಿ ಪಾಸ್‌ವರ್ಡ್. ಜೊತೆಗೆ ಅಲ್ಲಿ ಬಂದು ಹೋಗೋರ ಜೊತೆಯಲ್ಲ ಸಂಭಾಷಣೆ ಮಾಡುತ್ತಾ ಇರೋದಕ್ಕೆ ಟೈಮಾದ್ರೂ ಯಾರ ಹತ್ರ ಇದೆ ಅನ್ಸೋಲ್ವ? ನಾನು ತಮಾಷೆಯಾಗಿ ಹೇಳೋದೇನು ಅಂದ್ರೆ, ಒಂದಲ್ಲ ಒಂದು ದಿನ ಈ ಸೈಟುಗಳೆಲ್ಲ ಗೂಗಲ್ಲೋ, ಮೈಕ್ರೋಸಾಫ್ಟ್‌ನವರೋ ಮರ್ಜ್ ಮಾಡೋ ಕಾಲ ಬರುತ್ತೆ, ಆಗ ನಾನು ಒಂದೇ ಒಂದು ಅಕೌಂಟ್ ಓಪನ್ ಮಾಡಿಕೊಂಡಿರ್ತೀನಿ ಅಂತ.ಇನ್ನೂ ಮುವತ್ತರ ಹರೆಯದಲ್ಲಿದ್ದುಕೊಂಡೇ ನಾನು ಇಷ್ಟೊಂದು ಔಟ್‌ಡೇಟೆಡ್ ಆಗಿ ಹೋದ್ತಾ ಅನ್ನೋ ಹೆದರಿಕೆ ಒಂದು ಕಡೆ. ಛೇ, ಪ್ರಪಂಚದ ಆರು ಬಿಲಿಯನ್ ಜನರಲ್ಲಿ ಕನಿಷ್ಠ ಮೂರು ಬಿಲಿಯನ್ನ್ ಜನರಾದ್ರೂ ಇನ್ನೂ ಫೋನಿನ ಡಯಲ್ ಟೋನ್ ಕೇಳದೇ ಇರೋ ಪರಿಸ್ಥಿತಿ ಇರೋವಂತ ಸಮಯದಲ್ಲಿ ನನ್ನಂಥವರು ಔಟ್‌ಡೇಟೆಡ್ ಅಗೋದಾದ್ರೂ ಹೇಗೆ ಅನ್ನೋ ಸಮಾಧಾನ ಜೊತೆಗೆ. ಇ-ಮೇಲ್, ಫೋನ್ ಹಾಗೂ ಮುಖತಃ ಭೇಟಿ ಮಾಡುವ ಸಂದರ್ಭಗಳಲ್ಲಿ ನಾವು ನಮ್ಮನ್ನು ಚೆನ್ನಾಗಿ ತೊಡಗಿಸಿಕೊಂಡ್ರೆ ಸಾಕು ಸಂಬಂಧಗಳು ಬೆಳೆಯೋದಕ್ಕೆ, ಇವಿಷ್ಟರ ಜೊತೆಗೆ ಅಲ್ಲಿ-ಇಲ್ಲಿ ವೆಬ್ ಸೈಟ್‌ಗಳಲ್ಲಿ ಹೋಗಿ ’ಇಂದು ನಾನು ಇಂಥಾ ತಿಂಡಿ ತಿಂದೆ’, ’ಅವನು ಅಲ್ಲಿ ಅಷ್ಟೊಂದು ರನ್ ಹೊಡೆದ’ ಅಂತೆಲ್ಲ ’ವಾಲ್’ ಮೇಲೆ ಬರೆದುಕೊಳ್ಳೋದ್ರಿಂದ ಏನ್ ಪ್ರಯೋಜನ ಅಂತ ನನಗಿನ್ನೂ ಕನ್ವಿನ್ಸ್ ಆಗಿಲ್ಲ ನೋಡಿ.ನಾನು ಹಳೇ ಕಾಲದವನು ಆಗೋ ಕಾಲ ಹತ್ರ ಬರ್ತಾ ಇದೆ, ಅಂತ ನೀವೆಲ್ಲ ನಗಬಹುದು. ನನ್ನ ಪ್ರಕಾರ, ಕೈಯಲ್ಲಿರೋ ಐದು ಸಾವಿರ ಡಾಲರ್ ವಾಚಾಗ್ಲಿ ಅಥ್ವಾ ಬೆಂಗಳೂರಿನಲ್ಲಿ ಐವತ್ತು ರೂಪಾಯಿಗೆ ಸಿಗೋ ವಾಚಾಗ್ಲಿ ಮುಖ್ಯವಲ್ಲ್ - ಸಮಯವನ್ನ ಚೆನ್ನಾಗಿ ಬಳಸೋರು, ಅವರ ಕೈಯಲ್ಲಿ ಯಾವ ವಾಚ್ ಇದ್ರೂ ಇಲ್ದೇ ಇದ್ರೂ, ಸಮಯದ ಉಪಯೋಗವನ್ನು ಚೆನ್ನಾಗಿ ಮಾಡಿಕೊಳ್ತಾರೆ. ಅದೂ ಅಲ್ದೇ, ಈ ಸಂಬಂಧಗಳು ಅನ್ನೋದೆಲ್ಲ, ತೋಟದಲ್ಲಿ ಒಂದು ಗಿಡ ನೆಟ್ಟ ಹಾಗೆ, ಅವುಗಳನ್ನು ಚೆನ್ನಾಗಿ ಬೆಳೆಸಿ, ಪೋಷಿಸದೇ ಹೋದ್ರೇ ಸತ್ತೇ ಹೋಗ್ತಾವೆ. ಹಾಗಿರಬೇಕಾದ್ರೆ, ನನ್ನ ಸುತ್ತು ಮುತ್ಲೂ ಇರೋ ಸಂಬಂಧಗಳನ್ನು ನಾನು ಆತುಕೊಳ್ಳಲೋ ಅಥ್ವಾ ಜೊತೆಗೆ ಒಂದಿಷ್ಟು ವರ್ಚುವಲ್ಲ್ ಪ್ರಪಂಚದ ಲಿಂಕುಗಳನ್ನೂ ಪೋಣಿಸಿಕೊಳ್ಳಲೋ? ಅನ್ನೋ ಸಂಧಿಗ್ಧ ಬೇರೆ.ಇಂಟರ್‌ನೆಟ್ ಈಗ ತಾನೆ ಕಣ್ಣು ತೆರೀತಾ ಇದೆ, ಕೇವಲ ಒಂದೂವರೆ ದಶಕದಷ್ಟು ಹಳೆಯದಾದ ಈ ತಂತ್ರಜ್ಞಾನಕ್ಕೆ ಇನ್ನೂ ದೊಡ್ಡ ಭವಿಷ್ಯವಿದೆ. ಈ ಇಂಟರ್‌ನೆಂಟ್ ಸೈಟ್‌ಗಳು ನಮ್ಮೂರಿನ ಪಬ್ಲಿಕ್ ಲೈಬ್ರರಿಗಳಾಗೋ ಮುನ್ನ ಬಹಳಷ್ಟು ಬೆಳವಣಿಗೆ ಖಂಡಿತ ಇದೆ. ನಾವೆಲ್ಲ ಮುದುಕರಾಗೋಷ್ಟೋತ್ತಿಗೆ ಇನ್ನೂ ಏನೇನು ಬದಲಾವಣೆಗಳು ಬಂದು ಹೋಗ್ತಾವೋ ಕಾಣೆ. ನಮ್ಮ ಸುತ್ತು ಮುತ್ಲೂ ಇರೋ ಖಾಲಿ ಜಾಗಗಳ್ಳಲ್ಲಿ - ಅಂದ್ರೆ ಅದು ರೆಫ್ರಿಜರೇಟರ್ರಿನ ಸೈಡ್ ಆಗಿರಬಹುದು, ಆಥವಾ ಅಟ್ಟದ ಮೇಲಿನಿಂದ ಇಳಿಯುವಾಗ ಸಿಗೋ ಗೋಡೆ ಮೇಲಿನ ಖಾಲಿ ಜಾಗವಾಗಬಹುದು, ಅಥವಾ ಕಾರಿನ ವಿಂಡ್‌ಶೀಲ್ಡ್ ಇನ್ನು ಮುಂತಾದ ಫ್ಲಾಟ್ ಜಾಗಗಳು ಫ್ಲಾಟ್‌ಸ್ಕ್ರೀನ್ ಆಗಿ ಮಾರ್ಪಾಡಾಗೋ ಕಾಲ ದೂರವಿಲ್ಲ. ವರ್ಚುವಲ್ಲ್ ಆಗಲಿ ರಿಯಲ್ ಆಗಲಿ ಈ ಪ್ರಪಂಚ ಇಷ್ಟೇ, ಯಾವಾಗ್ಲೂ ಬೆಳಿತಾನೇ ಇರುತ್ತೆ. ಇವುಗಳಿಗೆಲ್ಲ ಸ್ಪಂದಿಸೋದಕ್ಕೆ, ಇವುಗಳ ಜೊತೆ ಏಗೋದಕ್ಕೆ ಸಮಯ ಮಾತ್ರ ಸಿಗೋದಿಲ್ಲ ಅಷ್ಟೇ.

Thursday, January 28, 2010

'ಚಹಾ ಮತ್ತು ಪೇಪರ್ '




ನಾನು ದಿನಪತ್ರಿಕೆಗಳನ್ನು ಓದಲು ಆರಂಭಿಸಿದ್ದು ಬಹುಷಃ ಆರನೆ ಅಥವಾ ಏಳನೇ ಇಯತ್ತೆಯಲ್ಲಿದ್ದಾಗ ಅನಿಸುತ್ತೆ. ಆಗ ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ "ಸಂಯುಕ್ತ ಕರ್ನಾಟಕ" (ಸ.ಕ). ಮುಂಜಾನೆ ಲುಂಗಿ ಬನಿಯನ್ನಿನಲ್ಲಿ ಆರಾಮ ಕುರ್ಚಿಯಲ್ಲೋ, ಮನೆ ಮುಂದಿನ ಕಟ್ಟೆಯಲ್ಲೋ ಕೂತು ಒಂದು ಕೈಯಲ್ಲಿ ಛಾ (ಚಹಾ), ಇನ್ನೊಂದು ಕೈಯಲ್ಲಿ ಸ.ಕ ಹಿಡಿದುಕೊಂಡು ಕೂತಿರುವ ದೃಶ್ಯ ಸಹಜವಾಗಿತ್ತು. ದೊಡ್ಡವನಾದ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು, ಕೈಯಲ್ಲಿ ಒಂದು ಚಹಾದ ದೊಡ್ಡ ವಾಟಗಾ (ಲೋಟ) ಹಿಡಿದುಕೊಂಡು, ಸ.ಕ ಓದುತ್ತ ಮಂಜಾನೆಯನ್ನು ಆರಂಭಿಸುವ ಕನಸು ಕಾಣುತ್ತಿದ್ದೆ. ಮುಂದೆ ಹಾಸ್ಟೆಲಿಗೆ ಸೇರಿದಾಗ ಆ ಕನಸು ನಿಜವಾಗಿ ಬಿಟ್ಟಿತ್ತು. ಒಂದು ಉದ್ದ ಲೋಟದ ತುಂಬ ನೀರು ಚಹಾ ತುಂಬಿಕೊಂಡು ಒಬ್ಬೊಬ್ಬರು ಒಂದೊಂದು ಪುಟವನ್ನು ಹಂಚಿಕೊಂಡು ಇಬ್ಬಿಬ್ಬರು, ಮೂವರು ಸೇರಿ ಸ.ಕ ಓದುತ್ತಿದ್ದೆವು.ಓದು ಮುಗಿಸಿ ಕೆಲಸ ಸೇರಿದಾಗ ಬೆಂಗಳೂರನಲ್ಲಿ ದಿನಾ ಎರಡೆರಡು ದಿನಪತ್ರಿಕೆಗಳು, ಪ್ರಜಾವಾಣಿ ಮತ್ತು ಟೈಪಾಸ್ ಇಂಡಿಯಾ (ಟೈಮ್ಸ್ ಆಫ್ ಇಂಡಿಯಾ). ಬಹುಷಃ ಆರು ಆರುವರೆಗೇ ಸೈಕಲ್ಲಿನ ಮೇಲೆ ಎಲ್ಲ ಪತ್ರಿಕೆ ಹಿಡಿದುಕೊಂಡು ಪೇಪರಿನ ಹುಡುಗ ಬಾಗಿಲ ಸಂದಿಯಿಂದ ಪತ್ರಿಕೆಗಳನ್ನು ಹಾಕಿ ಹೋಗುತ್ತಿದ್ದ. ಖರೆ ಹೇಳುತ್ತೇನೆ, ನಾನು ಮೈಸೂರಿನಲ್ಲಿರುವವರೆಗೂ ಆ ಪೇಪರ್ ಹಾಕುವ ಹುಡುಗನ ಮುಖವನ್ನೇ ನೋಡಿಲ್ಲ (ನಾನು ಎಂದೂ ಏಳುಗಂಟೆಗೆ ಮೊದಲು ಎದ್ದೇ ಇಲ್ಲ). ತಿಂಗಳಿಗೊಮ್ಮೆ ಪೇಪರ್ ಕಾಕುವ ಯಜಮಾನ ಬಂದು ದುಡ್ಡು ತೆಗೆದುಕೊಂಡು ಹೋಗುತ್ತಿದ್ದ. ಸಮಯಕ್ಕೆ ಸರಿಯಾಗಿ ದಿನಪತ್ರಿಕೆಗಳು, ವಾರದ ದಿನಕ್ಕೆ ಸರಿಯಾಗಿ ತರಂಗ, ಸುಧಾ, ಕರ್ಮವೀರ, ಹಾಯ್ ಬೆಂಗಳೂರು, ಲಂಕೇಶ ಪತ್ರಿಕೆಗಳು. ಇಲ್ಲಿ ಕೂಡ ಬೆಳಿಗ್ಗೆ ಎದ್ದ ತಕ್ಷಣ ಎರಡೇ ನಿಮಿಷದಲ್ಲಿ ಚಹಾ ತಯಾರಾಗುತ್ತದೆ, ಥೇಟ್ ಅಲ್ಲಿನಂತೇ! ಆದರೆ ಮುಂಬಾಗಿಲ ಅಡಿಯಲ್ಲಿ ಪೇಪರು ಇರುವದಿಲ್ಲ. ಯಾಕೆಂದರೆ ಇಲ್ಲಿ ಆ ಒಂದು ಕಲ್ಚರೇ ಇಲ್ಲ. ಅಷ್ಟೇ ಅಲ್ಲ, ಮನೆಗೆ ಏನಾದರೂ ಪೇಪರ್ ಹಾಕಬೇಕೆಂದರೆ ಇಲ್ಲಿ ಪೇಪರಿನ ದುಡ್ಡಿನ ಜೊತೆ, ಡೆಲಿವರಿ ದುಡ್ಡನ್ನು ಕೊಡಬೇಕು! ಅಲ್ಲಿ, ಒಂದು ದಿನ ಪತ್ರಿಕೆ ತಡವಾಗಿ ಬಂದರೆ ಗುರ್ ಎನ್ನುತ್ತಿದ್ದೆವು, ಒಂದು ದಿನ ಲಂಕೇಶ್ ಪತ್ರಿಕೆ ಮನೆಗೆ ಹಾಕುವುದು ತಡವಾದರೆ, ನಾನೇ ಅಂಗಡಿಯಿಂದ ತಂದು ಬಿಟ್ಟು, ಮನೆಗೆ ಮುಂದಿನ ದಿನ ಹಾಕಿದ ಲಂಕೇಶ್ ಪತ್ರಿಕೆಯನ್ನು ವಾಪಸ್ಸು ಕಳಿಸುತ್ತಿದ್ದೆ!ಇಲ್ಲಿ ಕಂಪ್ಯೂಟರ್ ಮುಂದೆ ಕೂತು, ನ್ಯೂಸ್ ಓದುವ ವಿಚಿತ್ರ ಅಭ್ಯಾಸ ರೂಢಿಯಾಗಿದ್ದರೂ, ಮುಂಜಾನೆ ಕಾಲ ಮೇಲೆ ಕಾಲು ಹಾಕಿಕೊಂಡು ಒಂದು ಕೈಯಲ್ಲಿ ಕನ್ನಡ ದಿನಪತ್ರಿಕೆ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಚಹಾದ ಲೋಟ ಹಿಡಿದುಕೊಂಡು ಕೂಡುವ ಸುಖ ನೆನೆದು ಬೇಸರವಾಗುತ್ತೆ. ಅಷ್ಟು ದಿನ ಪೇಪರ್ ಹಾಕುವ ಹುಡುಗರನ್ನು ಒಂದಿನವೂ ಮಾತಾಡಿಸದೇ ಹೋದದ್ದಕ್ಕೆ ಮನಸ್ಸು ಖಿನ್ನವಾಗುತ್ತೆ.

ಹುಡುಗಿಯರು ಯಾಕಿಂಗೆ ......?






ಏನ್ ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲ.. ನನ್ ನಂಬರ್ ಅವಳಿಗೆ ಹೇಗೆ ಸಿಕ್ಕಿತೋ ಗೊತ್ತಿಲ್ಲ.. ಅವಳು ಯಾರು ಎನ್ನುವುದು ಮೊದಲೇ ಗೊತ್ತಿಲ್ಲ. ಸಿಕ್ಕಾಪಟ್ಟೆ ಕಾಡ್ತಾಳೆ ಸಾರ್.. ದಿನಕ್ಕೆ ನೂರಕ್ಕಿಂತಲೂ ಹೆಚ್ಚು ಮೆಸೇಜ್ ಮಾಡ್ತಾಳೆ, ಫೋನ್ ಮಾಡಿದರೆ ಇಡುವುದೇ ಇಲ್ಲ. ಹೊತ್ತಲ್ಲದ ಹೊತ್ತಲ್ಲಿ ಫೋನ್, ಮಾತನಾಡಲೇಬೇಕು ಅಂತ ಹಠ.. ನಂಗೆ ನಿಜಕ್ಕೂ ಭಯ ಆಗ್ತಿದೆ ಸಾರ್.. ಅವಳ ಕಾಟದಿಂದ ತಪ್ಪಿಸೋಣ ಅಂತ ಮೊಬೈಲ್ ಸ್ವಿಚ್ ಆಫ್ ಮಾಡಿದ್ರೆ ಆಫೀಸು, ಮನೆಯ ಲ್ಯಾಂಡ್ ಲೈನ್ಗೆ ಕಾಲ್ ಮಾಡ್ತಾಳೆ.. ಮಾತನಾಡಲೂ ಅಲ್ಲ, ಬಿಡಲೂ ಅಲ್ಲ. ಯಾವ ಕ್ಷಣದಲ್ಲಿ ಅವಳ ಕೈಯಲ್ಲಿ ಸಿಕ್ಕಿ ಹಾಕಿಕೊಂಡೆನೋ.. ಯಾವಾಗ ಮುಕ್ತಿ ಪಡೀತೀನೋ.. ನಂಗೆ ಗೊತ್ತಿಲ್ಲ ಸಾರ್.. ಇನ್ ಯಾವತ್ತೂ ದೇವರಾಣೆಗೂ ಹುಡುಗೀರ ಫೋನ್ ರಿಸೀವ್ ಮಾಡೊಲ್ಲ..- ಹೀಗಂತ ಒಬ್ಬ ಹುಡುಗ ವಸ್ತುಶ: ಅಳ್ತಾನೆ ಅಂದ್ರೆ ನೀವು ನಂಬ್ತೀರಾ?ನಂಬಲೇ ಬೇಕು.. ಇದು ಒಬ್ಬಿಬ್ಬರು ಹುಡುಗರ ಕತೆಯಲ್ಲ. ಈ ಚಕ್ರವ್ಯೂಹದೊಳಗೆ ಸಿಕ್ಕಿಹಾಕಿಕೊಂಡವರಿಗಷ್ಟೇ ಗೊತ್ತು ಅದರ ಸಂಕಟ.ಹಾಗಂತ, ಈ ಹುಡುಗಿ ಕಾಲ್ ಮಾಡ್ತಾ ಇರೋದು ಒಬ್ಬ ಹುಡುಗನಿಗೆ ಮಾತ್ರ ಅಲ್ಲ, ಹಲವು ಹುಡುಗರಿಗೆ. ಇದೇ ಗೆಳೆಯ ಇನ್ನೊಬ್ಬನಲ್ಲಿ ತನ್ನ ಕತೆ ಹೇಳಿಕೊಂಡಾಗ ಅವನಿಗೂ ಅದೇ ರೀತಿ, ಅದೇ ಹುಡುಗಿ. ಮತ್ತೊಬ್ಬನದೂ ಅದೇ ಕತೆ. ಇನ್ನೆಷ್ಟೋ!ಮತ್ತೊಬ್ಬ ಹುಡುಗಿಯಂತೂ ಬೆನ್ನು ಬೆನ್ನಿಗೆ ಮಿಸ್ ಕಾಲ್ ಕೊಟ್ಟು ಕಾಟ ಕೊಡುವ ಜಾತಿ. ಯಾರಿದು ಹೀಗೆ ಮಿಸ್ ಕಾಲ್ ಕೊಡ್ತಾ ಇದ್ದಾರಲ್ಲಾ ಅಂತ ಕಾಲ್ ಮಾಡಿದ್ರೆ `ನಿಂಗೆ ನನ್ ನಂಬರ್ ಯಾರ್ ಕೊಟ್ರು.. ನೀವು ಎಲ್ಲಿ ಕೆಲ್ಸ ಮಾಡೋದು' ಎಂದು ಪ್ರಶ್ನಿಸ್ತಾಳೆ. ಕಾಲ್ ಕೊಟ್ಟಿದ್ದು ನೀವಲ್ವಾ ಅಂತ ಕೇಳಿದರೆ ಇಲ್ಲವೇ ಇಲ್ಲ ಎನ್ನುವ ವಾದ. ಒಮ್ಮೆ ಕನೆಕ್ಷನ್ ಸಿಕ್ಕಿದರೆ ಸಾಕು ನಂತರ ಅದನ್ನು ಹೇಗೆ ಹಿಡಿದಿಟ್ಟು ಮುಂದುವರಿಸಬೇಕು ಎನ್ನುವುದು ಅವಳಿಗೆ ಚೆನ್ನಾಗಿ ಗೊತ್ತು.ನಿನ್ನೆ ಮೊನ್ನೆವರೆಗೆ ಹುಡುಗಿಯರು ತಮ್ಮ ಮನೆ ನಂಬರ್, ಮೊಬೈಲ್ ನಂಬರ್ ಯಾವ ಹುಡುಗನಿಗೂ ಸಿಕ್ಕದಿರಲಿ ಅಂತ ಕಾದಿಡ್ತಾ ಇದ್ದರು. ತೀರಾ ಆತ್ಮೀಯ ವಲಯದ ಹುಡುಗರಿಗೆ ಮಾತ್ರ ಅದು ಲಭ್ಯ. ಆ ನಂಬರ್ ಸಿಕ್ಕಿದವನು ತುಂಬ ವಿಶ್ವಾಸಿಗ ಅಂತಾನೇ ಅರ್ಥ. ಅದಕ್ಕೆ ಕಾಲ್ ಮಾಡೋದು, ರಿಸೀವ್ ಮಾಡೋದ್ರಲ್ಲೂ ತುಂಬ ನಿಯತ್ತು. ಆದರೆ, ಈಗ ನೋಡಿದರೆ ಅಪರಿಚಿತ ಹುಡುಗಿಯರ ಕೈಗೆ ಮೊಬೈಲ್ ನಂಬರ್ ಸಿಗದಿರಲಿ ಅಂತ ಹುಡುಗರು ಹಾರೈಸಬೇಕಾದ ಸ್ಥಿತಿ.ಫೋನ್ ಮಾಡೋ ಹುಡುಗಿಯರ ಬೇಡಿಕೆಗಳೂ ವಿಚಿತ್ರ.. ಸಣ್ಣ ಧೈರ್ಯದ ಹುಡುಗರಿಗೆ ಭಯ ಹುಟ್ಟಿಸುವಂತದ್ದು!ಪೇಪರ್ನಲ್ಲಿ ಬರೋ ಮೊಬೈಲ್ ನಂಬರುಗಳಿಗೆ , ಹೇಗೋ ಸಿಗುವ ಸಂಖ್ಯೆಗಳಿಗೆ ಫೋನ್ ಮಾಡುವವರು ಒಂದು ಕಡೆ ಇದ್ದರೆ ತಮ್ಮ ನಂಬರನ್ನು ಪೇಪರಿನಲ್ಲಿ ಹಾಕಿ ಎಂದು ಕಾಡುವ ಹುಡುಗಿಯರೂ ಇದ್ದಾರೆ ಎಂದರೆ ಆಶ್ಚರ್ಯವಾದೀತು ಅಲ್ಲವೇ?ಇದಿಷ್ಟೇ ಅಲ್ಲ, ಇವತ್ತು ಖಾಸಗಿ ಎಫ್ಎಂ ಚಾನೆಲ್ ಗಳು ನಡೆಸುವ ಅಷ್ಟೂ ಕಾರ್ಯಕ್ರಮಗಳು, ರೇಡಿಯೋ ಚಾಟ್ಗಳಲ್ಲಿ ಭಾಗವಹಿಸುವವರಲ್ಲಿ, ಕಾದು ಫೋನ್ ಮಾಡೋರಲ್ಲಿ 85 ಶೇ. ಹುಡುಗಿಯರು. ಅದರಲ್ಲೂ ಮಧ್ಯರಾತ್ರಿಯ ನಂತರವೂ ಪಿಸುಮಾತಿನ ಮೂಲಕ ನಿವೇದನೆ ಮಾಡಿಕೊಳ್ಳುವ ಪರಿ, ಪ್ರೀತಿ-ಪ್ರೇಮದ ಬಗ್ಗೆ ಅವರು ಆಡೋ ಮಾತು, ಹುಡುಗರನ್ನು ಹೇಗೆ ಒಲಿಸಿಕೊಳ್ಳಬೇಕು ಎಂದು ಕೇಳುವಾಗಿನ ನಿರ್ಲಜ್ಜತೆಗಳು ಅಬ್ಬಾ ಎಂದು ಹುಬ್ಬೇರಿಸುವಂತೆ ಮಾಡುತ್ತಿವೆ.ನೆನಪಿರಲಿ, ಗುರುತೇ ಪರಿಚಯವಿಲ್ಲದ ಹುಡುಗರ ಜತೆ ಗಂಟೆಗಟ್ಟಲೆ ಮಾತನಾಡುವ, ಮೆಸೇಜುಗಳ ಮೇಲೆ ಮೆಸೇಜ್ ಬಿಡುವ ಈ ಹುಡುಗಿಯರು ಮನೆಗೆ ಬಂದರೆ ಪರಮ ಮೌನಿಗಳಾಗಿರುತ್ತಾರೆ. ಅಪ್ಪ-ಅಮ್ಮನಲ್ಲೂ ಮಾತಿಲ್ಲ. ಅಜ್ಜ-ಅಜ್ಜಿಯಂತೂ ಇಲ್ಲವೇ ಇಲ್ಲ. ಕೊನೆಗೆ ತಂಗಿಯ ಜತೆಗೂ. ಅವರ ಮಾತು ಏನಿದ್ದರೂ ಫೋನ್ನಲ್ಲೇ. ಅಲ್ಲಿ ಮೊದಲು ಸಿಲ್ಲಿ ಸಿಲ್ಲಿ ಮಾತು, ತುಂಬ ಸಂತೋಷ, ನಂತರ ದು:ಖ, ಬಳಿಕ ಜೋರು ಅಳು.. ಹೀಗೆ ವೈವಿಧ್ಯತೆಗಳು. ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ಬೇರೆ ಯಾರೂ ಇಲ್ಲವೇ ಇಲ್ಲ ಎನ್ನುವಷ್ಟು ಏಕಾಂಗಿತನ!ಮಾತೆತ್ತಿದರೆ ಸಿಡುಕು, ಏನು ಕೇಳಿದರೂ ಗೊತ್ತಿಲ್ಲ ಎಂಬ ಉತ್ತರ, ನನ್ನನ್ನು ಏನೂ ಕೇಳಬೇಡಿ ಎನ್ನುವ ದಾಷ್ಟ್ರ್ಯ. ಮನೆಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡರೆ ಮುಗಿಯಿತು... ಅವರದೇ ಲೋಕ. ಅವರ ಮೊಬೈಲ್ಗಳನ್ನು ಯಾರೂ ಮುಟ್ಟುವಂತಿಲ್ಲ... ಬಂದ ಕಾಲ್ಗಳನ್ನು ರಿಸೀವ್ ಮಾಡುವಂತಿಲ್ಲ!ಹುಡುಗಿಯರು ಯಾಕೆ ಹೀಗೆ ಔಟ್ಸ್ಪೋಕನ್ ಆಗುತ್ತಿದ್ದಾರೆ, ಯಾಕೆ ಎಲ್ಲ ಪರಿಧಿಗಳನ್ನು ಮೀರುತ್ತಿದ್ದಾರೆ ಎನ್ನುವುದಕ್ಕೆ ಉತ್ತರಗಳಿಲ್ಲ. ಬಹುಶ: ಸಿಕ್ಕಿರುವ ಅತಿಯಾದ ಸ್ವಾತಂತ್ರ್ಯ, ಕಾಲೇಜಿಗೆ, ಉದ್ಯೋಗಕ್ಕೆ ಹೋಗುವ ಮಕ್ಕಳನ್ನು ನಿಯಂತ್ರಿಸಲಾಗದ ಹೆತ್ತವರ ಅಸಹಾಯಕತೆ, ಮನೆ ಬಿಟ್ಟು ಹೊರಗಿರುವ ಹುಡುಗಿಯರಿಗೆ ಸಿಕ್ಕಿರುವ ಮುಕ್ತತೆಗಳೇ ಕಾರಣಗಳಿರಬಹುದು. ಜತೆಗೆ ಭಾವನೆಗಳನ್ನು ಹಂಚಿಕೊಳ್ಳಬೇಕೆಂಬ ಆತುರ, ಯಾರಾದರೂ ಸರಿ ಎಂಬ ಅವಸರಗಳು ಅವರನ್ನು ಈ ದಾರಿಗೆ ಎಳೆದು ತರುತ್ತಿವೆಯಾ? ಅವರು ಇದೇ ರೀತಿ ಮುಂದುವರಿದರೆ ಎಂಥಂಥದೋ ಕೈಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಕಾದ ಸ್ಥಿತಿ ಬಂದರೆ ಆಗ ಅವರನ್ನು ರಕ್ಷಿಸುವವರು ಯಾರು?ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಾವು ಯೋಚಿಸಬೇಕಾದ ಗಂಭೀರ ಪ್ರಶ್ನೆಗಳಿವು.

"ಮೊದಲು ಅಪ್ಪ ಅಮ್ಮನಿಗೆ ಬುದ್ದಿ ಹೇಳಿ "

ಬ್ರೂ ಕಾಫಿ ಸ್ವಾದ-ತಾಜಾತನದ ಬಗ್ಗೆ ಒಂದು ಕಮರ್ಷಿಯಲ್ ಅಡ್ವರ್‌ಟೈಸ್‌ಮೆಂಟು ಉದಯ ಟಿವಿಯಲ್ಲಿ ಬರುತ್ತೆ, ಅದರಲ್ಲಿ ನವದಂಪತಿಗಳನ್ನು ಅವರ ಮನೆಯಲ್ಲಿ ಸಂದರ್ಶಿಸಲೆಂದು ಹತ್ತಿರದ ಸಂಬಂಧಿಕರು ಬಂದಿರುತ್ತಾರೆ, ಆಧುನಿಕ ಉಡುಪಿನಲ್ಲಿರುವ ಯುವತಿ ಮನೆಯನ್ನು ಕಿಟಕಿಯಿಂದಲೇ ಪ್ರವೇಶ ಮಾಡಿ ಮನೆಗೆ ಬಂದವರ ಸಮಾಧಾನಕ್ಕೆ ಹಾಗೂ ಅವರಿಗೆ ಆಶ್ಚರ್ಯವಾಗುವಂತೆ ಕೂಡಲೇ ಟ್ರೆಡಿಷನಲ್ ಡ್ರೆಸ್‌ಗೆ ತನ್ನನ್ನು ತಾನು ಬದಲಾಯಿಸಿಕೊಳ್ಳುವುದನ್ನು ತೋರಿಸುತ್ತಾರೆ. ಕೈ ಯಲ್ಲಿ ಕಾಫಿ ಕಪ್ ಹಿಡಿದುಕೊಂಡು ಬರುವುದು ಅದರ ಜೊತೆಗೆ ಸೇರಿರುತ್ತೆ. ಆ ವಿಡಿಯೋ ತುಣುಕಿನ ಸಂದೇಶವೇನೇ ಇರಲಿ, ದೂರದ ನನಗೆ ನಮ್ಮ ದೇಶದಲ್ಲಿನ ಗೊಂದಲ ಒಡನೆಯೇ ನೆನೆಪಿಗೆ ಬಂತು. ಅದೇ ನಮ್ಮಲ್ಲಿನ ಜನರೇಶನ್ ಗ್ಯಾಪ್.ಇಂದಿನ ಕಾಲದಲ್ಲಿ ಹೈ ಸ್ಕೂಲು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಶಾಲಾ ಸಮವಸ್ತ್ರವನ್ನು ಶಾಲೆಯ ಆವರಣದಲ್ಲಿ ಮಾತ್ರ ಹಾಕಿಕೊಳ್ಳುವುದು ಸಾಮಾನ್ಯ ನೋಟ. ಶಾಲೆ-ಕಾಲೇಜಿನವರೆಗೆ ತಮ್ಮ ದಿನನಿತ್ಯದ ಡ್ರೆಸ್‌ಗಳಲ್ಲಿ ಬಂದು, ಶಾಲೆಯು ಹತ್ತಿರ ಬಂದಾಗ ಸಮವಸ್ತ್ರವನ್ನು ಧರಿಸಿಕೊಳ್ಳುವುದು ಬೆಳಗ್ಗಿನಿಂದ ಸಂಜೆವರೆಗೆ ಹೈ ಸ್ಕೂಲು ಸಮವಸ್ತ್ರವನ್ನೇ ಧರಿಸಿ ತಿರುಗಾಡುತ್ತಿದ್ದ ನಮಗೆ ವಿಶೇಷವಾಗಿ ಕಾಣಿಸುವುದರಲ್ಲಿ ತಪ್ಪೇನು ಇಲ್ಲ.***ಹಿಂದಿನ ಸಂಬಂಧ-ಸೂಕ್ಷ್ಮತೆ ಲೇಖನ ಬರೆದ ಮೇಲೆ ಆ ಕುರಿತು ಮತ್ತಿನ್ನಷ್ಟು ಆಲೋಚಿಸಲಾಗಿ ಈ ನಡುವೆ ಕುಟುಂಬಗಳಲ್ಲಿ ಅಸಮಧಾನ ಏಕೆ ಹೊಗೆ ಆಡುತ್ತದೆ ಎನ್ನುವುದಕ್ಕೆ ಕೆಲವೊಂದು ಕುರುಹುಗಳು ಸಿಕ್ಕ ಹಾಗಿದೆ. ಅದರಲ್ಲಿ ಪ್ರತಿಯೊಬ್ಬರೂ ಅವರವರ ತಂದೆ-ತಾಯಿ ಬಂಧು ಬಳಗದವರನ್ನು ಅದೆಷ್ಟರ ಮಟ್ಟಿಗೆ ತಿಳುವಳಿಕೆ ಹೇಳಿಕೊಡುತ್ತಾರೆ ಅದರ ಮೇಲೂ ಬಹಳಷ್ಟು ನಿರ್ಧರಿತವಾಗುತ್ತದೆ. ಈ ಕೆಳಗಿನ ನಿದರ್ಶನಗಳನ್ನು ಪರಿಶೀಲಿಸಿ ನೋಡಿ:೧) ಇತ್ತೀಚಿನ ಚಿಕ್ಕ (nuclear) ಕುಟುಂಬಗಳಲ್ಲಿ ಗಂಡ-ಹೆಂಡತಿಯರು ತಮ್ಮ ತಮ್ಮಲ್ಲಿ ಏಕವಚನದಲ್ಲೇ ಸಂಭಾಷಣೆ ನಡೆಸುತ್ತಾರೆ.೨) ಡಬಲ್ ಇನ್‌ಕಮ್ ಇರುವ ಕುಟುಂಬಗಳಲ್ಲಿ ಗಂಡ-ಹೆಂಡತಿಯ ಸಂಬಳದಲ್ಲಿ ಹೆಚ್ಚು ವ್ಯತ್ಯಾಸವಿರಬೇಕಿಲ್ಲ, ಹೆಂಡತಿಗೆ ಗಂಡನಿಗಿಂತ ಹೆಚ್ಚು ಸಂಬಳಬರುವ ಸಾಧ್ಯತೆಗಳೂ ಇವೆ.೩) ಗಂಡ-ಹೆಂಡತಿಯರ ವಯಸ್ಸಿನಲ್ಲಿ ಹೆಚ್ಚಿನ ಅಂತರವಿರಬೇಕೆಂದೇನಿಲ್ಲ ಜೊತೆಗೆ ಅವರ ವಿದ್ಯಾರ್ಹತೆಯೂ ಒಂದೇ ಮಟ್ಟದಲ್ಲಿರಬಹುದು.ಪ್ರತಿಯೊಂದು ಕುಟುಂಬದಲ್ಲಿಯೂ ಈ ಹೌಸ್‌ಹೋಲ್ಡ್ ಕಾಯಕಗಳು ಸಹಜವಾದವುಗಳು: ಅವೇ - ಮನೆ ಸ್ವಚ್ಛ ಮಾಡುವುದು, ಬಟ್ಟೆ ಒಗೆದು-ಒಣಗಿಸಿ-ಮಡಚಿಡುವುದು, ಮಕ್ಕಳಿದ್ದರೆ ಅವರ ಹೋಮ್‌ವರ್ಕ್ ಊಟ-ಉಪಚಾರದಲ್ಲಿ ತೊಡಗುವುದು, ಅಗತ್ಯ ವಸ್ತುಗಳನ್ನು ಶಾಪಿಂಗ್ ಮಾಡುವುದು, ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಮ್ಯಾನೇಜ್ ಮಾಡುವುದು, ದಿನಕ್ಕೆರಡು ಬಾರಿಯಾದರೂ ಅಡಿಗೆ ಮನೆಯಲ್ಲಿನ ಕೆಲಸಗಳಿಗೆ (ಕುಕು, ಕ್ಲೀನ್, ಆರ್ಗನೈಜ್, ಇತ್ಯಾದಿ) ಆದ್ಯತೆ ಕೊಡುವುದು ಇತ್ಯಾದಿ. ಈ ಕೆಲಸಗಳು ಒಂದು ದಿನಕ್ಕೆ ಮಾತ್ರ ಬಂದು ಹೋಗುವಂಥದ್ದಲ್ಲ, ಇವುಗಳನ್ನು ಪ್ರತಿದಿನ, ಪ್ರತಿರಾತ್ರಿ ನಿರ್ವಹಿಸುತ್ತಲೇ ಇರಬೇಕು ಎಂಥ ಕುಟುಂಬವಾದರೂ. ದುಡ್ಡಿದ್ದವರು ಕೆಲಸದವರನ್ನು ನೇಮಿಸಿಕೊಂಡಿರಬಹುದು, ಆದರೆ ಕೆಲಸ ಮಾಡುವವರನ್ನು ನಿಭಾಯಿಸುವುದು ತಪ್ಪುವುದಿಲ್ಲ. ಅಂದರೆ ಮನೆ ಎಂದರೆ ಇಂತಿಷ್ಟು ಕೆಲಸಗಳು ಇದ್ದೇ ಇರುತ್ತವಾದ್ದರಿಂದ ಈ ಆಧುನಿಕ ಕುಟುಂಬಗಳ ಹೆಚ್ಚಿನ ಸಮಸ್ಯೆಯೇ ಈ ಕೆಲಸಗಳ ಹೂಡಿಕೆ-ಹಂಚಿಕೆಗಳಿಂದ ಎಂದರೆ ತಪ್ಪಾಗಲಾರದು. ಇಂಥದರ ನಡುವೆ ಅಥವಾ ಇಷ್ಟೆಲ್ಲಾ ಇದ್ದೂ, ಅದರ ಮೇಲೆ ಬರುವುದೇ "in-law" factor, ಅಥವಾ ಸಂಬಂಧಿಕರ ಉಪದ್ರವ! ದೂರದ ಅಮೇರಿಕೆಯಲ್ಲಿರುವ ನಮಗೆ ಸಂಬಂಧಿಕರಿಲ್ಲ ಎಂದು ಕೊರಗುವವರು ಒಂದು ಕಡೆ, ದಿನಕ್ಕೊಮ್ಮೆ ಒಬ್ಬರಲ್ಲ ಒಬ್ಬರು ಬರುತ್ತಾರಲ್ಲ ಎಂದು ಹಲಬುವ ಬೆಂಗಳೂರಿನ ದಂಪತಿಗಳು ಮತ್ತೊಂದು ಕಡೆ.ಅದೇ "in-law" factor ಎಂದರೆ ತಮ್ಮ ಸಣ್ಣ ಕುಟುಂಬಕ್ಕೆ ಅವರವರ ತಂದೆ-ತಾಯಿಯರಿಂದಲೇ ಕಷ್ಟಗಳು ಬರುತ್ತವೆ ಎನ್ನುವ ಮಾತು. ಉದಾಹರಣೆಗೆ, ಗಂಡ-ಹೆಂಡತಿ ಇಬ್ಬರೂ ಸಮವಯಸ್ಕ, ಸಮಾನ ಅಭಿರುಚಿ, ಸಮಾನ ವಿದ್ಯಾರ್ಹತೆ, ಸಮಾನ ಕೆಲಸದಲ್ಲಿದ್ದಾರೆಂದುಕೊಳ್ಳೋಣ. ಹುಡುಗನ ತಂದೆ ತಾಯಿಯರು ಈ ನವದಂಪತಿಗಳಿರುವ ಗೂಡಿಗೆ ದೂರದ ಊರಿನಿಂದ ಬಂದರೆಂದುಕೊಂಡರೆ ಅಲ್ಲಿ ತನ್ನ ಅತ್ತೆ-ಮಾವಂದಿರ ಉಪಚಾರವನ್ನು ಈ ಹುಡುಗಿಯೇ ಕೈಗೊಳ್ಳಬೇಕೆ, ಅದು ಎಷ್ಟರ ಮಟ್ಟಿನ ನಿರೀಕ್ಷೆಯಾಗಿರಬೇಕು ಎನ್ನುವುದು ಒಳ್ಳೆಯ ಪ್ರಶ್ನೆ. ಅದೇ ಮನೆಗೆ ಹುಡುಗಿಯ ತಂದೆ-ತಾಯಿಯರು ಬಂದರೆಂದುಕೊಂಡರೆ ಹುಡುಗನಿಂದ ಅವರು ಏನೇನನ್ನು ನಿರೀಕ್ಷಿಸಬಹುದು? ನಮ್ಮ ಸಮಾಜ ಇನ್ನೂ ಪುರುಷ-ಪ್ರಧಾನವಾದುದು ಎನ್ನುವ ಉತ್ತರ ನಾವಂದುಕೊಂಡಷ್ಟು ಪ್ರಬಲವಾಗಿ ಇಲ್ಲಿ ಸಹಾಯ ಮಾಡೋದಿಲ್ಲ. ಆ ಮನೆಯ ಹುಡುಗಿಗೂ ತಕ್ಕ ಕೆಲಸ, ಡೆಡ್‌ಲೈನುಗಳು, ಜವಾಬ್ದಾರಿ ಮುಂತಾದವುಗಳೆಲ್ಲ ಇದ್ದಾಗ ತನ್ನ ತಂದೆ-ತಾಯಿಯರಿಗೆ ತನ್ನ ಕೈಯಾರೇ ತಾನೇ ಮಗ ಒಂದು ಕಪ್ ಕಾಫಿ ಮಾಡಿಕೊಟ್ಟ ಎಂದೇ ಇಟ್ಟುಕೊಳ್ಳಿ ಆ ತಂದೆ-ತಾಯಿ ಅದನ್ನು ನೋಡುವ ರೀತಿಯೇ ಬೇರೆ. ಕೆಲಸಕ್ಕೆ-ಸಂಬಳಕ್ಕೆ-ಸ್ಟೇಟಸ್ಸಿಗೆ ಮಾತ್ರ ಹೆಂಡತಿ ಎಂದುಕೊಂಡರೆ ಆದೀತೆ? ಇಂತಹ ಸಮಯದಲ್ಲೇ ನಾನು ಆ ಹುಡುಗ ತನ್ನ ತಂದೆ-ತಾಯಿಯರ ನಿರೀಕ್ಷೆಗೆ ತಕ್ಕ ಉತ್ತರಗಳನ್ನು ತಯಾರಿಸಿಟ್ಟುಕೊಳ್ಳಬೇಕು ಎನ್ನುವುದು. ಡಬಲ್ ಇನ್‌ಕಮ್ ಕುಟುಂಬಗಳಲ್ಲಿನ ಜವಾಬ್ದಾರಿಗಳು ತಕ್ಕಮಟ್ಟಿಗೆ ಡಿವೈಡ್ ಆಗಿ ಒಬ್ಬರಿಗೊಬ್ಬರು ಪೂರಕವಾಗಿ ನಡೆದುಕೊಳ್ಳುವುದೇ ಉತ್ತರ ಹೊರತು ಹೊರಗಿನ ಸಮಾಜಕ್ಕೆ (ತಮ್ಮ ತಂದೆ-ತಾಯಿ ಕುಟುಂಬದವರನ್ನೂ ಸೇರಿ) ತಕ್ಕಂತೆ ನಡೆಯುತ್ತೇವೆ ಎಂದುಕೊಳ್ಳುವುದು ತಮಗೆ ತಾವೇ ಮಾಡಿಕೊಳ್ಳುವ ಮೋಸವಲ್ಲದೇ ಮತ್ತೇನು?ನಮ್ಮಲ್ಲಿ ಸಣ್ಣ-ಸಣ್ಣ ವಿಷಯಗಳೂ ದೊಡ್ಡದಾಗಿ ಬೆಳೆದುಕೊಳ್ಳಲು ಬೇಕಾದ ರೀತಿಯ ವಾತಾವರಣ ಇರುತ್ತೆ. ಈ ಉದಾಹರಣೆಯನ್ನು ನೋಡಿ: ನನಗೆ ಗೊತ್ತಿರುವ ಯುವ ದಂಪತಿಗಳು ತಮ್ಮ ತಮ್ಮನ್ನು ಏಕವಚನದಲ್ಲೇ ಸಂಬೋಧಿಸಿಕೊಳ್ಳೋದು - ಅಂದರೆ ಹೋಗೋ-ಬಾರೋ ಎಂಬ ರೀತಿಯಲ್ಲಿ. ಒಬ್ಬೊರಿಗೊಬ್ಬರು ಅನ್ಯೋನ್ಯವಾಗಿರುವ ಅವರು ತಮ್ಮನ್ನು ಪ್ರೀತಿಯಿಂದ ಈ ಸಂಬೋಧನೆಗೆ ಹೊಂದಿಸಿಕೊಂಡಿದ್ದಾರೆ ಅಷ್ಟೇ. ಅದೇ ದಂಪತಿಗಳು ದೂರದ ಭಾರತಕ್ಕೆ ಪ್ರಯಾಣ ಬೆಳೆಸಿದಾಗಲೂ ತಮ್ಮ ಸಂಬಂಧಿಕರ ನಡುವೆಯೂ ತಮ್ಮನ್ನು ಹೀಗೇ ಕರೆದುಕೊಳ್ಳುತ್ತಾರಷ್ಟೇ. ಅಕಸ್ಮಾತ್ ಅವರು ತಮ್ಮತಮ್ಮ ತಂದೆತಾಯಿಯರ ನಡುವೆ "ಏನ್ರೀ-ಬನ್ರೀ" ಪ್ರಯೋಗಕ್ಕೆ ತೊಡಗಿಕೊಂಡರೆಂದರೆ ಹೇಗಿರಬಹುದು? ನೆರೆಹೊರೆಗೆ ಹೊಂದಿಕೊಂಡಿರುವುದೋ ಅಥವಾ ತಮಗೆ ಬೇಕಂತೆ ನಡೆದುಕೊಳ್ಳುವುದೋ ಎನ್ನುವ ಪ್ರಶ್ನೆ ಬರುತ್ತದೆ. ನನ್ನ ಅನಿಸಿಕೆ ಪ್ರಕಾರ, ಯುವ-ದಂಪತಿಗಳು ಈ ನಿಟ್ಟಿನಲ್ಲೂ ತಮ್ಮ ಹಿರಿಯರಿಗೆ ತಿಳಿಹೇಳುವ ಅಗತ್ಯವಿದೆ.***ಮೊನ್ನೆ ಯಾರೋ ಹೇಳೋದನ್ನು ಕೇಳಿದೆ - ’ನಮ್ಮ ಮಗ ಅಮೇರಿಕಕ್ಕೆ ಇದಷ್ಟೇ ಬಂದಿದ್ದಾನೆ, ಅವನಿಗೊಂದು ಭಾರತೀಯ ಮೂಲದ ಅಮೇರಿಕನ್ ಸಂಜಾತೆಯೊಡನೆ ಮದುವೆ ನಿಶ್ಚಯವಾಗಿದೆ, ಆದರೆ ನಮ್ಮದು ಒಂದೇ ಒಂದು ಕಂಡೀಷನ್ ಎಂದರೆ ಇನ್ನೈದು ವರ್ಷಗಳ ನಂತರ ಅವರಿಬ್ಬರೂ ಪರ್ಮನೆಂಟ್ ಆಗಿ ಭಾರತಕ್ಕೆ ಹಿಂದಿರುಗಿಬಿಡಬೇಕು!’. ನನ್ನ ಮನಸ್ಸಿನಲ್ಲಿ, ’ಏಕೆ?’ ಎನ್ನುವ ಪ್ರಶ್ನೆ ಬಂದು ಹಾಗೇ ಉಳಿದುಹೋಯಿತು.ನಮಗೆಲ್ಲ ೨೪ ವರ್ಷವಾಗುವವರೆಗೆ ಫುಲ್‌ಟೈಮ್ ಓದಿಸುವವರೆಗೆ ನಮ್ಮ ನಮ್ಮ ಪೋಷಕರು ಸಹಾಯ ಮಾಡಿದ್ದಾರೆ ನಿಜ. ನಮಗೆಲ್ಲ ಜಾತಿ-ಜಾತಕಗಳ ಬಂಧನಕ್ಕೆಳೆದು ಅವರ ಮನಸ್ಸಿಗೆ ಸಮಾಧಾನವಾಗುವಂತೆ ವಿವಾಹ ಮಾಡಿದ್ದಾರೆ ನಿಜ. ಇದೇ ಪೋಷಣೆ ಸಾಯುವವರೆಗೂ ನಮ್ಮನ್ನು ಕಾಯಬೇಕೇಕೆ? ನಮ್ಮ ಪೋಷಕರು ನೋಡಿರದ ಅಮೇರಿಕಕ್ಕೆ ನಾವು ಬಂದಿರೋದು, ಇನೈದು ಹತ್ತು ಇಪ್ಪತ್ತು ವರ್ಷಗಳಲ್ಲಿ ಈ ಹುಡುಗ-ಹುಡುಗಿಯ ಪ್ರಬುದ್ಧತೆ ಬದಲಾಗುತ್ತೆ, ಅವರಿಗೂ ಒಂದು ಕುಟುಂಬವಿರುತ್ತೆ, ಮೇಲಾಗಿ ಜವಾಬ್ದಾರಿ ಇರುತ್ತೆ, ಅದರ ನಡುವೆ ಇನ್ನೈದು ವರ್ಷಗಳಲ್ಲಿ ’ಭಾರತಕ್ಕೆ ಹಿಂತಿರುಗಿ’ ಎಂದು ಆಜ್ಞೆ ಮಾಡಲು ಇವರ ಹಿನ್ನೆಲೆ ಏನಿರಬಹುದು? ಸರಿ, ಆ ಅಮೇರಿಕನ್ ಸಂಜಾತೆ ಹೆಣ್ಣಿಗೆ ಇವರ ಬಾಯಿ ನೀರೂರುವ ಇಡ್ಲಿ-ದೋಸೆಯನ್ನು ಮಾಡಲು ಬಾರದಿದ್ದರೆ ಅದು ಆಕೆಯ ತಪ್ಪೇ? ನಮ್ಮಲ್ಲಿ ಒಂದು ಗಾದೆ ಮಾತಿದೆ, ಅಕ್ಕನೂ ಉಳಿಯಲಿ ಅಕ್ಕಿಯೂ ಉಳಿಯಲಿ ಎಂದರಾಗದು. ಅತ್ತೆ-ಮಾವಂದಿರನ್ನು ಮೆಚ್ಚಿಸಿಕೊಂಡು ಗಂಡನ ಸಮಸಮಕ್ಕೆ ಕೆಲಸವನ್ನೂ ಮಾಡಿಕೊಂಡು ಮನೆಯಲ್ಲಿ ಮತ್ತೆ ಹೊರಗೆ "ತಗ್ಗಿ-ಬಗ್ಗಿ" ನಡೆಯುವ ನಿರೀಕ್ಷೆಯನ್ನು ಪ್ರತಿಯೊಬ್ಬರೂ ಇಟ್ಟುಕೊಂಡರಾದರೆ ಅದು ಅನಿರೀಕ್ಷಿತ ಪ್ರತಿಫಲವನ್ನು ತಂದುಕೊಡಬಹುದು.ಇಷ್ಟೇ ಅಲ್ಲದೆ, ಹಣ ಕಾಸಿನ ದೃಷ್ಟಿಯಿಂದಲೂ ಬೇಕಾದಷ್ಟು ಸಂಕಷ್ಟಗಳು ಬಂದೊದಗುವುದು ಸಹಜ. ತಮ್ಮ ಮಗ ತಮ್ಮನ್ನು ಇಳಿವಯಸ್ಸಿನಲ್ಲಿ ಸಲಹಲಿ ಎಂದು ಆಶಿಸುವ ಅಪ್ಪ-ಅಮ್ಮ ಅದೇ ರೀತಿ ತಮ್ಮ ಮನೆಯ ಸೊಸೆಗೂ ಹಾಗೇ ಜವಾಬ್ದಾರಿ ಇರಬಹುದು ಎನ್ನುವುದನ್ನು ನೋಡಲಾರರೇಕೆ? ತನ್ನ ತಂದೆಯ ಆಸ್ತಿಯಲ್ಲಿ ತನ್ನ ಸಹೋದರರ ಸಮಸಮಕ್ಕೆ ಪಾಲು ಕೇಳುವಂತೆ ಕಾನೂನೇ ಇದ್ದಾಗ ಗಂಡು ಮಕ್ಕಳ ಸಮಕ್ಕೆ ಹೆಣ್ಣು ಮಕ್ಕಳೂ ಅವರರವರ ಹೆತ್ತವರನ್ನು ನೋಡಿಕೊಂಡರೆ "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ" ಎನ್ನುವ ಗಾದೆ ಮಾತಿನ ಮೊರೆ ಏಕೆ ಹೋಗಬೇಕು?ಹೀಗೆ...ಈ ವಿಷಯವನ್ನು ಕುರಿತು ಬೇಕಾದಷ್ಟು ಬರೆಯಬಹುದು, ಈ ಸಮಯದಲ್ಲಿ ಅವರವರ ತಂದೆ-ತಾಯಿಯರಿಗೆ ಮನ ಒಲಿಸುವ ತಿಳಿಸಿ ಹೇಳುವ ಅಗತ್ಯ ಇದೆ ಎಂದೆನಿಸಿದ್ದು ಈ ಹೊತ್ತಿನ ತತ್ವಗಳಲ್ಲೊಂದು!

"ನಮ್ಮ ಊರಿನ ಮೂರು ಗಾಲಿನ್ ಆಟಿಕೆ "

ನಮ್ಮ ಊರುಗಳಲ್ಲಿ ಒಂದೆರೆಡು ವರ್ಷದ ಮಕ್ಕಳಿಗೆ ಆಡಿಕೊಳ್ಳಲು ಮರದಲ್ಲಿ ಮಾಡಿದ ಮೂರುಗಾಲಿಯ ಆಟದ ಸಾಮಾನು ಸಿಗುತ್ತಿತ್ತು. ಬಹಳ ಸರಳವಾಗಿ ಜೋಡಿಸಲ್ಪಟ್ಟ ಈ ಆಟಿಕೆ ಅಂಬೆ ಹರಿಯುವ ಮಕ್ಕಳಿಗೆ ಓಡಾಡಲು ಅನುಕೂಲ ಮಾಡಿಕೊಡುತ್ತಿತ್ತು. ಈ ಆಟದ ಸಾಮಾನು ಈಗಲೂ ಅಲ್ಲಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ, ಈಗೆಲ್ಲ ನಮ್ಮೂರುಗಳಲ್ಲೂ ಮೆಟ್ಟೆಲ್, ಫಿಷರ್ ಪ್ರೈಸ್ ಆಟಿಕೆಗಳು (made in china) ದ ಹಾವಳಿ!ಇಲ್ಲಿ ನನ್ನ ಹತ್ತು ತಿಂಗಳ ಮಗನಿಗೆ ನಾನೂ ಒಂದು ಹಾಗಿರುವ ಆಟಿಕೆಯೊಂದನ್ನು ಮಾಡಬಾರದೇಕೆ ಎಂಬ ಆಲೋಚನೆ ಬಂದಿದ್ದೇ ತಡ, ಸಣ್ಣದೊಂದು ಸ್ಕೆಚ್ ಹಾಕಿಕೊಂಡೆ. ಇಲ್ಲಿನ ಹೋಮ್ ಡಿಪೋ, ಲೋವ್‌ಸ್ ಅಂಗಡಿಗಳಲ್ಲಿ ಮರ-ಮುಗ್ಗಟ್ಟು ಬಹಳ ಅಗ್ಗವಾಗಿ ಸಿಗುವುದರ ಜೊತೆಗೆ ಅವರು ನಿಮಗೆ ಯಾವ ರೀತಿ ಬೇಕೋ ಹಾಗೆ ಅದನ್ನು ಕತ್ತರಿಸಿಯೂ ಕೊಡುತ್ತಾರೆ. ಅಲ್ಲದೆ ಬೇರೆ ಬೇರೆ ರೀತಿಯ ಸೈಜುಗಳೆಲ್ಲ (ರೀಪೀಸ್) ಒಂದೇ ಸೂರಿನಡಿ ಸಿಗುತ್ತವೆಂದರೆ ಮತ್ತಿನ್ನೇನು ಬೇಕು. ಸರಿ ಮರದ ರೀಪುಗಳೇನೋ ಸಿಗುತ್ತವೆ, ಈ ಗಾಲಿಗಳನ್ನು ಎಲ್ಲಿಂದ ತರುವುದು? ಹಾಗೆ ಅಂದುಕೊಂಡ ಬೆನ್ನ ಹಿಂದೇ ಅದೇ ಅಂಗಡಿಯಲ್ಲಿ ಗಾಲಿಗಳೂ ಸಿಗಬಾರದೇಕೆ ಎನ್ನಿಸಿ ಒಮ್ಮೆ ಹೋಗಿ ನೋಡಿದ್ದೂ ಆಯಿತು. ಇನ್ನೇನು ಮರದ ತುಂಡುಗಳನ್ನು ತಂದು ಹಂತ-ಹಂತವಾಗಿ ಜೋಡಿಸಿ ಒಂದು ವೀಕ್ ಎಂಡಿನ ಅರ್ಧ ದಿನವೊಂದರಲ್ಲಿ ಜೋಡಿಸಿ ನಾನೂ ಒಂದು ಆಟದ ಸಾಮಾನನ್ನು ತಯಾರಿಸಬಾರದು ಎಂದುಕೊಂಡು ಸುಮ್ಮನಾಗಿದ್ದರೆ ಚೆನ್ನಾಗಿತ್ತು, ಆದರೆ ಆಗಿದ್ದೇ ಬೇರೆ.ನಾನು ಯಾವತ್ತೂ ಕೆಲಸವಾಗುವುದಕ್ಕಿಂತ ಮೊದಲೇ ಅದರ ಬಗ್ಗೆ ಕೊಚ್ಚಿಕೊಳ್ಳೋದು ಹೆಚ್ಚು ಎಂದು ತೋರುತ್ತೆ. ಈ ಆಟಿಕೆಯನ್ನು ಕುರಿತು ನನ್ನ ಹೆಂಡತಿಯ ಜೊತೆ ಹೇಳಿಕೊಂಡಾಗ ಆಕೆ ಪಕಪಕನೆ ನಗಲಾರಂಭಿಸಿದಳು. ಜೊತೆಗೆ ಗಾಯಕ್ಕೆ ಉಪ್ಪು ಸವರುವ ಮಾದರಿಯಲ್ಲಿ ವಾಲ್‌ಮಾರ್ಟ್‌ನಲ್ಲಿ ಇದೇ ರೀತಿಯ ಆಟದ ಸಾಮಾನೊಂದನ್ನು ನೋಡಿದ್ದೇನೆ, ಅದನ್ನು ತರಬಾರದೇಕೆ ಎಂದಳು. ಈ ಅಲ್ಪನ ಕೈಚಳಕಕ್ಕೂ ಆ ವಾಲ್‌ಮಾರ್ಟಿನ ಸಾಧ್ಯತೆ-ಬಾಧ್ಯತೆಗಳಿಗೂ ಎಲ್ಲಿಯ ಸಮ? ಸರಿ ಸುಮಾರು ಅದೇ ದಿನ ಅಥವಾ ಮರುದಿನ ಆಕೆ ಹೋಗಿ ಬಹಳ ಮುದ್ದಾದ ಫಿಷರ್ ಪ್ರೈಸ್ ಆಟದ ಸಾಮಾನೊಂದನ್ನು ತಂದೇ ಬಿಟ್ಟಳು. ಅದರ ಮೂಲ ಬೆಲೆ ಹತ್ತೊಂಭತ್ತು ಡಾಲರ್ ಅಂತೆ, ಅದು ಏಳು ಡಾಲರ್‌ನಲ್ಲಿ ಸೇಲ್‌ ಇದ್ದುದಾಗಿಯೂ ತಿಳಿಸಿದಳು. ನಾನೇ ಅದರ ಪೆಟ್ಟಿಗೆಯನ್ನು ತೆರೆದು ಜೋಡಿಸಿದಾಗ ಒಂದೆರಡು ನಿಮಿಷದಲ್ಲಿ ನಡೆದಾಡುವ ನಾಲ್ಕು ಗಾಲಿಯ, ತನ್ನ ಮೈ ತುಂಬಾ ಸುಂದರವಾದ ಚಿತ್ರವುಳ್ಳ, ಅಲ್ಲಲ್ಲಿ ಅನೇಕ ಆಟದ ಸವಲತ್ತನ್ನು ಒದಗಿಸುವ ಬಣ್ಣಬಣ್ಣದ ಆಟಿಕೆ ತಯಾರಾಯಿತು. ಈ ಕಡೆ ನನ್ನ ಸ್ಕೆಚ್ಚು, ಪೆಚ್ಚು ಮೋರೆಯೂ ಎರಡೂ ಆ ಆಟಿಕೆಯ ಸ್ಟರ್ಡಿ ಕನ್ಸ್‌ಟ್ರಕ್ಷನ್ನನ್ನು ನೋಡಿ ಚಕಿತಗೊಂಡವು. ನಾನು ಮೊಳೆ ಅಥವಾ ಸ್ಕ್ರೂ ಹೊಡೆದು ಮಾಡಬೇಕೆಂದಿದ್ದ ಮರದ ಆಟದ ಸಾಮಾನು ಇಲ್ಲಿ ಮೊಳೆಯೇ ಇಲ್ಲ ಚೈಲ್ಡ್ ಪ್ರೂಫ್ ಪ್ಲಾಸ್ಟಿಕ್ ಆಟಿಕೆಯ ಮುಂದೆ ಯಾವ ತುಲನೆಗೂ ನಿಲುಕದಾಯಿತು.ನನ್ನ ಮನದಲ್ಲಿ ನೆಲೆನಿಂತಿರುವ ಆ ಮರದ ಮೂರುಗಾಲಿಯ ಆಟಿಕೆ ಇಂದಿಗೆ ಇಲ್ಲದಿರಬಹುದು, ಅದರ ಸಂತತಿ ಕ್ಷೀಣಿಸಿರಬಹುದು ಅಥವಾ ಇಂದಿನ ಪ್ಲಾಸ್ಟಿಕ್ ಗ್ಲೋಬಲ್ ಯುಗದಲ್ಲಿ ನಿರ್ನಾಮವಾಗಿರಬಹುದು. ಆದರೆ ನಾನೇ ಸ್ವತಃ ಸ್ಕೆಚ್ ಹಾಕಿ ಮರವನ್ನು ಜೋಡಿಸಿ ತಯಾರಿಸಿದ ಆಟಿಕೆಯಷ್ಟು ತೃಪ್ತಿ ಈ ಹೊಸ ಫ್ಯಾನ್ಸಿ ಆಟಿಕೆ ನನಗಂತೂ ಕೊಡಲಾರದು. ಆದರೆ ನನ್ನ ಹತ್ತು ತಿಂಗಳ ಮಗನಿಗೆ ಇವು ಯಾವದರ ಪರಿವೆಯೂ ಇಲ್ಲದೆ ತನ್ನ ಹೊಸ ಆಟಿಕೆಯ ಜೊತೆ ಆಟವಾಡುತ್ತಾನೆ, ಜೊತೆಗೆ ಅದು ಮಾಡುವ ಸದ್ದಿಗೆ ಹಾಗೂ ಅದರ ಬಣ್ಣಗಳ ಮೋಡಿಗೆ ಮಾರು ಹೋಗಿದ್ದಾನೆ.

"ನಮ್ಮ ದೇಶ ನಮ್ಮದು "

’ನೀವ್ ಇಂಡಿಯಾಕ್ ಹೋಗಿ ನೋಡಿ, ಅಲ್ಲಿ ಎಷ್ಟು ಬದಲಾವಣೆಯಾಗಿದೇ ಅಂತ!’ ಎಂದು ನನ್ನ ಬಳಿ ಹೇಳಿಕೊಂಡವರು ದೇಶದ ಉದ್ದಾರವನ್ನು ಕುರಿತು ಹೇಳಿರದೇ ಒಂದು ರೀತಿಯ ವ್ಯಂಗ್ಯದ ಇಂಟೋನೇಷನ್ನ್ ಅನ್ನು ತೋರಿಸಿಕೊಂಡಿದ್ದು ನೆನಪಿಗೆ ಬಂತು. ಹಿಂದೆ ಅರವತ್ತೆರಡು ವರ್ಷಗಳ ಸ್ವಾತಂತ್ರ್ಯದ ಬಗ್ಗೆ ಬರೆದಂತೆ ನಮ್ಮ ದೇಶ ಎಷ್ಟೊಂದು ಬದಲಾವಣೆಗಳನ್ನು ಕಂಡಿದೆ ಹಾಗೂ ಕಾಣುವುದಕ್ಕಿದೆ ಅಂತದರಲ್ಲಿ ನಾವೆಲ್ಲ ಈವರೆಗೆ ಗಮನಿಸಿದ ಬದಲಾವಣೆಗಳು ಮಹಾನ್ ಅಲ್ಲವೇ ಅಲ್ಲ ಅನ್ನೋದು ನನ್ನ ಅನಿಸಿಕೆ. ಅಲ್ಲದೆ ಬದಲಾವಣೆಗಳಿಗೆ ತಮ್ಮನ್ನು ತಾವು ಅಳವಡಿಸಿಕೊಂಡು ಮುಂದುವರೆಯದಿರುವುದು ದೇಶಗಳಿಗಾಗಲೀ, ಕಂಪನಿಗಳಿಗಾಗಲಿ ಅಥವಾ ವ್ಯಕ್ತಿ-ಕುಟುಂಬಗಳಿಗೆ ಸಾಧುವೂ ಅಲ್ಲ.

ಎಂಭತ್ತರ ದಶಕದಿಂದೀಚೆಗೆ ನಮ್ಮನ್ನು ನಾವು ಪ್ರಪಂಚದ ಇತರೆ ಬೆಳವಣಿಗೆಗಳಿಗೆ ತೊಡಗಿಸಿಕೊಂಡಿದ್ದು ನಿಮಗೆಲ್ಲ ನೆನಪಿರಬಹುದು. ಮೊದಲೆಲ್ಲ ಕುಟುಂಬ ಯೋಜನೆ ಎಂದರೇನು ಎಂದು ಗೊತ್ತಿರದೇ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಕುಟುಂಬಗಳು ಎಷ್ಟೋ. ಒಂದೇ ಸೂರಿನೆಡೆ ಬಡತನದಲ್ಲಿ ಹಲವಾರು ಮಕ್ಕಳ ಹೊಟ್ಟೆ ತುಂಬುವುದು, ಅವುಗಳಿಗೆ ಸರಿಯಾದ ವಿದ್ಯೆಯನ್ನು ಕಲಿಸಿಕೊಡುವುದು ಎಲ್ಲವೂ ಸಾಧ್ಯವಿಲ್ಲದ ಮಾತಾಗಿತ್ತು. ಈ ತಲೆಮಾರು ಇರುವ ಹಾಗೆಯೇ ಮುಂದಿನ ಒಂದೆರಡು ತಲೆಮಾರುಗಳು ಮುಂದುವರೆದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಮೊದಲಾದವುಗಳ ಪಲಾನುಭವಿಗಳಾಗಿ ಬೆಳೆಯುವ ಭಾಗ್ಯ ಕಂಡುಕೊಂಡವು. ಹೀಗೆ ತಲೆಮಾರುಗಳು ತಮ್ಮನ್ನು ತಾವು ಬದಲಾವಣೆಗಳಿಗೆ ಒಳಪಡಿಸಿಕೊಂಡು ಬಂದಂತೆ ಜಗತ್ತು ಚಿಕ್ಕದಾಯಿತು. ಎಲ್ಲೆಲ್ಲೋ ಇದ್ದವರಿಗೆ ಎಲ್ಲಿಯದೋ ಮಾಹಿತಿ ದೊರೆಯುವಂತಾಯಿತು.

ತಂತ್ರಜ್ಞಾನವೇ ಇರಲಿ, ಮಾಹಿತಿ-ಸಂವಹನಗಳಾಗಲಿ ಭಾರತ ಜಗತ್ತಿನ ಅತಿ ದೊಡ್ಡ ಲ್ಯಾಬೋರೇಟರಿ ಇದ್ದ ಹಾಗೆ. ಹೊಸ ವಸ್ತು, ವಿಷಯಗಳಿಗೆ ಕೋಟ್ಯಾಂತರ ಭಾರತೀಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಬಂದರು. ಬೇರೆ ಯಾವೊಂದು ದೇಶದಲ್ಲೂ ಸಿಗದಷ್ಟು ಬಳಕೆದಾರರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ದೇಶ-ವಿದೇಶಗಳ ಗುರಿಯಾದರು. ೧೯೫೦ ರ ದಶಕ ಅಮೇರಿಕನ್ನರಿಗೆ ನಾವು ಬೆಳೆದ ಬಗೆಯನ್ನು ತಿಳಿಸಿ ಹೇಳಿದಾಗ ಅಲ್ಲಿ ಬೇಕಾದಷ್ಟು ಸಾಮ್ಯತೆ ಸಿಗುತ್ತದೆ, ನಮ್ಮ ನಡೆ-ನುಡಿಯನ್ನು ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಆದರೆ ನಮ್ಮ ಮುಂದಿನ ಜನರೇಶನ್ನುಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಎಲ್ಲ ಯುವ ಪೀಳಿಗೆಗಳೂ ಒಂದೇ ಪೋಷಣೆಗಳಿಗೆ ಒಳಗಾದಂತೆ ಕಂಡು ಬರುತ್ತದೆ. ಉದಾಹರಣೆಗೆ, ಒಂದು ಕಾಲದಲ್ಲಿ ಭಾರತವನ್ನು ಪೀಡಿಸುತ್ತಿದ್ದ ಪೋಲಿಯೋ ಈಗ ಜಗತ್ತಿನುದ್ದಕ್ಕೂ ನಿರ್ಮೂಲನದ ಹಾದಿ ಹಿಡಿದಿದೆ. ಪೋಲಿಯೋ ಪೀಡಿತರಾದವರು ಹಳೆಯ ಸಂತತಿಗಳ ಉದಾಹರಣೆಗಳಾದರು. ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿಚಾರಗಳು ಇನ್ನೆಲ್ಲೋ ತಮ್ಮ ಅಲೆಗಳನ್ನು ಎಬ್ಬಿಸುವ ಸುನಾಮಿಗಳಾಗುವುದು ಇತ್ತೀಚೆಗೆ ಸಹಜ ಹಾಗೂ ನಿರೀಕ್ಷಿತ.

ನಮ್ಮ ಭಾರತದ ಹಳೆಯ ನೆನಪುಗಳು ’ನಾಷ್ಟಾಲ್ಜಿಯ’ವಲ್ಲದೇ ಮತ್ತೇನು? ರಸ್ತೆಯ ತುಂಬ ಕಡಿಮೆ ಕಾರುಗಳು ಓಡಾಡುತ್ತಿದ್ದ ೭೦-೮೦ ರ ದಶಕದ ದಿನಗಳಲ್ಲಿ ಬೆಳೆದು ಬಂದ ನಾವು ಇಂದು ಮನೆಗೊಂದು ಕಾರಿನ ದಿಢೀರ್ ಬೆಳವಣಿಗೆಯನ್ನು ವಕ್ರ ದೃಷ್ಟಿಯಿಂದ ನೋಡುತ್ತೇವೇಕೆ? ಜಾತಿ-ಜಾತಕಗಳ ಮುಖಾಂತರ ಮದುವೆಯಾಗಿ ಬಂದ ನಮಗೆ ಅಂತರ್ಜಾತಿ-ಅಂತರ್ಮತ ವಿವಾಹಗಳು ಹೊಸದಾಗಿ ಕಂಡುಬಂದರೆ ಅದು ನಮ್ಮ ಮಿತಿಯೆಂದೇಕನಿಸುವುದಿಲ್ಲ? ನಾವಿದ್ದಾಗಲೇ “ಎಷ್ಟೊಂದು ಜನ!” ಎಂದು ಉದ್ಗಾರವೆತ್ತುತ್ತಿದ್ದವರಿಗೆ ಈಗ ದೇಶ ಬೆಳೆದಿದೆ ಎಂಬುದನ್ನು ಸಕಾರಾತ್ಮಕವಾಗಿ ಸ್ವೀಕರಿಸಲೇಕಾಗುವುದಿಲ್ಲ? ಕಡಿಮೆ ಜನ ಹೆಚ್ಚು ಸಂಪನ್ಮೂಲಗಳ ಅಮೇರಿಕದ ನೀರು ಕುಡಿದು ಬಡತನದ ನಮ್ಮ ನೆರೆಹೊರೆಗಳು ಕ್ಷುಲ್ಲಕವಾಗಿ ಕಾಣುವುದೇಕೆ? ನಮಗೆಲ್ಲ ಭಾರತ ಅನ್ನೋದು ಗಂಡನ ಮನೆಯಲ್ಲಿ ಮುನಿಸು ಸಾಧಿಸಿಕೊಂಡು ಸಾಂತ್ವನಕ್ಕೆ ಓಡುವ ಹೆಣ್ಣಿನ ತವರು ಮನೆಯೇಕಾಗಬೇಕು? ದೂರ ಹೋಗಿಯೂ ತವರು ನಾವು ಕಂಡುಕೊಂಡ ಹಾಗೇ ಇರಬೇಕು ಎನ್ನುವುದು ಈ ನಿರಂತರ ಬದಲಾವಣೆಯ ದಿನಗಳಲ್ಲಿ ನ್ಯಾಯವೇ?

ಬದಲಾವಣೆಗಳಿಗೆ ಓಗೊಟ್ಟ ಯಾರೊಬ್ಬರೂ ಭಾರತದ ಬೆಳವಣಿಗೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಲಾರರು. ಒಂದು ಕಾಲದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರಂಕ್ ಕಾಲ್ ಮಾಡಿ ಕಾದು ಒಂದು ದೂರವಾಣಿಯ ಸಂದೇಶವನ್ನು ಸಾಗಿಸುತ್ತಿದ್ದವರಿಗೆ ಇಂದಿನ ಮೊಬೈಲ್ ಯುಗ ವರದಾನವಾಗಿರುವಾಗ ಅದನ್ನು ನಾವು ಮಾಲಿನ್ಯ (ನಾಯ್ಸ್) ಎನ್ನುವುದು ಸ್ವಾರ್ಥವಾಗುತ್ತದೆ. ಕಾರುಗಳು ಶ್ರೀಮಂತರಿಗಷ್ಟೇ ಇದ್ದು ಐಶಾರಾಮವಾಗಿದ್ದ ದಿನಗಳಿಗೆ ಹೋಲಿಸಿಕೊಂಡು ಇಂದಿನ ಟ್ರಾಫಿಕ್ ಜಾಮ್‌ ಅನ್ನು ದೂರುವುದು ನಮ್ಮ ಮಿತಿಯಾಗುತ್ತದೆ. ಒಳ್ಳೆಯದೆಲ್ಲ ನಮಗೇ ಇರಲಿ ಎನ್ನುವುದು ಯಾವ ದೊಡ್ಡತನದ ಪ್ರತೀಕವಾದೀತು ನೀವೇ ಹೇಳಿ.